Advertisement

Rabkavi Banhatti: ಸಂಭ್ರಮ ಸಡಗರದ ಶ್ರೀ ಕಾಡಸಿದ್ಧೇಶ್ವರರ ರಥೋತ್ಸವ

09:14 PM Sep 24, 2024 | Team Udayavani |

ರಬಕವಿ-ಬನಹಟ್ಟಿ: ಶ್ರೀ ಕಾಡಸಿದ್ಧೇಶ್ವರ ರಥೋತ್ಸವಕ್ಕೆ ಅದ್ಧೂರಿ ಮಂಗಳವಾರ ರಾತ್ರಿ 8.00ಕ್ಕೆ ಚಾಲನೆ ದೊರೆಯಿತು. ಅದಕ್ಕೂ ಮುಂಚೆ ವಿದ್ಯುತ್‌ದೀಪ ಹಾಗೂ ಅಪಾರ ಪ್ರಮಾಣದ ಹೂವುಗಳಿಂದ ಅಲಂಕೃತವಾದ ರಥಕ್ಕೆ (ತೇರಿಗೆ) ನಗರದ ಸಮಸ್ತ ಹಿರಿಯರು ಸಂಜೆ 6 ಗಂಟೆಗೆ ಪೂಜೆ ಸಲ್ಲಿಸಿ ಕಾಯಿ ಒಡೆಯುವುದರ ಮೂಲಕ ಜಾತ್ರೆಗೆ ಚಾಲನೆ ನೀಡಿದರು.

Advertisement

ಶ್ರೀ ಕಾಡಸಿದ್ಧೇಶ್ವರ ಮಹಾರಾಜ ಕಿ ಜೈ’ ಎಂಬ ಜಯಘೋಷಗಳ ಮಧ್ಯೆ ಜಾತ್ರೆಯ ಪ್ರಥಮ ದಿನ ಬಾನಂಗಳದಲ್ಲಿ ಹಾರಾಡಿದ ಪಟಾಕಿಗಳ ಸಂಭ್ರಮ, ಸಡಗರದ ನಡುವೆ ಅತಿ ವಿಜೃಂಭಣೆಯಿಂದ ನೆರವೇರಿತು.

ರಾಜ್ಯ ಮೂಲೆಗಳಿಂದ ಮತ್ತುಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯ ಹಾಗೂ ವಿದೇಶಗಳಿಂದ ಭಕ್ತರು ಆಗಮಿಸಿ ರಥೋತ್ಸವಕ್ಕೆ ಬೆಂಡು, ಬೆತ್ತಾಸು, ಉತ್ತತ್ತಿ ಎಸೆದು ಕೃತಾರ್ಥರಾದರು. ರಥೋತ್ಸವದ ಮುಂದೆ ಉಚ್ಚಾಯಿ, ನಂದಿಕೋಲ, ಸಂಬಾಳವಾದನ, ಕರಡಿ ಮಜಲು, ಶಹನಾಯಿ, ಡೊಳ್ಳು ಕುಣಿತ ಸೇರಿದಂತೆ ಹಲವು ಮಂಗಳವಾದ್ಯಗಳು ರಥೋತ್ಸವದ ಮೆರಗನ್ನು ಹೆಚ್ಚಿಸಿದವು. ಸುಮಾರು 1 ಗಂಟೆಗಳ ಕಾಲ ಮಂಗಳವಾರ ಪೇಟೆಯ ಪ್ರಮುಖ ರಸ್ತೆಯಲ್ಲಿ ಸಾಗಿ ಬಂತು.

ಪಟಾಕಿ ಸಡಗರ : ಉತ್ತರ ಕರ್ನಾಟಕದಲ್ಲಿ ಮದ್ದಿನ (ಪಟಾಕಿ)ಜಾತ್ರೆಯೆಂದೇ ಪ್ರಖ್ಯಾತವಾಗಿರುವ ಬನಹಟ್ಟಿ ಶ್ರೀ ಕಾಡಸಿದ್ಧೇಶ್ವರ ಜಾತ್ರೆಗೆ ಈ ಸಲವು ದೇಶದ್ಯಾಂತ ಚದುರಿ ಹೋಗಿದ್ದ ಭಕ್ತರು ಹಾಗೂ ಸ್ಥಳೀಯರು ಇಂದು ಮಧ್ಯಾಹ್ನ 3ಗಂಟೆಯಿಂದ ಅಂದಾಜು ಲಕ್ಷಾಂತರ ರೂಗಳ (ಪಟಾಕಿ)ಮದ್ದನ್ನು ಹಾರಿಸುವುದರ ಮೂಲಕ ತಮ್ಮ ಹರಕೆಯನ್ನು ಪೂರೈಸಿಕೊಂಡರು.

ಹರಿದು ಬಂದ ಜನಸಾಗರ : 3ದಿನಗಳ ಕಾಲ ನಡೆಯುವ ವೈಶಿಷ್ಟ್ಯ ಪೂರ್ಣ ಶ್ರೀ ಕಾಡಸಿದ್ಧೇಶ್ವರ ಜಾತ್ರಾ ರಥೋತ್ಸವ ಮತ್ತು ಪಟಾಕಿ ಹಾರಿಸುವುದನ್ನು ವೀಕ್ಷಿಸಲು ಸುತ್ತ ಮುತ್ತಲಿನ ರಬಕವಿ, ಮಹಾಲಿಂಗಪುರ, ರಾಮಪುರ, ಹೊಸೂರ, ಯಲ್ಲಟ್ಟಿ, ಆಸಂಗಿ ಆಸ್ಕಿ, ಜಗದಾಳ, ನಾವಲಗಿ, ಚಿಮ್ಮಡ, ಹನಗಂಡಿ, ಹಳಿಂಗಳಿ, ತೇರದಾಳ, ಜಮಖಂಡಿ ಸೇರಿದಂತೆ ಹತ್ತಾರು ಊರುಗಳು, ವಿವಿಧ ತಾಲೂಕು, ಜಿಲ್ಲೆ, ಹಾಗೂ ರಾಜ್ಯಗಳಿಂದ ಭಕ್ತ ಜನಸಾಗರವೇ ಹರಿದು ಬಂದಿತ್ತು. ರಥೋತ್ಸವದ ನಿಮಿತ್ತ ನಗರದ ಎಲ್ಲ ರಸ್ತೆಗಳು ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದವು.

Advertisement

ಡೀಡ್ ನಮಸ್ಕಾರ: ಜಾತ್ರೆಯ ನಿಮಿತ್ತ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಳೆಯ ನಡುವೆಯೂ ಸೋಮವಾರ ರಾತ್ರಿ 12ರಿಂದ ಮಂಗಳವಾರ ಮುಂಜಾನೆವರೆಗೂ ಮಕ್ಕಳು, ಮಹಿಳೆಯರು. ವಯಸ್ಕರು ಸೇರಿದಂತೆ ಸಾವಿರಾರು ಭಕ್ತರು ತಮ್ಮ ತಮ್ಮ ಮನೆಗಳಿಂದ ಡೀಡ್ ನಮಸ್ಕಾರ ಹಾಕಿದರು.

ಹೂವಿನ ಮಾರಾಟ : ಜಾತ್ರೆಯಲ್ಲಿ ಮದ್ದು ಸುಡುವುದರ ಜೊತೆಗೆ ಅಪಾರ ಪ್ರಮಾಣದ ಹೂಮಾಲೆಗಳನ್ನು ರಥೋತ್ಸವದಲ್ಲಿ ಬಾಗಿಯಾಗುವ ರಥಕ್ಕೆ ಅರ್ಪಿಸುತ್ತಾರೆ. ಜಾತ್ರೆಯ ಪ್ರಯುಕ್ತ ಹೂವಿನ ಮಾರಾಟ ತುಂಬಾ ಚೆನ್ನಾಗಿತ್ತು. ಲಕ್ಷಾಂತರ ರೂಗಳ ಹೂವಿನ ಮಾರಾಟ ನಡೆಯಿತು. ಪ್ರತಿಯೊಬ್ಬರು ರಥದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಕಾಡಸಿದ್ದೇಶ್ವರರಿಗೆ ಹೂವಿನ ಹಾರ ಮತ್ತು ಕಂಠಮಾಲೆಗಳನ್ನು ಅರ್ಪಿಸುತ್ತಿರುವುದು ಕಂಡು ಬಂತು.

ಗಣ್ಯರ ಭೇಟಿ: ನಗರದ ಆರಾಧ್ಯ ದೈವ ಶ್ರೀ ಕಾಡಸಿದ್ಧೇಶ್ವರ ಜಾತ್ರೆಗೆ ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಸಿದ್ದು ಸವದಿ, ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ, ತಹಶೀಲ್ದಾರ ಗಿರೀಶ ಸ್ವಾದಿ, ಮಂಗಳವಾರ ಪೇಟೆ ದೈವ ಮಂಡಳಿ ಚೇರಮನ್ ಶ್ರೀಶೈಲ ದಭಾಡಿ, ಡಾ.ಎಂ.ಎಸ್. ದಡ್ಡೇನವರ, ಚಂದ್ರಶೇಖರ ಶಿವಪೂಜಿ, ನಗರಾಧ್ಯಕ್ಷೆ ವಿದ್ಯಾ ಪ್ರವೀಣ ದಭಾಡಿ, ಶ್ರೀಶೈಲ ಬೀಳಗಿ, ಸ್ಥಾಯಿ ಸಮಿತಿ ಚೇರಮನ್ನರಾದ ಅರುಣ ಬುದ್ನಿ, ಸುರೇಶ ಚಿಂಡಕ, ಭೀಮಶಿ ಮಗದುಮ್, ದಾನಪ್ಪ ಹುಲಜತ್ತಿ, ಸಿದ್ಧನಗೌಡ ಪಾಟೀಲ, ಮಲ್ಲಿಕಾರ್ಜುನ ತುಂಗಳ, ರಾಜು ಭದ್ರನ್ನವರ, ಪ್ರಭಾಕರ ಮೊಳೇದ, ಮಲ್ಲಣ್ಣ ಬಾವಲತ್ತಿ, ಮಲ್ಲಪ್ಪ ಜನವಾಡ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ ಶ್ರೀ ಕಾಡಸಿದ್ಧೇಶ್ವರರ ಆಶೀರ್ವಾದ ಪಡೆದರು.

ಸೂಕ್ತ ಬಂದೋಬಸ್ತ್: ಶ್ರೀ ಕಾಡಸಿದ್ಧೇಶ್ವರರ ಜನದಟ್ಟಣೆಯ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬನಹಟ್ಟಿ ವೃತ್ತ ನೀರಿಕ್ಷಕರಾದ ಸಂಜೀವ ಬಳಗಾರ, ಪಿಎಸ್‌ಐ ಶಾಂತಾ ಹಳ್ಳಿ, ವಿಜಯ ಕಾಂಬಳೆ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಿದ್ದರು ಮತ್ತು ದೇವಸ್ಥಾನ ಹಾಗೂ ರಥೋತ್ಸವದ ಸುತ್ತ ಮುತ್ತ ಸುಲಭವಾಗಿ ದೇವರ ದರ್ಶನ ಪಡೆಯಲು ಭಕ್ತಾಧಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next