ಹುಣಸೂರು: ಪ್ರಭಾವಿಗಳು ನಾಗರಹೊಳೆ ಉದ್ಯಾನದಂಚಿನಲ್ಲಿರುವ ಇತಿಹಾಸ ಪ್ರಸಿದ್ದವಾದ ಮಾದಳ್ಳಿ ಕಲ್ಲೂರಪ್ಪನ ಬೆಟ್ಟದ ಸಮೀಪದ ಸರ್ಕಾರಿ ಕೆರೆಯನ್ನೆ ಒತ್ತುವರಿ ಮಾಡಿಕೊಂಡಿದ್ದಾರೆ.
ಉದ್ಯಾನವನದಂಚಿನಲ್ಲಿರುವ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಮಾದಳ್ಳಿ ಕಲ್ಲೂರಪ್ಪನ ಬೆಟ್ಟದ ತಪ್ಪಲಿನ ಗಿರಿಜನ ಹಾಡಿಯ ಸಮೀಪವಿರುವ ಮಾದಳ್ಳಿ ಸರ್ವೆ ನಂ.2 ಮತ್ತು 3 ರಲ್ಲಿ 4.10 ಎಕರೆ ವಿಸ್ತಿರ್ಣದ ಸರ್ಕಾರಿ ಕೆರೆಯನ್ನು ಕಳೆದ ಹತ್ತು ವರ್ಷಗಳ ಹಿಂದೆ ಕೃಷಿ ಇಲಾಖೆಯ ಜಲಾನಯನ ಅಭಿವೃದ್ದಿ ಯೋಜನೆಯಡಿ ಅಭಿವೃದ್ದಿ ಪಡಿಸಲಾಗಿತ್ತು.
ಇತ್ತೀಚೆಗೆ ಪ್ರಭಾವಿ ವ್ಯಕ್ತಿಯೋಬ್ಬರು ಕೆರೆ ಅಂಗಳವನ್ನೇ ಜೆಸಿಬಿಯಿಂದ ನೆಲಸಮ ಮಾಡಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಕೆರೆಯಿಂದ ಸುತ್ತ-ಮುತ್ತಲಿನ ಮಾದಳ್ಳಿ, ಹರಳಳ್ಳಿ ಹಾಗೂ ಶಂಕರಪುರ ಆದಿವಾಸಿ ಹಾಡಿ ಮಂದಿಯ ಜಮೀನಿನ ಬೋರ್ವೆಲ್ಗಳ ಅಂತರ್ಜಲವೃದ್ದಿ ಹಾಗೂ ಜಾನುವಾರುಗಳಿಗೆ ಅನುಕೂಲವಾಗಿತ್ತು. ಒತ್ತುವರಿಯಿಂದಾಗಿ ಅಂತರ್ಜಲ ಕುಸಿಯುವುದರೊಂದಿಗೆ ಜಾನುವಾರುಗಳೂ ಪರಿತಪಿಸುವಂತಾಗಲಿದ್ದು, ತಕ್ಷಣವೇ ಕೆರೆ ಸರ್ವೆನಡೆಸಿ ಒತ್ತುವರಿ ಬಿಡಿಸುವಂತೆ ಸುತ್ತಮುತ್ತಲ ಗ್ರಾಮಸ್ಥರ ಆಗ್ರಹವಾಗಿದೆ.
ಇದನ್ನೂ ಓದಿ: ಗೋಪಾಲ ಸ್ವಾಮಿ ಬೆಟ್ಟದಲ್ಲಿ ಹಳ್ಳಕ್ಕೆ ಜಾರಿದ ಬಸ್: ಅಪಾಯದಿಂದ ಪಾರಾದ ಪ್ರಯಾಣಿಕರು
ಒತ್ತುವರಿ ತೆರವಿಗೆ ಕ್ರಮವಾಗಲಿ: ತಾಲೂಕು ಆಡಳಿತ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಕೆರೆ ಒತ್ತುವರಿ ಬಿಡಿಸಿ ಜನ- ಜಾನುವಾರುಗಳಿಗೆ ಅನೂಕೂಲ ಕಲ್ಪಿಸಿ ಸರ್ಕಾರಿ ಆಸ್ತಿ ಉಳಿಸುವತ್ತ ಗಮನಹರಿಸಬೇಕು.
-ಕಿರಂಗೂರುಗ್ರಾ.ಪಂ.ಸದಸ್ಯ ಹಿಂಡಗುಡ್ಲು ರಾಮೇಗೌಡ.
-ಸಂಪತ್ ಕುಮಾರ್