ಬೆಂಗಳೂರು: ಕಾಮನ್ವೆಲ್ತ್ ಕ್ರೀಡೆಯಲ್ಲಿ ಬ್ಯಾಡ್ಮಿಂಟನ್ನಲ್ಲಿ ಚಿನ್ನ ಗೆದ್ದ ಅಶ್ವಿನಿ ಪೊನ್ನಪ್ಪ ಅವರಿಗೆ ರಾಜ್ಯ ಸರ್ಕಾರ 33 ಲಕ್ಷ ರೂ. ನಗದು ಪುರಸ್ಕಾರ ನೀಡಿದೆ.
ವಿಧಾನಸೌಧದಲ್ಲಿ ಗುರುವಾರ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಶ್ವಿನಿ ಪೊನ್ನಪ್ಪ ಅವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಿದರು.
ನಂತರ ಮಾತನಾಡಿದ ಅವರು, ಅಶ್ವಿನಿ ಪೊನ್ನಪ್ಪ ಅವರು ಕಾಮನ್ವೆಲ್ತ್ ಗೇಮ್ನಲ್ಲಿ ಚಿನ್ನದ ಪದಕ, ಡಬಲ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ರಾಜ್ಯ ಸರ್ಕಾರ ಅವರಿಗೆ ಮತ್ತಷ್ಟು ಒಳ್ಳೆದಾಗಲಿ ಎಂದು ಶುಭ ಹಾರೈಸುತ್ತದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಕ್ರೀಡಾ ಕೋಟಾದಲ್ಲಿ ನೇರ ನೇಮಕಾತಿ ಇತ್ತು. ಆದರೆ, ಅದು ಇತ್ತೀಚೆಗೆ ರದ್ದಾಗಿತ್ತು. ಇದೀಗ ಮತ್ತೆ ಅದನ್ನು ಜಾರಿಗೊಳಿಸಲಾಗುವುದು. ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತರಲಾಗುವುದು ಎಂದು ತಿಳಿಸಿದರು.
ಒಲಂಪಿಕ್ಸ್ನಲ್ಲಿ ಸಾಧನೆ ಮಾಡುವ ಹಾಗೂ ಚಿನ್ನ, ಬೆಳ್ಳಿ, ಕಂಚು ಪದಕ ಪಡೆಯುವ ರಾಜ್ಯದ ಕ್ರೀಡಾಪಟುಗಳಿಗೆ ಕ್ರಮವಾಗಿ 5, 3, 2 ಕೋಟಿ ರೂ. ನಗದು ಪುರಸ್ಕಾರ ನೀಡಲಾಗುವುದು ಎಂದು ಹೇಳಿದರು.
ಲೋಕಾಯುಕ್ತ ವಿಚಾರದಲ್ಲಿ ಯಾವುದೇ ತಾರತಮ್ಯ ಅಥವಾ ಗೊಂದಲವೂ ಇಲ್ಲ. ಲೋಕಾಯುಕ್ತ ತನ್ನ ಕೆಲಸ ಮಾಡುತ್ತಿದೆ. ಅದೇ ರೀತಿ ಎಸಿಬಿ ಸಹ ಕೆಲಸ ಮಾಡುತ್ತಿದೆ. ಎರಡೂ ಸಂಸ್ಥೆಗಳಿಗೂ ಹೆಚ್ಚಿನ ಸಿಬ್ಬಂದಿ ಬೇಕಾದರೆ ಒದಗಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.