Advertisement

ರಾಜಸ್ಥಾನ ಫ‌ಲಿತಾಂಶ: ಬಿಜೆಪಿಗೆ ಎಚ್ಚರಿಕೆಯ ಸಂದೇಶ

01:24 PM Feb 03, 2018 | |

ರಾಜಸ್ಥಾನದ ಎರಡು ಲೋಕಸಭೆ ಮತ್ತು ಒಂದು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫ‌ಲಿತಾಂಶ ಆಡಳಿತರೂಢ ಬಿಜೆಪಿಗೆ ಮುಟ್ಟಿನೋಡಿಕೊಳ್ಳಬೇಕಾದಂತಹ ಹೊಡೆತ ನೀಡಿದೆ. ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದು, ಈ ಫ‌ಲಿತಾಂಶದಿಂದ ಬಿಜೆಪಿ ಮತ್ತು ನಿರ್ದಿಷ್ಟವಾಗಿ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಕಲಿಯಬೇಕಾದ ಪಾಠ ಬಹಳಷ್ಟಿದೆ. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಗೂ ಇದು ಎಚ್ಚರಿಕೆಯ ಸಂದೇಶ. ಮುಖ್ಯವಾಗಿ 2019ರ ಚುನಾವಣೆ 2014ರಷ್ಟು ಸಲೀಸಾಗಿರುವುದಿಲ್ಲ ಎಂಬುದನ್ನು ಗುಜರಾತ್‌ ವಿಧಾನಸಭೆ ಮತ್ತು ರಾಜಸ್ಥಾನ ಉಪ ಚುನಾವಣೆ ಫ‌ಲಿತಾಂಶಗಳು ಸ್ಪಷ್ಟಪಡಿಸಿವೆ. 

Advertisement

ಬಿಜೆಪಿಯ ಭದ್ರಕೋಟೆಯಲ್ಲಿ ಸಾಧಿಸಿರುವ ಗೆಲುವು ಸಹಜವಾಗಿ ಕಾಂಗ್ರೆಸ್‌ನ ನೈತಿಕ ಸ್ಥೈರ್ಯವನ್ನು ಮಾತ್ರವಲ್ಲದೆ 2019ರ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಉಪಚುನಾವಣೆ ಗೆಲುವಿನ ಪೂರ್ತಿ ಯಶಸ್ಸು ಯುವ ನಾಯಕ ಸಚಿನ್‌ ಪೈಲಟ್‌ ಅವರಿಗೆ ಸಲ್ಲಬೇಕು.ಸ್ಥಳೀಯವಾಗಿ ಪ್ರಬಲರೂ ಜನಪ್ರಿಯರೂ ಆಗಿರುವ ನಾಯಕರನ್ನು ಬೆಳೆಸಿದರೆ ಮಾತ್ರ ಪಕ್ಷ ಸ್ಥಿರವಾಗಿ ನಿಲ್ಲಬಲ್ಲುದು ಎನ್ನುವುದನ್ನು ಮೊದಲು ತೋರಿಸಿಕೊಟ್ಟದ್ದು ಬಿಜೆಪಿ. ಆದರೆ ಅದನ್ನೀಗ ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿರುವುದು ಕಾಂಗ್ರೆಸ್‌. ಪಂಜಾಬ್‌, ಗುಜರಾತ್‌ ಮತ್ತು ರಾಜಸ್ಥಾನದಲ್ಲಿ ಸ್ಥಳೀಯ ನಾಯಕರಿಂದಾಗಿಯೇ ಕಾಂಗ್ರೆಸ್‌ ಗೆಲುವಿನ ಮುಖ ಕಾಣುವಂತಾಗಿದೆ. 2014ರ ಚುನಾವಣೆಯಲ್ಲಿ ಸಂಪೂರ್ಣವಾಗಿ ನೆಲಕಚ್ಚಿದ್ದ ಪಕ್ಷವೀಗ ಚೇತರಿಕೆಯ ಹಾದಿಯಲ್ಲಿರುವುದು ಸ್ಪಷ್ಟ. ಅದರಲ್ಲೂ ರಾಹುಲ್‌ ಗಾಂಧಿ ಅಧ್ಯಕ್ಷರಾದ ಬಳಿಕ ಪಕ್ಷ ಯಶಸ್ಸಾಗುತ್ತಿರುವುದು ಕಾಂಗ್ರೆಸಿಗರಿಗಂತೂ ಬಹಳ ಖುಷಿ ಕೊಟ್ಟಿರುವ ಸಂಗತಿ. 

ಹಾಗೆ ನೋಡಿದರೆ ರಾಜಸ್ಥಾನದಲ್ಲಿ ಬಿಜೆಪಿ ಸೋಲಲು ಯಾವ ಕಾರಣವೂ ಇರಲಿಲ್ಲ. ರಾಜ್ಯದಲ್ಲೂ ಕೇಂದ್ರದಲ್ಲೂ ಒಂದೇ ಪಕ್ಷ ಅಧಿಕಾರದಲ್ಲಿರುವಾಗ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲಾಗುತ್ತದೆ ಎಂದಾದರೆ ಅದು ನಿಜವಾಗಿಯೂ ಮುಖಭಂಗವೇ.ಅದರಲ್ಲೂ 2014ರಲ್ಲಿ 25ಕ್ಕೆ 25 ಸ್ಥಾನಗಳನ್ನು ಗೆದ್ದು ಕ್ಲೀನ್‌ಸ್ವೀಪ್‌ ಮಾಡಿದ್ದ ಪಕ್ಷ ಈ ಪರಿಯಾಗಿ ನೆಲಕಚ್ಚುವುದನ್ನು ನೋಡುವಾಗ ಬಿಜೆಪಿ ಈಗ ಗೆಲುವನ್ನು ಬಿಟ್ಟು ಸೋಲುವ ಕಲೆಯನ್ನು ಕರಗತ ಮಾಡಿಕೊಂಡಿದೆಯೇ ಎಂದು ಕೇಳಬೇಕಾಗುತ್ತದೆ. ಸೋಲಿಗೆ ಹಲವು ಕಾರಣಗಳನ್ನು ಪಟ್ಟಿ ಮಾಡಬಹುದು. ಮುಖ್ಯವಾಗಿ ರಾಜಸ್ಥಾನದಲ್ಲೀಗ ವಸುಂಧರಾ ರಾಜೆ ಜನಪ್ರಿಯತೆ ಕುಸಿದಿದೆ. ಇಷ್ಟು ಮಾತ್ರವಲ್ಲದೆ ಪಕ್ಷದೊಳಗೆ ಅವರು ವಿರುದ್ಧ ಬಹಳ ಅಸಮಾಧಾನವಿದೆ. ಆರ್‌ಎಸ್‌ಎಸ್‌ ಜತೆಗೂ ರಾಜೆಯ ಸಂಬಂಧ ಹಳಸಿದೆ. ಆಡಳಿತ ವಿರೋಧಿ ಅಲೆ ಪ್ರಬಲವಾಗಿ ಬೀಸುತ್ತಿದೆ. ರೈತರು ಬಂಡೆದಿದ್ದಾರೆ. ಅಲ್ಲದೆ ಪದ್ಮಾವತ್‌ ಚಿತ್ರದ ವಿವಾದದ ಸಂದರ್ಭದಲ್ಲಿ ಬಿಜೆಪಿ ಪ್ರದರ್ಶಿಸಿದ ಅನಿಶ್ಚಿತ ನಿಲುವು ಕೂಡ ಚುನಾವಣೆ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. 

ಏನೇ ಆದರೂ ಗೆಲುವು ಗೆಲುವೇ. ಹೀಗಾಗಿ ಈ ಫ‌ಲಿತಾಂಶ ಈ ವರ್ಷಾಂತ್ಯದಲ್ಲಿ ನಡೆಯುವ ರಾಜಸ್ಥಾನ ವಿಧಾನಸಭೆ ಚುನಾವಣೆಯ ಮುನ್ನುಡಿ ಎನ್ನಲಾಗುತ್ತಿದೆ. ಕಾಂಗ್ರೆಸಿನಲ್ಲಿ ಈಗಾಗಲೇ ಅಶೋಕ್‌ ಗೆಹೊಟ್‌ ಅವರನ್ನು ಬದಿಗೆ ಸರಿಸಿ ಸಚಿನ್‌ ಪೈಲಟ್‌ ಮುನ್ನೆಲೆಗೆ ಬಂದಿದ್ದಾರೆ. ಉಪಚುನಾವಣೆಯ ಪೂರ್ತಿ ಹೊಣೆಯನ್ನು ಅವರು ಹೆಗಲೇರಿಸಿ ಕೊಂಡಿದ್ದರು. ಈ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸಿರುವುದರಿಂದ ಯಾರಿಗೆ ನಾಯಕತ್ವ ವಹಿಸುವುದು ಎಂಬ ಗೊಂದಲ ಕಾಂಗ್ರೆಸ್‌ನಲ್ಲಿಲ್ಲ. ಆದರೆ ಬಿಜೆಪಿಯಲ್ಲಿ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿಯಿದೆ. ವಸುಂಧರಾ ರಾಜೆಯನ್ನು ಮುಂದುವರಿಸಿದರೆ ಮರಳಿ ಅಧಿಕಾರ ದಕ್ಕುವ ಯಾವ ಭರವಸೆಯೂ ಇಲ್ಲ. ಹಾಗೆಂದು ರಾಜೆಗೆ ಪರ್ಯಾಯವಾಗಿ ಅಷ್ಟೇ ಪ್ರಬಲ ನಾಯಕರೂ ಇಲ್ಲ. ಹಾಗೊಂದು ವೇಳೆ ರಾಜೆಯನ್ನು ಬದಿಗೆ ಸರಿಸಿದರೆ ಅವರು ಬಂಡೇಳುವ ಅಪಾಯವಿದೆ. ಯಾವ ದಿಕ್ಕಿನಿಂದ ನೋಡಿದರೂ ಬಿಜೆಪಿಯದ್ದು ಇಕ್ಕಟ್ಟಿನ ಪರಿಸ್ಥಿತಿ. 

ಸದ್ಯದಲ್ಲೇ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲೂ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕೆಂಬ ಸಂದೇಶವನ್ನು ರಾಜಸ್ಥಾನ  ಫ‌ಲಿತಾಂಶ ನೀಡಿದೆ. ಅಲ್ಲಿ ಕಾಂಗ್ರೆಸ್‌ ಧರ್ಮ, ಓಲೈಕೆ ಇತ್ಯಾದಿಗಳನ್ನು ಬಿಟ್ಟು ಅಭಿವೃದ್ಧಿಗೆ ಹೆಚ್ಚು ಒತ್ತುಕೊಟ್ಟಿತ್ತು. ಸರಕಾರದ ಲೋಪಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿತು. ಜತೆಗೆ ಜಾತಿ ಸಮೀಕರಣವನ್ನು ಎಚ್ಚರಿಕೆಯಿಂದ ಬಳಸಿಕೊಂಡಿತು. ಪ್ರಚಾರದ ಸಮಯದಲ್ಲಿ ಯಾವ ಜಾತಿ, ಸಮುದಾಯ ಮತ್ತು ಧರ್ಮದವರಿಗೆ ನೋವಾಗದಂತೆ ನೋಡಿಕೊಂಡಿತು. ಆದರೆ ಬಿಜೆಪಿ ಯಥಾಪ್ರಕಾರ ಹಳೇ ಮತ ಧ್ರುವೀಕರಣ ತಂತ್ರಕ್ಕೆ ಮೊರೆ ಹೋಗಿತ್ತು. ಈ ತಂತ್ರ ಹೆಚ್ಚು ಕಾಲ ನಡೆಯದು ಎನ್ನುವುದನ್ನು ಪಕ್ಷ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಸದ್ಯದ ಮತದಾರರ ಒಲವನ್ನು ನೋಡಿದರೆ ಅಮಿತ್‌ ಶಾ ಗೆಲ್ಲಲು ಹೊಸ ರಣತಂತ್ರವನ್ನು ರೂಪಿಸಿಕೊಳ್ಳುವುದು ಅಗತ್ಯ. ಕರ್ನಾಟಕದ ಸಂದರ್ಭದಲ್ಲಿ ಈ ಅಂಶ ಹೆಚ್ಚು ಪ್ರಸ್ತುತವಾಗುತ್ತದೆ. ಈ ಫ‌ಲಿತಾಂಶದಿಂದ ಬಿಜೆಪಿ ಕಲಿತುಕೊಳ್ಳಬೇಕಾದದ್ದು ಬಹಳಷ್ಟಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next