Advertisement

ಕಾಂಗ್ರೆಸ್‌-ಬಿಜೆಪಿಗಳ ನೆಮ್ಮದಿಗೆ ರೆಡ್ಡಿ ಭಂಗ?

12:28 AM Mar 02, 2023 | Team Udayavani |

ಕೊಪ್ಪಳ: ಭತ್ತದ ನಾಡು ಗಂಗಾವತಿ ಚುನಾವಣ ಕಣ ಕಾದ ಕೆಂಡದಂತಾಗಿದೆ. ಕಮಲ ಮಣಿಸಲು ಕಾಂಗ್ರೆಸ್‌ ಶತಾಯಗತಾಯ ಪ್ರಯತ್ನ ನಡೆಸಿದ್ದರೆ, ಇವರಿಬ್ಬರಿಗೂ ಸೆಡ್ಡು ಹೊಡೆದು ಎದ್ದು ನಿಲ್ಲಲು ಕೆಆರ್‌ಪಿ ಪಕ್ಷದ ಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಪಣತೊಟ್ಟು ಆಂಜನೇಯನ ಜಪ ಮಾಡುತ್ತಿದ್ದಾರೆ. ಇದು ಕಮಲ-ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ.

Advertisement

ಬಿಜೆಪಿಯ ಹಾಲಿ ಶಾಸಕ ಪರಣ್ಣ ಮುನವಳ್ಳಿ ಅಭಿವೃದ್ಧಿ ಜಪ ಮಾಡುತ್ತಿದ್ದರೂ ಕೆಲವೊಂದು ಹಗರಣಗಳಲ್ಲಿ ಹೆಸರು ಡ್ಯಾಮೇಜ್‌ ಮಾಡಿಕೊಂಡಿದ್ದಾರೆ. ಕಮಲಕ್ಕೆ ಈ ಬಾರಿ ಹೊಸ ಮುಖಗಳು ಎಂಟ್ರಿ ಕೊಡಲಿವೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಅದರಲ್ಲೂ ಅಂಜ ನಾದ್ರಿಯ ತಟದಲ್ಲಿ ಪ್ರಬಲ ಹಿಂದುತ್ವವಾದಿ ಗಳನ್ನೇ ಕಣಕ್ಕಿಳಿಸಿ ಕ್ಷೇತ್ರವನ್ನು ಕೇಸರಿಮಯ ಮಾಡಿಕೊಳ್ಳಲು ಬಿಜೆಪಿ, ಆರೆಸ್ಸೆಸ್‌ ನಿಷ್ಠೆಯ ನಾಯಕನನ್ನು ಕಣಕ್ಕಿಳಿಸುತ್ತಿದೆ ಎನ್ನುವ ಲೆಕ್ಕಾಚಾರ ಕೇಳಿ ಬಂದಿವೆ. ಈ ಮಧ್ಯೆ ಬಿಜೆಪಿಯಿಂದ ವಿರುಪಾಕ್ಷಪ್ಪ ಸಿಂಗನಾಳ ಟಿಕೆಟ್‌ಗೆ ತೆರೆಮರೆ ಕಸರತ್ತು ನಡೆಸಿದ್ದಾರೆ. ಅಲ್ಲದೇ ಕೆಲವರ ಹೆಸರುಗಳು ಪ್ರಚಲಿತದಲ್ಲಿವೆ. ಈ ಬೆಳವಣಿಗೆ ಪರಣ್ಣ ಮುನವಳ್ಳಿಗೆ ನುಂಗ ಲಾರದ ತುತ್ತಾಗಿದೆ.

ಇನ್ನು ಕಾಂಗ್ರೆಸ್‌ ಪಾಳೆಯದಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಇಲ್ಲಿ ವಲಸೆ, ಮೂಲ ಕಾಂಗ್ರೆಸ್ಸಿಗರು ಎನ್ನುವ ಪದನಾಮ ತೇಲುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೇ ನಂಬಿ ಕಾಂಗ್ರೆಸ್‌ನಲ್ಲಿ ಉಳಿದಿರುವ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಕಾಂಗ್ರೆಸ್‌ ಟಿಕೆಟ್‌ ತಂದೇ ತೀರುವೆ ಎಂದು ಪಣತೊಟ್ಟಿದ್ದಾರೆ. ಇನ್ನು ಎಚ್‌.ಜಿ.ರಾಮುಲು ಪುತ್ರ ಎಚ್‌.ಆರ್‌.ಶ್ರೀನಾಥ ಜೆಡಿಎಸ್‌ನಿಂದ ಮತ್ತೆ ಮಾತೃ ಪಕ್ಷ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಯಾವುದೇ ಷರತ್ತು ಇಲ್ಲದೇ ಸೇರ್ಪಡೆಯಾಗಿರುವ ಮಾತನ್ನಾಡಿದರೂ ಸಹಿತ ಟಿಕೆಟ್‌ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.ಇವರ ಬಣದಲ್ಲಿಯೇ ಗುರುತಿಸಿಕೊಂಡಿರುವ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಟಿಕೆಟ್‌ಗೆ ಫೈಟ್‌ ನಡೆಸಿದ್ದಾರೆ. ಶ್ರೀನಾಥ್‌, ಮಲ್ಲಿಕಾರ್ಜುನ ನಾಗಪ್ಪ ಇಬ್ಬರೂ ಒಂದೇ ಬಣವಾಗಿದ್ದು ನಮ್ಮಿಬ್ಬರಲ್ಲಿ ಯಾರಿಗೆ ಟಿಕೆಟ್‌ ಸಿಕ್ಕರೂ ಸಂತೋಷ. ಮೂರನೆಯವರಿಗೆ ಟಿಕೆಟ್‌ ಸಿಗುವುದಿಲ್ಲ ಎಂದು ಕೈನಲ್ಲೇ ಇರುವ ಅನ್ಸಾರಿಗೆ ಮಾತಿನೇಟಿನಿಂದಲೇ ಚಾಟಿ ಬೀಸುತ್ತಿದ್ದಾರೆ.

ಜೆಡಿಎಸ್‌ ನಡೆಯೂ ನಿಗೂಢ: ಗಂಗಾವತಿ ಕ್ಷೇತ್ರದಲ್ಲಿ ಈವರೆಗೂ ಜೆಡಿಎಸ್‌ ಅಭ್ಯರ್ಥಿ ಯಾರೆಂದು ಘೋಷಣೆಯಾಗಿಲ್ಲ. ಕುಮಾರಸ್ವಾಮಿ ಈಚೆಗೆ ಜಿಲ್ಲೆಗೆ ಆಗಮಿಸಿ ತೆರಳಿದ್ದ ವೇಳೆ ಕೆಲವೊಂದು ಸೂಕ್ಷ್ಮತೆಗಳನ್ನು ಅವಲೋಕಿಸಿ ತೆರಳಿದ್ದಾರೆ. ಸದ್ಯ ಪಿ. ಅಕ್ತರ್‌ ಸಾಬ, ಶೇಖ್‌ ನಬಿಸಾಬ್‌ ಹೆಸರು ಮುಂಚೂಣಿಯಲ್ಲಿವೆ. ಆದರೂ ಜೆಡಿಎಸ್‌ ಇವರ ಹೆಸರು ಅಧಿಕೃತ ಪ್ರಕಟ ಮಾಡಿಲ್ಲ. ಬದಲಾಗಿ ಪಕ್ಷಾಂತರ ಬೆಳವಣಿ ಗೆಗಳನ್ನು ಅವಲೋಕಿಸುತ್ತಿದೆ. ಇಕ್ಬಾಲ್‌ ಅನ್ಸಾರಿ ಕಾಂಗ್ರೆಸ್‌ ಆಂತರಿಕ ಭಿನ್ನಮತಕ್ಕೆ ಬೇಸತ್ತು ಮತ್ತೆ ಗೌಡರ ಗೂಡಿಗೆ ಸೇರಿದರೆ ಅವರನ್ನೇ ಅಭ್ಯರ್ಥಿಯನ್ನಾಗಿಸುವ ಸಾಧ್ಯತೆಯನ್ನೂ ಅಲ್ಲಗಳೆ ಯುವಂತಿಲ್ಲ. ಹೀಗಾಗಿ ಜೆಡಿಎಸ್‌ ನಡೆ ನಿಗೂಢವಾಗಿದೆ.

ರೆಡ್ಡಿ ಪಕ್ಷದಿಂದ ಯಾರಿಗೆ ಲಾಭ, ಯಾರಿಗೆ ನಷ್ಟ?
ಒಂದು ಕಾಲದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿರುದ್ದ ಬಹುಕೋಟಿ ಹಗರಣದ ಆರೋಪ ಮಾಡಿದ್ದ ಜನಾರ್ದನ ರೆಡ್ಡಿ, ಬಿ.ಎಸ್‌. ಯಡಿಯೂರಪ್ಪ ಸರ್ಕಾರವನ್ನು ಅಲುಗಾಡಿಸಿ, ಬಿಎಸ್‌ವೈ ನಿದ್ದೆಗೆಡುವಂತೆ ಮಾಡಿದ್ದರು. ಪ್ರಸ್ತುತ ಬಳ್ಳಾರಿ ಜಿಲ್ಲೆಗೆ ಎಂಟ್ರಿ ಇಲ್ಲದ ಕಾರಣ ಪಕ್ಕದ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಈಗ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ರೆಡ್ಡಿಯವರ ರಾಜಕೀಯ ಎಂಟ್ರಿಯಿಂದ ಬಿಜೆಪಿ ಸೇರಿ ಕಾಂಗ್ರೆಸ್‌ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಬಿಜೆಪಿ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬೆಳೆದಿರುವ ರೆಡ್ಡಿ, ಬಿಜೆಪಿ ವಿರುದ್ದವೇ ಬಹಿರಂಗವಾಗಿ ಗುಡುಗುತ್ತಿದ್ದಾರೆ. ಆದರೆ ಬಿಎಸ್‌ವೈ ಪರವಾದ ಅನುಕಂಪದ ಮಾತನ್ನಾಡಿದ್ದಾರೆ. ಇವರ ನಡೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರಿಗೆ ತಿಳಿಯದಂತಾಗಿವೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯ 2ನೇ ಹಂತದ ನಾಯಕರಿಗೆ ಗಾಳ ಹಾಕುತ್ತಿದ್ದು, ಅವರ ಮನೆಗಳಿಗೂ ರಾತ್ರೋ ರಾತ್ರಿ ತೆರಳಿ ತಮ್ಮ ಪಕ್ಷ ಸೇರ್ಪಡೆಗೆ ಮನವಿ ಮಾಡುತ್ತಿದ್ದಾರೆ. ಈವರೆಗೂ ರೆಡ್ಡಿ ಜತೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ಯಾವುದೇ ಪ್ರಭಾವಿ ನಾಯಕರು ಕಾಣಿಸಿಲ್ಲ. ಅನ್ಯ ಪಕ್ಷಗಳ ಕಾರ್ಯಕರ್ತರು ಹಾಗೂ ಎರಡನೇ ಹಂತದ ನಾಯಕರು ಕೆಆರ್‌ಪಿಪಿ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ.

Advertisement

-ದತ್ತು ಕಮ್ಮಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next