Advertisement

ಕೊರೊನಾ ನುಂಗಿದ “ಕಲಿಕೆ’ಗೆ ಚೇತರಿಕೆಯ ಪ್ರಯತ್ನಗಳು…

01:36 AM May 14, 2022 | Team Udayavani |

ಕೊರೊನಾ ಅವಾಂತರಗಳು ಒಂದೆರಡಲ್ಲ. ದೇಶದ ಆರ್ಥಿಕತೆಯಿಂದ ಹಿಡಿದು ತರಗತಿಯಲ್ಲಿ ಕೂತು ಅಕ್ಷರ ತಿದ್ದುವ ಮಗುವನ್ನೂ ಕೂಡ ಅದು ಬಾಧಿಸಿದೆ. ಆ 2 ವರ್ಷಗಳಲ್ಲಿ ಮಗು ಶಾಲೆಗೆ ಆಗಾಗ ಬರುವ ಅತಿಥಿ ಯಾದದ್ದೆ ಹೆಚ್ಚು. ಕೊರೊನಾದ ಕಬಂಧದ ನಡುವೆಯೂ ಮಗುವಿಗೆ ಕಲಿಸಲು ಶಿಕ್ಷಕರು ತೆ‌ಗೆದುಕೊಂಡ ಕಾಳಜಿ ಮತ್ತು ಅಪಾಯಗಳನ್ನು ನಾವು ನೆನೆಯಲೇ ಬೇಕು. ಅದೇ ಕಾರಣಕ್ಕೆ ಸೋಂಕು ಅಂಟಿಸಿಕೊಂಡು ಸತ್ತು ಹೋದ ಮೇಷ್ಟ್ರುಗಳ ಲೆಕ್ಕವೂ ಇನ್ನೂ ನಿಖರವಾಗಿ ಸಿಕ್ಕಿಲ್ಲ. ಎಲ್ಲರ ಕಾಳಜಿ ಒಂದೇ ಆಗಿತ್ತು. ಮಗು ಕಲಿಯಬೇಕು. ಮಗು ವಿನ ಕಲಿಕೆಗೆ ಹಿನ್ನಡೆಯಾಗಬಾರದು. ಮಗು ಕಲಿತದ್ದನ್ನು ಮರೆಯಬಾರದು. ಅದಕ್ಕಾಗಿಯೇ ಹತ್ತಾರು ಮಾಧ್ಯಮ ಗಳ ಮೂಲಕ ಮಕ್ಕಳನ್ನು ತಲುಪುವ ಪ್ರಯತ್ನವಾಯಿತು. ಕೊರೊನಾ ಭಾಗಶಃ ಇಳಿದುಹೋದ ಈ ಹೊತ್ತಿನಲ್ಲಿ ಮಕ್ಕಳ ಕಲಿಕೆಯ ಬಗ್ಗೆ ಮತ್ತಷ್ಟು ನಿಗಾವಹಿಸಬೇಕಾದ ತುರ್ತಿದೆ. ಅದಕ್ಕಾಗಿ ಇಲಾಖೆ ಹಬ್ಬದಂತೆ “ಕಲಿಕಾ ಚೇತರಿಕೆ’ ಎಂಬ ಕಾರ್ಯಕ್ರಮವನ್ನು ಬಹಳ ಹುರುಪಿನಲ್ಲಿ ಜಾರಿಗೊಳಿಸಲು ಹೊರಟಿದೆ. 2 ವರ್ಷಗಳ ಹಿನ್ನಡೆ ತುಂಬುವುದು ಹೇಗೆ ಎನ್ನುವುದು ಈ ಉಪಕ್ರಮದಲ್ಲಿದೆ!

Advertisement

ಏನಿದು ಕಲಿಕಾ ಚೇತರಿಕೆ..?
ಊಟ ಸಿಗದೆ ಸುಸ್ತಾದವನಿಗೆ ಆಸ್ಪತ್ರೆಯ ಬೆಡ್‌ ಮೇಲೆ ಮಲಗಿಸಿ ಗ್ಲೂಕೋಸ್ ಏರಿಸಿ ಗೆಲುವಾಗುವಂತೆ ಮಾಡ್ತಾ  ರಲ್ಲ, ಅದೇ ತರಹ ಇದು. ಮಕ್ಕಳಿಗೆ 2 ವರ್ಷದಿಂದ ಪಾಠಗಳು ಸರಿಯಾಗಿಲ್ಲ, ಕಲಿಕೆಯಲ್ಲಿ ಸೊರಗಿ ಹೋಗಿದ್ದಾರೆ. ಹಾಗಾಗಿ ಅವರ ಕಲಿಕೆ ಚೇತರಿಸಿಕೊಳ್ಳಲು ನೀಡು ತ್ತಿರುವ ಒಂದು ವಿಶೇಷ ಉಪಕ್ರಮ ಇದು.

ಕಳೆದ 2 ವರ್ಷಗಳು ಮತ್ತು ಈ ವರ್ಷ ಕಲಿಯಬೇಕಾ ಗಿದ್ದ(ಮರೆತದ್ದು-ಕಲಿಯಲಾಗದ್ದು-ಕಲಿಯ ಬೇಕಾದದ್ದು) ಕಲಿಕಾ ಫಲಗಳಲ್ಲಿ ಪ್ರಮುಖವಾದವುಗಳನ್ನು ಒಂದು ಕಡೆ ಸೇರಿಸಿ ಕಲಿಸಲಾಗುತ್ತದೆ. ಉದಾಹರಣೆಗೆ 9ನೇ ತರಗತಿ ಓದುತ್ತಿರುವ ಮಗು ಈಗ ಕೇವಲ 9ನೇ ಮಗುವಲ್ಲ ಅದು 7ನೇ ತರಗತಿಯದು, 8ನೇ ತರಗತಿಯದು ಮತ್ತು 9ನೇ ತರಗತಿಯದು ಹೌದು. ಮೂರೂ ವರ್ಷದ್ದನ್ನು ಈ ವರ್ಷ ಕಲಿಸಿ ಮುಗಿಸಬೇಕು. ಅದೆಲ್ಲವನ್ನು ಕಲಿಕಾ ಹಾಳೆ ಎಂಬ ಅಭ್ಯಾಸ ಪುಸ್ತಕದ ರೂಪದಲ್ಲಿ ನೀಡ ಲಾಗುತ್ತದೆ. ಮಗು ಚುಟುವಟಿಕೆಗಳಿಂದ ಕಲಿಯುತ್ತದೆ. ಇದು ಇಡೀ ವರ್ಷ ನಡೆಯುವ ಕಾರ್ಯಕ್ರಮ. ಕೇವಲ 15 ದಿನ ಅಥವಾ ತಿಂಗಳಾವಧಿಯದ್ದಲ್ಲ. ಮಗು ತನಗೆ ನೀಡಲಾದ ಕಲಿಕಾ ಹಾಳೆಯಲ್ಲಿ ತನ್ನ ಕಲಿಕೆಯನ್ನು ದಾಖ ಲಿಸಬೇಕು. ಈ ವರ್ಷಪೂರ್ತಿ ಪಠ್ಯಪುಸ್ತಕದ ತಂಟೆಗೆ ಹೋಗು ವ ಅನಿವಾರ್ಯತೆ ತೀರಾ ಕಡಿಮೆ. ವರ್ಷಪೂರ್ತಿ ಮಗು ಕಲಿಕಾ ಹಾಳೆಗಳೊಂದಿಗೆ ಆಡುತ್ತಾ ಕಲಿಯುತ್ತೆ. ಶಿಕ್ಷಕ ಕೇವಲ ಸುಗಮಕಾರನಾಗಿ ಮಗುವಿನ ಕಲಿಕೆಗೆ ಪೋಷಕ ನಾಗಿ ನಿಲ್ಲುತ್ತಾನೆ. ಹೇಗೆ ಶಿಕ್ಷಕ ಸಕ್ರಿಯನಾಗಬೇಕು ಎಂಬು ದಕ್ಕೆ ಅವರಿಗೆ ತರಬೇತಿ ಮತ್ತು ಕೈಪಿಡಿಗಳನ್ನು ನೀಡ ಲಾಗುತ್ತಿದೆ. ಅವನಿಗೆ ಹೆಚ್ಚು ಸ್ವತಂತ್ರ ಇರುವುದಿಲ್ಲ. ಕೈಪಿಡಿ ಅಂತಿಮ. ಅದು ಮಗಿದ ಮೇಲೆ ಬೇಕಾದರೆ ಬೇರೆ ರೂಪದ ಚಟುವಟಿಕೆಗಳನ್ನು ರೂಪಿಸಿಕೊಳ್ಳಬಹುದು.
ಕಲಿಯುವಿಕೆ ಮತ್ತು ಮೌಲ್ಯಮಾಪನ ಒಟ್ಟೊಟ್ಟಿಗೆ ಸಾಗುತ್ತದೆ. ಮಗು ತನ್ನದೇ ವೇಗದಲ್ಲಿ ಕಲಿಯಬಹುದು. ಮಗುವನ್ನು ಮುಂದಿನ ತರಗತಿಗೆ ಕಾಲಿಡುವ ಹೊತ್ತಿಗೆ ಅದ ನ್ನು ಆ ತರಗತಿಗೆ ಸಲ್ಲುವಂತೆ ಸಂಪೂರ್ಣವಾಗಿ ಸಿದ್ದ ಗೊಳಿಸುವ ಯೋಜನೆ ಇದು. 2 ಹಂತಗಳಲ್ಲಿ ನಡೆಯುತ್ತದೆ. ಸೆಪ್ಟಂಬರ್‌ವರೆಗೂ ಮೂಲ ಸಾಕ್ಷರತಾ ಕಲಿಕೆ ಮತ್ತು ಅನಂತರ ಕಲಿಕಾ ಫಲಗಳನ್ನು ಸಾಧಿಸುವುದು. ಯೋಜನೆ ಎಷ್ಟು ಪರಿಣಾಮಕಾರಿ ಅನ್ನುವುದಕ್ಕೆ ಮುಂದಿನ ವರ್ಷ ಒಂದು ಪ್ರಾಮಾಣಿಕ ಸರ್ವೇ ಆಗಬೇಕು.

ಕಲಿಕಾ ಚೇತರಿಕೆ ಎತ್ತುವ ಪ್ರಶ್ನೆಗಳು..
ಕಲಿಕೆ ಎಂದರೆ ಕಲಿತು ಮರೆಯುವುದೊ ಅಥವಾ ಮರೆ ಯದಂತೆ ಕಲಿತಿದ್ದು ಕೊನೆಯವರೆಗೂ ಉಳಿಯು ವುದೊ? 3ನೇ ತರಗತಿಯಷ್ಟೆ ಓದಿದ ನನ್ನ ತಾತ ಬೆಳಗ್ಗಿನ ನ್ಯೂಸ್‌ ಪೇಪರನ್ನು ಸರಾಗವಾಗಿ ಓದುವಾಗ ಇದು ಮತ್ತೆ ಮತ್ತೆ ಕಾಡುತ್ತದೆ. ಅವರು ಯಾವುದೇ ಹೊಸ ಹೊಸ ವಿಧಾನಗಳಿಲ್ಲದೆ ಕಲಿತವರು. ಕೋವಿಡ್‌ ಕಾಲದಲ್ಲಿ ಹತ್ತಾರು ತಿಂಗಳು ತರಗತಿಯೊಳಗೆ ಇಲ್ಲದ ಕಾರಣಕ್ಕೆ ಮಕ್ಕಳು ಕಲಿತಿದ್ದನ್ನು ಮರೆತಿವೆ ಎನ್ನಲಾಗುತ್ತದೆ. ಅದಕ್ಕೂ ಮೊದಲು ಕಲಿತಿದ್ದು ಕಲಿಕೆಯೊ ಅಲ್ಲವೊ? ಮಗುವನ್ನು ಸಂಪರ್ಕಿಸಲು ಮಾಡಿದ ವಿದ್ಯಾ ಗಮ, ವಠಾರ ಶಾಲೆ, ಸಂವೇದ ತರಗತಿಗಳು, ಅಲ್ಲಲ್ಲಿ ಸಾಧ್ಯ ವಾದ ಆನ್‌ಲೈನ್‌ತರಗತಿಗಳು, ಮನೆ ಮನೆ ಭೇಟಿ ಗಳು ಕಿಂಚಿತ್ತೂ ಮಕ್ಕಳನ್ನು ತಲುಪಲಿಲ್ಲವೇ? ಮಕ್ಕಳ ಕಲಿಕೆ ಉಳಿಸುವ ಪ್ರಯತ್ನ ಮಾಡಲಿಲ್ಲವೆ? ಈ ಎಲ್ಲ ಕಾರ್ಯ ಕ್ರಮಗಳು ಯಶಸ್ವಿ ಯಾದವು ಎಂದೇ ಹೇಳಲಾಗುತ್ತಿತ್ತು.

ಕೋವಿಡ್‌ಗೂ ಮೊದಲು ಮತ್ತು ಅನಂತರ ಮಕ್ಕಳ ಕಲಿಕೆ ಯ ಕುರಿತಾದ ಅಧಿಕೃತವಾದ ನಿಖರ ಸರ್ವೇ ಯೊಂದರ ಆವ ಶ್ಯಕತೆ ಇತ್ತು.(ಕೆಲವು ಖಾಸಗಿ ಏಜೆನ್ಸಿಗಳು ಅದನ್ನು ಮಾಡಿವೆ. ಕೋವಿಡ್‌ಗೂ ಮೊದಲು ಸರಕಾರಿ ಶಾಲೆಯ ಮಕ್ಕಳ ಕಲಿಕೆ ಅಷ್ಟೇನು ತೃಪ್ತಿಕರವಾಗಿಲ್ಲ ಎಂದು ಹೇಳುತ್ತವೆ) ಮಗುವಿನ ಕಲಿಕಾ ಹಿನ್ನಡೆಯಲ್ಲಿ ಕೊರೊನಾವು ಕಾರಣವಿರಬಹುದು. ಇಷ್ಟು ಅಲ್ಪಾವಧಿಯಲ್ಲಿ ಮಗು ಅಷ್ಟು ಹಿನ್ನೆಡೆ ಅನುಭವಿಸಲು ಹೇಗೆ ಸಾಧ್ಯ? ಅಷ್ಟು ದಿನ ಕಲಿತದ್ದು ಏನಾಯಿತು? ಅಸಲಿಗೆ ಮಕ್ಕಳ ಕಲಿಕಾ ಹಿನ್ನಡೆ ಎಷ್ಟರಮಟ್ಟಿಗೆ ಆಗಿದೆ ಎಂಬುದು ನಮಗೆ ನಿಖರವಾದ ಮಾಹಿತಿ ಇಲ್ಲ. ಮಗು ಶಾಲೆಗೆ ಬಂದಿಲ್ಲ, ಕಲಿತಿದ್ದು ಮರೆತಿದೆ, ಸರಿಯಾಗಿ ಕಲಿತಿಲ್ಲ ಅನ್ನುವುದಷ್ಟೇ ನಮ್ಮ ವಾದ. 10ನೇ ತರಗತಿ ಮಕ್ಕಳನ್ನು ಕಲಿಕಾ ಚೇತರಿಕೆಯಿಂದ ಹೊರಗಿಡಲಾಗಿದೆ. ಅವರಿಗೆ ಕಲಿಕಾ ಚೇತರಿಕೆ ಆವಶ್ಯಕತೆ ಇಲ್ಲವೇ? ಅವರು ಎಲ್ಲ ಕಲಿತು ಪಕ್ಕಾಗಿದ್ದಾರಾ ಎಂಬ ಪ್ರಶ್ನೆ ಮೂಡದೇ ಇರದು.

Advertisement

ಮಗುವಿನ ಮನಸ್ಸು ಯಂತ್ರವಲ್ಲ. 3 ವರ್ಷದ್ದನ್ನು ವರ್ಷದಲ್ಲಿ ತುಂಬುವುದು ಹೇಗೆ? ಮುಖ್ಯವಾದ ಅಂಶ ಗಳನ್ನು ಮಾತ್ರ ಕಲಿಸಲಾಗುವುದು ಅಂತ ಹೇಳಲಾಗುತ್ತದೆ. ಯಾವುದು ಮುಖ್ಯವಾದದ್ದು? ಅದನ್ನು ನಿರ್ಧರಿಸುವುದು ಹೇಗೆ? ಮುಖ್ಯವಾದದ್ದೆಂಬುದು ಯಾರ ದೃಷ್ಟಿಯಲ್ಲಿ? ಮಗುವಿನ ದೃಷ್ಟಿಯಲ್ಲೊ? ತಜ್ಞರ ದೃಷ್ಟಿಯಲ್ಲೊ?
ಇದು ಕೇವಲ ಸರಕಾರಿ ಶಾಲೆ ಮಕ್ಕಳಿಗೆ ಎಂಬುದು ನೆನಪಿಟ್ಟುಕೊಳ್ಳಬೇಕು. ಖಾಸಗಿ ಮತ್ತು ಅನುದಾನಿತ ಶಾಲೆ ಗಳಲ್ಲ ಯಥಾಪ್ರಕಾರ ಪಠ್ಯಬೋಧನೆ ಇರಲಿದೆ. ಸರಕಾರಿ ಶಾಲೆಯಲ್ಲಿ ಚೆನ್ನಾಗಿ ಓದುವ ಮಗುವಿಗೂ ಕಲಿಕಾ ಚೇತ ರಿಕೆಯು ಒಂದು ಹೇರಿಕೆ. ಅವನ ಜೀವನದಲ್ಲಿ ಆ ವರ್ಷ ಕಲಿಯಬೇಕಾದ ಇಡೀ ವರ್ಷದ ಕಲಿಕೆ ಕಸಿದರೆ ಅವರ ಪೋಷಕರು ಹೇಗೆ ಸ್ವೀಕರಿಸಬಹುದು? ಅವರು ಬಂದು ವರ್ಗಾವಣೆ ಪತ್ರ ಕೇಳಿದರೆ ಏನು ಮಾಡುವುದು?
ಒಂದು ಹೊಸ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಾಗ ಅದನ್ನು ಮೊದಲು ಪ್ರಾಯೋಗಿಕವಾಗಿ ಒಂದೆ ರಡು ಕಡೆ ಜಾರಿಗೊಳಿಸಿ ಅದರ ಪರಿಣಾಮವನ್ನು ಅಭ್ಯಸಿಸಿ ಎಲ್ಲ ಕಡೆ ಜಾರಿಗೊಳಿಸುವುದು ಸರಿಯಾದ ಮಾರ್ಗ. ಆದರೆ ಇಲ್ಲಿ ಹಾಗೆ ಆಗಿಲ್ಲ. ಕಾರ್ಯಕ್ರಮವನ್ನು ನೇರ ಅನುಷ್ಠಾನಗೊಳಿಸಲಾಗುತ್ತಿದೆ. ಅದು ಮಾಡುತ್ತದೆ ಎನ್ನಲಾದ ಮ್ಯಾಜಿಕ್‌ ಬಗ್ಗೆ ಕುತೂಹಲವಿದೆ. ಶಿಕ್ಷಣ ತಜ್ಞರು ವಿಮರ್ಶೆ ಮಾಡದಿರುವುದು ಆಶ್ಚರ್ಯ ತಂದಿದೆ.
ಪೋಷಕರು ಗಮನಿಸಬೇಕಾದದ್ದು..

ನಿಮ್ಮ ಮಗುವು ಒಂದರಿಂದ 9ನೇ ತರಗತಿ ಯೊಳಗೆ ಓದು ತ್ತಿದ್ದರೆ ಈ ವರ್ಷ ಮಗುವಿನ ಕಲಿಕಾ ಕ್ರಿಯೆ ಭಿನ್ನವಾಗಿ ರಲಿದೆ ಗಮನಿಸಿ. ಸಂಪೂರ್ಣ ಪಠ್ಯಪುಸ್ತಕ ಬೋಧನೆ ಇರು ವುದಿಲ್ಲ. ಯಾವ ಪಾಠ ಆಗಿದೆ? ನೋಟ್ಸ… ಬರೆದಿಲ್ಲವಾ ಅಂತ ಕೇಳುವಂತಿಲ್ಲ. ಈ ವರ್ಷ ಕೇವಲ ಕಲಿಕಾ ಫಲ ಗಳನ್ನು ಆಧರಿಸಿ ಮಗುವಿಗೆ ಕಲಿಕಾ ಹಾಳೆಗಳನ್ನು ನೀಡಲಾ ಗುತ್ತದೆ. ಮಗು ಅದರ ಮೂಲಕ ಕಲಿಯುತ್ತದೆ.

ಖಾಸಗಿ ಮತ್ತು ಖಾಸಗಿ ಅನುದಾನಿತ ಶಾಲೆಯ ಬೋಧನೆ ಮತ್ತು ಸರಕಾರಿ ಶಾಲೆಯ ಬೋಧನೆಯನ್ನು ಈ ವರ್ಷ ನೀವು ಹೋಲಿಸಿ ನೋಡುವಂತಿಲ್ಲ. ಎರಡೂ ಭಿನ್ನವಾ ಗಿವೆ. ಖಾಸಗಿ ಶಾಲೆಯಲ್ಲಿ ಪಾಠಗಳಾಗುತ್ತಿವೆ. ಇಲ್ಲಿ ಮಗು ಬರೀ ಹಾಳೆ ತಿದ್ದುತ್ತಿದೆ ಎಂದು ಗಾಬರಿ ಬೀಳಬೇಡಿ. ಎರಡು ವರ್ಷದ ಕಲಿಕಾ ಅಂತರ ಸರಿಪಡಿಸಲು ಮಾಡಿರುವ ನೂತನ ಕ್ರಮವೆಂಬುದನ್ನು ತಿಳಿದುಕೊಳ್ಳಿ. ಆಗಾಗ್ಗೆ ಶಾಲೆಗೆ ಭೇಟಿ ನೀಡಿ ಈ ವಿಷಯದ ಬಗ್ಗೆ ನಿಮ್ಮ ಅನುಮಾನ ಪರಿಹರಿಸಿ ಕೊಳ್ಳಿ. ಕೆಲವು ಪ್ರಶ್ನೆಗಳ ಹೊರತಾಗಿ ಇದೊಂದು ಒಳ್ಳೆಯ ಯೋಜನೆ. ಕಲಿಕಾ ಉಪಕ್ರಮ. ನಾವು ಭಾರತೀಯರು ಒಳ್ಳೆ ಯೋಜನೆ ರೂಪಿಸುವುದರಲ್ಲಿ ನಿಸ್ಸೀಮರು. ಅದರ ಅನುಷ್ಠಾನದಲ್ಲಿ ನಮಗೆ ಶಿಸ್ತಿನ ಕೊರತೆ ಇದೆ. ಕಲಿಕಾ ಚೇತರಿಕೆ ಏನು ಮೋಡಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು. ಬಹುಶಃ ಈ ವರ್ಷದ ಕೊನೆಗೆ ಅದರ ಪರಿಣಾಮಗಳು ನಮಗೆ ಕಾಣಸಿಗಬಹುದು.

– ಸದಾಶಿವ್‌ ಸೊರಟೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next