Advertisement

16 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

11:41 PM Nov 18, 2021 | Team Udayavani |

ಚೆನ್ನೈ/ಪುದುಚೇರಿ: ಇನ್ನೇನು ಮಳೆಯಬ್ಬರ ತಗ್ಗಿತೆಂದು ಭಾವಿಸುವ ಹೊತ್ತಿಗೇ ತಮಿಳುನಾಡಿನಲ್ಲಿ ವರುಣ ಮತ್ತೆ ಆರ್ಭಟಿಸಿದ್ದಾನೆ. ತಮಿಳುನಾಡು ಹಾಗೂ ನೆರೆಯ ಪುದುಚೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತ.ನಾಡಿನ 16 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

Advertisement

ಶುಕ್ರವಾರ ವಿಪರೀತ ವರ್ಷಧಾರೆಯಾಗುವ ಸಾಧ್ಯತೆಯಿರುವುದರಿಂದ ಹಲವೆಡೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ(ಎನ್‌ಡಿಆರ್‌ಎಫ್)ಯ ತಂಡಗಳು ಸನ್ನದ್ಧವಾಗಿವೆ. ಬಂಗಾಲ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಶುಕ್ರವಾರ ಬೆಳಗ್ಗೆ ತಮಿಳುನಾಡು ಹಾಗೂ ಆಂಧ್ರ ಕರಾವಳಿಯನ್ನು ದಾಟಲಿದೆ. ಹೀಗಾಗಿ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಗುರುವಾರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಚೆನ್ನೈ, ಕಡಲೂರು, ಕಂಚೀಪುರ, ಚೆಂಗಲ್‌ಪಟ್ಟು, ವಿಲ್ಲುಪುರ, ತಿರುವಳ್ಳೂರು ಸೇರಿದಂತೆ 16 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ತಿರುಪ್ಪುರದಲ್ಲಿ ಗುರುವಾರ ಗರಿಷ್ಠ ಮಳೆಯಾಗಿದ್ದು, 20 ಸೆ.ಮೀ. ಮಳೆ ದಾಖಲಾಗಿದೆ. ರಾಜ್ಯದ 19 ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮಡಿಪಕ್ಕಂನ ರಾಮನಗರದ ನಿವಾಸಿಗಳು ತಮ್ಮ ವಾಹನಗಳಿಗೆ ಹಾನಿಯಾಗದಿರಲೆಂದು ಅವುಗಳನ್ನು ಸಮೀಪದ ಫ್ಲೈಓವರ್‌ ಮೇಲೆ ನಿಲ್ಲಿಸಿದ್ದಾರೆ. ಕಳೆದ ವಾರದ ಮಳೆಯಲ್ಲಿ ರಾಮನಗರ ಸಂಪೂರ್ಣ ಜಲಾವೃತವಾಗಿ, ಹಾನಿ ಉಂಟಾಗಿತ್ತು.

ಅಗತ್ಯ ಸಾಮಗ್ರಿಗಳ ದಾಸ್ತಾನು :

Advertisement

ಮುಂದಿನ 2 ದಿನಗಳಿಗೆ ಬೇಕಾಗುವಷ್ಟು ಅಗತ್ಯ ಸಾಮಗ್ರಿಗಳನ್ನು ದಾಸ್ತಾನು ಇಡುವಂತೆ ಚೆನ್ನೈ ನಾಗರಿಕರಿಗೆ ನಗರ ಪಾಲಿಕೆಯು ಸೂಚಿಸಿದೆ. ಅನಗತ್ಯವಾಗಿ ಮನೆಗಳಿಂದ ಹೊರಬರದಂತೆಯೂ ಸಲಹೆ ನೀಡಿದೆ.

ಪುದುಚೇರಿಯಲ್ಲೂ ಮಳೆಯ ಆತಂಕ :

ವಾಯುಭಾರ ಕುಸಿತದ ಎಫೆಕ್ಟ್ ಎಂಬಂತೆ ಪುದುಚೇರಿಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನ.21ರ ವರೆಗೂ ಭಾರೀ ಮಳೆ ಖಚಿತ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲ ಶಾಲೆ-ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next