Advertisement

ಕಾದಿರಿಸಿದ ಜಾಗ: ಅರಣ್ಯ ಇಲಾಖೆ, ಗ್ರಾ.ಪಂ. ಜಂಟಿ ಸರ್ವೇ

10:48 PM Oct 01, 2019 | mahesh |

ಬಡಗನ್ನೂರು: ಪಡುವನ್ನೂರು ಗ್ರಾಮದ ಕನ್ನಡ್ಕ ಅರಣ್ಯ ಪ್ರದೇಶದ ಬಳಿ ಗ್ರಾಮ ಪಂಚಾಯತ್‌ನ ಕಾದಿರಿಸಿದ ಜಾಗವನ್ನು ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್‌ ಜಂಟಿ ಸರ್ವೇ ಮಾಡುವ ಬಗ್ಗೆ ಕೆ.ಡಿ.ಪಿ. ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Advertisement

ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಕನ್ನಯ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್‌ ಸಮುದಾಯದ ಭವನದಲ್ಲಿ ಸಭೆ ನಡೆಯಿತು. ಪಡುವನ್ನೂರು ಗ್ರಾಮದ ಕನ್ನಡ್ಕ ಅರಣ್ಯ ಪ್ರದೇಶದ ಬಳಿ ಗ್ರಾಮ ಪಂಚಾಯತ್‌ನ ವಸತಿ ನಿವೇಶನಕ್ಕೆ ಕಾದಿರಿಸಿದ ಜಾಗದಲ್ಲಿ ತಂತಿ ಬೇಲಿ ಹಾಕಿದ ಬಗ್ಗೆ ಅರಣ್ಯ ಇಲಾಖಾಧಿಕಾರಿ ಗಮನಕ್ಕೆ ತಂದರು.

ಈ ಬಗ್ಗೆ ಉತ್ತರಿಸಿದ ಅರಣ್ಯ ರಕ್ಷಕ ಉಮೇಶ್‌, ಪಂಚಾಯತ್‌ ಕಾದಿರಿಸಿದ 10.5 ಎಕ್ರೆ ಜಾಗ ಹಾಗೆಯೇ ಇದೆ. ಅದಕ್ಕಿಂತ ಹೆಚ್ಚಿನ ಜಾಗವನ್ನು ಗುರುತಿಸಿದ್ದು, ಆ ಜಾಗವನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್‌ ಜಂಟಿ ಸರ್ವೆಗೆ ನಿರ್ಣಯ ಕೈಗೊಳ್ಳಲಾಯಿತು.

ಕೊಠಡಿ ಸೋರಿಕೆ
ಅಕ್ಷರ ದಾಸೋಹ ಕೊಠಡಿ ಮಳೆಗಾಲದಲ್ಲಿ ಸೋರಿಕೆಯಾಗುವುದರಿಂದ ಮಕ್ಕಳಿಗೆ ಬಿಸಿಯೂಟ ತಯಾರಿಸಲು ತೊಂದರೆಯಾಗುತ್ತಿದೆ. ಇದು ಕೊಯಿಲ- ಬಡಗನ್ನೂರು ಮಾತ್ರವಲ್ಲದೆ ಪಡುಮಲೆ, ಸಜಂಕಾಡಿ ಶಾಲೆಯಲ್ಲೂ ಸೋರಿಕೆ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೊಯಿಲ – ಬಡಗನ್ನೂರು ಶಾಲಾ ಮುಖ್ಯ ಶಿಕ್ಷಕ ಉದಯ ಕುಮಾರ್‌ ರಾವ್‌ ತಿಳಿಸಿದರು. ಬಳಿಕ ಶಾಲಾ ಕಾಂಪೌಂಡ್‌ ನಿರ್ಮಾಣ, ಶಾಲಾ ಜಾಗದ ಗಡಿ ಗುರುತು, ನೀರಿನ ಸಮಸ್ಯೆ ಶಾಲಾ ದುರಸ್ತಿ ಇವುಗಳ ಬಗ್ಗೆ ಬೇಡಿಕೆ ಸಲ್ಲಿಸಿದರು. ಬಡಗನ್ನೂರು ಶಾಲಾ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ ಸಮಸ್ಯೆ ಬಿಚ್ಚಿಟ್ಟರು.

ನಿರ್ಣಯವಾದರೂ ಸ್ಪಂದನೆ ಇಲ್ಲ
ಮಹಿಳಾ ಮತ್ತು ಮಕ್ಕಳ ಇಲಾಖೆ ಬಗ್ಗೆ ಅಂಗನವಾಡಿ ಮೆಲ್ವಿಚಾರಕಿ ಸರೋಜಿನಿ ಮಾಹಿತಿ ನೀಡಿ ಅಂಗನವಾಡಿ ಪ್ರಗತಿ ಪರಿಶೀಲನೆ ಸಂದರ್ಭ ಕೊಯಿಲ ಹಾಗೂ ಮುಡಿಪಿನಡ್ಕ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ಮಂಜೂರಾದ ಬಗ್ಗೆ ಮಾಹಿತಿ ನೀಡಿದರು. ಈ ಬಗ್ಗೆ ಸದಸ್ಯ ಗೋಪಾಲಕೃಷ್ಣ ಸುಳ್ಯಪದವು ಮಾತನಾಡಿ, ಸುಳ್ಯಪದವು ಅಂಗನವಾಡಿ ಕೇಂದ್ರ ಮಳೆಗಾಲದಲ್ಲಿ ಸೋರಿಕೆಯಾಗುತ್ತಿದೆ. ಇಲ್ಲಿ ಹೊಸ ಕಟ್ಟಡದ ಅಗತ್ಯ ಇದೆ ಎಂದು ಕ್ರಿಯಾ ಯೋಜನೆ ಮಾಡಿ, ಒಂದು ವರ್ಷದ ಹಿಂದೆ ನಿರ್ಣಯ ಮಾಡಿ ಕಳಿಸಲಾಗಿದೆ.

Advertisement

ಆದರೆ ಈವರೆಗೆ ಯಾವುದೇ ಸುಳಿವಿಲ್ಲ ಏಕೆ ಎಂದು ಪ್ರಶ್ನಿಸಿದರು. ಉತ್ತರಿಸಿದ ಸರೋಜಿನಿ, ನಾನು ಇಲಾಖೆಗೆ ಬರೆದಿದ್ದೇನೆ. ಆದರೆ ಪುತ್ತೂರು ಕೆಡಿಪಿ ಸಭೆಯ ಅನುಮೋದನೆ ಬಳಿಕ ಕ್ರಿಯಾ ಯೋಜನೆ ಬದಲಾವಣೆ ಆಗುತ್ತಿದೆ. ಏಕೆಂದು ಗೊತ್ತಿಲ್ಲ ಎಂದರು. ಡಿಸಿಯವರಿಗೆ ಬರೆಯಲು ನಿರ್ಣಯ ಮಾಡಲಾಯಿತು.

ಇಲಾಖಾಧಿಕಾರಿಗಳ ಗೈರು
ಶಿಕ್ಷಣ, ಮೆಸ್ಕಾಂ, ಅರಣ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆ, ಕಂದಾಯ, ಅಂಗವಿಕಲ, ಆಹಾರ ಹೊರತುಪಡಿಸಿ ಇತರ ಇಲಾಖಾಧಿಕಾರಿಗಳು ಗೈರಾಗಿ ದ್ದರು. ಒಟ್ಟು 32 ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೇವಲ 8 ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಪ್ರಮುಖ ಇಲಾಖಾಧಿಕಾರಿಗಳ ಗೈರು ಎದ್ದು ಕಾಣುತ್ತಿತ್ತು.

ಸದಸ್ಯರಾದ ರವಿರಾಜ ರೈ ಸಜಂಕಾಡಿ, ಬಾಲಕೃಷ್ಣ ಮೊಡಿಕೆ, ಉದಯ ಕುಮಾರ್‌ ಶರವು, ಗೋಪಾಲಕೃಷ್ಣ ಸುಳ್ಯಪದವು, ಗುರುಪ್ರಸಾದ್‌ ಕುದಾಡಿ, ದಾಮೋದರ ಅಚಾರ್ಯ ನೆಕ್ಕರೆ, ಸವಿತಾ ಮಂಡ್ಯಲಮೂಲೆ, ಸುಶೀಲಾ ಪಕೊಡ್‌, ಹೇಮಲತಾ ಗೌಡ ಸಂಪಿಗೆಮಜಲು, ದೇವಕಿ ಕನ್ನಡ್ಕ, ವಿಜಯಲಕ್ಷ್ಮೀ ಮೇಗಿನಮನೆ, ದಮಯಂತಿ ನೆಕ್ಕರೆ ಗ್ರಾ.ಪಂ. ಪಿಡಿಒ ವಸೀಮ ಗಂಧದ, ಕಾರ್ಯದರ್ಶಿ ಶಾರದಾ ಕೆ., ಗ್ರಾಮಕರಣಿಕ ಪೃಥ್ವೀರಾಜ್‌ ಮೊದಲಾದವರು ಉಪಸ್ಥಿತರಿದ್ದರು.
ಗುಮಾಸ್ತ ಜಯಾಪ್ರಸಾದ ರೈ ಸ್ವಾಗತಿಸಿ, ವಂದಿಸಿದರು. ಸಿಬಂದಿ ಹೇಮಾವತಿ, ಶಾರದಾ, ಶೀಲಾವತಿ ಹಾಗೂ ಅಬ್ದುಲ್‌ ರಹಮಾನ್‌ ಸಹಕರಿಸಿದರು.

ಪ್ರತ್ಯೇಕ ಗ್ರಾ.ಪಂ.: ನಿರ್ಣಯ
ಪಡುವನ್ನೂರು ಗ್ರಾಮಕ್ಕೆ ಪ್ರತ್ಯೇಕ ಗ್ರಾ.ಪಂ. ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. 94ಸಿ ಅಡಿ ನಿವೇಶನ ರಹಿತ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸಿದ್ದರು. ಪಡುವನ್ನೂರು ಗ್ರಾಮದ 97 ಅರ್ಜಿಗಳ ಪೈಕಿ 35 ಹಾಗೂ ಬಡಗನ್ನೂರಲ್ಲಿ 18 ಅರ್ಜಿ ಬಾಕಿ ಇದೆ. ಇದು ಯಾವ ಕಾರಣದಿಂದ ಬಾಕಿಯಾಗಿದೆ ಎನ್ನುವುದರ ಬಗ್ಗೆ ಮುಂದಿನ ಪ್ರಗತಿ ಸಭೆಯಲ್ಲಿ ವರದಿ ನೀಡುವಂತೆ ಅಧ್ಯಕ್ಷ ಕೇಶವ ಕನ್ನಯ ಅವರು ಗ್ರಾಮಕರಣಿಕರಿಗೆ ಸೂಚಿಸಿದರು.

ಸರ್ವರ್‌ ಸಮಸ್ಯೆ
ಸರ್ವರ್‌ ಸಮಸ್ಯೆಯಿಂದ ಪಡಿತರ ಸಾಮಗ್ರಿ ಪಡೆದುಕೊಳ್ಳುವಲ್ಲಿ ಜನಸಾಮಾನ್ಯರಿಗೆ ಸೆಪ್ಟಂಬರ್‌ ತಿಂಗಳ ಮೊದಲ ವಾರದಿಂದ ತೊಂದರೆಯಾಗಿದೆ. ಸೆ. 26 ಕೊನೆಯ ದಿನ ಆಗಿದ್ದು, ಪೂರ್ಣ ವಿತರಣೆ ಆಗಿಲ್ಲ ಎಂದು ಪಡಿತರ ವಿತರಕ ಹೊನ್ನಪ್ಪ ನಾಯ್ಕ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next