Advertisement

ಕೊರೊನಾ ಸಮಾನತೆಯ ಪಾಠ ಕಲಿಸಿತು: ರಿಂಪಾ ಶಿವ

12:37 AM Dec 14, 2022 | Team Udayavani |

“ಹರ್ಷ’ ಸಂಸ್ಥಾಪಕ ಕಪ್ಪೆಟ್ಟು ಬೋಳ ಪೂಜಾರಿಯವರ ಜನ್ಮಶತಮಾನೋತ್ಸವ ಪ್ರಯುಕ್ತ ಉಡುಪಿಯಲ್ಲಿ ನಡೆದ “ಸ್ವರಾಮೃತ’ದಲ್ಲಿ ಪಾಲ್ಗೊಂಡ ರಿಂಪಾ ಶಿವ ಅವರು “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Advertisement

ಪ್ರಸಿದ್ಧ ಮತ್ತು ಸಾಮಾನ್ಯ ಕಲಾವಿದರೆಂಬ ಭಾವನೆಯನ್ನು ಕೊರೊನಾ ಕಾಲಘಟ್ಟ ಹೋಗಲಾಡಿಸಿತು. ಕೊರೊನಾ ನಮಗೆ ಸಮಾನತೆಯ ಪಾಠವನ್ನು ಕಲಿಸಿತು ಎಂದು “ತಬ್ಲಾ ರಾಜಕುಮಾರಿ’ ಎಂದು ಪ್ರಸಿದ್ಧರಾದ ರಿಂಪಾ ಶಿವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

3ನೆಯ ವಯಸ್ಸಿಗೆ ತಬ್ಲಾದತ್ತ ಆಕರ್ಷಣೆ, 8ನೆಯ ವಯಸ್ಸಿಗೆ ಕಛೇರಿ ನೀಡುವ ಮಟ್ಟಕ್ಕೆ, 12ನೆಯ ವಯಸ್ಸಿಗೆ “ತಬ್ಲಾದ ರಾಜಕುಮಾರಿ ರಿಂಪಾ ಶಿವ’ ಎಂಬ ಸಾಕ್ಷ್ಯಚಿತ್ರವನ್ನು ಫ್ರೆಂಚ್‌ ಡಾಕ್ಯುಮೆಂಟರಿ ಪ್ರಕಟಿಸುವ ಮಟ್ಟಕ್ಕೆ ನೀವು ಬೆಳೆದಿರಿ. ಇಂತಹ ಸಾಧನೆಯ ಹಿನ್ನೆಲೆ ಏನು?
ಭಗವಂತನ ಕೃಪೆ, ಗುರುಗಳ ಆಶೀರ್ವಾದವೇ ನನ್ನೆಲ್ಲ ಯಶಸ್ಸಿಗೆ ಕಾರಣ. ನನ್ನ ತಂದೆ ಸ್ವಪನ್‌ ಶಿವ ಅವರು ನನಗೆ ಗುರುಗಳೂ ತಂದೆಯೂ ಹೌದು. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಆಟವಾಡಲು ಆಸಕ್ತಿ ತೋರಿದರೆ ನಾನು ತಬ್ಲಾದತ್ತ ಆಕರ್ಷಿತಳಾಗಿದ್ದೆ. ತಂದೆಯವರು ಹೆಸರಾಂತ ತಬ್ಲಾ ಕಲಾವಿದರು. ಅವರು ತನ್ನೆಲ್ಲ ಪಟ್ಟುಗಳನ್ನು ನನಗೆ ಧಾರೆ ಎರೆದರು.

ನಿಮ್ಮ ತಂದೆಗೆ ಮಗ ಹುಟ್ಟಿದರೆ ತನ್ನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದ ಎಂಬ ಭಾವನೆ ಇತ್ತಂತೆ ಹೌದೆ? ಮಗಳಾಗಿ ನೀವು ಅದನ್ನು ಸಾಧ್ಯವಾಗಿಸಿದಿರಿ.
ಹೌದು. ತಂದೆಗೆ ಈ ಭಾವನೆ ಇದ್ದದ್ದು ಹೌದು. ತಂದೆಗೆ ಆರಂಭದಲ್ಲಿ ನಾನು ಗಾಯನ ಅಥವಾ ಬೇರಾವುದೇ ಸಂಗೀತೋಪಕರಣಗಳನ್ನು ಅಭ್ಯಸಿಸಬಹುದು ಎಂಬ ಭಾವನೆ ಇತ್ತು. ನಾನು ತಬ್ಲಾದಲ್ಲಿ ಈ ಮಟ್ಟಕ್ಕೆ ಬೆಳೆದು ಅವರ ಪರಂಪರೆಯನ್ನು ಬೆಳೆಸುತ್ತೇನೆಂದು ಅಂದುಕೊಂಡಿರಲಿಲ್ಲ. ಅವರ ಪ್ರೋತ್ಸಾಹದಿಂದ ಇದೆಲ್ಲ ಸಾಧ್ಯವಾಯಿತು.

ನಿಮ್ಮ ದೈನಂದಿನ ಅಭ್ಯಾಸದ ಕ್ರಮಗಳ ಬಗೆಗೆ…
ನಿರ್ದಿಷ್ಟವಾಗಿ ಸಮಯವನ್ನು ನಿಗದಿಪಡಿಸುವುದಿಲ್ಲ. ಸಾಮಾನ್ಯವಾಗಿ ಬೆಳಗ್ಗೆ  ಅಭ್ಯಾಸ ಮಾಡುತ್ತೇನೆ. ಸಂಜೆಯೂ ಅಭ್ಯಾಸ ಮಾಡುತ್ತೇನೆ. ದಿನದಲ್ಲಿ ಒಟ್ಟು ಮೂರು ಗಂಟೆಗಳನ್ನು ಇದಕ್ಕಾಗಿ ಮೀಸಲಿಡುತ್ತೇನೆ. ಅಭ್ಯಾಸಕ್ಕೆ ತೊಡಗಿದರೆ ಅದರಲ್ಲಿ ತಲ್ಲೀನಳಾಗಿ ಬಿಡುತ್ತೇನೆ.

Advertisement

ಹಿಂದೆ ತಬ್ಲಾ ಅಂದರೆ ಪುರುಷರ ಪ್ರಾಧ್ಯಾನ್ಯವಿತ್ತು. ಈಗಿನ ಸನ್ನಿವೇಶ?
ಹಿಂದೆ ತಬ್ಲಾ ಕಲೆಯಲ್ಲಿ ಪುರುಷರೇ ಅಧಿಕ ಸಂಖ್ಯೆಯಲ್ಲಿದ್ದರು. ತಬ್ಲಾ ಅಷ್ಟು ಸುಲಭದಲ್ಲಿ ಒಲಿಯುವುದಿಲ್ಲ. ಅದಕ್ಕೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು. ಇದು ಎಲ್ಲ ಸಂಗೀತ ಪ್ರಕಾರಗಳಿಗೂ ಅನ್ವಯವೇ. ನಾನು ಈ ರಂಗಕ್ಕೆ ಇಳಿದ ಬಳಿಕ ಮಹಿಳೆಯರೂ ಆಸಕ್ತಿ ತೋರುತ್ತಿದ್ದಾರೆ. ಇದಕ್ಕಾಗಿ ನನಗೆ ಸಂತೃಪ್ತಿ ಇದೆ.

ನೀವು ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದೀರಿ. ಮುಂದಿನ ಕನಸುಗಳೇನು?
ನಾನು ಕನಸು ಕಾಣುವವಳಲ್ಲ. ಅದು ಈಡೇರದೆ ಇರಬಹುದು. ನಾವು ನಮ್ಮ ಕರ್ಮವನ್ನು (ಕರ್ತವ್ಯ) ಮಾಡಬೇಕು. ನಾವು ಮನಃಶುದ್ಧರಾಗಿ ಕಾರ್ಯನಿರ್ವಹಿಸಬೇಕು. ನಾನು ಜನಪ್ರಿಯಳಾಗಿದ್ದೇನೆ ಹೌದು. ಆದರೆ ಕೊರೊನಾ ಕಾಲಘಟ್ಟದಲ್ಲಿ ಪ್ರಸಿದ್ಧರು, ಸಾಮಾನ್ಯರು ಎಂಬ ಭೇದಭಾವ ಹೋಯಿತು. ಅದೆಷ್ಟೋ ಉತ್ತಮ ಕಲಾವಿದರು ಈ ಸಂದರ್ಭದಲ್ಲಿ ಅಸುನೀಗಿದರು. ಅದಕ್ಕಾಗಿ ನನಗೆ ಬಹಳ ದುಃಖವೆನಿಸುತ್ತದೆ.

ನೀವು ಸಂಘಟಿಸುತ್ತಿರುವ “ನಾರೀಶಕ್ತಿ’ ಸಂಘಟನೆ ಕುರಿತು…
ಎಲ್ಲ ಮಹಿಳಾ ಕಲಾವಿದರನ್ನು ಸಂಘಟಿಸುವ “ನಾರೀಶಕ್ತಿ’ ಸಂಘಟನೆಯನ್ನು ಆರಂಭಿಸಿದ್ದೇನೆ. ಇದೊಂದು ಮ್ಯೂಸಿಕ್‌ ಬ್ಯಾಂಡ್‌. ಇದರಲ್ಲಿ ಹಿಂದೂಸ್ಥಾನೀ ಗಾಯಕರು, ಉಪಕರಣ ಕಲಾವಿದರಿದ್ದಾರೆ. ಸಂದರ್ಭಕ್ಕೆ ಸರಿಯಾಗಿ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತೇವೆ.

-  ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next