Advertisement

ಉಚಿತ ಕೊಡುಗೆಗಳಿಂದ ಉದ್ಧಾರ ಅಸಾಧ್ಯ

02:17 PM Jul 31, 2022 | Team Udayavani |

ಹುಬ್ಬಳ್ಳಿ: ಜನರಿಗೆ ಉಚಿತ ಕೊಡುಗೆಗಳಿಂದ ದೇಶದ ಉದ್ಧಾರ ಅಸಾಧ್ಯ. ಎಲ್ಲ ಕ್ಷೇತ್ರಗಳು ಹಾಗೂ ಜನರ ಸಬಲೀಕರಣ ನಿಟ್ಟಿನಲ್ಲಿ ಗುಣಮಟ್ಟದ ಸೌಲಭ್ಯಗಳನ್ನು ನೀಡಬೇಕೆ ವಿನಃ ಕೇವಲ ಮತಗಳಿಗಾಗಿ ಉಚಿತ ಕೊಡುಗೆಗಳಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಕೇಂದ್ರ ಇಂಧನ ಇಲಾಖೆ, ಎನ್‌ಟಿಪಿಸಿ, ರಾಜ್ಯ ಇಂಧನ ಇಲಾಖೆ, ಜಿಲ್ಲಾಡಳಿತ, ಕೆಪಿಟಿಸಿಎಲ್‌ ಹಾಗೂ ಹೆಸ್ಕಾಂ ಸಹಯೋಗದಲ್ಲಿ ಶನಿವಾರ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಆಯೋಜಿಸಿದ್ದ ಉಜ್ವಲ ಭಾರತ, ಉಜ್ವಲ ಭವಿಷ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೈಪೋಟಿ ಯುಗಕ್ಕೆ ತಕ್ಕಂತೆ ನಾವು ಬದಲಾಗಬೇಕಾಗಿದೆ. ಉಚಿತ ಕೊಡುಗೆಗಳಿಂದ ಜನ ಹಾಗೂ ದೇಶದ ಅಭಿವೃದ್ಧಿ ಸಾಧ್ಯವಾಗದು. ರೈತರು ಉಚಿತ ವಿದ್ಯುತ್‌ ಕೇಳುತ್ತಿಲ್ಲ ಅವರಿಗೆ ಗುಣಮಟ್ಟದ ಹಾಗೂ ಸಮರ್ಪಕ ವಿದ್ಯುತ್‌ ದೊರೆಯಬೇಕಾಗಿದೆ ಎಂದರು.

ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ದೇಶದ ಸುಮಾರು 18,374 ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕವೇ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು 1,000 ದಿನದೊಳಗೆ ಈ ಎಲ್ಲ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ದೊರಕಬೇಕೆಂಬ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ 990 ದಿನಗಳಲ್ಲಿಯೇ ಎಲ್ಲ ಗ್ರಾಮಗಳು ವಿದ್ಯುತ್‌ ಕಂಡಿದ್ದವು. ದೀನದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೇಂದ್ರ ಸರಕಾರ ವಿದ್ಯುತ್‌ ಕ್ಷೇತ್ರದಲ್ಲಿ ಬದಲಾವಣೆ ಮಾಡುತ್ತಿದೆ. ರೈತರು ಸೇರಿದಂತೆ ಎಲ್ಲರಿಗೂ ಗುಣಮಟ್ಟದ ಹಾಗೂ ಸಮರ್ಪಕ ವಿದ್ಯುತ್‌ ದೊರೆಯಬೇಕೆಂಬ ಆಶಯ ಕೇಂದ್ರದ್ದಾಗಿದೆ ಎಂದು ಹೇಳಿದರು.

2014ರ ಮುಂಚೆ ದೇಶದಲ್ಲಿ ಸುಮಾರು 234 ಗಿಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗುತ್ತಿತ್ತು. ಇದೀಗ 404 ಗಿಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗುತ್ತಿದೆ. 2014ಕ್ಕೆ ಹೋಲಿಸಿದರೆ ಇದೀಗ ಸರಾಸರಿ ಶೇ.85 ವಿದ್ಯುತ್‌ ಲಭ್ಯತೆ ಆಗುತ್ತಿದೆ. ಕೋವಿಡ್‌ ಮುಂಚೆ ದೇಶ ವಿದ್ಯುತ್‌ ರಫ್ತು ಮಾಡತೊಡಗಿತ್ತು. ಇದೀಗ ಶೇ.0.4 ವಿದ್ಯುತ್‌ ಕೊರತೆ ಎದುರಿಸುತ್ತಿದೆ. ಈ ಹಿಂದೆ 340 ರೂ.ಗೆ ಒಂದು ಎಲ್‌ಇಡಿ ಬಲ್ಬ್ ಸಿಗುತ್ತಿತ್ತು. ಇದೀದ ಅದನ್ನು ಕೇವಲ 60 ರೂ.ಗೆ ಸಿಗುವಂತೆ ಮಾಡಿದ್ದೇವೆ. ಜತೆಗೆ ಉಜ್ವಲ ಯೋಜನೆಯಡಿ 10-20 ರೂ.ಗೆ ಒಂದು ಎಲ್‌ಇಡಿ ನೀಡಲಾಗುತ್ತಿದೆ ಎಂದರು.

ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. ಜತೆಗೆ ತ್ವರಿತ ಮತ್ತು ಉತ್ತಮ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದಲೂ ಭಾರತ ವಿಶ್ವದಲ್ಲಿಯೇ ಮುಂಚೂಣಿ ರಾಷ್ಟ್ರವಾಗಿ ಗೋಚರಿಸುತ್ತಿದೆ. ದೇಶದ ಎಲ್ಲ ಕಡೆಗೂ 24 ತಾಸು ವಿದ್ಯುತ್‌ ದೊರೆಯಬೇಕು. ಇದರಿಂದ ಗ್ರಾಮೀಣದಲ್ಲಿಯೂ ಇಂಟರ್‌ನೆಟ್‌ ಇನ್ನಿತರ ಸೇವೆ ದೊರೆಯಲಿದೆ. ಇಂಟರ್‌ನೆಟ್‌ಗೂ ಭ್ರಷ್ಟಾಚಾರ ಕಡಿವಾಣಕ್ಕೂ ನಂಟಿದೆ. ವಿವಿಧ ವರ್ಗಗಳ ಜನರಿಗೆ ನೀಡುವ ಸಾಮಾಜಿಕ ಸೌಲಭ್ಯಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕುತ್ತಿರುವುದರಿಂದ ಕೇಂದ್ರಕ್ಕೆ ಅಂದಾಜು 1.50ಲಕ್ಷ ಕೋಟಿ ರೂ. ಉಳಿತಾಯವಾಗಿದೆ ಎಂದು ಹೇಳಿದರು.

Advertisement

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಸರಕಾರಿ ಕಚೇರಿ, ಶಾಲಾ-ಕಾಲೇಜುಗಳ ಮೇಲೆ ಸೋಲಾರ್‌ ಘಟಕಗಳನ್ನು ಅಳವಡಿಸಿದ್ದು, ಅಂತಹವರಿಗೆ ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಬೇಕು. ರೈತರಿಗೆ ರಾತ್ರಿ ವೇಳೆ ವಿದ್ಯುತ್‌ ನೀಡುವ ಬದಲು ಹಗಲು ವೇಳೆ 7 ತಾಸು ಗುಣಮಟ್ಟದ ವಿದ್ಯುತ್‌ ನೀಡಬೇಕು. ವಿದ್ಯುತ್‌ ಪರಿವರ್ತಕಗಳಲ್ಲಿನ ತೈಲ ತೆಗೆಯುವ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಗ್ರಾಮೀಣದ ಬೀದಿ ದೀಪಗಳ ಹಗಲಿನಲ್ಲಿಯೂ ಉರಿಯುತ್ತಿದ್ದು, ಹೆಸ್ಕಾಂ ಕಡಿವಾಣ ಹಾಕಬೇಕು ಎಂದರು.

ಮಹಾಪೌರ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯರಾದ ರಾಜಣ್ಣಾ ಕೊರವಿ, ರಾಮಣ್ಣ ಬಡಿಗೇರ, ಮೀನಾಕ್ಷಿ ವಂಟಮೋರಿ, ಸೀಮಾ ಮೊಗಲಿಶೆಟ್ಟರ, ಹೆಸ್ಕಾಂ ಮುಖ್ಯ ಎಂಜಿನಿಯರ್‌ ರಮೇಶ ಬೆಂಡಿಗೇರಿ, ಅಧೀಕ್ಷಕ ಎಂಜಿನಿಯರ್‌ ಎಸ್‌.ಜಗದೀಶ, ಎನ್‌ಟಿಪಿಸಿ ಕೂಡಗಿಯ ಗ್ರೂಪ್‌ ಪ್ರಧಾನ ವ್ಯವಸ್ಥಾಪಕ ವಿಜಯಕೃಷ್ಣ ಪಾಂಡೆ, ಹೆಸ್ಕಾಂ ಜಾಗೃತ ದಳದ ಎಸ್‌ಪಿ ಶಂಕರ ಮಾರಿಹಾಳ ಇನ್ನಿತರರು ಇದ್ದರು. ವಿದ್ಯುತ್‌ ಕ್ಷೇತ್ರದ ಸಾಧನೆ, ವಿದ್ಯುತ್‌ ಸಂರ್ಪಕವೇ ಇಲ್ಲದ ಗ್ರಾಮಗಳಿಗೆ ಸಂಪರ್ಕ ಕುರಿತಾಗಿ ಕಿರುಚಿತ್ರ ಪ್ರದರ್ಶಿಸಲಾಯಿತು. ನಂತರ ವಿದ್ಯುತ್‌ ಉಳಿತಾಯ, ಕುಸುಮ ಯೋಜನೆ ಕುರಿತು ನಾಟಕ ಪ್ರದರ್ಶನ ನಡೆಯಿತು.

15 ಅಮೃತ ಸರೋವರ ಸಿದ್ಧ

ಹುಬ್ಬಳ್ಳಿ: ಸ್ವಾತಂತ್ರ್ಯೋತ್ಸವ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿಯವರ ಆಶಯದಂತೆ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 75 ಸರೋವರಗಳ ನಿರ್ಮಾಣ ನಿಟ್ಟಿನಲ್ಲಿ ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ ಈಗಾಗಲೇ 15 ಕೆರೆಗಳು ಸಿದ್ಧಗೊಂಡಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ಕೆರೆ ಬಳಿ ಧ್ವಜಸ್ತಂಭ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಸಿದ್ಧಗೊಂಡಿರುವ 15 ಕೆರೆಗಳ ಧ್ವಜಸ್ತಂಭದಲ್ಲಿ ಆ.15ರಂದು ರಾಷ್ಟ್ರಧ್ವಜಾರೋಹಣ ನಡೆಯಲಿದೆ. ಉಳಿದ 60 ಸರೋವರಗಳನ್ನು ವರ್ಷದೊಳಗೆ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಎಲ್ಲವೂ ಉಚಿತ ಎಂಬ ಮನೋಭಾವದಿಂದ ಜನರು ಹೊರಬಂದು ಹೊಸತನಕ್ಕೆ ಹೊಂದಿಕೊಳ್ಳಬೇಕು. ಉತ್ತಮ ಭವಿಷ್ಯದ ದೃಷ್ಟಿಯಿಂದ ಕೆಲ ಕಠಿಣ ಕ್ರಮಗಳು ಅನಿವಾರ್ಯ. ವಿದ್ಯುತ್‌ ಕ್ಷೇತ್ರದಲ್ಲಿ ಗುಣಮಟ್ಟ ಹಾಗೂ ಸಮರ್ಪಕ ಸೇವೆ ನಿಟ್ಟಿನಲ್ಲಿ ಖಾಸಗಿ ಹೆಸ್ಕಾಂ ಬಂದರೂ ಅಚ್ಚರಿ ಇಲ್ಲ. ಗುಣಮಟ್ಟದ ವಿದ್ಯುತ್‌ ಉತ್ಪಾದನೆ ಹಾಗೂ ಪರಿಣಾಮಕಾರಿ ಬಳಕೆ ನಿಟ್ಟಿನಲ್ಲಿ ಪೈಪೋಟಿಯೂ ಅಗತ್ಯವಾಗಿದೆ. zಪ್ರಹ್ಲಾದ ಜೋಶಿ, ಕೇಂದ್ರ ಸಚಿವ

ಸರಕಾರದ ಭರವಸೆ ಸಮಿತಿಯಲ್ಲಿದ್ದಾಗ ವಿವಿಧ ಎಸ್ಕಾಂಗಳ ಕಾರ್ಯನಿರ್ವಹಣೆ ಗಮನಿಸಿದ್ದು, ಅವೆಲ್ಲವುಗಳಿಗೆ ಹೋಲಿಸಿದರೆ ಹೆಸ್ಕಾಂ ಪ್ರಗತಿ, ಕಾರ್ಯನಿರ್ವಹಣೆ ಉತ್ತಮವಾಗಿದೆ ಎಂದೆನಿಸಿದೆ. ಇನ್ನಷ್ಟು ಪ್ರಗತಿ ಹಾಗೂ ರೈತರು, ಗ್ರಾಮೀಣ ಜನರಿಗೆ ಉತ್ತಮ ಗುಣಮಟ್ಟದ ವಿದ್ಯುತ್‌ ನೀಡುವ ನಿಟ್ಟಿನಲ್ಲಿ ಹೆಸ್ಕಾಂ ಸಾಗಬೇಕು. ರಾಜ್ಯದಲ್ಲಿ ಒಟ್ಟು ಪಡಿತರ ಚೀಟಿಗಳ ಸಂಖ್ಯೆ 1.36 ಕೋಟಿ ಆಗಿದ್ದು, ರಾಜ್ಯದಲ್ಲಿ ಇರುವವರೆಲ್ಲರೂ ಬಡವರೇ ಎನ್ನುವಂತಾಗಿದೆ. ಇಂತಹ ಮನೋಭಾವ ತೊಲಗಬೇಕು. ಪುಕ್ಕಟೆ ಕೊಡುವ ದಂಧೆ ಇರುವವರೆಗೆ ದೇಶ ಉದ್ಧಾರ ಆಗದು. –ಬಸವರಾಜ ಹೊರಟ್ಟಿ, ವಿಧಾನ ಪರಿಷತ್ತು ಸದಸ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next