Advertisement

ಪ್ರತಿಭಟನಾಕಾರರಿಂದ ಬ್ಯಾಂಕ್‌ ವ್ಯವಹಾರಕ್ಕೆ ತಡೆ

11:47 AM Aug 28, 2019 | Team Udayavani |

ಕುಮಟಾ: ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘದ ಗ್ರಾಹಕರು ಮತ್ತು ಆ ಭಾಗದ ರೈತರು ಮಂಗಳವಾರ ಬೆಳಗ್ಗೆ ಪುನಃ ಕೆಡಿಸಿಸಿ ಬ್ಯಾಂಕ್‌ ಕುಮಟಾ ಶಾಖೆಗೆ ಮುತ್ತಿಗೆ ಹಾಕಿ ತಮಗಾದ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ, ಕೆಲ ಗಂಟೆ ಬ್ಯಾಂಕ್‌ ವ್ಯವಹಾರಕ್ಕೆ ತಡೆಯೊಡ್ಡಿ, ಯಾವುದೇ ಬ್ಯಾಂಕ್‌ ವ್ಯವಹಾರ ನಡೆಸದಂತೆ ಪಟ್ಟು ಹಿಡಿದ ಘಟನೆ ನಡೆಯಿತು.

Advertisement

ಬ್ಯಾಂಕಿಗೆ ಪ್ರತಿದಿನವೂ ಬೆಳಗ್ಗೆ ಆಗಮಿಸಿ ರಾತ್ರಿ 9ರವರೆಗೂ ಪ್ರತಿಭಟನೆ ನಡೆಸುತ್ತೇವೆ. ಸಿಕ್ಕಸಿಕ್ಕವರಿಗೆ ನ‌ಮ್ಮ ಕಷ್ಟ ಹೇಳಿಕೊಳ್ಳುತ್ತೇವೆ. ಆಗಾಗ ವಿವಿಧ ಹಂತದ ಜನಪ್ರತಿನಿಧಿಗಳೂ ಬರುತ್ತಾರೆ. ಅವರೂ ಸಹ ನಮ್ಮ ಕಷ್ಟವನ್ನು ಆಲಿಸುತ್ತಾರೆ. ಆದರೆ ಪರಿಹಾರವಂತೂ ಎಳ್ಳಷ್ಟೂ ದೊರೆತಿಲ್ಲ. ನಮಗಾದ ಅನ್ಯಾಯಕ್ಕೆ ಪರಿಹಾರ ದೊರೆಯುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ. ನಾವು ಶಾಂತ ರೀತಿಯಿಂದ ಪ್ರತಿಭಟಿಸುತ್ತಿದ್ದೇವೆ ಎಂದರೆ ಮುಗ್ಧರೆಂದು ಭಾವಿಸಬೇಡಿ. ತಾಳ್ಮೆ ಕಳೆದುಕೊಂಡರೆ ಎಂತಹ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಸಿದರು.

ಬಳಿಕ ಎಂದಿನಂತೆಯೇ ಬ್ಯಾಂಕಿನ ಮುಂಭಾಗದಲ್ಲೇ ಕುಳಿತು ಪ್ರತಿಭಟಿಸಿದ ನೂರಕ್ಕೂ ಅಧಿಕ ರೈತರು, ಬ್ಯಾಂಕಿನ ಎಆರ್‌ಒ ಅಥವಾ ಎಂಡಿ ಬರವವರೆಗೂ ವ್ಯವಹಾರ ನಡೆಸಲು ಬಿಡುವುದಿಲ್ಲ. ಅದೇರೀತಿ ಸೊಸೈಟಿ ಕಾರ್ಯದರ್ಶಿ ಲಕ್ಷ್ಮಣ ಪಟಗಾರ ಸ್ಥಳಕ್ಕೆ ಬರಬೇಕು. ನಮಗಾದ ಅನ್ಯಾಯಕ್ಕೆ ಪರಿಹಾರ ಒದಗಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಮಧ್ಯಾಹ್ನದ ಊಟವನ್ನೂ ತ್ಯಜಿಸಿ ಪಟ್ಟುಹಿಡಿದರು. ಜಿ.ಪಂ ಸದಸ್ಯ ಗಜಾನನ ಪೈ ಹಾಗೂ ಸಾಮಾಜಿಕ ಕಾರ್ಯಕರ್ತೆ ತಾರಾ ಗೌಡ ಸ್ಥಳಕ್ಕಾಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಮಧ್ಯಾಹ್ನದ ನಂತರ ಕೆಡಿಸಿಸಿ ಬ್ಯಾಂಕ್‌ ಎಆರ್‌ಒ ಎನ್‌.ಎನ್‌. ಹೆಗಡೆ ಬ್ಯಾಂಕಿಗೆ ಆಗಮಿಸಿದರು. ಈ ವೇಳೆ ರೈತರು ತಮಗಾದ ಅನ್ಯಾಯದ ಕುರಿತು ಎಳೆಎಳೆಯಾಗಿ ಅಳಲನ್ನು ತೋಡಿಕೊಂಡರಲ್ಲದೇ, ಮೇಲಕಾರಿಗಳು ಕಾನೂನಾತ್ಮಕವಾಗಿ ತನಿಖೆಯನ್ನು ಕೈಗೊಳ್ಳಬೇಕು. ರೈತರನ್ನು ವಂಚಿಸಿದವರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಅದೇರೀತಿ ಪಾಸ್‌ಬುಕ್‌ ಹಾಗೂ ಇನ್ನಿತರ ದಾಖಲಾತಿಗಳ ಸಮೇತ ತಮಗಾದ ಅನ್ಯಾಯದ ಕುರಿತು ವಿವರಿಸಿದರು.

ನಂತರ ಎಆರ್‌ಒ ಎನ್‌.ಎನ್‌.ಹೆಗಡೆ ಮಾತನಾಡಿ, ಬರಗದ್ದೆ ಸೊಸೈಟಿಗೆ ಆಡಳಿತ ಮಂಡಳಿಯಿದೆ. ಆಡಳಿತ ಮಂಡಳಿಗೆ ತನಿಖೆ ನಡೆಸಲು ಸಂಪೂರ್ಣ ಅಧಿಕಾರವನ್ನು ನೀಡಿದ್ದೇವೆ. ಕಮೀಟಿಯವರು ತನಿಖೆಗೆ ಸಹಕಾರ ನೀಡಬೇಕು ಮತ್ತು ಸೊಸೈಟಿ ಕಾರ್ಯದರ್ಶಿ ಲಕ್ಷ್ಮಣ ಪಟಗಾರ ಅವರನ್ನು ಸ್ಥಳಕ್ಕೆ ಕರೆಸಬೇಕು. ಇದ್ಯಾವುದೂ ಸಾಧ್ಯವಿಲ್ಲವೆಂದಾದರೆ ಆಡಳಿತ ಕಮೀಟಿಯವರೆಲ್ಲರೂ ರಾಜೀನಾಮೆ ನೀಡಿ. ಅಷ್ಟಾದರೆ, ನಾವೇ ಬ್ಯಾಂಕಿನ ವತಿಯಿಂದ ತನಿಖೆಯನ್ನು ನಡೆಸುತ್ತೇವೆ ಎಂದು ಆದೇಶಿಸಿದರು. ಬಳಿಕ ಒಂದು ಗಂಟೆ ಎಆರ್‌ಒ, ಬ್ಯಾಂಕ್‌ ಸಿಬ್ಬಂದಿ, ಸೊಸೈಟಿ ಆಡಳಿತ ಕಮಿಟಿ ಮತ್ತು ರೈತರ ಸಮ್ಮುಖದಲ್ಲಿ ಸಭೆ ನಡೆಯಿತು.

Advertisement

ಸಭೆಯ ನಿರ್ಣಯದ ಪ್ರಕಾರ ಸೊಸೈಟಿ ಅಧ್ಯಕ್ಷ ಮಾದೇವ ಲಿಂಗು ಗೌಡ, ಬರಗದ್ದೆ ಸೊಸೈಟಿ ಆಡಳಿತ ಮಂಡಳಿಯವರು ಇಲಾಖಾ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ. ಕಾರ್ಯದರ್ಶಿಯನ್ನು ಸೊಸೈಟಿಗೆ ಆ.29 ರಂದು ಕರೆಸುತ್ತೇವೆ. ಅಂದು ಸಹಕಾರಿ ಇಲಾಖೆ ತನಿಖಾಧಿಖಾರಿಗಳು ಆಗಮಿಸಿ ತನಿಖೆ ನಡೆಸಬಹುದಾಗಿದೆ. ಆಡಳಿತ ಕಮೀಟಿ ಜೊತೆಯಲ್ಲಿ ಮುಖ್ಯ ಕಾರ್ಯನಿರ್ವಾಹಕರೂ ಸಹಕಾರ ನೀಡುವಂತೆ ಅವರಿಗೆ ತಿಳಿಸಲಾಗುವುದು ಎಂದು ಲಿಖೀತವಾಗಿ ಬರೆದುಕೊಟ್ಟರು.

ಮುಖಂಡರಾದ ಜಿ.ಐ. ಹೆಗಡೆ, ವೀಣಾ ನಾಯಕ ತಲಗೇರಿ, ಪಿಎಸ್‌ಐ ಇ.ಸಿ. ಸಂಪತ್‌, ರೈತರಾದ ಎನ್‌.ಎಸ್‌. ಹೆಗಡೆ, ಎಸ್‌.ಪಿ. ಭಟ್ಟ, ಸುಬ್ರಾಯ ಭಟ್ಟ, ಗಣಪತಿ ಹೆಗಡೆ, ನಾರಾಯಣ ಮಡಿವಾಳ, ಗಣಪತಿ ಭಟ್ಟ, ಶಂಕರ ಗೌಡ, ಬೀರಾ ಗೌಡ, ಎಂ.ಆರ್‌. ಹೆಗಡೆ, ನಾಗೇಶ ಮಡಿವಾಳ ಹಾಗೂ ನೂರಾರು ರೈತರು ಹಾಜರಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಬಿಗಿ ಬಂದೋಬಸ್ತ್ ಹಮ್ಮಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next