Advertisement

ಅಭಿಮಾನಿ ದೇವರುಗಳಿಂದ ಅಪ್ಪು ಸ್ಮರಣೆ: ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು ಕಂಠೀರವ ಸ್ಟುಡಿಯೋ

10:26 AM Oct 30, 2022 | Team Udayavani |

ಅದೊಂದು ಭಾವನಾತ್ಮಕ ಕ್ಷಣ… ಒಂದು ಕಡೆ ಅಭಿಮಾನಿಗಳ ಅಭಿಮಾನ, ಮತ್ತೂಂದು ಕಡೆ ಕುಟುಂಬ ವರ್ಗದ ನೋವು… ಈ ಎರಡೂ ಘಟನೆಗಳಿಗೆ ಶನಿವಾರ ಸಾಕ್ಷಿಯಾಗಿದ್ದು ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್‌ ರಾಜ್‌ ಕುಮಾರ್‌ ಸಮಾಧಿ. ಅಭಿಮಾನಿಗಳ ಪಾಲಿನ ದೇವರು ಪುನೀತ್‌ ರಾಜ್‌ಕುಮಾರ್‌ ಅಗಲಿ ಶನಿವಾರ (ಅ.29)ಕ್ಕೆ ಒಂದು ವರ್ಷ. ತಮ್ಮ ನೆಚ್ಚಿನ ನಟನ ಮೊದಲ ವರ್ಷದ ಪುಣ್ಯತಿಥಿಯನ್ನು ಆಚರಿಸಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸಮಾಧಿ ಬಳಿ ಸೇರಿದ್ದರು. ಶುಕ್ರವಾರ ರಾತ್ರಿಯಿಂದಲೇ ತಂಡೋಪತಂಡವಾಗಿ ಸಮಾಧಿ ಬಳಿ ಬಂದ ಅಭಿಮಾನಿಗಳು ಪುನೀತ್‌ ಅವರ ಹಾಡು, ಫೋಟೋ, ಸಿನಿಮಾ ಡೈಲಾಗ್‌ಗಳ ಮೂಲಕ ತಮ್ಮ ಅಭಿಮಾನ ಪ್ರದರ್ಶಿಸಿದರು.

Advertisement

ಇನ್ನು, ಪುನೀತ್‌ ರಾಜ್‌ಕುಮಾರ್‌ ಕುಟುಂಬ ಶನಿವಾರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿತು. ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಅಶ್ವಿ‌ನಿ ಪುನೀತ್‌ರಾಜ್‌ಕುಮಾರ್‌, ಪುತ್ರಿ ವಂದಿತಾ, ವಿನಯ್‌, ಯುವ, ಧೀರೇನ್‌ ಹಾಗೂ ಶಿವಣ್ಣ ಸಹೋದರಿಯರು ಸೇರಿ ಸಮಾಧಿಗೆ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸುತ್ತಿದ್ದಂತೆ ಅಶ್ವಿ‌ನಿ ಪುನೀತ್‌ ರಾಜ್‌ಕುಮಾರ್‌ ಭಾವುಕರಾಗಿ ಅತ್ತರು. ಈ ದೃಶ್ಯನೆರದಿದ್ದವರ ಕಣ್ಣಂಚಲ್ಲೂ ನೀರು ತರಿಸಿತು.

ಲಕ್ಷ ಮಂದಿಗೆ ಅನ್ನದಾನ: ತಮ್ಮ ನೆಚ್ಚಿನ ನಟನ ಪುಣ್ಯಸ್ಮರಣೆಯಂದು ಸಮಾಧಿಗೆ ಆಗಮಿಸುವ ಮಂದಿಗೆ ಅಭಿಮಾನಿಗಳು ಅನ್ನದಾನದ ವ್ಯವಸ್ಥೆ ಮಾಡಿದ್ದರು. ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಆಗುವಷ್ಟು ಅಡುಗೆ ತಯಾರಿಸುವ ಮೂಲಕ ಅಭಿಮಾನ ಮೆರೆದರು. ಪೂಜೆ ಸಲ್ಲಿಸಿದ ಬಳಿಕ ಅಶ್ವಿ‌ನಿ, ಪುತ್ರಿ ವಂದಿತಾ ಅಭಿಮಾನಿಗಳಿಗೆ ಊಟ ಬಡಿಸಿದರು. ಈ ವೇಳೆ ಪುತ್ರಿ ವಂದಿತಾ ಕಣ್ಣಂಚು ತುಂಬಿತ್ತು.

ಸಂಗೀತ ಕಾರ್ಯಕ್ರಮ: ಪುನೀತ್‌ ಮೊದಲ ಪುಣ್ಯತಿಥಿ ಅಂಗವಾಗಿ ಸಾಧುಕೋಕಿಲ ಹಾಗೂ ತಂಡ ಶುಕ್ರವಾರ ಸಂಜೆಯಿಂದ ಸಮಾಧಿ ಬಳಿ ನಿರಂತರವಾಗಿ ಸಂಗೀತ ಕಾರ್ಯಕ್ರಮ ನಡೆಸುತ್ತಾ ಬಂತು. ಈ ವೇಳೆ ರಾಘವೇಂದ್ರ ರಾಜ್‌ಕುಮಾರ್‌, “ಎಲ್ಲಿ ಮರೆಯಾದೆ ವಿಠಲ’ ಹಾಗೂ “ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..’ ಹಾಡನ್ನು ಹಾಡಿದರು. ನಟ ಶಿವರಾಜ್‌ಕುಮಾರ್‌ ಕೂಡಾ ಹಾಡೊಂದನ್ನು ಹಾಡಿದರು. ಇನ್ನು, ಪುನೀತ್‌ ಪುಣ್ಯತಿಥಿ ಹಿನ್ನೆಲೆಯಲ್ಲಿ ರಕ್ತದಾನ, ನೇತ್ರದಾನ ಸೇರಿದಂತೆ ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಅಪ್ಪು ನೆನೆದ ಸಿನಿಮಂದಿ: ಪುನೀತ್‌ರಾಜ್‌ಕುಮಾರ್‌ ಕನ್ನಡ ಚಿತ್ರರಂಗದಲ್ಲಿ ಎಲ್ಲರ ಸ್ನೇಹ ಗಳಿಸಿದ್ದ ನಟ. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಅವರ ಅಗಲಿಕೆ ಈಗ ಚಿತ್ರರಂಗಕ್ಕೆ ನೋವು ಕೊಟ್ಟಿದೆ. ಈ ಕಾರಣದಿಂದಲೇ ಚಿತ್ರರಂಗದ ಅನೇಕರು ಸಮಾಧಿಗೆ ತೆರಳಿ ನಮನ ಸಲ್ಲಿಸಿದರೆ, ಬಹುತೇಕರು ಸೋಶಿಯಲ್‌ ಮೀಡಿಯಾ, ಸ್ಟೇಟಸ್‌ಗಳಲ್ಲಿ ಅಪ್ಪು ಫೋಟೋ ಹಾಕಿದ್ದರು.

Advertisement

ಕನ್ನಡದಲ್ಲಿ ಕೇಜ್ರಿವಾಲ್‌ ಟ್ವೀಟ್‌: ಪುನೀತ್‌ ಮೊದಲ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು, ವಿವಿಧ ಕ್ಷೇತ್ರಗಳ ಗಣ್ಯರು ಪುನೀತ್‌ ಅವರನ್ನು ಸ್ಮರಿಸಿಕೊಂಡಿದ್ದಾರೆ. ದೆಹಲಿ ಸಿ.ಎಂ ಅರವಿಂದ್‌ ಕೇಜ್ರಿವಾಲ್‌, ಕೂಡ ಅಪ್ಪುವನ್ನು ನೆನಪು ಮಾಡಿಕೊಂಡಿದ್ದು, ಕನ್ನಡದಲ್ಲಿಯೇ ಟ್ವೀಟ್‌ ಮಾಡಿ ಗಮನಸೆಳೆದರು. “ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನಗಳು’ ಎಂದು ಬರೆದುಕೊಂಡಿರುವ ಕೇಜ್ರಿವಾಲ್‌, “ಡಾ. ಪುನೀತ್‌ ರಾಜಕುಮಾರ್‌ ಅವರ ಪುಣ್ಯತಿಥಿಯಾಗಿರುವ ಇಂದು ಅವರನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವರು ನಟಿಸಿರುವ ಸಿನಿಮಾ, ಹಾಡುಗಳು ಮತ್ತು ಸಾಮಾಜಿಕ ಕಾರ್ಯಗಳು ಅವರು ನಮ್ಮನ್ನು ಎಂದಿಗೂ ಬಿಟ್ಟು ಹೋಗಿಲ್ಲ ಎಂದು ಅನಿಸುತ್ತದೆ. ಅವರು ಯಾವತ್ತೂ ಪವರ್‌ ಸ್ಟಾರ್‌ ಆಗಿಯೇ ಇರುತ್ತಾರೆ’ ಎಂದು ಪುನೀತ್‌ ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ:ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದಲ್ಲಿ ಆಫ್ರಿಕನ್‌ ಹಂದಿಜ್ವರ ಪತ್ತೆ : ತಡೆಗೆ ಅಗತ್ಯ ಕ್ರಮ

ಅಶ್ವಿ‌ನಿ ಭಾವುಕ ಪತ್ರ: ಪುನೀತ್‌ ರಾಜಕುಮಾರ್‌ ಮೊದಲ ವರ್ಷದ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಪುನೀತ್‌ ಪತ್ನಿ ಅಶ್ವಿ‌ನಿ ಪುನೀತ್‌ ರಾಜಕುಮಾರ್‌ ಅಭಿಮಾನಿಗಳಿಗೆ ಭಾವುಕ ಪತ್ರ ಬರೆದಿದ್ದಾರೆ. “ನೆನಪಿನ ಸಾಗರದಲ್ಲಿ. ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೇ, ನಮ್ಮ ಆಲೋಚನೆಗಳು ಹಾಗೂ ನಾವು ಮಾಡುವ ಸತ್ಕಾರ್ಯಗಳಲ್ಲಿಯೂ ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ. ಅವರ ಕನಸು ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು ನೂರಾರು ಕುಟುಂಬ ಸದಸ್ಯರು, ಅವರ ಸಾವಿರಾರು ಸ್ನೇಹಿತರು ಹಾಗೂ ಕೋಟ್ಯಂತರ ಅಭಿಮಾನಿಗಳಿಂದ ನಾನು ಪಡೆದ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ. ಅಪ್ಪು ಅವರ ಮೇಲೆ ನಿಮ್ಮೆಲ್ಲರಿಗೆ ಇರುವ ಪ್ರೀತಿ ಮತ್ತು ಗೌರವದಿಂದ, ಸದಾ ಕಾಲ ಅವರನ್ನು ಜೀವಂತವಾಗಿರಿಸಿದ್ದಕ್ಕಾಗಿ ಎಲ್ಲರಿಗೂ ನನ್ನ ನಮನಗಳು’ ಎಂದು ಬರೆದಿರುವ ಅಶ್ವಿ‌ನಿ ಪುನೀತ್‌ ರಾಜಕುಮಾರ್‌ ತಮ್ಮ ಪತ್ರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ರೇಷ್ಮೆ ಸೀರೆಯಲ್ಲಿ ಅರಳಿದ ಪುನೀತ್‌

ಪುನೀತ್‌ ರಾಜಕುಮಾರ್‌ ಸ್ಮರಣಾರ್ಥ ಅಭಿಮಾನಿಗಳು ವಿಶೇಷ ರೀತಿಯಲ್ಲಿ ತಮ್ಮ ನೆಚ್ಚಿನ ನಟನಿಗೆ ಗೌರವ ಸಮರ್ಪಿಸುತ್ತಿದ್ದಾರೆ. ಚಿಕ್ಕಬಳ್ಳಾಪುರದ ಸೀರೆ ತಯಾರಕರೊಬ್ಬರು ಪುನೀತ್‌ ರಾಜಕುಮಾರ್‌ ಭಾವಚಿತ್ರವನ್ನು ರೇಷ್ಮೆ ಸೀರೆಯಲ್ಲಿ ಅರಳಿಸಿ ಅಭಿಮಾನ ಮೆರೆದಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಅಶ್ವಿ‌ನಿ ಪುನೀತ್‌ ರಾಜಕುಮಾರ್‌ ಅವರಿಗೆ ಉಡುಗೊರೆಯಾಗಿ ನೀಡಲು ಈ ವಿಶೇಷ ಸೀರೆಯನ್ನು ತರಲಾಗಿತ್ತು. ಆದರೆ ಕಂಠೀರವ ಸ್ಟುಡಿಯೋದಲ್ಲಿ ಜನ ಜಂಗುಳಿ ಹೆಚ್ಚಾದ ಕಾರಣ, ಕೊನೆ ಕ್ಷಣದಲ್ಲಿ ಅಶ್ವಿ‌ನಿ ಅವರ ಭೇಟಿ ಸಾಧ್ಯವಾಗಲಿಲ್ಲ. ಹಾಗಾಗಿ, ಕೊನೆಗೆ ಅಭಿಮಾನಿಗಳು ಸದಾಶಿವ ನಗರದಲ್ಲಿರುವ ನಿವಾಸಕ್ಕೆ ತೆರಳಿ ರಾಘವೇಂದ್ರ ರಾಜಕುಮಾರ್‌ ಅವರಿಗೆ ಈ ಸೀರೆಯನ್ನು ಸಮರ್ಪಿಸಿದರು. ಅಭಿಮಾನಿಗಳು ತಂದಿದ್ದ ರೇಷ್ಮೆ ಸೀರೆಯನ್ನು ಸ್ವೀಕರಿಸಿದ ರಾಘವೇಂದ್ರ ರಾಜಕುಮಾರ್‌, ವಿಭಿನ್ನ ರೀತಿಯಲ್ಲಿ ಅಭಿಮಾನದ ಮೆರೆದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next