Advertisement

ಮೈಸೂರಲ್ಲಿ ಸನ್ನಢತೆ ಆಧಾರದ ಮೇಲೆ 24 ಕೈದಿಗಳ ಬಿಡುಗಡೆ

04:30 PM May 23, 2023 | Team Udayavani |

ಮೈಸೂರು: ನಗರದಲ್ಲಿರುವ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 24 ಮಂದಿ ಕೈದಿಗಳು ಸನ್ನಢತೆ ಆಧಾರದ ಮೇಲೆ ಬಿಡುಗಡೆಗೊಂಡರು. ಕಾರಾಗೃಹ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್‌ ಅವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

Advertisement

ಶುಭ ಹಾರೈಕೆ: ಈ ಸಂದರ್ಭದಲ್ಲಿ ಕೈದಿಗಳಿಗೆ ನ್ಯಾಯಾಧೀಶರಾದ ದಿನೇಶ್‌ ಬಿಡುಗಡೆ ಪತ್ರ ನೀಡಿ ಮುಂದಿನ ಜೀವನ ಚೆನ್ನಾಗಿರಲಿ ಎಂದು ಶುಭ ಹಾರೈಸಿ ಮಾತನಾಡಿದ ಅವರು, ಕೈದಿಗಳು ಜೈಲಿನಲ್ಲಿ ಪಡೆದ ವೃತ್ತಿ ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ಬಂಧು-ಬಳಗದೊಂದಿಗೆ ಉತ್ತಮ ಜೀವನ ನಡೆಸಲಿ ಎಂದು ಶುಭ ಹಾರೈಸಿದರು.

ಒಬ್ಬರ ಅರ್ಜಿ ಮರು ಪರಿಶೀಲನೆ: ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ ಮಾತನಾಡಿ, ಕಳೆದ ಜೂನ್‌ನಲ್ಲಿ 31 ಮಂದಿಯ ಕಡತ ಸಲ್ಲಿಸಲಾಗಿದ್ದು, ಅದರಲ್ಲಿ ನಾಲ್ಕು ಮಂದಿಯ ಬಿಡುಗಡೆಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಬ್ಬರ ಅರ್ಜಿಯನ್ನು ರಾಜ್ಯಪಾಲರು ತಿರಸ್ಕರಿಸಲಾಗಿದ್ದು, ಒಬ್ಬರ ಅರ್ಜಿಯನ್ನು ಮರು ಪರಿಶೀಲಿಸುವಂತೆ ಸೂಚನೆ ನೀಡಲಾಗದೆ ಎಂದು ಮಾಹಿತಿ ನೀಡಿದರು.

ವಿವಿಧ ಕೌಶಲ್ಯ ತರಬೇತಿ: ಕಾರಾಗೃಹದಲ್ಲಿ ಸರಕಾರಿ ಅನುಮೋದಿತ ಕೈಗಾರಿಕಾ ಸಂಸ್ಥೆಗಳ ಸಹಕಾರದೊಂದಿಗೆ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತದೆ. ಎಲೆಕ್ಟ್ರಿಷನನ್‌, ಬ್ಯೂಟಿಷಿಯನ್‌ ಸೇರಿದಂತೆ ನಾನಾ ತರಬೇತಿ, ಜತೆಗೆ ಸಮಸ್ಯೆಗಳನ್ನು ಎದುರಿಸುವ ಕೌನ್ಸಿಲಿಂಗ್‌ ತರಬೇತಿ ಕಾರ್ಯಕ್ರಮಗಳ ಮೂಲಕ ಹಾಗೂ ಹಲವಾರು ಆಯಾಮಗಳಲ್ಲಿ ಒಬ್ಬ ಬಂಧಿಯನ್ನು ಬಿಡುಗಡೆಗೆ ಸಜ್ಜುಗೊಳಿಸಲಾಗುತ್ತದೆ.

ಸ್ವಂತ ಉದ್ದಿಮೆ ಪ್ರಾರಂಭಿಸಬಹುದು: ಕೌಶಲ ತರಬೇತಿ ಪಡೆದವರು ಸ್ವಂತ ಉದ್ದಿಮೆ ಪ್ರಾರಂಭಿಸಬಹುದು. ಉದ್ದಿಮೆಗಳಲ್ಲಿ ಸೇರಿ ತಮ್ಮ ಜೀವನ ರೂಪಿಸಿಕೊಳ್ಳಬಹುದು. ಹತ್ತಾರು ವರ್ಷ ಕಾರಾಗೃಹದಲ್ಲಿ ಇದ್ದವರು ಸಮಾಜದ ಮುಖ್ಯವಾಹಿಗೆ ಹೊಂದಿಕೊಳ್ಳುವುದು, ಆದಾಯ ಗಳಿಸುವುದು ತುಂಬಾ ಕಷ್ಟ. ಆದ್ದರಿಂದ ಕೌಶಲ್ಯ ತರಬೇತಿಗಳಿಂದ ಕಲಿತಿರುವುದನ್ನು ಸಹಾಯ ಮಾಡುತ್ತದೆ ಎಂದರು.

Advertisement

ಶಿಕ್ಷಣವನ್ನು ನೀಡಲಾಗುತ್ತದೆ: ಕಾರಾಗೃಹ ಜನರನ್ನು ಇಟ್ಟುಕೊಳ್ಳುವ ಸ್ಥಳವಲ್ಲ. ನ್ಯಾಯದಾನ ಪದ್ಧತಿಯನ್ನು ಕಾನೂನು ಬಾಹಿರ ಚಟುವಟಿಕೆಯನ್ನು ಮಾಡಿದವರಿಗೆ ಈ ತರಹದ ಶಿಕ್ಷಾ ವಿಧಾನಗಳಿರುತ್ತವೆ. ಅದನ್ನು ಜಾರಿಗೊಳಿಸುವ ಜೊತೆಗೆ ಅವರ ಮನಪರಿವರ್ತನೆ ಮಾಡುವ ಗುರುತರವಾದ ಜವಾಬ್ದಾರಿ ಕಾರಾಗೃಹದ ಮೇಲೆ ಇರುತ್ತದೆ. ಶಿಕ್ಷೆಯನ್ನು ಜಾರಿಗೊಳಿಸುವುದ ಜತೆಗೆ ಅವರನ್ನು ಶಿಕ್ಷಣವನ್ನು ನೀಡಲಾಗುತ್ತದೆ ಎಂದರು.

ಹೊಸ ಮನಷ್ಯರಾಗಿ ಸ್ವೀಕರಿಸಬೇಕು: ಇಲ್ಲಿಗೆ ಬಂದಾಗ ಕೈದಿ ಎಂದು ನೋಡದೆ ವ್ಯಕ್ತಿಯಾಗಿ ನೋಡುತ್ತೇವೆ. ಆತನಲ್ಲಿರುವ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತೇವೆ. ಸನ್ನಢತೆ ಆಧಾರದ ಮೇಲೆ ಬಿಡುಗಡೆ ಮಾಡುವುದು ಜೀವನ ನಡೆಸಲು ನೀಡುವ ಎರಡನೇ ಅವಕಾಶದಂತೆ. ಅದಕ್ಕೆ ಸಮಾಜವೂ ಅನುವು ಮಾಡಿಕೊಡಬೇಕು. ಹೊಸ ಮನಷ್ಯರಾಗಿ ಸ್ವೀಕರಿಸಬೇಕು ಎಂದು ಮನವಿ ಮಾಡಿದರು.

ಬಿಡುಗಡೆಯಾಗಲಿರುವ ಕೈದಿಗಳು ಅಪರಾಧ ಮುಕ್ತ ಸಮಾಜದ ರಾಯಬಾರಿಗಳಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಾರಾಗೃಹ ಇಲಾಖೆಯ ಜೈರ್ಲಗಳಾದ ಧರಣೇಶ್‌, ಗೀತಾ, ಅಮರ್‌ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಇತರರು ಇದ್ದರು.

ಬಿಡುಗಡೆಯಾದ ಕೈದಿಗಳು: ರಾಜಸ್ಥಾನದ ಸಾವಲ್‌ ಸಿಂಗ್‌, ಪುತ್ತೂರಿನ ರಮೇಶ, ಉಡುಪಿಯ ಸುರೇಶ ಹರಿಜನ,ಹಾಸನದ ಪ್ರಶಾಂತ, ಮೈಸೂರಿನ ನಾಗರಾಜು, ಎಚ್‌.ಕೆ. ಪುಟ್ಟ, ಚಾಮರಾಜ ನಗರದ ರಾಮದಾಸ ನಾಯ್ಕ, ಕುಳ್ಳೇಗೌಡ, ಸುಂದ್ರಪ್ಪ,ತಿಮ್ಮ, ನಂಜನಗೂಡಿನ ಎಸ್‌.ಎಂ.ಸತೀಶ್‌ ಗೌಡ, ಶ್ರೀನಿವಾಸ, ಎಸ್‌.ನಟರಾಜ, ಜನಾರ್ಧನ, ನಿಂಗಪ್ಪ,ಮದ್ದೂರಿನ ಮಂಜುನಾಥ, ಸೋಮವಾರ ಪೇಟೆಯ ತಮ್ಮಯ್ಯ, ಬಾಗಲಕೋಟೆಯ ರಿಯಾಜ್‌, ಮಳವಳ್ಳಿಯ ಸಿದ್ದೇಗೌಡ, ಹಾಸನದ ಎಂ.ಆರ್‌. ಸೋಮಶೇಖರ, ರಾಮೇಗೌಡ,ಮಂಡ್ಯದ ಎ.ಬಿ.ವಾಸು, ಸೋಮವಾರ ಪೇಟೆಯ ಗುರುಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಗಮ್ಮ

Advertisement

Udayavani is now on Telegram. Click here to join our channel and stay updated with the latest news.

Next