Advertisement
ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನವಾದ 26 ನೇ ಜನವರಿ ಪ್ರತೀ ವರ್ಷ ಗಣರಾಜ್ಯೋತ್ಸವ ದಿನ ಎಂದು ಸಂಭ್ರಮಿಸಲಾಗುತ್ತದೆ. ಈ ಸಂಭ್ರಮದಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಪ್ರಾಣತೆತ್ತ ಹೋರಾಟಗಾರರೆಲ್ಲ ನಮ್ಮ ಸ್ಮರಣೆಗೆ ಬರುತ್ತಾರೆ. ಅವರ ತ್ಯಾಗ, ಬಲಿದಾನದ ಋಣ ತೀರಿಸುವ ದಿವ್ಯ ಹಾದಿಯೆಂದರೆ ನಾವು ನಮ್ಮ ನಮ್ಮ ಕರ್ತವ್ಯವನ್ನು ಶ್ರದ್ಧಾಭಕ್ತಿಯಿಂದ ನಿರ್ವಹಿಸುವುದು. ಶಾಂತಿ, ಸೌಹಾರ್ದದಿಂದ ಬಾಳುವ ಮೂಲಕ ಸ್ವಾತಂತ್ರ್ಯ ಯೋಧರನ್ನು ನೆನೆಯಬೇಕು, ಗೌರವಿಸಬೇಕು.
Related Articles
Advertisement
ನದಿ ಮೂಲದ ಹಿರಿಮೆ ಅದು ಹರಿಯುವಾಗ ಉಕ್ಕೇರುವುದರಲ್ಲಿ ವ್ಯಕ್ತಗೊಳ್ಳುವುದು. ಅಂತೆಯೆ ದೇಶದ ಔನ್ನತ್ಯ ಅಲ್ಲಿನ ಪ್ರಜೆಯ ಸಂಪನ್ನತೆಯಲ್ಲಿ ಪ್ರಕಟಗೊಳ್ಳಬೇಕು. ಪ್ರಜೆ ನೈತಿಕ ಪ್ರಜ್ಞೆಯಿಂದ ನಿಯಂತ್ರಿಸಲ್ಪಡದಿದ್ದರೆ ಆತ ಸಮರ್ಥನಾದಷ್ಟೂ ದುರುಳನೂ ಸಮಾಜಕ್ಕೆ ಕಂಟಕಪ್ರಾಯನೂ ಆದಾನು. ಒಂದು ದೇಶದ ನಿಜವಾದ ಸ್ವಾತಂತ್ರÂದ ಪರೀಕ್ಷೆಯೆಂದರೆ ಅಲ್ಲಿನ ಕೆಳಸ್ಥಳದವರು ಹೇಗೆ ಪರಿಗಣಿಸ್ಪಡುತ್ತಿದ್ದಾರೆ ಎನ್ನುವುದು ಎಂದು ಅಮೆರಿಕದ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್ ಹೇಳುತ್ತಿದ್ದರು. ಈ ನಿಟ್ಟಿನಲ್ಲಿ ಒಂದಷ್ಟು ನಿಷ್ಠುರ ಸತ್ಯಗಳನ್ನು ಹೇಳಲೇಬೇಕಿದೆ. ಮತದಾನ ಸರ್ವಪ್ರಜೆಗಳ ಪವಿತ್ರ ಹಕ್ಕು ಹಾಗೂ ಕರ್ತವ್ಯ ಎಂದು ಪರಿಪರಿಯಾಗಿ ಸಾರಿದರೂ ಬಹುತೇಕ ಎಲ್ಲ ಚುನಾವಣೆಗಳಲ್ಲೂ ಅದೇ ಎಡವಟ್ಟು!-“ಕುಲಗೆಡುವ ಮತಗಳು’.
ವಿಪರ್ಯಾಸವೆಂದರೆ ನಮ್ಮ ಪ್ರತಿನಿಧಿಗಳೂ ಸಹ ವಿಧಾನ ಪರಿಷತ್ತಿಗೆ, ರಾಜ್ಯಸಭೆಗೆ ಸದಸ್ಯರನ್ನು ಆರಿಸುವಾಗ ಹಾಗಿರಲಿ ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಚುನಾಯಿಸುವಾಗಲೂ ಅವರು ಚಲಾಯಿಸುವ ಮತಗಳಲ್ಲಿ ಕೆಲವು ಅಸಮರ್ಪಕವಾಗಿರುತ್ತವೆ! ಮೂಲಭೂತ ಹಕ್ಕನ್ನು ಚಲಾಯಿಸುವಾಗ ಕನಿಷ್ಠ ಜಾಗೃತಿ ಬೇಕಲ್ಲವೇ? ಮತದಾನದ ಮೂಲಕವೇ ಅಲ್ಲವೆ ಪ್ರಜೆಗಳು ತಮ್ಮ ಆಶಯವನ್ನು ಆಭಿವ್ಯಕ್ತಿಸುವುದು? “ಮತ ಚಲಾಯಿಸದವರ ಆಯ್ಕೆ ಕೆಟ್ಟ ಸರ್ಕಾರ’ ಎಂಬ ವ್ಯಂಗ್ಯೋಕ್ತಿಯುಂಟು.
ಗಣ ಎಂದರೆ ಸಮೂಹ. ಹಾಗಾಗಿ ಗಣತಂತ್ರ ಎನ್ನುವಲ್ಲೇ ಸಮಷ್ಟಿ ವಿವೇಕವೆಂಬ ಧ್ವನ್ಯಾರ್ಥವಿದೆ. ಅಚ್ಚುಕಟ್ಟಾದ ರಾಜಕತೆಯ ರೂಪಣೆಯಲ್ಲಿ ಜನರ ಯುಕ್ತ ವಿವೇಚನೆ ಪ್ರಮುಖವೂ ನಿರ್ಣಾಯಕವೂ ಆದ ಪಾತ್ರ ವಹಿಸುತ್ತದೆ. ಬಹುಮುಖ್ಯವೆಂದರೆ ಉಮೇದುವಾರರು ಪ್ರತಿನಿಧಿಸಲು ತಕ್ಕವರೆ ಎಂದು ಪರಿಶೀಲಿಸಿಯೇ ಮತದಾರರು ಮತ ಚಲಾಯಿಸಬೇಕು. ಚಲಾಯಿಸುವ ಮತವು ಜಾತಿ, ವರ್ಗ, ಪಂಗಡ, ಲಿಂಗ, ಆಸ್ತಿ, ಅಂತಸ್ತು, ಅನುಕಂಪಕ್ಕೆ ಅತೀತವಿದ್ದಾಗ ಮಾತ್ರ ಅದರ ಮೌಲ್ಯ ಉಳಿಯುವುದು. ಪ್ರಸಿದ್ಧರಾದ ನಟರು, ಸಾಹಿತಿಗಳು, ಉದ್ಯಮಿಗಳು, ಸಂಗೀತಗಾರರು ಮೊದಲಾದವರು ಖಂಡಿತವಾಗಿ ಚುನಾವಣೆಗೆ ಸ್ಪರ್ಧಿಸಬಹುದು. ಯಾರೇ ಪ್ರಜೆ ಉಮೇದುವಾರರಾಗಲು ಸಂವಿಧಾನ ಅವಕಾಶ ಕಲ್ಪಿಸಿದೆ. ಆದರೆ ಅವರು ಆ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿಯಾರೆ ಎನ್ನುವುದು ಪ್ರಶ್ನೆಯಾಗುತ್ತದೆ. ಮತದಾನ ನಮ್ಮ ಬದ್ಧತೆಯನ್ನು ನಾವೇ ಘೋಷಿಸಿಕೊಳ್ಳುವುದು. ಅಮೆರಿಕದ ಖ್ಯಾತ ರಾಜಕೀಯ ವಿಶ್ಲೇಷಕರಾದ ಕೀತ್ ಎಲಿಸನ್ “ಮತದಾನ ಬಹಿಷ್ಕರಿಸುವುದು ಪ್ರತಿಭಟನೆಯಲ್ಲ, ಅದು ಶರಣಾಗತಿ’ ಎನ್ನುತ್ತಾರೆ. ಪ್ರಜೆಗಳೆಲ್ಲರೂ ಮತ ಚಲಾಯಿಸಿ ಒಂದರ್ಥದಲ್ಲಿ ದಕ್ಷ ರಾಜಕಾರಣಿಗಳಾಗಬೇಕು. ಕ್ರಿಕಟ್ ಕ್ರೀಡಾ ಕ್ಷೇತ್ರದಲ್ಲಿ ಒಬ್ಬರು ಸಮರ್ಥರಾಗಿರುವ ಮಾತ್ರಕ್ಕೆ ಅವರು ರಾಜಕಾರಣಿಯಾಗಿ ದಕ್ಷತೆ ಮೆರೆಯುತ್ತಾರೆಂದು ತೀರ್ಮಾನಿಸಲಾದೀತೇ? ಕ್ರೀಡೆ ಮತ್ತು ರಾಜಕಾರಣವನ್ನು ಭಿನ್ನವಾಗಿಯೇ ನೋಡಬೇಕಾಗುತ್ತದೆ. ಒಂದು ಕ್ಷೇತ್ರದಲ್ಲಿ ಗಳಿಸಿದ ಪ್ರಖ್ಯಾತಿಯನ್ನು ರಾಜಕೀಯ ಕ್ಷೇತ್ರಕ್ಕೆ ಬಳಸಿಕೊಳ್ಳುವಾಗ ಅತ್ಯಂತ ಎಚ್ಚರಿಕೆ ನಡೆ ಅಗತ್ಯವಾಗುತ್ತದೆ.
ಬಿಂಡಿಗನವಿಲೆ ಭಗವಾನ್