ತಿರುವನಂತಪುರ: ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಮಹಾ ಮಳೆಯಿಂದ ತತ್ತರಿಸಿರುವ ಕೇರಳಕ್ಕೆ ಅಕ್ಕಿ, ಹಾಲು ಮತ್ತಿತರ ಪರಿಹಾರ ಸಾಮಗ್ರಿಗಳನ್ನು ಮಾತ್ರವಲ್ಲದೆ ರಕ್ಷಣಾ ಕಾರ್ಯಾಚರಣೆಗಳಿಗಾಗಿ ಹೆಚ್ಚುವರಿ 5 ಕೋಟಿ ರೂ.ಗಳ ನೆರವನ್ನು ಪ್ರಕಟಿಸಿದ್ದಾರೆ. ಆವಶ್ಯಕ ಔಷಧಿಗಳು ಹಾಗೂ ವೈದ್ಯಕೀಯ ಮತ್ತು ಪಶುವೈದ್ಯಕೀಯ ತಂಡಗಳನ್ನು ಕೂಡ ತತ್ಕ್ಷಣ ಕಳುಹಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಆ. 10ರಂದು ರಾಜ್ಯಕ್ಕೆ 5 ಕೋಟಿ ರೂ.ಗಳ ನೆರವನ್ನು ನೀಡಿದ್ದ ತಮಿಳುನಾಡು ಈಗ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹೆಚ್ಚುವರಿಯಾಗಿ ಇನ್ನೂ 5 ಕೋಟಿ ರೂ.ಗಳನ್ನು ನೀಡುತ್ತಿದೆ.
ತಮಿಳುನಾಡು ಕೇರಳಕ್ಕೆ 500 ಟನ್ ಅಕ್ಕಿ, 300 ಟನ್ ಹಾಲಿನ ಪುಡಿ ಮತ್ತು ಅತ್ಯಧಿಕ ತಾಪಮಾನದಲ್ಲಿ ಕುದಿಸಲಾದ 15,000 ಲೀಟರ್ ಸಂಸ್ಕರಿತ ಹಾಲನ್ನು ತತ್ಕ್ಷಣ ಪೂರೈಸಲಿದೆ. ಅಲ್ಲದೆ 10,000 ಹೊದಿಕೆಗಳು, ಧೋತಿಗಳು ಹಗೂ ಲುಂಗಿಗಳನ್ನು ಕೂಡ ತತ್ಕ್ಷಣ ರವಾನಿಸಲಿದೆ ಎಂದು ಪಳನಿಸ್ವಾಮಿ ಅವರು ಚೆನ್ನೈಯಲ್ಲಿ ತಿಳಿಸಿದ್ದಾರೆ.ತಮಿಳುನಾಡು ಜನತೆಯಿಂದ ಸ್ವೀಕರಿಸಲಾದ ಕೋಟ್ಯಂತರ ರೂ.ಗಳ ಪರಿಹಾರ ಸಾಮಗ್ರಿಗಳನ್ನು ಈಗಾಗಲೇ ಕೇರಳಕ್ಕೆ ಕಳುಹಿಸಲಾಗಿದೆ. ಈ ಕಾರ್ಯ ಇನ್ನೂ ಮುಂದುವರಿಯಲಿದೆ ಎಂದವರು ಹೇಳಿದ್ದಾರೆ.
ಪರಿಹಾರಸಂಬಂಧಿ ಕಾರ್ಯಗಳಿಗೆ ಕೇರಳಕ್ಕೆ ನೆರವಾಗಲು ಇಬ್ಬರು ಐಎಎಸ್ ಅಧಿಕಾರಿಗಳನ್ನು ಕೂಡ ನಿಯೋಜಿಸಲಾಗಿದೆ. ಕೇರಳದಲ್ಲಿ ಸಂಭವಿಸಿರುವ ಜೀವ ಹಾಗೂ ಸೊತ್ತು ಹಾನಿಗಳ ಕುರಿತು ತೀವ್ರ ಖೇದ ವ್ಯಕ್ತಪಡಿಸಿದ ಅವರು, ದುಃಖತಪ್ತ ಕುಟುಂಬಗಳಿಗೆ ತಮ್ಮ ಸಾಂತ್ವನ ತಿಳಿಸಿದ್ದಾರೆ.