Advertisement

ಮೇಲ್ಮನೆಯಲ್ಲಿ ರಾಜೀನಾಮೆ ಪ್ರಹಸನ ಪ್ರತಿಧ್ವನಿ

11:19 PM Jul 15, 2019 | Team Udayavani |

ಬೆಂಗಳೂರು: ಅತೃಪ್ತ ಶಾಸಕರು ಮತ್ತು ಸಚಿವರೆಲ್ಲರ ರಾಜೀನಾಮೆ ಪ್ರಹಸನ ಸೋಮವಾರ ವಿಧಾನ ಪರಿಷತ್ತಿನಲ್ಲಿ ಪ್ರತಿಧ್ವನಿಸಿತು. ಇದು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಆರೋಪ-ಪ್ರತ್ಯಾರೋಪಗಳ ಸುರಿಮಳೆಗೆ ಕಾರಣವಾಗಿ, ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

Advertisement

ಕಲಾಪದಲ್ಲಿ ಪ್ರತಿಪಕ್ಷದ ಸದಸ್ಯರು, ಬಾವಿಗಿಳಿದು “ಅಲ್ಪಮತಕ್ಕೆ ಕುಸಿದ ಸರ್ಕಾರ; ಮುಖ್ಯಮಂತ್ರಿಗಳು ರಾಜೀನಾಮೆ ನೀಡಲಿ’ ಎಂದು ಫ‌ಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರೆ, ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು, “ಶಾಸಕರ ಖರೀದಿ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಬಿಡುವುದಿಲ್ಲ’ ಎಂದು ಫ‌ಲಕಗಳನ್ನು ಪ್ರದರ್ಶಿಸಿದರು. ಪರಸ್ಪರ ವಾಗ್ವಾದಗಳಿಂದ ಗೊಂದಲದ ವಾತಾವರಣ ಉಂಟಾಯಿತು. ಪರಿಣಾಮ ಸಭಾಪತಿ ಸ್ಥಾನದಲ್ಲಿದ್ದ ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಕಲಾಪವನ್ನು ಮುಂದೂಡಿದರು.

ಇದಕ್ಕೂ ಮುನ್ನ ಆರಂಭದಲ್ಲಿ ಉಪಸಭಾಪತಿಗಳು ಪ್ರಶ್ನೋತ್ತರಕ್ಕೆ ಮುಂದಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸರ್ಕಾರದ ಅಸ್ತಿತ್ವವೇ ಇಲ್ಲ. ಎಲ್ಲ ಸಚಿವರೂ ರಾಜೀನಾಮೆ ನೀಡಿದ್ದಾರೆ. ಅಲ್ಪಮತಕ್ಕೆ ಕುಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ವಿಶ್ವಾಸ ಮತಕ್ಕೆ ಮುಂದಾಗಿದ್ದಾರೆ. ಹೀಗಿರುವಾಗ ಪ್ರಶ್ನೋತ್ತರಕ್ಕೆ ಅರ್ಥವೇ ಇಲ್ಲ. ಹಾಗಾಗಿ, ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಆಗ ಉಪಸಭಾಪತಿಗಳು, “ಈಗ ಕರೆದಿರುವುದು ಪ್ರಶ್ನೋತ್ತರಕ್ಕಾಗಿ. ಹಾಗಾಗಿ ಏನಿದ್ದರೂ ಸೂಚನಾ ಪತ್ರ ಕೊಡಿ, ನಂತರ ಪರಿಶೀಲನೆ ಮಾಡಲಾಗುವುದು. ಹೀಗೆ ಸದನದ ಸಮಯ ವ್ಯರ್ಥಮಾಡುವುದು ಸರಿ ಅಲ್ಲ’ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷದ ನಾಯಕರು, “ಇದು ಸಮಯದ ಪ್ರಶ್ನೆ ಅಲ್ಲ; ಸಂವಿಧಾನದ ಪ್ರಶ್ನೆಯಾಗಿದೆ. ನಮ್ಮ ಎದುರು ಕುಳಿತವರು ಮಂತ್ರಿಗಳೇ ಅಲ್ಲ. ಎಲ್ಲರೂ ರಾಜೀನಾಮೆ ಕೊಟ್ಟಿದ್ದಾರೆ’ ಎಂದರು.

ಇದಕ್ಕೆ ದನಿಗೂಡಿಸಿದ ಸದಸ್ಯ ಆಯನೂರು ಮಂಜುನಾಥ್‌, “ನಿಯಮಾವಳಿ ಪ್ರಕಾರ ಸೂಚನಾ ಪತ್ರ ನೀಡುವ ಅವಶ್ಯಕತೆಯಿಲ್ಲ’ ಎಂದು ಗಮನಸೆಳೆಯಲು ಮುಂದಾದರು. ಸಾಥ್‌ ನೀಡಿದ ಪ್ರತಿಪಕ್ಷದ ಇತರ ಸದಸ್ಯರು, “ಸರ್ಕಾರಕ್ಕೆ ಪ್ರಶ್ನೆಗಳಿಗೆ ಉತ್ತರ ನೀಡುವ ಯಾವುದೇ ನೈತಿಕತೆ ಇಲ್ಲ. ಸರ್ಕಾರ ಸತ್ತುಹೋಗಿದ್ದು, ಉತ್ತರ ಹೇಳಬೇಕಾದವರು ದೇವಸ್ಥಾನ ತಿರುಗುತ್ತಿದ್ದಾರೆ. ಹಾಗಾಗಿ, ಪ್ರಶ್ನೋತ್ತರ ನಡೆಸುವುದರಲ್ಲಿ ಅರ್ಥವಿಲ್ಲ. ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

Advertisement

ತೀವ್ರ ವಿರೋಧ ವ್ಯಕ್ತಪಡಿಸಿದ ಸಚಿವರು, “ನಾವ್ಯಾರಾದರೂ ರಾಜೀನಾಮೆ ಕೊಟ್ಟಿದ್ದೇವೆ ಎಂದು ಹೇಳಿಲ್ಲ. ನಿಮಗೆ ಯಾರಾದರೂ ರಾಜೀನಾಮೆ ಕೊಟ್ಟಿದ್ದೇವಾ? ಅಷ್ಟಕ್ಕೂ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟವರು ಯಾರು? ಆ ಶಾಸಕರನ್ನು ರೆಸಾರ್ಟ್‌ಗಳಿಗೆ ಕರೆದೊಯ್ದವರು ತಾವೇ’ ಎಂದು ತಿರುಗೇಟು ನೀಡಿದರು. ಮಧ್ಯಪ್ರವೇಶಿಸಿದ ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ, “ಒಬ್ಬೊಬ್ಬರೇ ಮಾತನಾಡಲಿ. ನಂತರ ಆಡಳಿತ ಪಕ್ಷದಿಂದ ಉತ್ತರ ಕೊಡಲು ಅವಕಾಶ ನೀಡಲಿ’ ಎಂದರು. ಇದೆಲ್ಲದರಿಂದ ಗೊಂದಲದ ವಾತಾವರಣ ಉಂಟಾಗಿ, ಸಭೆಯನ್ನು ಅರ್ಧಗಂಟೆ ಮುಂದೂಡಲಾಯಿತು.

ಸಭೆ ಪುನರಾರಂಭವಾಗುತ್ತಿದ್ದಂತೆ ಐವಾನ್‌ ಡಿಸೋಜ, ಪ್ರಶ್ನೋತ್ತರಕ್ಕೆ ಅವಕಾಶ ನೀಡಬೇಕು ಎಂದು ಉಪ ಸಭಾಪತಿಗಳಿಗೆ ಮನವಿ ಮಾಡಿದರು. ಆಗ, “ಪ್ರತಿಪಕ್ಷ ನಾಯಕರು ಅಲ್ಪಮತಕ್ಕೆ ಕುಸಿದ ಸರ್ಕಾರ; ಮುಖ್ಯಮಂತ್ರಿ ರಾಜೀನಾಮೆ ನೀಡಲಿ’, “ಜಿಂದಾಲ್‌ಗೆ ಉಚಿತ ಭೂಮಿ ನೀಡಿದ ಮುಖ್ಯಮಂತ್ರಿಗೆ ಧಿಕ್ಕಾರ’ ಎಂಬ ಫ‌ಲಕಗಳನ್ನು ಪ್ರದರ್ಶಿಸುವ ಮೂಲಕ ಬಾವಿಗಿಳಿದು ಧರಣಿಗೆ ಮುಂದಾದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು, “ಮೋದಿ, ಷಾ ಶಾಸಕರ ಖರೀದಿಗೆ ಕಾರಣ’, “ಸರ್ಕಾರ ಅಸ್ಥಿರಗೊಳ್ಳಲು ಕಾರಣವಾದ ಬಿಜೆಪಿಗೆ ಧಿಕ್ಕಾರ’ ಎಂದು ಫ‌ಲಕಗಳನ್ನು ಹಿಡಿದು ಘೋಷಣೆ ಕೂಗಿದರು. ಅಂತಿಮವಾಗಿ ಉಪ ಸಭಾಪತಿಗಳು ಕಲಾಪವನ್ನು ಮುಂದೂಡಿದರು.

ಮುಖ್ಯ ಸಚೇತಕರಾಗಿ ಚೌಡರೆಡ್ಡಿ ತೂಪಲ್ಲಿ, ನಾಮನಿರ್ದೇಶಿತ ಸದಸ್ಯರಾಗಿ ತಿಪ್ಪಣ್ಣ ಕಮಕನೂರು ಆಯ್ಕೆಯಾಗಿದ್ದಾರೆ ಎಂದು ಕಲಾಪದಲ್ಲಿ ಉಪ ಸಭಾಪತಿ ಧರ್ಮೇಗೌಡ ಪ್ರಕಟಿಸಿದರು. ಅಲ್ಲದೆ, ಕಲಾಪದ ಸಲಹಾ ಸಮಿತಿಗೆ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ, ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ, ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ, ಮಹಾಂತೇಶ ಕವಟಗಿಮಠ, ವೈ.ಎ. ನಾರಾಯಣಸ್ವಾಮಿ, ಬಸವರಾಜ ಹೊರಟ್ಟಿ, ಎಸ್‌.ಆರ್‌. ಪಾಟೀಲ, ಆಯನೂರು ಮಂಜುನಾಥ್‌ ನೇಮಕಗೊಂಡಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ವಿಶೇಷ ಆಹ್ವಾನಿತರಾಗಿರುತ್ತಾರೆ.

ಅದೇ ರೀತಿ, ಸಭಾಪತಿ ಸ್ಥಾನದಲ್ಲಿ ಕಾರ್ಯನಿರ್ವಹಿಸಲು ಸದಸ್ಯರಾದ ಬಸವರಾಜ ಹೊರಟ್ಟಿ, ಎಸ್‌.ಆರ್‌. ಪಾಟೀಲ, ಕೆ.ಸಿ. ಕೊಂಡಯ್ಯ, ತೇಜಸ್ವಿನಿಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next