Advertisement

ಕೊರೊನಾ ಸಂಕಷ್ಟ ಸಮಯದಲ್ಲಿ ನೆರವಿಗೆ ನಿಂತ ‘ರೈತಮಿತ್ರ’

05:01 PM Jan 01, 2022 | Team Udayavani |

ಮೈಸೂರು: ಮೈಸೂರಿನಲ್ಲಿ ರೈತರೇ ಸ್ಥಾಪಿಸಿದ ಕಂಪನಿಯ ಯಶೋಗಾಥೆ ಇದು. ಕೊರೊನಾ ಸಂಕಷ್ಟ ಸಮಯದಲ್ಲಿ ರೈತರ ನೆರವಿಗೆ ನಿಂತ ಕಂಪನಿ ಇದು. ಅದುವೇ ರೈತಮಿತ್ರ. ಈ ಕಂಪನಿಯ ಸಂಸ್ಥಾಪಕ ಅಧ್ಯಕ್ಷರು ನಾಡಿನ ರೈತ ಮುಖಂಡ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌.

Advertisement

ರೈತ ಮಿತ್ರ ಕಂಪನಿ ನೋಂದಣಿಯಾಗಿದ್ದು ಡಿಸೆಂಬರ್‌ 2014ರಲ್ಲಿ. ರೈತರು ಬೆಳೆದ ಉತ್ಪನ್ನವನ್ನು ಮಾರುಕಟ್ಟೆ ದರದಲ್ಲಿ ಖರೀದಿಸಿ ವಿವಿಧ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಆ ಕಂಪನಿಗಳಿಗೆ ಈ ಉತ್ಪನ್ನವನ್ನು ಮಾರಾಟ ಮಾಡುವುದು, ರೈತರ ನೆರವಿಗೆ ಧಾವಿಸುವುದು ರೈತ ಕಂಪನಿ ಉದ್ದೇಶ. ಈ ಕಂಪನಿಗೆ ನಬಾರ್ಡ್‌ ಪ್ರೋತ್ಸಾಹ ಧನ ನೀಡಿದೆ. ರೈತ ನಾಯಕ ಕುರುಬೂರು ಶಾಂತಕುಮಾರ್‌ ಅವರು ರೈತ ಮುಖಂಡ ಪಿ.ವಿ.ಗೋಪಿನಾಥ್‌ ಹಾಗೂ ಇತರ ರೈತರ ಜೊತೆಗೂಡಿ ಸ್ಥಾಪಿಸಿದ ಕಂಪನಿ ಇದು. ರೈತರೇ ಈ ಕಂಪನಿಯ ಮಾಲಿಕರು. ರೈತ ಮಿತ್ರ ಕಂಪನಿಯಲ್ಲಿ ಸುಮಾರು 1200 ಸದಸ್ಯರಿದ್ದಾರೆ. ಎಂಟು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೈಸೂರು, ಚಾಮರಾಜನಗರ, ಹಾವೇರಿ, ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ಬಾಗಲ ಕೋಟೆ, ಮಂಡ್ಯ ಜಿಲ್ಲೆಗಳ ಸದಸ್ಯರ ಪರವಾಗಿ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ. ಕಂಪನಿಯು 20 ಲಕ್ಷ ರೂ.ಷೇರು ಬಂಡವಾಳದೊಂದಿಗೆ ಆರಂಭವಾಯಿತು.

ರೈತಮಿತ್ರ ರಸಗೊಬ್ಬರ ಉತ್ಪಾದಿಸುವ ಕಂಪನಿಗಳಿಂದಲೇ ನೇರವಾಗಿ ಸಗಟು ರಹದಾರಿಯನ್ನು ಪಡೆದು ವಿತರಣೆಗಾಗಿ ಶಾಖಾ ಕೇಂದ್ರಗಳನ್ನು ಆರಂಭಿಸಿತು. ಈ ಮೂಲಕ ರೈತರಿಗೆ ಸಕಾಲದಲ್ಲಿ ಖಾತರಿ ದರಕ್ಕಿಂತ ಕಡಿಮೆ ದರದಲ್ಲಿ ಪೂರೈಸಲಾಗುತ್ತಿದೆ. ಕಂಪನಿ ಕಡಿಮೆ ಲಾಭಾಂಶವನ್ನು ಪಡೆಯುತ್ತದೆ. ಇದರಿಂದ ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ರೈತಮಿತ್ರಕಂಪನಿಯು ಸಿಎಫ್ಟಿಆರ್‌ಐ ಸಂಶೋಧನೆ ನಡೆಸಿದ ಹೆಚ್ಚು ಪ್ರೋಟಿನ್‌ ಇರುವಚಿಯಾ ಬೀಜವನ್ನು ಬೆಳೆಸಿ ಮಾರುಕಟ್ಟೆಗೆ ಪೂರೈಸಲು ಒಡಂಬಡಿಕೆ ಮಾಡಿಕೊಂಡಿದೆ. ಚಿಯಾ ಬೀಜವು ರೈತರ ಆದಾಯ ದ್ವಿಗುಣವಾಗಲು ಸಹಕಾರಿಯಾಗಿದೆ.

ರೈತರು ಬೆಳೆದ ಚಿಯಾ ಬೀಜವನ್ನು ಸಂಸ್ಕರಿಸಿ ಶುದ್ಧೀಕರಿಸಿ ಒಡಂಬಡಿಕೆ ಮಾಡಿಕೊಂಡ ಕಂಪನಿಗೆ ಪೂರೈಸಲು ಅನುಕೂಲವಾಗುವಂತೆ ಕಂಪನಿ ವತಿಯಿಂದ ಮೈಸೂರಿನ ಎಪಿ ಎಂಸಿ ಗೋದಾಮಿನಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಶುದ್ಧೀಕರಣ ಘಟಕ ತೆರೆಯಲಾಗಿದೆ.

ರೈತರಿಗೆ ಗೊಬ್ಬರ ಬಳಕೆ, ಮಣ್ಣಿನ ಫ‌ಲವತ್ತತೆ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಬೆಳೆಗಳಿಗೆ ನೀರು ಬಳಸುವ ಹಾಗೂ ನೀರು ಪೋಲಾಗುವುದನ್ನುತಪ್ಪಿಸಲು ಅಧ್ಯಯನ ಪ್ರವಾಸವನ್ನು ರೈತರುಮಾಡಿದ್ದಾರೆ. ಸಾವಯವ ಕೃಷಿ ಕುರಿತು ಅಧ್ಯಯನ ಪ್ರವಾಸ ನಡೆಸಿದೆ. ರೈತರಿಗೆ ತೂಕದಲ್ಲಿ ಆಗುತ್ತಿದ್ದ ಮೋಸವನ್ನು ತಪ್ಪಿಸಲಾಗಿದೆ.

Advertisement

ರೈತ ಮಿತ್ರ ಕಂಪನಿ ರೈತರು ಬೆಳೆದ ಹಣ್ಣು, ತರಕಾರಿಗಳನ್ನು ನೇರವಾಗಿ ಖರೀದಿಸುತ್ತದೆ. ಇದರಿಂದ ಮಧ್ಯವರ್ತಿಗಳ ಪಾಲಾಗುತ್ತಿದ್ದ ಕಮೀಷನ್‌ ತಡೆಯಲಾಗಿದೆ. ನಂತರ ಕಂಪನಿಗಳಿಗೆ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲಾಗುತ್ತಿದೆ. ರೈತಮಿತ್ರ ಕಂಪನಿಯು ಸದಸ್ಯರಿಗೆ ಲಾಭಾಂಶವನ್ನೂ ಹಂಚಿದೆ. ಆದಾಯ ತೆರಿಗೆಯನ್ನೂ ಪಾವತಿಸಿದೆ.

ಕೊರೊನಾ ವೇಳೆ 2,500 ಟನ್‌ ತರಕಾರಿ ಖರೀದಿ :

ತರಕಾರಿಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ರೈತರು ಬೆಳೆದ 2,500 ಟನ್‌ ತರಕಾರಿಗಳನ್ನು ಮಾರುಕಟ್ಟೆ ದರದಲ್ಲಿಖರೀದಿಸಿದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ 30ಟನ್‌ ಸಾಮರ್ಥ್ಯದ ರಾಸಾಯನಿಕ ಮುಕ್ತ ಬಾಳೆಹಣ್ಣು ಮತ್ತು ಮಾವಿನಹಣ್ಣು ಮಾಗಿಸುವ ಘಟಕವನ್ನು ತೋಟಗಾರಿಕೆ ಇಲಾಖೆಯ ಪ್ರೋತ್ಸಾಹ ಧನದೊಂದಿಗೆ ಪ್ರಾರಂಭಿಸಲಾಗಿದೆ ಎಂದು ರೈತಮಿತ್ರ ಸಂಸ್ಥಾಪಕ ಅಧ್ಯಕ್ಷ, ರೈತ ನಾಯಕ ಕುರುಬೂರು ಶಾಂತಕುಮಾರ್‌ ತಿಳಿಸಿದ್ದಾರೆ.

ರೈತರಿಗೆ ಹೋರಾಟ ಒಂದೇ ಮುಖ್ಯವಲ್ಲ. ಹೋರಾಟದ ಜೊತೆಗೇ ರಚನಾತ್ಮಕವಾಗಿಯೂ ರೈತರ ನೆರವಿಗೆ ಧಾವಿಸಬೇಕು ಎಂಬಉದ್ದೇಶದೊಂದಿಗೆ ರೈತಮಿತ್ರ ಕಂಪನಿ ಸ್ಥಾಪಿಸಲಾಯಿತು. ಕಂಪನಿ ಸತತ ಐದು ವರ್ಷ ಲಾಭಮಾಡಿದೆ. ಕೊರೊನಾ ಬಂದ ನಂತರ ನಷ್ಟಉಂಟಾಗಿದೆ. ಕೇರಳದಲ್ಲಿ ನೆರೆ ಹಾವಳಿ ಬಂದಾಗಅಲ್ಲಿನ ಸರ್ಕಾರದ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿ ದೇಣಿಗೆ ನೀಡಿದೆವು. ಮೈಸೂರಿನ ಎಪಿಎಂಸಿ ಆವರಣದಲ್ಲಿ ನಿವೇಶನ ಖರೀದಿಸಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದ್ದೇವೆ. ಕುರುಬೂರು ಶಾಂತಕುಮಾರ್‌, ಸಂಸ್ಥಾಪಕ ಅಧ್ಯಕ್ಷರು, ರೈತಮಿತ್ರ ಕಂಪನಿ

ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next