Advertisement

ಮಾನವನನ್ನು ಪರಿಪೂರ್ಣದೆಡೆಗೆ ಕರೆದೊಯ್ಯುವುದೇ ನೈಜ‌ ಧರ್ಮ: ರಂಭಾಪುರಿ ಶ್ರೀ

06:34 PM Oct 20, 2022 | Team Udayavani |

ಕುಷ್ಟಗಿ:ಮಾನವನನ್ನು ಪರಿಪೂರ್ಣದೆಡೆಗೆ ಕರೆದೊಯ್ಯುವುದೇ ನೈಜ‌ ಧರ್ಮ, ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಅಡಿಪಾಯವಾಗಿದೆ. ಮಾನವೀಯ ಸಂಬಂಧಗಳನ್ನು ಬೆಸೆಯುವುದೇ ಧರ್ಮಗಳ ಗುರಿಯಾಗಬೇಕಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಗುರುವಾರ ಅವರು ತಾಲೂಕಿನ ಚಳಗೇರಾ ಹಿರೇಮಠದ ಲಿಂ.ವಿರುಪಾಕ್ಷಲಿಂಗ ಶ್ರೀಗಳವರ 8ನೇ ವರುಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ , ಧರ್ಮ ಮತ್ತು ಆಧ್ಯಾತ್ಮಿಕತೆ ಬದುಕಿಗೆ ಆಶಾಕಿರಣ. ಭೌತಿಕ ಬದುಕಿಗೆ ಆಧ್ಯಾತ್ಮ ಜ್ಞಾನ ಅವಶ್ಯಕ. ಮೌಲ್ಯಾಧಾರಿತ ಜೀವನದಿಂದ ಮನುಷ್ಯನಿಗೆ ಬೆಲೆ ಮತ್ತು ಬಲ ದೊರಕುತ್ತದೆ. ಮನದ ಅಜ್ಞಾನ ಎಂಬ ಕತ್ತಲೆ ಕಳೆಯಲು ಗುರು ಎಂಬ ಸೂರ್ಯ ಬೇಕೇ ಬೇಕು ಎಂದರು.

ಲಿಂ. ವಿರುಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಭಕ್ತ ಸಂಕುಲಕ್ಕೆ ಆದರ್ಶ ಗುರುವಾಗಿ ಸಂಸ್ಕಾರ ನೀಡಿದ್ದನ್ನು ಮರೆಯಲಾಗದು. ಸರಳತೆ ಮತ್ತು ಸಾತ್ವಿಕತೆ ಮೈಗೂಡಿಕೊಂಡು ಬಾಳಿದ ಶ್ರೀಗಳು ಭಕ್ತರ ಸಂಕಷ್ಟಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದನ್ನು ಮರೆಯಲಾಗದು. ಅವರ ಆದರ್ಶ ಧರ್ಮ ದಾರಿಯಲ್ಲಿ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮುನ್ನಡೆದು ಧರ್ಮ ಸಂಸ್ಕೃತಿ ಬೆಳೆಸುತ್ತಿರುವ ಮತ್ತು ಶ್ರೀ ಮಠವನ್ನು ಅಭಿವೃದ್ಧಿಪಡಿಸುತ್ತಿರುವುದು ತಮಗೆ ಸಂತೋಷ ತಂದಿದೆ. ಲಿಂ. ವಿರುಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳ ಸತ್ಯ ಸಂಕಲ್ಪಗಳು ಸಾಕಾರಗೊಳ್ಳಲೆಂದು ಶುಭ ಹಾರೈಸಿದರು.

ಇದೇ ವೇಳೆ ಡಾ.ಎಸ್.ವ್ಹಿ.ಪಾಟೀಲ ಗುಂಡೂರು ಅವರು ರಚಿಸಿದ ಶಿವಾಚಾರ್ಯ ಶಿಖರ ಕೃತಿಯನ್ನು ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು.

ನೇತೃತ್ವ ವಹಿಸಿದ ಚಳಗೇರಾ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸುಖ ಶಾಂತಿದಾಯಕ ಬದುಕಿಗೆ ಧರ್ಮವೇ ಅಡಿಪಾಯ, ಸಂಪತ್ತು ಬೆಳೆದಂತೆ ಸಂಸ್ಕೃತಿ ಬೆಳೆದುಕೊಂಡು ಬರಬೇಕು. ಆದರ್ಶ ಮೌಲ್ಯಗಳ ಸಂಗಮ ವೀರಶೈವ ಧರ್ಮವಾಗಿದೆ. ಲಿಂ. ವಿರುಪಾಕ್ಷಲಿಂಗ ಶ್ರೀಗಳವರ ಬಾಳ ಬದುಕು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು. ಎಡೆಯೂರು, ಎಮ್ಮಿಗನೂರು, ಬೆದವಟ್ಟಿ, ಹರಪನಹಳ್ಳಿ, ಹರಸೂರು, ಗೆಜ್ಜೆಭಾವಿ, ಕುಷ್ಟಗಿ, ಕಲಾದಗಿ, ಮುಕ್ತಿಮಂದಿರ ಶ್ರೀಗಳವರನ್ನು ಮೊದಲ್ಗೊಂಡು ಮೂವತ್ತೈದಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು.

Advertisement

ತತ್ವದರ್ಶ ಚಿಂತಕ ಪ್ರಶಸ್ತಿಯನ್ನು ದೋಟಿಹಾಳ ಚಂದ್ರಶೇಖರ ದೇವರು, ಅಖಿಲ ಭಾರತ ವೀರಶೈವ ಯುವ ವೇದಿಕೆ ಅಧ್ಯಕ್ಷ ಬೆಂಗಳೂರಿನ ಜಯಂತ ಕುಮಾರ ಅವರಿಗೆ ವೀರಶೈವ ಯುವ ಸಿರಿ ಪ್ರಶಸ್ತಿ, ಸರಸ್ವತಿ ಸೇವಾಪುತ್ರ ಸೂರ್ಯಬಾಬು,ಜೆಡಿಎಸ್ ರಾಜ್ಯ ಕಾರ್ಯದರ್ಶಿ ವ್ಹಿ. ನಾಗೇಂದ್ರ ಅವರಿಗೆ ಸರಸ್ವತಿ ಸೇವಾ ಪುತ್ರ, ಹನುಮಸಾಗರದ ಮಲ್ಲಯ್ಯ ಕೋಮಾರಿ, ಪ್ರಶಸ್ತಿಗಳನ್ನಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

ಸಮಾರಂಭದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ, ವೀರಯ್ಯ ಹಿರೇಮಠ ಕೆಸರಟ್ಟಿ, ದೊಡ್ಡಯ್ಯ ಗದ್ದಡಕಿ, ಸಂಗಯ್ಯ ವಸ್ತ್ರದ, ಡಿಎಸ್ ಎಸ್ ವಕ್ತಾರ ವೆಂಕಟೇಶ, ಬಿಜೆಪಿ ತಾಲೂಕಾ ಅಧ್ಯಕ್ಷ ಬಸವರಾಜ್ ಹಳ್ಳೂರು, ಬಣಜಿಗ ಸಮಾಜದ ಅಧ್ಯಕ್ಷ ವಿಶ್ವನಾಥ ಕನ್ನೂರು, ಚಳಗೇರಾ ಗ್ರಾ.ಪಂ.ಅಧ್ಯಕ್ಷ ಮಹಾಂತೇಶ ಹಡಪದ, ಉಪಾಧ್ಯಕ್ಷೆ ಶಾಂತವ್ಬ ಜಾಲಿ, ವಿಜಯಕುಮಾರ ಹಿರೇಮಠ, ಲಾಡ್ಲೆ ಮಷಾಕ್ ದೋಟಿಹಾಳ, ಪುರಸಭೆ ಸದಸ್ಯ ಚಿರಂಜೀವಿ ಹಿರೇಮಠ, ರಾಜಕೀಯ ಗಣ್ಯರು ಮತ್ತು ದಾನಿಗಳು ಪಾಲ್ಗೊಂಡು ಗುರುರಕ್ಷೆ ಪಡೆದರು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಲಿಂ. ವಿರುಪಾಕ್ಷಲಿಂಗ ಶ್ರೀಗಳವರ ಪಲ್ಲಕ್ಕಿ ಉತ್ಸವ ಜರುಗಿತು. ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next