Advertisement

ಮೋದಿ, ಬೊಮ್ಮಾಯಿ, ಬೆಲೆಯೇರಿಕೆ ಈ ಮೂರೂ ದೇಶಕ್ಕೆ ಅಪಾಯಕಾರಿ: ರಣದೀಪ್ ಸಿಂಗ್ ಸುರ್ಜೇವಾಲಾ

01:42 PM Oct 20, 2021 | Team Udayavani |

ಹಾವೇರಿ:   ಬೆಳಗ್ಗೆ ‌ಎದ್ದು ದೇವರಿಗೆ ಕೈ ಮುಗಿವ ಮೊದಲು  ಗ್ಯಾಸ್ ಸಿಲಿಂಡರ್, ಬೈಕಿಗೆ‌ ಪೂಜೆ ಮಾಡಿ ಇನ್ನೊಂದು ಸ್ವಲ್ಪ ಹೆಚ್ಚು ಮೈಲೇಜ್ ಬರಲಿ‌ ಎನ್ನುವ ಪರಿಸ್ಥಿತಿ ಬಂದಿದೆ ಎಂದು  ಕಾಂಗ್ರೆಸ್ ರಾಜ್ಯ ಉಸ್ತುವಾರಿ,ಎಐಸಿಸಿ ಪ್ರಧಾನ  ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಟೀಕಿಸಿದರು.

Advertisement

ಹಾನಗಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ,  ಬೊಮ್ಮಾಯಿ ಕಾರಣದಿಂದ ಬೆಲೆಯೇರಿಕೆಯಿಂದಾಗಿ ದೇಶದ, ರಾಜ್ಯದ ಯುವಜನತೆ ಇಂದು ತೊಂದರೆ ಅನುಭವಿಸುತ್ತಿದ್ದಾರೆ.ಮೋದಿ, ಮೆಹೆಂಗಾಯಿ ಎರಡೂ ದೇಶಕ್ಕೆ ಹಾನಿಕಾರಕವಾಗಿದೆ ಎಂದು ಆರೋಪಿಸಿದರು.

ಪೆಟ್ರೋಲ್ 110, ಡೀಸೆಲ್ 101, ಗ್ಯಾಸ್ 950  ರೂ. ಸ್ವಾತಂತ್ರ್ಯ ಭಾರತದಲ್ಲಿ ಅತಿ ಹೆಚ್ಚಾಗಿದೆ. ಇದೇ ರೀತಿ ಸಿಮೆಂಟ್, ಕಬ್ಬಿಣ, ಎಂಸ್ಯಾಂಡ್, ಅಡುಗೆ ಎಣ್ಣೆ, ಬೇಳೆಕಾಳುಗಳು ಬೆಲೆ‌ ಗಗನಕ್ಕೇರಿದೆ. ಮ್ಯಾಗಿ ಪ್ಯಾಕೇಟ್ ನಿಂದಲೂ 10 ಗ್ರಾಂ ಕಡಿಮೆ ಮಾಡಲಾಗಿದೆ. ಪೆಟ್ರೋಲ್, ಡೀಸೆಲ್ ತೆರಿಗೆಯಿಂದ ಕೇಂದ್ರ ಸರ್ಕಾರ  80 ಲಕ್ಷ ಕೋಟಿ ರೂ. ಕಳೆದ ಏಳು ವರ್ಷಗಳಲ್ಲಿ ಕೇಂದ್ರ‌ ಸರ್ಕಾರ ತೆರಿಗೆ ಮೂಲಕ ಲೂಟಿ ಮಾಡಿದೆ ಎಂದು ಟೀಕಿಸಿದರು.

ಕೋವಿಡ್ ಸಂದರ್ಭದಲ್ಲಿ ಜನ ಪಡಬಾರದ ಸಂಕಷ್ಟ ‌ಪಟ್ಟರು. ಸರ್ಕಾರ ಬಿಡಿಗಾಸು ನೀಡಿಲ್ಲ. ಆದರೆ, ಚುನಾವಣೆಯಲ್ಲಿ ಸೋತಿದ್ದರೂ ಕೂಡ ಶ್ರೀನಿವಾಸ ಮಾನೆ ಅವರು ಆಕ್ಸಿಜನ್, ಹಣ ಸಹಾಯ ಮಾಡಿದರು. ಇದಕ್ಕಾಗಿ ಸ್ಥಳೀಯರು‌ ಇವರನ್ನು ಆಪತ್ಭಾಂದವ ಎಂದು ಕರೆಯುತ್ತಾರೆ. ಚುನಾವಣೆ ಬಳಿಕ ಜನನಾಯಕ ಎಂದು ಕರೆಸಿಕೊಳ್ಳುತ್ತಾರೆ ಎಂದರು.

ಸಂಗೂರು‌ ಸಕ್ಕರೆ ಕಾರ್ಖಾನೆ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಕಾರಣದಿಂದಾಗಿ ನಷ್ಟ ಆಯಿತು.  ರೈತರ ಕಿಸೆಗೆ ಹಣ ಹೋದರೆ ಮಾತ್ರ ಅರ್ಥ ವ್ಯವಸ್ಥೆ ಬಲಗೊಳ್ಳುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕಬ್ಬಿಗೆ‌ ಹೆಚ್ಚಿನ ಬೆಲೆ ನಿಗದಿ ಮಾಡಿತ್ತು. ಆದರೆ ಬಿಜೆಪಿಗೆ‌ ಏಕೆ ಸಾಧ್ಯವಾಗುತ್ತಿಲ್ಲಎಂದು ಪ್ರಶ್ನಿಸಿ, ಸಂಪೂರ್ಣ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಹೀಗಾಗಿ ಯುವಕರು ಬದಲಾವಣೆಗೆ‌ ಪಣ ತೊಡಬೇಕು ಎಂದರು.

Advertisement

ಬಿಜೆಪಿಯ ರಾಜ್ಯಾಧ್ಯಕ್ಷರನ್ನು ಅವರ ಪಕ್ಷದಲ್ಲಿ ಯಾರೂ‌‌ ಮಾತನಾಡಿಸುತ್ತಿಲ್ಲ. ಹೀಗಾಗಿ ಅವರು  ಮಾನಸಿಕ ಸ್ಥಿಮಿತ  ಕಳೆದುಕೊಂಡಿದ್ದಾರೆ. ಅದಾನಿ ಬಂದರಿನಿಂದ ಬಂದ ಡ್ರಗ್ಸನ್ನು‌ ಅವರು ಪಡೆದಿದ್ದಾರೆ ಎನ್ನಿಸುತ್ತಿದೆ. ಅವರನ್ನು ಮಾನಸಿಕ ಪುನರ್ವಸತಿ  ಕೇಂದ್ರಕ್ಕೆ ಸೇರಿಸಬೇಕಿದೆ. ಕೌನ್ಸೆಲಿಂಗ್ ಮಾಡಿಸಬೇಕಾಗಿದೆ ಎಂದು ಕಟೀಲ ವಿರುದ್ದ ಹರಿಹಾಯ್ದರು.

ಕಟೀಲ ಹೇಳಿಕೆಗೆ  ಎಚ್.ಕೆ.ಪಾಟೀಲ್ ತಿರುಗೇಟು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಅವರು ರಾಷ್ಟ್ರಾಧ್ಯಕ್ಷ ‌ರಾಹುಲ್ ಗಾಂಧಿ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇದು ಅವರ ಬೌದ್ಧಿಕ ದಿವಾಳಿತನ ,  ವಿಕೃತ ಮನಸ್ಸನ್ನು ತೋರ್ಪಡಿಸುತ್ತದೆ. ಸಾರ್ವಜನಿಕ ಜೀವನದಲ್ಲಿ ತಮ್ಮ ಮರ್ಯಾದೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಎಚ್.ಕೆ.ಪಾಟೀಲ್ ತಿರುಗೇಟು ನೀಡಿದರು.

ಬಿಜೆಲಿಗೆ ಸೋಲಿನ ಭಯ ಶುರುವಾಗಿದೆ: ಡಿ.ಕೆ.ಶಿವಕುಮಾರ್ ಬಿಜೆಪಿಗರಿಗೆ ಮತ ಕೇಳಲು ಶಕ್ತಿ ಇಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಕಾಂಗ್ರೆಸ್ ಸೈನ್ಯವಿದೆ. ಕಾಂಗ್ರೆಸ್ ಕುಟುಂಬದ ತ್ಯಾಗಕ್ಕೆ ಬಿಜೆಪಿಯವರನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ನಮ್ಮ ಪಕ್ಷ ಬದುಕಿದೆ. ಸತ್ತಿಲ್ಲ. ಎಲೆಕ್ಷನ್ ಆಗಲಿ, ಕೇಸರಿ ಬಗ್ಗೆ ನಮಗೂ ಗೌರವ ಇದೆ. ಈ ಮೆಂಟಲ್ ಬಗ್ಗೆ ನಾವು ಉತ್ತರ ಕೊಡುತ್ತೇವೆ ಎಂದು ಪರೋಕ್ಷವಾಗಿ ಕಟೀಲಿಗೆ‌ ಟಾಂಗ್ ನೀಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ‌ ಅಧಿಕಾರಕ್ಕೆ ಬಂದ ಬಳಿಕ ಜನರ ಬದುಕು‌ ದುರ್ಬರವಾಗಿದೆಯೊ ಇಲ್ಲವೊ? ಆಕ್ರೋಶಗೊಂಡ ಮತದಾರರು ಮತದಾನದ ಮೂಲಕ ಉತ್ತರಿಸಿ ಎನ್ನುವುದು ನಮ್ಮ ಒತ್ತಾಯ ಎಂದರು.

ಸಿಎಂ ಬೊಮ್ಮಾಯಿ ಅವರ ಕ್ಷೇತ್ರವಾದ ಕಾರಣ ಉಪಚುನಾವಣೆಯಲ್ಲಿ ವೈಯಕ್ತಿಕ ಟಾರ್ಗೆಟ್ ಮಾಡಲಾಗುತ್ತದೆ. ಆ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸೋಲಿನ ಭಯ ಕಾಡುತ್ತಿರುವುದೇ ಇದಕ್ಕೆಲ್ಲ ಕಾರಣ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಅಂಡಮಾನ್ ಸಂಸದ ಕುಲದೀಪ್ ರಾಯ್ ಶರ್ಮಾ, ರಾಜ್ಯಸಭೆ ಸದಸ್ಯ ಎಲ್ ಹನುಮಂತಯ್ಯ, ಮಾಜಿ ಸಚಿವರಾದ ಎ.ಎಂ. ಹಿಂಡಸಗೇರಿ, ಅಲ್ಲಂ ವೀರಭದ್ರಪ್ಪ, ಕೆ.ಬಿ. ಕೋಳಿವಾಡ, ಮನೋಹರ್ ತಹಶೀಲ್ದಾರ್, ಎಚ್. ಆಂಜನೇಯ, ಎಂ.ಆರ್. ಸೀತಾರಾಂ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next