Advertisement

15 ನಿಮಿಷಗಳ‌ ಸವಾಲಿಗೆ ಸಿದ್ಧ

09:21 AM Jul 24, 2019 | mahesh |

ಇಡೀ ವಿಶ್ವದಲ್ಲಿ ಯಾರೂ ಅನ್ವೇಷಣೆ ಮಾಡದ ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸಲು ಮುಂದಾಗಿರುವ ಇಸ್ರೋ ಮೊದಲ ಹೆಜ್ಜೆ ಯಶಸ್ವಿಯಾಗಿ ಇರಿಸಿದೆ. ಶ್ರೀಹರಿಕೋಟಾದಿಂದ ಚಂದ್ರಯಾನ-2ರ ಆರ್ಬಿಟರ್‌, ಲ್ಯಾಂಡರ್‌, ರೋವರ್‌ ಪರಿಕರಗಳ ಸಮುಚ್ಚಯವನ್ನು ಹೊತ್ತೂಯ್ದ ರಾಕೆಟ್‌, ನಿಗದಿತ ಕಕ್ಷೆಗಿಂತಲೂ ಉತ್ತಮ ಕಕ್ಷೆಗೆ ಅವುಗಳನ್ನು ಯಶಸ್ವಿಯಾಗಿ ಸೇರಿಸಿದೆ. ಇಲ್ಲಿಂದ ಮುಂದಕ್ಕೆ ನಿಜವಾದ ಸವಾಲುಗಳು ಅನಾವರಣಗೊಳ್ಳಲಿವೆ.

Advertisement

ಶ್ರೀಹರಿಕೋಟಾ: “ಚಂದ್ರಯಾನ-2 ಯಶಸ್ವಿಯಾಗಿ ಉಡಾವಣೆಯಾಗಿದೆ. ಸೆಪ್ಟಂಬರ್‌ 7ರಂದು ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ ಇಳಿಯಲಿದೆ. ಚಂದ್ರನ ಮೇಲೆ ಅದು ಇಳಿಯುವ 15 ನಿಮಿಷಗಳ ಕಾಲಾವಧಿಯು ಅತಿ ಕ್ಲಿಷ್ಟಕರ ಸನ್ನಿ ವೇಶವಾಗಿದ್ದು, ಭೂಮಿಯಿಂದ ಅದನ್ನು ನಿಯಂತ್ರಿಸಬೇಕಿರುವ ನಾವು ಅತಿ ದೊಡ್ಡ ಸವಾಲಿನ ಸನ್ನಿವೇಶ ಎದುರಿಸುತ್ತೇವೆ” ಎಂದು ಇಸ್ರೋದ ಅಧ್ಯಕ್ಷ ಕೆ. ಶಿವನ್‌ ತಿಳಿಸಿದ್ದಾರೆ. ಉಡಾವಣೆಯ ಅನಂತರ ಇಸ್ರೋದ ಕಚೇರಿಯಲ್ಲಿ ಸಂಭ್ರಮದ ವಾತಾವರಣದ ನಡುವೆ ತಮ್ಮನ್ನು ಅಭಿನಂದಿಸಿದ ಇಸ್ರೋದ ಮಾಜಿ ಮುಖ್ಯಸ್ಥರು ಹಾಗೂ ಚಂದ್ರಯಾನ-2 ವಿಜ್ಞಾನಿಗಳ ಮುಂದೆ ಅವರು ಮಾತನಾಡಿದರು.

“”ರಾಕೆಟ್‌ ಯಶಸ್ವಿಯಾಗಿ ಉಡಾವಣೆಗೊಂಡಿದೆ. ನಿಗದಿತ ಎತ್ತರಕ್ಕೆ ಏರಿದ ಅನಂತರ ರಾಕೆಟ್‌ನಿಂದ “ಚಂದ್ರಯಾನ-2′ ಪರಿಕರ ಗಳಿರುವ ಸಮುಚ್ಚಯ ಬೇರ್ಪಟ್ಟಿದೆ ಹಾಗೂ ಅವೆಲ್ಲವೂ ಇಸ್ರೋದ ನಿಯಂತ್ರಣಕ್ಕೆ ಬಂದಿವೆ. ಆದರೆ, ಇಲ್ಲಿಂದ ಮುಂದೆ ನಮ್ಮ ನಿಜವಾದ ಸವಾಲುಗಳು ಅಡಗಿವೆ” ಎಂದರು.

“”ಇಲ್ಲಿಂದ ಮುಂದೆ ಒಂದೂವರೆ ತಿಂಗಳು ನಾವು (ವಿಜ್ಞಾನಿಗಳು), ಚಂದ್ರಯಾನ-2 ಯೋಜನೆಯ ಅತ್ಯಂತ ಕ್ಲಿಷ್ಟಕರವೆನಿಸಿರುವ 15 ತಾಂತ್ರಿಕ ಕೆಲಸಗಳನ್ನು ಭೂಮಿಯಿಂದ ನಿಯಂತ್ರಿಸಲಿದ್ದೇವೆ ಎಂದ ಅವರು, ವಿಕ್ರಮ್‌ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವುದೇ ಈ ಯೋಜನೆಯ ಅತಿ ದೊಡ್ಡ ಹಾಗೂ ನಿರ್ಣಾಯಕ ಸವಾಲು.

ಸಾಫ್ಟ್ ಲ್ಯಾಂಡಿಂಗ್‌ ಎನ್ನುವುದು ಕ್ಲಿಷ್ಟಾತಿಕ್ಲಿಷ್ಟ ವಿಚಾರವಾಗಿ ರುವುದರಿಂದ ಲ್ಯಾಂಡರ್‌ ಚಂದ್ರನ ಮೇಲಿಳಿಯುವ 15 ನಿಮಿಷಗಳ ಅವಧಿ ನಮ್ಮ ಪಾಲಿಗೆ ಸವಾಲಿನ ಕಾಲಘಟ್ಟ ವಾಗಿರುತ್ತದೆ” ಎಂದರು. ಅಲ್ಲದೆ, “”ಆ ಅವಧಿಯನ್ನು ಸಮರ್ಥ ವಾಗಿ ಎದುರಿಸಲು ನಾವು ಸನ್ನದ್ಧರಾಗಿದ್ದೇವೆ” ಎಂದೂ ತಿಳಿಸಿದರು. “”ವಾರದ ಹಿಂದೆ ರಾಕೆಟ್‌ ವ್ಯವಸ್ಥೆಯಲ್ಲಿ ಕಾಣಿಸಿ ಕೊಂಡಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಿದ ವಿಜ್ಞಾನಿಗಳಿಗೆ ಅಭಿನಂದನೆಗಳು. ತಾಂತ್ರಿಕ ಹಿನ್ನೆಡೆಯ ಅನಂತರ ಈಗ ಯಶಸ್ಸಿನೊಂದಿಗೆ ಪುಟಿದೆದ್ದು ಬಂದಿರುವುದು ನಮಗೆ ಖುಷಿ ತಂದಿದೆ” ಎಂದರು.

Advertisement

ಸಂಸತ್‌ನಲ್ಲಿ ಅಭಿನಂದನೆ
ಚಂದ್ರಯಾನ-2 ಯಶಸ್ವಿ ಉಡಾವಣೆಯ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ಸಂಸದರು, ಈ ಮಹತ್ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕಾಗಿ ಇಸ್ರೋಗೆ ಅಭಿನಂದನೆ ಸಲ್ಲಿಸಿದರು. ಭಾರತೀಯ ಇತಿಹಾಸದಲ್ಲಿ ಇದೊಂದು ಸುವರ್ಣ ಅಧ್ಯಾಯ ಎಂದು ಸಂಸದರು ಬಣ್ಣಿಸಿದರು. ಉಡಾವಣೆಯು ಯಶಸ್ವಿಯಾಗಿದ್ದನ್ನು ಲೋಕಸಭೆಯಲ್ಲಿ, ಸ್ಪೀಕರ್‌ ಓಂ ಬಿರ್ಲಾ ಅವರು ಸದನಕ್ಕೆ ತಿಳಿಸಿದರು. ರಾಜ್ಯಸಭೆಯಲ್ಲಿ, ಉಡಾವಣೆಯು ಯಶಸ್ವಿಯಾಗಿ ನೆರವೇರಿದ ವಿಚಾರವನ್ನು ರಾಜ್ಯಸಭೆಯ ಸ್ಪೀಕರ್‌ ಆಗಿರುವ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ತಿಳಿಸಿ ಅಭಿನಂದಿಸಿದರು.

ನಾಸಾ, ಇಸ್ರೋಕ್ಕೆ ಕಲಾಂ ಸಲಹೆ
2008ರಲ್ಲಿ ಚಂದ್ರಯಾನ-1ರ ಅನಂತರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ದಿ| ಅಬ್ದುಲ್‌ ಕಲಾಂ, ಇಸ್ರೋ ಮತ್ತು ನಾಸಾ ಸಂಸ್ಥೆಗಳು ಜಂಟಿಯಾಗಿ, ಚಂದ್ರನ ನೆಲದೊಳಗೆ ತೂರಿ ಹೋಗಿ ನೀರಿನ ಇರುವಿಕೆ ಪತ್ತೆ ಹಚ್ಚುವಂಥ ರೋಬೋ ತಂತ್ರಜ್ಞಾನ ಆಧಾರಿತ ಪರಿಕರವನ್ನು ತಯಾರಿಸಿ ಕಳುಹಿಸಬೇಕು” ಎಂದಿದ್ದರು. ಅದನ್ನು ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಹೇಳಿದ್ದಕ್ಕೆ ಪ್ರತಿಯಾಗಿ ನಾಸಾ ವಿಜ್ಞಾನಿಗಳು ಚಂದ್ರನ ಮಿನರಾಜಲಿ ಮ್ಯಾಪಿಂಗ್‌ ಮಾಹಿತಿಯನ್ನು ಭಾರತೀಯ ವಿಜ್ಞಾನಿಗಳಿಗೆ ಕೊಟ್ಟಿದ್ದರು ಎಂದು ಕಲಾಂ ತಿಳಿಸಿದ್ದರು.

ಮುಂದಿನ ಹಂತವೇನು?
ಭೂಮಿಯ ಕಕ್ಷೆಗೆ ಸೇರಿರುವ ಚಂದ್ರಯಾನ-2 ಪರಿಕರಗಳು, 45 ದಿನಗಳ ಪಯಣದ ಅನಂತರ ಚಂದ್ರನ ಕಕ್ಷೆಯನ್ನು ಸೇರಲಿದೆ. ಅಲ್ಲಿ ಆರ್ಬಿಟರ್‌ನಿಂದ ಲ್ಯಾಂಡರ್‌-ರೋವರ್‌ ಬೇರ್ಪಡಲಿವೆ. ಸೆ. 7ರಂದು ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ ಇಳಿಯಲಿದ್ದು, ಅದರಿಂದ ಹೊರಬರುವ ರೋವರ್‌ ಎಂಬ ಪುಟಾಣಿ ರೋಬೋ ತಂತ್ರಜ್ಞಾನ ಆಧಾರಿತ ಪರಿಕರ ಅರ್ಧ ಕಿ.ಮೀವರೆಗೆ ಚಂದ್ರನ ನೆಲದಲ್ಲಿ ಅಡ್ಡಾಡಿ, ನೀರಿನ ಅನ್ವೇಷಣೆ ಹಾಗೂ ಅಲ್ಲಿನ ಪರಿಸರದ ಅಧ್ಯಯನ ಮಾಡಲಿದೆ.

ಭಾರತೀಯರಿಗೆ ಹೆಮ್ಮೆ: ಪ್ರಧಾನಿ
ಚಂದ್ರಯಾನ-2 ರಾಕೆಟ್‌ ಯಶಸ್ವಿಯಾಗಿ ಉಡಾವಣೆ ಗೊಂಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಇಸ್ರೋ ವಿಜ್ಞಾನಿಗಳನ್ನು ಕೊಂಡಾಡಿದ್ದಾರೆ. ಸಂಸತ್‌ ಭವನದ ತಮ್ಮ ಕಚೇರಿಯಲ್ಲಿರುವ ಟಿವಿಯಲ್ಲಿ ಉಡಾವಣೆಯ ನೇರಪ್ರಸಾರ ವೀಕ್ಷಿಸಿದರು. ಅನಂತರ ಅವರು ಇಸ್ರೋ ಅಧ್ಯಕ್ಷ ಕೆ. ಶಿವನ್‌ ಅವರಿಗೆ ಫೋನ್‌ ಮಾಡಿ ಅಭಿನಂದನೆ ಸಲ್ಲಿಸಿದರು. ದೇಶದ 130 ಕೋಟಿ ಭಾರತೀಯರಿಗೆ ಅತ್ಯಂತ ಹೆಮ್ಮೆಯ ಕ್ಷಣ. ಯೋಜನೆ ಉಡಾವಣೆಯ ಯಶಸ್ಸಿನಿಂದಾಗಿ ದೇಶದ ವಿಜ್ಞಾನಿಗಳ ಸಾಧನೆ ಜಗತ್ತಿಗೆ ತೋರಿಸಿದಂತಾಗಿದೆ ಎಂದು ಕೊಂಡಾಡಿದ್ದಾರೆ. ಕಳೆದ ವಾರ ಈ ಯೋಜನೆ ಯಲ್ಲಿ ಲೋಪಗಳು ಕಾಣಿಸಿಕೊಂಡು ಉಡಾವಣೆ ಮುಂದೂಡಲ್ಪಟ್ಟಿತ್ತು. ಆದರೆ, ವಿಜ್ಞಾನಿಗಳು ತಮ್ಮ ಅವಿರತ ಪರಿಶ್ರಮದಿಂದ ಉಡಾವಣೆಗೆ ಹಿನ್ನಡೆಯಾದ ತಾಂತ್ರಿಕ ಲೋಪವನ್ನು ಪತ್ತೆ ಹಚ್ಚಿ ಅದನ್ನು ಸರಿಪಡಿಸಿ ಒಂದೇ ವಾರದಲ್ಲಿ ಉಡಾವಣೆಗೊಳಿಸಲು ಸಾಧ್ಯ   ವಾಗುವಂತೆ ಮಾಡಿದರು. ದೈತ್ಯ ಪ್ರತಿಭೆಗಳು, ದೈತ್ಯ ಸಾಮರ್ಥ್ಯಗಳು ಹಾಗೂ ದೈತ್ಯ ಆತ್ಮವಿಶ್ವಾಸಗಳು ಒಂದೆಡೇ ಸೇರಿದರೆ ಎಂಥ ಮಹತ್ಕಾರ್ಯಗಳಾಗು ತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದಿದ್ದಾರೆ.

ಮುಂದಿನ ಗುರಿ “ಸೂರ್ಯ’!
ಚಂದ್ರಯಾನ-2 ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾದ ಅನಂತರ, ಸೂರ್ಯನ ಅಧ್ಯಯನ ಕೈಗೊಳ್ಳುವುದಾಗಿ ಇಸ್ರೋ ಹೇಳಿದೆ. ಸೂರ್ಯನ ಹೊರ ಮೇಲ್ಮೆ„ ಆದ ಕರೋನಾದ ಅಧ್ಯಯನಕ್ಕಾಗಿ 2020ರ ಮಧ್ಯಭಾಗದಲ್ಲಿ ಆದಿತ್ಯ-ಎಲ್‌1 ಎಂಬ ಉಪಗ್ರಹ ಹಾರಿಬಿಡಲಾಗುತ್ತದೆ ಎಂದು ಸಂಸ್ಥೆ ಹೇಳಿದೆ. “ಸೂರ್ಯನ ಕರೋನಾದಲ್ಲಿ ಶಾಖ ಹೇಗೆ ಉತ್ಪತ್ತಿಯಾಗುತ್ತದೆ ಎಂಬುದಕ್ಕೆ ವಿಜ್ಞಾನಿಗಳಿನ್ನೂ ಉತ್ತರ ಕಂಡುಕೊಂಡಿಲ್ಲ. ಹಾಗಾಗಿ, ಆ ಪ್ರಶ್ನೆಗೆ ಉತ್ತರ ಹುಡುಕಲು ಆದಿತ್ಯನನ್ನು ಕಳುಹಿಸಲು ನಿರ್ಧರಿಸಲಾಗಿದೆ’ ಎಂದಿರುವ ಇಸ್ರೋ, “ಕರೋನಾ ಅಧ್ಯಯನವು ಜಾಗತಿಕ ತಾಪಮಾನ ಸಮಸ್ಯೆ ನಿವಾರಣೆಗೆ ಹೊಸ ದಾರಿಗಳನ್ನು ತೋರಿಸಿಕೊಡಲಿದೆ’ ಎಂದಿದೆ.

ಸಾಕ್ಷಿಯಾದ 7,500 ಪ್ರೇಕ್ಷಕರು
ಶ್ರೀಹರಿಕೋಟಾದಲ್ಲಿ ಆಯೋಜಿಸಲಾಗಿದ್ದ “ಚಂದ್ರಯಾನ-2′ ಉಡಾವಣೆಯನ್ನು 7,500 ಜನರು ನೇರವಾಗಿ ವೀಕ್ಷಿಸಿದ್ದಾರೆ. ರಾಕೆಟ್‌ ಉಡಾವಣೆಯ ರೋಮಾಂಚಕತೆಯನ್ನು ಕಣ್ತುಂಬಿಕೊಳ್ಳಲು ಇಚ್ಛಿಸುವವರಿಗಾಗಿ ಇಸ್ರೋ, ತನ್ನ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕ ನೋಂದಣಿ ಪ್ರಕ್ರಿಯೆ ಆರಂಭಿಸಿತ್ತು. ಅದರಲ್ಲಿ, ದೇಶದ ನಾನಾ ಮೂಲೆ ಗಳಿಂದ 7,500 ಜನರು ನೋಂದಾವಣಿ ಮಾಡಿಕೊಂಡಿದ್ದರು. ಶ್ರೀಹರಿ ಕೋಟಾದಲ್ಲಿ ಇಸ್ರೋ ವತಿಯಿಂದ ಈ ಹಿಂದೆಯೇ ನಿರ್ಮಿಸಲಾಗಿರುವ 10,000 ಆಸನ ವ್ಯವಸ್ಥೆಯ ಗ್ಯಾಲರಿಯಲ್ಲಿ ಕುಳಿತ ವೀಕ್ಷಕರು ಚಂದ್ರ ಯಾನ-2 ಉಡಾವಣೆಯನ್ನು ನೇರವಾಗಿ ವೀಕ್ಷಿಸಿ ಪುಳಕಿತಗೊಂಡರು.

ಚಂದ್ರಯಾನ ಸಂಭ್ರಮದಲ್ಲಿ ಚಂದ್ರಕಾಂತ
ಪಶ್ಚಿಮ ಬಂಗಾಲದ ಮಧುಸೂದನ ಕುಮಾರ್‌ ಎಂಬ ರೈತನೊಬ್ಬನ ಮಗನಿಗೆ ಸೂರ್ಯಕಾಂತ ಎಂಬ ಹೆಸರಿ ಡಲು ನಿರ್ಧರಿಸಲಾಗಿತ್ತು. ಆದರೆ, ಅವರಿಗೆ ಪರಿಚಯ ವಿರುವ ಶಾಲಾ ಮಾಸ್ತರ್‌ ಒಬ್ಬರ ಸಲಹೆಯ ಮೇರೆಗೆ ಆತನಿಗೆ ಚಂದ್ರಕಾಂತ ಎಂದು ಹೆಸರಿಟ್ಟರು. ಕಾಕತಾಳೀಯ ಎಂಬಂತೆ ಅದೇ ಚಂದ್ರಕಾಂತ ಈಗ, “ಚಂದ್ರಯಾನ-2′ ಯೋಜನೆಯಲ್ಲಿ ಪ್ರಮುಖ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ. ಅವರ ಹೆತ್ತವರು, ತಮ್ಮ ಪುತ್ರನಿಗೆ ಚಂದ್ರನ ಹೆಸರಿಟ್ಟಿದ್ದಕ್ಕೂ ಸಾರ್ಥಕವಾಯಿತು ಎಂದು ಊರಿನಲ್ಲಿ ಹೆಮ್ಮೆ ಪಡುತ್ತಿದ್ದಾರೆ.

2001ರಲ್ಲಿ ಇಸ್ರೋ ಸೇರಿದ್ದ ಚಂದ್ರಕಾಂತ ಪ್ರಸ್ತುತ, ಇಸ್ರೋದ ಯು.ಆರ್‌. ರಾವ್‌ ಸ್ಯಾಟೆಲೈಟ್‌ ಸೆಂಟರ್‌ನ (ಯುಆರ್‌ಎಸ್‌ಸಿ) ಮುಖ್ಯಸ್ಥರಾಗಿದ್ದಾರೆ. ಈ ಹಿಂದೆ, ಚಂದ್ರಯಾನ-1, ಜಿಸ್ಯಾಟ್‌-12, ಆ್ಯಸ್ಟ್ರೋಸ್ಯಾಟ್‌ ಯೋಜನೆಗಳಲ್ಲಿ ಪ್ರಾಜೆಕ್ಟ್ ಮ್ಯಾನೇಜರ್‌ ಆಗಿ ಸೇವೆ ಸಲ್ಲಿಸಿದ್ದರು. ಚಂದ್ರಯಾನ-2ರಲ್ಲಿ ರೇಡಿಯೋ ಫ್ರೀಕ್ವೆನ್ಸಿ (ಆರ್‌ಎಫ್) ವ್ಯವಸ್ಥೆಯ ಮೇಲುಸ್ತುವಾರಿ ವಹಿಸಿದ್ದಾರೆ.
ಹೊಲದ ಕೆಲಸದಲ್ಲೇ ಮುಳುಗಿರುತ್ತಿದ್ದ ನಾನು ಒಂದು ದಿನವೂ ಆತನನ್ನು ಓದಿಸಲಿಲ್ಲ. ಕಷ್ಟಪಟ್ಟು ಆತನೇ ಓದಿ, ದೊಡ್ಡ ವಿಜ್ಞಾನಿಯಾಗಿದ್ದಾನೆ ಎಂದು ಅವರ ತಂದೆ ಮಧುಸೂದನ ಕುಮಾರ್‌ ಅವರು ಹೇಳುತ್ತಾರೆ.

ಚಂದ್ರಕಾಂತ ಅವರ ತಾಯಿ, ಸೋಮವಾರ ಬೆಳಗ್ಗೆ ಮನೆಗೆ ಫೋನು ಮಾಡಿದ್ದ ನನ್ನ ಮಗ (ಚಂದ್ರಕಾಂತ) ಮಧ್ಯಾಹ್ನ ಟಿವಿಯಲ್ಲಿ ಚಂದ್ರಯಾನ-2 ಯೋಜನೆಯ ಉಡಾವಣೆ ನೋಡು ಎಂದಿದ್ದ. ನಾವೆಲ್ಲಾ ಟಿವಿಯಲ್ಲಿ ರಾಕೆಟ್‌ ಉಡಾವಣೆ ನೋಡಿ ಖುಷಿಪಟ್ಟೆವು. ಅಂಥ ಬೃಹತ್‌ ಯೋಜನೆಯಲ್ಲಿ ನನ್ನ ಮಗ ಇದ್ದಾನೆ ಎಂಬುದೇ ನನಗೆ ಖುಷಿ ಎಂದು ಆನಂದಬಾಷ್ಪ ಸುರಿಸಿದ್ದಾರೆ.

“ಚಾಂದ್‌ ತಾರೆ ತೋಡ್‌ ಲಾವು, ಸಾರಿ ದುನಿಯಾ ಪರ್‌ ಮೈ ಚಾಹೂ’! ಇದನ್ನು ಸಾಧಿಸಲು ಹಲವಾರು ಗಂಟೆಗಳ ಕಷ್ಟ, ದೃಢತೆ, ನಂಬಿಕೆ ಅಗತ್ಯವಿದೆ. ಇಸ್ರೋ ತಂಡಕ್ಕೆ ಅಭಿನಂದನೆಗಳು.
ಶಾರುಖ್‌ ಖಾನ್‌, ನಟ

ಚಂದ್ರಯಾನ-2 ನಭಕ್ಕೆ ಹಾರಿದ್ದು ಭಾರತೀಯರೆಲ್ಲರಿಗೂ ಹೆಮ್ಮೆ ಮೂಡಿಸಿದೆ. 300 ಟನ್‌ ಉಪಗ್ರಹ ಹೊತ್ತೂಯ್ಯಬಲ್ಲ ಸಾಮರ್ಥ್ಯದ ಉಡಾವಣ ವಾಹನಕ್ಕೆ ಬಾಹುಬಲಿ ಎಂದು ಹೆಸರಿಟ್ಟಿರುವುದಕ್ಕೆ ಬಾಹುಬಲಿ ಚಿತ್ರತಂಡ ಹರ್ಷಿಸುತ್ತಿದೆ.
ಪ್ರಭಾಸ್‌, ತೆಲುಗು ನಟ

ಎಲ್ಲ ದೇಶವಾಸಿಗಳು ಚಂದ್ರಯಾನ ಯಶಸ್ವಿ ಉಡಾವಣೆಗಾಗಿ ಇಸ್ರೊ ವಿಜ್ಞಾನಿಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ಈ ಸಾಧನೆಗೈದ ವಿಜ್ಞಾನಿಗಳಿಗೆ ಅಭಿನಂದನೆ.
ಬೈಯ್ನಾಜಿ ಜೋಶಿ, ಆರ್‌ಎಸ್‌ಎಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next