Advertisement

ಜೆಡಿಎಸ್‌ನಿಂದ ಸ್ಪರ್ಧೆಗೆ ಸಿದ್ಧ, ಪಕ್ಷ ತೊರೆಯಲ್ಲ: ಪ್ರಮೋದ್‌

01:00 AM Mar 21, 2019 | Team Udayavani |

ಉಡುಪಿ/ಬೆಂಗಳೂರು: ಮೈತ್ರಿ ಲೆಕ್ಕಾಚಾರದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು
ಕೊಟ್ಟಿರುವುದನ್ನು ವಾಪಸ್‌ ಪಡೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ನಾಯಕರು ಎರಡೂ ಜಿಲ್ಲೆಗಳ ಮುಖಂಡರಿಗೆ ಸ್ಪಷ್ಟಪಡಿಸಿದ್ದಾರೆ.

Advertisement

ಬುಧವಾರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರ
ವನ್ನು ಕಾಂಗ್ರೆಸ್‌ ವಾಪಸ್‌ ಪಡೆದುಕೊಳ್ಳಬೇಕು ಎಂದು ಎರಡೂ ಜಿಲ್ಲೆಗಳ ಮುಖಂಡರು ನಾಯಕರಿಗೆ ಮನವಿ ಮಾಡಿದ್ದಾರೆ. ಆದರೆ ಜಿಲ್ಲಾ ಮುಖಂಡರ ಮನವಿಯನ್ನು ಸರಾಸಗಟಾಗಿ ತಳ್ಳಿ ಹಾಕಲಾಗಿದೆ.ಮೈತ್ರಿ ಧರ್ಮದಂತೆ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಗೆಲುವಿಗೆ ಒಟ್ಟಾಗಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷ ಬಿಡಲ್ಲ, ಸ್ಪರ್ಧೆಗೆ ಸಿದ್ಧ ಇದೇ ವೇಳೆ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಜೆಡಿಎಸ್‌ ಚಿಹ್ನೆಯಡಿ ಸ್ಪರ್ಧೆ ಮಾಡುವಂತೆ ಜೆಡಿಎಸ್‌ ವರಿಷ್ಠ ದೇವೇಗೌಡ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರಿಗೆ ನೀಡಿರುವ ಆಹ್ವಾನದ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಜೆಡಿಎಸ್‌ ಚಿಹ್ನೆಯಿಂದ ಸ್ಪರ್ಧಿಸಲು ಸಿದ್ದ. ಆದರೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದಿಲ್ಲ ಎಂದು ಪ್ರಮೋದ್‌ ಮಧ್ವರಾಜ್‌ ಪಕ್ಷದ ನಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಜೆಡಿಎಸ್‌ ನಾಯಕರು ಮತ್ತು ಹೈಕಮಾಂಡ್‌ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಸಿದ್ದರಾಮಯ್ಯ ಸಭೆಯಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯ ಬಳಿಕ ಮಾತನಾಡಿದ ಪ್ರಮೋದ್‌ ಮಧ್ವರಾಜ್‌, ಜೆಡಿಎಸ್‌ ನಾಯಕರು ಅಭ್ಯರ್ಥಿಯಾಗುವಂತೆ ಕೇಳಿದ್ದಾರೆ. ನಾವು ಕಾಂಗ್ರೆಸ್‌ಗೆ ಕ್ಷೇತ್ರ ಬಿಟ್ಟುಕೊಡಿ ಎಂದು ಕೇಳಿದ್ದೇವೆ. ಒಂದು ವೇಳೆ ಕ್ಷೇತ್ರ ಬಿಟ್ಟುಕೊಡದಿದ್ದರೆ, ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನು ಸಿದ್ಧ. ಅದು ಕಾಂಗ್ರೆಸ್‌ ಹೈಕಮಾಂಡ್‌ ಒಪ್ಪಿದರೆ ಮಾತ್ರ ಸ್ಪರ್ಧೆ ಮಾಡುತ್ತೇನೆ.

ನಾನೇ ಅಭ್ಯರ್ಥಿ ಎಂದು ಅಂತಿಮಗೊಂಡಿಲ್ಲ ಎಂದು ಹೇಳಿದರು.

Advertisement

ಸಮ್ಮಿಶ್ರ ಸರಕಾರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವರಾದ ಪ್ರಮೋದ್‌ ಮಧ್ವರಾಜ್‌, ವಿನಯ ಕುಮಾರ್‌ ಸೊರಕೆ, ಶೃಂಗೇರಿ ಶಾಸಕ ರಾಜೇಗೌಡ, ಮಾಜಿ ಶಾಸಕರಾದ ಗೋಪಾಲ ಭಂಡಾರಿ, ಗೋಪಾಲ ಪೂಜಾರಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫ‌ೂರ್‌, ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಚಿಕ್ಕಮಗಳೂರಿನಿಂದ ಪಕ್ಷದ ಮುಖಂಡರಾದ ಬಿ.ಎಲ್‌. ಶಂಕರ್‌, ಡಾ| ವಿಜಯ ಕುಮಾರ್‌, ಗಾಯತ್ರಿ ಶಾಂತೇಗೌಡ ಪಾಲ್ಗೊಂಡಿದ್ದರು.

ಕಾಂಗ್ರೆಸ್‌ ಮೊದಲು, ಬಳಿಕ ಮೈತ್ರಿ: ಪ್ರಮೋದ್‌
“ಸಭೆಯಲ್ಲಿ ಪಾಲ್ಗೊಂಡಿದ್ದ ಎರಡೂ ಜಿಲ್ಲೆಯವರು ಕೂಡ ಕಾಂಗ್ರೆಸ್‌ ಅಭ್ಯರ್ಥಿಗೇ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದೇವೆ. ಕಾಂಗ್ರೆಸ್‌ ಅಭ್ಯರ್ಥಿ ನಮ್ಮ ಮೊದಲ ಯತ್ನ. ಅದು ಸಾಧ್ಯವೇ ಇಲ್ಲದಾಗ ಮೈತ್ರಿ ಅಭ್ಯರ್ಥಿಯನ್ನು ನಿಲ್ಲಿಸುವುದಕ್ಕೆ ಆದ್ಯತೆ. ಮುಂದಿನ ನಿರ್ಧಾರ ಜೆಡಿಎಸ್‌ ಕಡೆಯಿಂದಲೇ ಹೊರಬೀಳಬೇಕಿದೆ’ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next