Advertisement

ಅಲ್ತಾರು ಹಣಬಿನಬೆಟ್ಟು ರಸ್ತೆ ಅಭಿವೃದ್ಧಿಗೆ ಅಡ್ಡಿ; ತಹಶೀಲ್ದಾರರಿಂದ ಸ್ಥಳ ಪರಿಶೀಲನೆ

07:05 PM Jul 16, 2021 | Team Udayavani |

ಕೋಟ: ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯ ಅಲ್ತಾರು ಹಾಲುಡೈರಿಯಿಂದ-ಹಣಬಿನಬೆಟ್ಟು ಸಂಪರ್ಕಿಸುವ ಸಾರ್ವಜನಿಕ ರಸ್ತೆಯ ಅಭಿವೃದ್ಧಿಗೆ ಸ್ಥಳೀಯ ನಿವಾಸಿಯೋರ್ವರು ಅಡ್ಡಿಪಡಿಸುತ್ತಿದ್ದಾರೆ ಎನ್ನುವ ಗ್ರಾ.ಪಂ. ದೂರಿನ ಮೇರೆಗೆ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್‌ಮೂರ್ತಿ ಜು.16ರಂದು ಕಂದಾಯ ಅಧಿಕಾರಿಗಳೊಂದಿಗೆ ಸ್ಥಳಪರಿಶೀಲಿಸಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿದರು.

Advertisement

ರಸ್ತೆ ಅನಾದಿ ಕಾಲದಿಂದಲೂ ಇದ್ದು, ಸುಮಾರು 1ಕಿ.ಮೀ. ವ್ಯಾಪ್ತಿಯ ಸ್ಥಳೀಯ 14 ಮನೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಈ ಮೊದಲು ಸರಕಾರಿ ಜಾಗವಾಗಿದ್ದು 2008-2009ರಲ್ಲಿ ಗ್ರಾ.ಪಂ. ನಿಧಿಯಿಂದ ಅಭಿವೃದ್ಧಿಪಡಿಸಲಾಗಿದೆ. ಆದರೆ ಅನಂತರ ಸ್ಥಳೀಯ ನಿವಾಸಿಗಳಾದ ಸರೋಜಿನಿ ಶೆಡ್ತಿ, ಭವಾನಿ ಶೆಡ್ತಿ ಎನ್ನುವವರು ರಸ್ತೆ ಇರುವ ಜಾಗವನ್ನು ಒಳಗೊಂಡು ಅಕ್ಕಪಕ್ಕದ ಸ್ಥಳ ತಮಗೆ ಅಕ್ರಮ-ಸಕ್ರಮದಲ್ಲಿ ಮಂಜೂರಾಗಿದೆ ಎಂದು ರಸ್ತೆಯ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ. ಅಕ್ರಮ-ಸಕ್ರಮದಲ್ಲಿ ಜಾಗ ಮಂಜೂರಾಗಿದ್ದರೂ ಫಲಾನುಭವಿಗಳಿಗೆ ರಸ್ತೆಯ ಮೇಲೆ ಯಾವುದೇ ಹಕ್ಕುಗಳನ್ನು ಬಾಧಿಸತಕ್ಕದಲ್ಲ. ಆದ್ದರಿಂದ ರಸ್ತೆ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವುದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಅಗತ್ಯವಿದಲ್ಲಿ ಜಾಗದ ಮಂಜೂರಾತಿಯನ್ನೇ ರದ್ದುಗೊಳಿಸಿ, ರಸ್ತೆಯನ್ನು ವಿಂಗಡಿಸಬೇಕು ಎಂದು 2021 ಜೂ. 18ರಂದು ನಡೆದ ಯಡ್ತಾಡಿ ಗ್ರಾ.ಪಂ. ಸಾಮಾನ್ಯಸಭೆಯಲ್ಲಿ ನಿರ್ಣಯ ಕೈಗೊಂಡು. ಜಿಲ್ಲಾಧಿಕಾರಿಗಳು, ಸಹಾಯಕ ಕಮಿಷನರ್, ತಹಶೀಲ್ದಾರರಿಗೆ ಮನವಿ ಮಾಡಲಾಗಿತ್ತು. ಈ ಮೇರೆಗೆ ತಹಶೀಲ್ದಾರರು ಸ್ಥಳಪರಿಶೀಲನೆಗೆ ಆಗಮಿಸಿದ್ದರು.

ತಹಶೀಲ್ದಾರರು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಸರ್ವೆಯರ್ ಮೂಲಕ ಜಾಗದ ಸರ್ವೆ ನಡೆಸಿದರು. ಈ ಸಂದರ್ಭ ರಸ್ತೆಯ ಫಲಾನುಭವಿಗಳು, ರಸ್ತೆ ಹೊಂಡಬಿದ್ದು ಸಂಚರಿಸಲು ಕಷ್ಟ ಸಾಧ್ಯವಾಗುತ್ತದೆ. ಮಳೆಗಾಲದಲ್ಲಿ 15ಮನೆಗಳಿಗೆ ಸಂಪರ್ಕವಿಲ್ಲದ ಪರಿಸ್ಥಿತಿ ಎದುರಾಗಿದೆ. ಒಂದು ಲೋಡ್ ಮಣ್ಣನ್ನು ಹಾಕಲು ಬಿಡುತ್ತಿಲ್ಲ. ನಾವು ಹಲವು ದಶಕದಿಂದ ಈ ರಸ್ತೆಯನ್ನು ಉಪಯೋಗಿಸುತ್ತಿದ್ದು ನ್ಯಾಯ ಒದಗಿಸಬೇಕು ಎಂದರು. ಜಾಗದ ಮಾಲೀಕರು, ಸಾರ್ವಜನಿಕರು ತಿರುಗಾಡಲು ನಾವು ಅಡ್ಡಿಸುತ್ತಿಲ್ಲ. ಜಾಗದ ಮಧ್ಯದಲ್ಲಿ ರಸ್ತೆ ಹಾದು ಹೋಗಿರುವುದರಿಂದ ನಮಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ನಮಗೆ ಸಮಸ್ಯೆಯಾಗದಂತೆ, ಜಾಗದ ಒಂದು ಬದಿಯಲ್ಲಿ ರಸ್ತೆ ನಿರ್ಮಿಸಿ ಎಂದರು.
ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಎರಡು ಕಡೆಯವರಿಗೆ ಅನ್ಯಾಯವಾಗದಂತೆ ಕಾನೂನು ಪ್ರಕಾರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲ್ದಾರರು ಭರವಸೆ ನೀಡಿದರು.

ಯಡ್ತಾಡಿ ಗ್ರಾ.ಪಂ. ಅಧ್ಯಕ್ಷೆ ಲತಾ, ಪಿಡಿಒ ವಿನೋದ ಕಾಮತ್, ಕೋಟ ಕಂದಾಯ ಅಧಿಕಾರಿ ರಾಜು, ಗ್ರಾಮಲೆಕ್ಕಾಧಿಕಾರಿ ಗಿರೀಶ್, ಗ್ರಾ.ಪಂ. ಸದಸ್ಯರಾದ ಸರಿತಾ ಶೆಟ್ಟಿ ಅಲ್ತಾರು, ಜ್ಯೋತಿ ವಿ. ಶೆಡ್ತಿ, ಸುಶೀಲಾ ಶೆಡ್ತಿ, ಕೊರಗು ಪೂಜಾರಿ, ರಾಜೇಶ್ ನಾಯ್ಕ್, ಅಮೃತಾ ಪೂಜಾರಿ, ಬಾಬು ನಾಯ್ಕ್, ಮೋಹನ ಪೂಜಾರಿ, ಲೋಕೇಶ್ ನಾಯ್ಕ್, ಜಯಲಕ್ಷ್ಮೀ, ಅಶ್ವಿನಿ, ಸವಿತಾ ದೇವಾಡಿಗ, ಗ್ರಾ.ಪಂ. ಮಾಜಿ ಅಧ್ಯಕ್ಷ ನಿರಂಜನ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next