ತುಮಕೂರು: ಬೆಂಗಳೂರಿನಿಂದ ತುಮಕೂರಿಗೆ ರಾತ್ರಿ 8 ಗಂಟೆಗೆ ಒಂದು ಪ್ಯಾಸೆಂಜರ್ ರೈಲು ಸಂಚಾರಕ್ಕೆ ಅನುವಾಗುವಂತೆ ರೈಲ್ವೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತುಮಕೂರು ಸಂಸದ ಎಸ್.ಪಿ.ಮುದ್ದ ಹನುಮೇಗೌಡ ಅವರನ್ನು ರೈಲ್ವೆ ಪ್ರಯಾಣಿಕರ ವೇದಿಕೆ ಮನವಿ ಮಾಡಿದೆ.
ಸಂಸದರ ಹೆಬ್ಬೂರು ನಿವಾಸದಲ್ಲಿ ಭೇಟಿ ಮಾಡಿದ ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಪದಾಧಿಕಾರಿಗಳು ರಾತ್ರಿ ರೈಲು ಆರಂಭದಿಂದ ತುಮಕೂರಿನ ಪ್ರಯಾಣಿಕರಿಗಷ್ಟೇ ಅಲ್ಲದೇ, ಬೆಂಗಳೂರು-ತುಮಕೂರು ನಡುವಿನ ಗ್ರಾಮಗಳ ಸಾವಿರಾರು ಜನರಿಗೆ ಅನುಕೂಲವಾಗ ಲಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಎಲ್ಲರಿಗೂ ಅನುಕೂಲ: ಸಂಜೆ 6.20 ರ ನಂತರ ಬೆಂಗಳೂರಿನಿಂದ ತುಮಕೂರಿಗೆ ಇರುವ ಪ್ಯಾಸೆಂಜರ್ ರೈಲು ಬಿಟ್ಟರೆ ಮತ್ತೆ ರಾತ್ರಿ 11 ಗಂಟೆ ಯವರೆಗೆ ಪ್ಯಾಸೆಂಜರ್ ರೈಲಿನ ಅನುಕೂಲವಿಲ್ಲ. ಇದರಿಂದ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ರಾತ್ರಿ ರೈಲು ಆರಂಭದಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ವಿವರಿಸಿದರು.
ಮನವಿ: ಬೆಂಗಳೂರಿಗೆ ಅತ್ಯಂತ ಸಮೀಪವಿರುವ ಮತ್ತು ವಾಣಿಜ್ಯ ವಹಿವಾಟು ನಗರವಾಗಿರುವ ತುಮಕೂರಿಗೆ ಉಪನಗರ ರೈಲು ಯೋಜನೆಯನ್ನು ಎರಡನೇ ಹಂತಕ್ಕೆ ನಿಗದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಮೊದಲ ಹಂತದಲ್ಲೇ ತುಮಕೂರು ನಗರವನ್ನು ಸೇರಿಸಲು ಒತ್ತಾಯಿಸಬೇಕೆಂದು ಮನವಿ ಮಾಡಿದರು.
ಲಿಫ್ಟ್ ಅಳವಡಿಕೆಗೆ ಯೋಜನೆ: ತುಮಕೂರು ರೈಲು ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ಇದ್ದು, ಇದಕ್ಕೆ ರ್ಯಾಂಪ್ ಅಳವಡಿಸದೇ ನಿರ್ಲಕ್ಷಿಸಲಾಗಿದೆ. ಇದರಿಂದ ತೀವ್ರ ತೊಂದರೆಯಾಗಿದೆ. ಪ್ರಸ್ತುತರ್ಯಾಂಪ್ ಅಳ ವಡಿಸಲು ಅವಕಾಶವಿಲ್ಲದಿ ರುವುದರಿಂದ ಎರಡು ಮತ್ತು 3-4ನೇ ಪ್ಲಾಟ್ ಫಾರಂಗಳಲ್ಲಿ ಲಿಫ್ಟ್ ಅಳವಡಿಕೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಸ್ಥೆಗಳು, ಸಾಮಾಜಿಕ ಕಾಳಜಿಯ ಸಂಘಟನೆಗಳ ಹಾಗೂ ಜನಪ್ರತಿನಿಧಿಗಳ ದೇಣಿಗೆಯಿಂದ ಲಿಫ್ಟ್ ಅಳವಡಿಸಲು ವೇದಿಕೆ ಯೋಜನೆ ರೂಪಿಸುತ್ತಿದೆ. ಇದಕ್ಕೆ ಸಂಸದರ ನಿಧಿಯಿಂದ ಆರಂಭಿಕ ಕೊಡುಗೆ ನೀಡಬೇಕೆಂದು ಮನವಿ ಮಾಡಲಾಯಿತು.
ಭರವಸೆ: ವೇದಿಕೆಯ ಎಲ್ಲ ಬೇಡಿಕೆಗಳನ್ನು ಆಲಿಸಿದ ಸಂಸದ ಮುದ್ದಹನುಮೇಗೌಡ ಅವರು ಸಂಸತ್ ಅಧಿವೇಶನದ ನಂತರ ಎಲ್ಲ ಬೇಡಿಕೆಗಳ ಈಡೇರಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ವೇಳೆ ವೇದಿಕೆ ಕಾರ್ಯದರ್ಶಿ ಕರಣಂ ರಮೇಶ್, ಹಿರಿಯ ಉಪಾಧ್ಯಕ್ಷರಾದ ಪರಮೇಶ್ವರ್, ಖಜಾಂಚಿ ಆರ್.ಬಾಲಾಜಿ ಹಾಗೂ ನಿರ್ದೇಶಕರಾದ ಸಿ.ನಾಗರಾಜ್ ಮತ್ತು ಎಚ್.ಆರ್.ರಘು ಇದ್ದರು.