Advertisement

ಗುರುವನ್ನು ನೆನೆದು ಬದುಕು ನಡೆಸಿ

02:07 PM May 04, 2019 | Team Udayavani |

ಕನಕಪುರ: ಗುರು ಎನ್ನುವುದು ಸುಂದರ ಮತ್ತು ಪವಿತ್ರ ಶಬ್ದ. ಈ ಶಬ್ದ ಕೇಳಿದರೆ ಹೃದಯದಲ್ಲಿ ಸಂತೋಷದ ಭಾವ ಉಕ್ಕುತ್ತದೆ. ಈ ಸ್ಥಾನದ ಮಹತ್ವ ಬೆಳಕು. ಅದು ಅನಂತ ವಿಸ್ತಾರ, ಮನಸ್ಸಿನ ಮಾಯೆ ಮರೆಯಾಗಿಸುವ ಶಕ್ತಿ ಗುರುವಿಗಿದೆ. ಗುರುವನ್ನು ನೆನೆದು ಬದುಕು ನಡೆಸಬೇಕು ಎಂದು ಬಿಜಾಪುರದ ಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.

Advertisement

ನಗರದ ದೇಗುಲಮಠದ ಆವರಣದಲ್ಲಿ ಮುಮ್ಮಡಿ ಮಹಾಲಿಂಗ ಮಹಾಸ್ವಾಮಿಗಳ 2ನೇ ವರ್ಷದ ಸಂಸ್ಮರಣಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಭೂಮಿಯಲ್ಲಿ ಎಲ್ಲವೂ ಇದೆ. ಆದರೆ, ಬಡವ-ಶ್ರೀಮಂತ ಎನ್ನುವ ತಾರತಮ್ಯವಿದೆ. ಭೂಮಿಯಲ್ಲಿ ಬಂಗಾರವಿದೆ. ಅದರ ಮೇಲೆ ಮಲಗಿರುವ ಬಡವನಿಗೆ ಇಲ್ಲಿ ಬಂಗಾರವಿದೆ, ಅದನ್ನು ಬಳಸಿಕೊಳ್ಳಬೇಕು ಎಂಬ ಜ್ಞಾನವನ್ನು ನೀಡುವವನು ಗುರು. ಆ ಗುರುವಿನ ಜ್ಞಾನದಿಂದ ಮಾತ್ರ ಎಲ್ಲಾ ಕಷ್ಟಗಳ ನಿವಾರಣೆ ಸಾಧ್ಯ. ಮನುಷ್ಯನಿಗೆ ನೆಮ್ಮದಿ ಇಲ್ಲದೆ ಶ್ರೀಮಂತಿಕೆ, ಅಧಿಕಾರವಿದ್ದರೆ ಪ್ರಯೋಜನವಿಲ್ಲ. ತನ್ನನ್ನು ತಾನು ಅರಿಯದಿದ್ದರೆ ಮನಸ್ಸು ಶ್ರೀಮಂತವಾಗುವುದಿಲ್ಲ. ಆದರೆ, ಹೃದಯ ಶ್ರೀಮಂತಿಕೆಯನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಗುರು ಪರಂಪರೆಯ ಮಠಗಳಿಂದ ಸನ್ಮಾರ್ಗದಲ್ಲಿ ನಡೆಯುವುದು ಮನುಷ್ಯ ಧರ್ಮ ಎಂದು ತಿಳಿಸಿದರು.

ಗುರುಗಳಿಂದ ಸಮಸ್ಯೆ ಪರಿಹಾರಕ್ಕೆ ಮಾರ್ಗ: ಸುತ್ತೂರು ಶ್ರೀಕ್ಷೇತ್ರದ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ನಮ್ಮ ಧಾರ್ಮಿಕ ಪರಂಪರೆಯಲ್ಲಿ ಭಾರತೀಯರಾದ ನಾವುಗಳು ಎಷ್ಟೇ ತೊಂದರೆ, ಬಂಧನ, ಸಂಕಷ್ಟಗಳಿದ್ದರೂ ಸಹ ಮಠದ ಗುರುಗಳಿಂದ ಸಮಸ್ಯೆ ಪರಿಹಾರಕ್ಕೆ ಮಾರ್ಗ ದೊರೆಯುತ್ತದೆ. ಅಮೇರಿಕಾದಂತಹ ಶ್ರೀಮಂತ ದೇಶದಲ್ಲಿ ಭೌತಿಕ ಸಂಪತ್ತು ಇದೆ. ಆದರೂ ಸಹ ಮಾನಸಿಕವಾಗಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯವಿಲ್ಲ. ನಮ್ಮ ದೇಶದ ಅವರ ಮಟ್ಟಕ್ಕೆ ಶ್ರೀಮಂತಿಕೆ ಇಲ್ಲದಿದ್ದರೂ ಇಲ್ಲಿ ಎಲ್ಲವನ್ನು ಮೆಟ್ಟಿನಿಲ್ಲುವ ಶಕ್ತಿ ಇದೆ. ಮಾನಸಿಕವಾಗಿ ನಾವು ಶ್ರೀಮಂತಿಕೆಯಿಂದ ಕೂಡಿದ್ದೇವೆ. ನಂಬಿಕೆಯಿಂದ ಬದುಕುತ್ತಿದ್ದೇವೆ. ನಂಬಿಕೆ ಇಲ್ಲದೆ ನಮ್ಮ ಜೀವನ ನಡೆಯಲು ಅಸಾಧ್ಯ ಎಂದು ತಿಳಿಸಿದರು.

ನಮ್ಮ ಪೂರ್ವಜರು ಅಂದೇ ಸಂಶೋಧಿಸಿದ್ದರು: ಜಗತ್ತಿನಲ್ಲಿ ಎಲ್ಲಾ ಸಂಶೋಧನೆಗಳಿಂದ ಹಲವು ಸತ್ಯಗಳು ಹೊರಬರುತ್ತಿವೆ. ಆದರೆ, ನಮ್ಮ ಪೂರ್ವಜರು, ಋಷಿಮುನಿಗಳು ಅಣುವಿನಿಂದ ಏನು ಸಾಧ್ಯವಾಗಲಿದೆ ಎಂಬುದನ್ನು ಕಂಡುಕೊಂಡು ಅಂದೇ ನಮಗೆ ತಿಳಿಸಿದ್ದರು. ಅದಕ್ಕೆ ಇಂದಿನಂತೆ ಅಕ್ಷರದ ಜ್ಞಾನವಿಲ್ಲದೆ ದಾಖಲಾಗಲಿಲ್ಲ. ಅಂತಹ ದೇಶದಲ್ಲಿ ಜನ್ಮ ಪಡೆದ ನಾವೇ ಧನ್ಯರು. ಭಗವದ್ಗೀತೆಯ ಸಾರದಂತೆ ಕಾಲಕಾಲಕ್ಕೆ ತಕ್ಕಂತೆ ಲೋಕ ಕಲ್ಯಾಣಕ್ಕಾಗಿ ದರ್ಶನ ನೀಡುವ ಸಂತರನ್ನು ನಾವು ನಮ್ಮ ದೇಶದ ಗುರು ಪರಂಪರೆಯಲ್ಲಿ ಮಾತ್ರ ಕಾಣಲು ಸಾಧ್ಯ. ಹಾಗೆ ಇಲ್ಲಿಯೂ ಕೂಡ ದೇಗುಲಮಠದ ಸೇವೆಗೆ ಗುರುವರ್ಯರು ಸಿದ್ಧರಾಗಿದ್ದಾರೆ ಎಂದು ಹೇಳಿದರು.

ಕಡಿಮೆ ಅವಧಿಯಲ್ಲಿ ಎಲ್ಲರ ಮನಸ್ಸು ಗೆದ್ದರು: ಮಾಜಿ ಸಚಿವ ಪಿ.ಜಿ.ಆರ್‌ ಸಿಂಧ್ಯಾ ಮಾತನಾಡಿ, ಲಿಂಗೈಕ್ಯರಾದ ಮಹಾಲಿಂಗಸ್ವಾಮೀಜಿಗಳಿಗೆ ಮಾನವೀಯತೆಯ ಎಲ್ಲಾ ಸದ್ಗುಣಗಳು ಇದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಎಲ್ಲರ ಮನಸ್ಸನ್ನು ಗೆದ್ದರು. ಅವರ ಪುಣ್ಯ ಸಂಸ್ಮರಣೆಗೆ ಅತ್ಯುತ್ತಮ ಸಂಘಟಕರಾದ ಶಿವರಾತ್ರಿ ದೇಶಿಕೇಂದ್ರದಸ್ವಾಮಿಗಳು ಆಗಮಿಸಿದ್ದಾರೆ ಎಂದರೆ ನಮ್ಮ ಪುಣ್ಯ. ಜಗತ್ತಿನ ಶ್ರೀಮಂತ ದೇಶದಲ್ಲಿ ಬಸವಣ್ಣನವರ ಚಿಂನತೆಗೆ ಕೇಂದ್ರ ತೆರದು ಅಲ್ಲಿ ಸಂಶೋಧನೆ ನಡೆಸುವ ಮೂಲಕ ಜಗತ್ತಿನಲ್ಲಿ ಬಸವಣ್ಣನವರ ತಣ್ತೀಗಳನ್ನು ಸಾರುತ್ತಿದ್ದಾರೆ ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಬೇಲಿಮಠದ ಶಿವರುದ್ರಮಹಾಸ್ವಾಮೀಜಿ, ದೇಗುಲಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ, ಚನ್ನಬಸವಸ್ವಾಮೀಜಿ ಆಶೀರ್ವಚನ ನೀಡಿದರು. ಈ ವೇಳೆ ಉಚಿತ ಸಾಮೂಹಿಕ ವಿವಾಹ ನಡೆಯಿತು. ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಉಪನ್ಯಾಸಕ ಶಿವಕುಮಾರ್‌, ಬಿ.ನಾಗರಾಜು, ಸ್ಟುಡಿಯೋ ಚಂದ್ರು, ಮಹೇಶ್‌ ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next