ಪುಂಜಾಲಕಟ್ಟೆ : ಕಾರು ಢಿಕ್ಕಿ ಹೊಡೆದು ಪಾದಚಾರಿ ಮಹಿಳೆಯೋರ್ವರು ಸಾವಿಗೀಡಾದ ಘಟನೆ ಬಂಟ್ವಾಳ ತಾಲೂಕಿನ ವಗ್ಗ-ಕಾರಿಂಜಕ್ರಾಸ್ನಲ್ಲಿ ಮಂಗಳವಾರ ಸಂಭವಿಸಿದೆ.
ಕಾವಳಪಡೂರು ಗ್ರಾ.ಪಂ. ವ್ಯಾಪ್ತಿಯ ಕಾಡಬೆಟ್ಟು ಗ್ರಾಮದ ಕಾಡಬೆಟ್ಟು ನಿವಾಸಿ ಸೇಸಮ್ಮ (58) ಅವರು ಮೃತಪಟ್ಟವರು.
ಬೆಳಗ್ಗೆ ಸುಮಾರು 7.50 ಗಂಟೆಯ ಹೊತ್ತಿಗೆ ಸೇಸಮ್ಮ ಅವರು ಮನೆಯಿಂದ ವಗ್ಗ ಪೇಟೆಗೆ ನಡೆದುಕೊಂಡು ಬರುತ್ತಿದ್ದ ವೇಳೆ ಮಂಗಳೂರಿನ ಕಡೆ ಸಾಗುತ್ತಿದ್ದ ಕಾರು ಹಿಂಬದಿಯಿಂದ ಢಿಕ್ಕಿಯಾಗಿದೆ. ಕಾರು ಚಾಲಕಿ ಪ್ರೀತಿ ಅವರು ವೈದ್ಯೆಯಾಗಿದ್ದು, ಅಜಾಗರೂಕತೆಯ ಚಾಲನೆಯಿಂದ ಸೇಸಮ್ಮ ಅವರಿಗೆ ಢಿಕ್ಕಿ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡ ಸೇಸಮ್ಮ ಅವರನ್ನು ತತ್ಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಅವರು ಮೃತಪಟ್ಟಿದ್ದರು. ಈ ಬಗ್ಗೆ ಕಾಡಬೆಟ್ಟು ಉಮೇಶ್ ಗೌಡ ಅವರು ಬಂಟ್ವಾಳ ಸಂಚಾರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.
ಸೇಸಮ್ಮ ಅವರ ಪತಿಯೂ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಅನಂತರ ನಿಧನ ಹೊಂದಿದ್ದರು.