ಕುಂದಾಪುರ: ಕಂದಾಯ ಸೇವೆ ನೀಡುವಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಕಳೆದ 19 ತಿಂಗಳುಗಳಿಂದ ನಿರಂತರ ನಂ.1 ಸ್ಥಾನದಲ್ಲಿದ್ದು ಈ ತಿಂಗಳಲ್ಲೂ ದಾಖಲೆ ಮುಂದುವರಿಸಿದೆ. ಆದ್ದರಿಂದ ಇದಕ್ಕೆ ಕಾರಣರಾದ ಕಂದಾಯ ಸಿಬಂದಿಯನ್ನು ಕಂದಾಯ ದಿನಾಚರಣೆ ಸಂದರ್ಭ ನೆನೆಯಬೇಕಾದುದು ಕರ್ತವ್ಯ ಎಂದು ಉಪವಿಭಾಗ ಸಹಾಯಕ ಕಮಿಷನರ್ ಕೆ. ರಾಜು ಹೇಳಿದರು.
ಅವರು ಗುರುವಾರ ಇಲ್ಲಿನ ಜೆ.ಎಲ್. ಬಿ. ರಸ್ತೆಯ ರುದ್ರಭೂಮಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಸಹಯೋಗದಲ್ಲಿ ತಾ| ಆಡಳಿತದ ಜತೆಗೂಡಿ ಗ್ರಾಮ ಲೆಕ್ಕಾಧಿಕಾರಿಗಳ ಸಂಘ, ಕಂದಾಯ ನೌಕರರ ಸಂಘ, ಗ್ರಾಮ ಸಹಾಯಕರ ಸಂಘದ ವತಿಯಿಂದ ಕಂದಾಯ ದಿನಾಚರಣೆ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರ ಜನ್ಮದಿನ ಪ್ರಯುಕ್ತ ಹಸುರೋತ್ಸವ ಕಾರ್ಯಕ್ರಮದ ಅಂಗವಾಗಿ ಗಿಡ ನೆಟ್ಟು ಮಾತನಾಡಿದರು.
ತಹಶೀಲ್ದಾರ್ ಆನಂದಪ್ಪ ಕೆ. ನಾಯ್ಕ, ಗ್ರೇಡ್ 2 ತಹಶೀಲ್ದಾರ್ ರಾಮಚಂದ್ರ ಹೆಬ್ಟಾರ್, ಉಪ ತಹಶೀಲ್ದಾರ್ ಶಂಕರ್, ಸಹಾಯಕ ವಲಯ ಅರಣ್ಯಾಧಿಕಾರಿ ಹಸ್ತಾ ಶೆಟ್ಟಿ, ಪುರಸಭೆ ಸದಸ್ಯ ಪ್ರಭಾಕರ ವಿ., ಗ್ರಾಮ ಲೆಕ್ಕಾಧಿಕಾರಿ, ಸಂಘದ ಜಿಲ್ಲಾಧ್ಯಕ್ಷ ಭರತ್ ವಿ. ಶೆಟ್ಟಿ, ತಾ| ಸಂಘದ ಅಧ್ಯಕ್ಷ ಕಾಂತರಾಜ್, ಉಪಾಧ್ಯಕ್ಷ ಶಿವರಾಯ್, ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ದಿನೇಶ್, ಕಾರ್ಕಳ ತಾ| ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಲತಾ, ಪುರಸಭೆ ಆಹಾರ ನಿರೀಕ್ಷಕ ಶರತ್ ಖಾರ್ವಿ, ಗಣೇಶ್ ಜನ್ನಾಡಿ, ಕುಂದಾಪುರ ವಿಎ ಆನಂದ್ ಉಪಸ್ಥಿತರಿದ್ದರು. ಪ್ರಸ್ತಾವಿಸಿದ ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕ ರಾಘವೇಂದ್ರ ಡಿ., ಹಸುರೋತ್ಸವ ಪ್ರಯುಕ್ತ 1 ಲಕ್ಷ ಗಿಡ ನೆಡುವ, ವಿತರಿಸುವ ಸಂಕಲ್ಪವನ್ನು ಸಂಘ ಹೊಂದಿದೆ ಎಂದರು.
ಮಾತೃ ಇಲಾಖೆ : ಜಿಲ್ಲಾಮಟ್ಟದಲ್ಲಿ ಮಾತ್ರ ನಡೆಯುತ್ತಿದ್ದ ಕಂದಾಯ ಅಧಿಕಾರಿಗಳ ಸಭೆ ಉಡುಪಿ ಜಿಲ್ಲೆಯಲ್ಲಿ ಈಗಿನ ಜಿಲ್ಲಾಧಿಕಾರಿಗಳಿಂದಾಗಿ ಬೇರೆ ಬೇರೆ ತಾ| ಗಳಲ್ಲಿ ನಡೆಯುತ್ತಿದೆ. ಇದರಿಂದಾಗಿ ಆಡಳಿತಕ್ಕೆ ಚುರುಕು ಮುಟ್ಟಿದಂತಾಗುತ್ತದೆ. ಎಲ್ಲ ಇಲಾಖೆಗಳ ಮಾತೃ ಇಲಾಖೆಯಂತಿರುವ ಕಂದಾಯ ಇಲಾಖೆಯ ಸೇವೆ ನ್ಯೂನತೆ ಇಲ್ಲದೆ ನಡೆಯಬೇಕೆನ್ನುವುದು ಎಲ್ಲರ ಆಶಯ. ಹಸುರು ಕರ್ನಾಟಕ ಪ್ರಯುಕ್ತ ನೆಟ್ಟ ಗಿಡಗಳ ಜತೆಗೆ ಸೆಲ್ಫಿ ತೆಗೆದಿರಿಸಿಕೊಂಡು ಮುಂದಿನ ವರ್ಷ ಅದೇ ಗಿಡದ ಜತೆ ಸೆಲ್ಫಿ ತೆಗೆಯಬೇಕು. ಆಗ ಆ ಗಿಡವನ್ನು ಪೋಷಿಸುವ ಜವಾಬ್ದಾರಿ ಬರುತ್ತದೆ ಎಂದು ಕೆ. ರಾಜು ಹೇಳಿದರು.