Advertisement

ಸಾಗರ : ಜೀತದಾಳುಗಳಾಗಿ ಬಂಧಿಯಾಗಿದ್ದ ಛತ್ತಿಸಗಢದ 19 ಜನರ ರಕ್ಷಣೆ

04:11 PM Mar 10, 2022 | Team Udayavani |

ಸಾಗರ : ತಾಲೂಕಿನ ಆವಿನಹಳ್ಳಿಯ ಅಟಲ್ ಬಿಹಾರಿ ವಸತಿ ಶಾಲೆ ನಿರ್ಮಾಣದಲ್ಲಿ ಜೀತದಾಳುಗಳಾಗಿ ಬಂಧಿಯಾಗಿದ್ದ ಛತ್ತಿಸಗಢ ರಾಜ್ಯದ 19 ಜನರನ್ನು ಸಾಗರ ಉಪವಿಭಾಗದ ಸಹಾಯಕ ಆಯುಕ್ತ ಡಾ. ನಾಗರಾಜ್ ಎಲ್. ನೇತೃತ್ವದ ತಂಡ ರಕ್ಷಣೆ ಮಾಡಿ ಬುಧವಾರ ರಾತ್ರಿ ಸರ್ಕಾರಿ ಬಸ್‌ನಲ್ಲಿ ಅವರ ರಾಜ್ಯಕ್ಕೆ ವಾಪಾಸ್ ಕಳಿಸಿಕೊಡಲಾಗಿದೆ.

Advertisement

ಶಾಲೆ ನಿರ್ಮಾಣ ಕಾರ್ಯಕ್ಕೆ ಛತ್ತಿಸಗಢದ ಸುಖ್ಮಾ ಜಿಲ್ಲೆಯ ಈ 19 ಜನರನ್ನು ಕೆಲಸಕ್ಕೆ ಕರೆ ತರಲಾಗಿತ್ತು. ಈ ಕಾರ್ಮಿಕರಿಗೆ ಊಟ ವಸತಿ, ಸಂಬಳವನ್ನು ಸಹ ಕೊಡದೆ, ಅವರ ಊರಿಗೂ ಕಳಿಸದೆ ಇಲ್ಲಿ ಬಂಧಿಯಾಗಿರಿಸಿಕೊಂಡು ಕೂಲಿ ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಎಸಿ ಸೂಚನೆಯನ್ವಯ ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ ಎಲ್ಲ ಜೀತಾದಾಳುಗಳನ್ನು ಬಂಧಮುಕ್ತಗೊಳಿಸಲಾಗಿದೆ. ಈ ಸಂಬಂಧ ನಾಲ್ಕು ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದ್ದು, ವಿಚಾರಣೆಗೆ ಕರೆಯಲಾಗಿದೆ.

ಜೀತದಾಳುಗಳ ಪೈಕಿ ಆರು ಜನ ಮಹಿಳೆಯರು, ಐವರು ಬಾಲ ಕಾರ್ಮಿಕರು ಮತ್ತು 8 ಜನ ಪುರುಷರು ಇದ್ದಾರೆ. ಸುಖ್ಮಾ ಜಿಲ್ಲೆಯ ಉಪ ತಹಶೀಲ್ದಾರ್ ಮತ್ತು ಕಾರ್ಮಿಕ ನಿರೀಕ್ಷಕರ ನೇತೃತ್ವದಲ್ಲಿ ಜೀತಕಾರ್ಮಿಕರನ್ನು ಹಸ್ತಾಂತರಿಸಿ, ಛತ್ತಿಸಗಢಕ್ಕೆ ಕರೆದುಕೊಂಡು ಹೋಗಲು ತಾಲೂಕು ಆಡಳಿತದಿಂದ ಬಸ್ ಸೌಲಭ್ಯ ಒದಗಿಸಲಾಗಿದೆ.

ಇದನ್ನೂ ಓದಿ : ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ : ರಾಹುಲ್ ಗಾಂಧಿ

ಈ ಕುರಿತು ಮಾತನಾಡಿದ ಎಸಿ ಡಾ. ನಾಗರಾಜ್, ಈ ಬಗ್ಗೆ ಚಿತ್ರದುರ್ಗ ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೆಲಸಕ್ಕಾಗಿ ಕರೆದುಕೊಂಡು ಬಂದ ಕಾರ್ಮಿಕರಿಗೆ ಸಂಬಳ ಕೊಡದೆ, ಹಳಸಿದ ಊಟವನ್ನು ನೀಡಿ, ಊರಿಗೂ ಹೋಗಲು ಬಿಡುತ್ತಿಲ್ಲ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಮಾ. ೫ರಂದು ಸುಖ್ಮಾ ಉಪ ತಹಶೀಲ್ದಾರ್ ಮತ್ತು ಕಾರ್ಮಿಕ ನಿರೀಕ್ಷಕರು ಸಾಗರಕ್ಕೆ ಬಂದಿದ್ದಾರೆ. ಜೀತದಾಳುಗಳನ್ನು ಗುತ್ತಿಗೆ ಕಾರ್ಮಿಕರನ್ನಾಗಿ ಕಳಿಸಿದ್ದು ರಾಮಕಿಶನ್ ಎಂಬ ಬೆಂಗಳೂರಿನ ವ್ಯಕ್ತಿ, ಮ್ಯಾನ್‌ಪವರ್ ಏಜೆನ್ಸಿಯ ಬಾಬು, ರಾಮಕೃಷ್ಣ ಮತ್ತು ತಿರುಪತಿ ಅವರ ಮೇಲೆ ಬಾಲಕಾರ್ಮಿಕರ ಅಪರಾಧ ಕಾಯ್ದೆ, ಜೀತಪದ್ಧತಿ ಅಡಿ ಪ್ರಕರಣ ದಾಖಲಿಸಲಾಗಿದೆ. ಜೀತದಾಳುಗಳಾಗಿ ದುಡಿಯುತ್ತಿದ್ದ ೧೯ ಜನರಿಗೆ ಊಟ ವಸತಿ ನೀಡಿ, ಬಿಡುಗಡೆ ಪತ್ರವನ್ನು ಕೊಟ್ಟು ಅಲ್ಲಿನ ಅಧಿಕಾರಿಗಳಿಗೆ ಹಸ್ತಾಂತರಿಸಿ, ಛತ್ತಿಸಗಢಕ್ಕೆ ಸರ್ಕಾರಕ್ಕೆ ಕಳಿಸುತ್ತಿದ್ದೇವೆ. ಜೀತದಾಳುಗಳಿಗೆ ಸಂಬಳ ಕೊಡುವುದು ಬಾಕಿ ಇದ್ದು, ಇದನ್ನು ಸಂಬಂಧಪಟ್ಟ ಗುತ್ತಿಗೆದಾರರಿಂದ ವಸೂಲಿ ಮಾಡಿ ಅವರ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಸುಖ್ಮಾ ಜಿಲ್ಲೆಯ ಉಪ ತಹಶೀಲ್ದಾರ್ ಸತಾನಂದನಾಗ್, ಕಾರ್ಮಿಕ ನಿರೀಕ್ಷಕ ಜೆ.ಎಲ್. ದೇವಾಂಗನ್ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next