Advertisement

Rameshwaram ಕೆಫೆ ಸ್ಫೋಟ ಆರೋಪಿಗಳು ಶೀಘ್ರ ಬೆಂಗಳೂರಿಗೆ: ಪರಮೇಶ್ವರ್‌

10:29 PM Apr 12, 2024 | Team Udayavani |

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸಿಕ್ಕಿ ಬಿದ್ದಿರುವ ಅಬ್ದುಲ್‌ ಮತೀನ್‌ ತಾಹಾ ಮತ್ತು ಮುಸಾವೀರ್‌ ಹುಸೇನ್‌ ಶಾಜೀಬ್‌ನನ್ನು ಪಶ್ಚಿಮಬಂಗಾಲದಿಂದ ಬೆಂಗಳೂರಿಗೆ ಕರೆತರುವ ಪ್ರಕ್ರಿಯೆಗಳು ನಡೆದಿದ್ದು, ಅತಿ ಶೀಘ್ರದಲ್ಲೇ ಬೆಂಗಳೂರಿಗೆ ಬರಬಹುದು ಎಂದು ಗೃಹಸಚಿವ ಡಾ| ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

Advertisement

ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆರೋಪಿಗಳ ಬಂಧನವನ್ನು ಎನ್‌ಐಎ ಅಧಿಕಾರಿಗಳು ಖಚಿತಪಡಿಸಿದ್ದು, ಮುಂದಿನ ತನಿಖೆಯಲ್ಲಿ ಇನ್ನಷ್ಟು ಮಾಹಿತಿ ಸಿಗಲಿದೆ ಎಂದರು.

ತನಿಖೆ ಸಂದರ್ಭದಲ್ಲಿ ನಮ್ಮ ಪೊಲೀಸರು ಸಿಸಿ ಕೆಮರಾ ದೃಶ್ಯಾವಳಿ ಪರಿಶೀಲಿಸಿ, ಆತ ಧರಿಸಿದ್ದ ಬಟ್ಟೆ, ಟೋಪಿ ಸಹಿತ ಅನೇಕ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಎನ್‌ಐಎ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದರು.

ಅಲ್ಲದೆ ಇದೇ ವ್ಯಕ್ತಿಗಳು ಶಿವಮೊಗ್ಗ ಸ್ಫೋಟ ಪ್ರಕರಣದಲ್ಲೂ ಭಾಗಿಯಾಗಿದ್ದರು ಎಂಬ ಗುಮಾನಿ ಇತ್ತು. ತೀರ್ಥಹಳ್ಳಿಯವರು ಎಂಬ ಮಾಹಿತಿ ಇತ್ತು. ಎಲ್ಲ ಮಾಹಿತಿಯನ್ನೂ ಎನ್‌ಐಎ ಅಧಿಕಾರಿಗಳಿಗೆ ನೀಡಿದ್ದರು ಎಂದು ಹೇಳಿದರು.

ಈ ಆರೋಪಿಗಳು ಕಳೆದ ನಾಲ್ಕೂವರೆ ವರ್ಷಗಳಿಂದ ಬೇರೆ ಬೇರೆ ಪ್ರಕರಣಗಳಲ್ಲಿ ತಪ್ಪಿಸಿಕೊಂಡು ಓಡಾಡುತ್ತಿದ್ದರು. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಇಷ್ಟು ಶೀಘ್ರವಾಗಿ ಹಿಡಿಯುವ ಕೆಲಸವನ್ನು ನಮ್ಮ ಪೊಲೀಸರು ಮತ್ತು ಎನ್‌ಐಎ ಅಧಿಕಾರಿಗಳು ಮಾಡಿದ್ದಾರೆ. ಇದೊಂದು ಉತ್ತಮ ಕೆಲಸ, ಅಧಿಕಾರಿಗಳಿಗೆ ರಾಜ್ಯ ಸರಕಾರದ ಪರವಾಗಿ ಅಭಿನಂದನೆ ತಿಳಿಸುತ್ತೇನೆ ಎಂದರು.

Advertisement

ಎನ್‌ಐಎ ತನಿಖೆಯೋ? ಪೊಲೀಸರಿಂದ ತನಿಖೆಯೋ?
ಯಾವ ಉದ್ದೇಶಕ್ಕೆ ಈ ಕೃತ್ಯ ಮಾಡಿದ್ದಾರೆ? ಯಾರು ಮಾಡಿದ್ದಾರೆ? ಯಾರು ಮಾಡಿಸಿದ್ದಾರೆ ಎಂಬುದೆಲ್ಲ ತನಿಖೆಯ ಬಳಿಕ ಹೊರಬರುತ್ತದೆ. ಅಲ್ಲಿಯವರೆಗೆ ಕಾಯಬೇಕು ಎಂದು ಪರಮೇಶ್ವರ್‌ ಹೇಳಿದರು. ಒಂದು ವೇಳೆ ಯಾವುದಾದರೂ ಸಂಘಟನೆ ಜತೆ ಹೊಂದಿಕೊಂಡು ಕೃತ್ಯ ಎಸಗಿದ್ದರೆ ಎನ್‌ಐಎ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮುಂದಿನ ನಿರ್ಣಯಗಳನ್ನು ಮಾಡಲಿದೆ. ತನಿಖೆ ಯಾವ ರೀತಿ ಮುಂದುವರಿಯುತ್ತದೆ ಎಂಬುದು ಗೊತ್ತಿಲ್ಲ. ಅಂತಾರಾಷ್ಟ್ರೀಯ ಸಂಪರ್ಕ ಹಾಗೂ ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಇರುವ ಪ್ರಕರಣವಾದರೆ ಎನ್‌ಐಎ ತನಿಖೆ ಮುಂದುವರಿಸುತ್ತದೆ. ನಮ್ಮ ಪೊಲೀಸರು ರಾಜ್ಯಕ್ಕೆ ಸೀಮಿತವಾಗಿ ತನಿಖೆ ನಡೆಸುತ್ತಾರೆ ಎಂದು ತಿಳಿಸಿದರು.

42 ದಿನಗಳ ಬೇಟೆ; 1,000
ಸಿಸಿಟಿವಿಗಳ ಪರಿಶೀಲನೆ!
ಬಾಂಬ್‌ ಸ್ಫೋಟದ ಬಳಿಕ ಶಂಕಿತ ಉಗ್ರನ ಮುಖ ಮುಚ್ಚಿದ ಸಿಸಿಟಿವಿ ದೃಶ್ಯಾವಳಿ ಬಿಟ್ಟು ಯಾವುದೇ ಮಾಹಿತಿ ಇರಲಿಲ್ಲ. ಮೊದಲಿಗೆ ಬೆಂಗಳೂರು ಪೊಲೀಸರು ಬಳಿಕ ಎನ್‌ಐಎ ಅಧಿಕಾರಿಗಳು ಒಂದೊಂದೇ ಜಾಡು ಹಿಡಿದು, ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖಾಧಿಕಾರಿಗಳು 1,000 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಮಾಹಿತಿಯನ್ನು ಕಲೆ ಹಾಕಿದ್ದರು. ಇವರಿಬ್ಬರು ರಾಜ್ಯದಿಂದ ರಾಜ್ಯಕ್ಕೆ ಪದೇಪದೆ ಸ್ಥಳಗಳನ್ನು ಬದಲಾಯಿಸುತ್ತಾ, ಹೆಚ್ಚು ತಪಾಸಣೆ ಇಲ್ಲದ ಗೆಸ್ಟ್‌ ಹೌಸ್‌ ಮತ್ತು ಚಿಕ್ಕಪುಟ್ಟ ಖಾಸಗಿ ಲಾಡ್ಜ್ಗಳಲ್ಲಿ ವಾಸಿಸುತ್ತಿದ್ದರು. ಸ್ಫೋಟದ ಮುಂಚೆಗೂ ಅವರು ತಿಂಗಳ ಕಾಲ ಚೆನ್ನೈಯಲ್ಲಿ ಉಳಿದುಕೊಂಡಿದ್ದರು.

ಬೇಸ್‌ ಬಾಲ್‌ ಟೋಪಿ ನೀಡಿದ ಸುಳಿವು!
ಕೆಫೆಯಲ್ಲಿ ಬಾಂಬ್‌ ಇಟ್ಟಿದ್ದ ವ್ಯಕ್ತಿಯು ಬೇಸ್‌ ಬಾಲ್‌ ಟೋಪಿ ಧರಿಸಿದ್ದು ಸಿಸಿ ಕೆಮರಾದಲ್ಲಿ ದಾಖಲಾಗಿತ್ತು. ಈ ಟೋಪಿಯು ಶಂಕಿತರ ಕುರಿತು ಸಾಕಷ್ಟು ಮಾಹಿತಿ ಕಲೆ ಹಾಕಲು ಕಾರಣವಾಯಿತು. ಕೆಫೆಯಿಂದ ಸುಮಾರು 3 ಕಿ.ಮೀ. ದೂರದಲ್ಲಿ ಆರೋಪಿ ಬಟ್ಟೆ ಬದಲಿಸಿದ್ದ. ಅದೇ ಸ್ಥಳದಲ್ಲಿ ಈ ಟೋಪಿ ದೊರೆತಿತ್ತು. 10 ನಂಬರ್‌ ಹೊಂದಿದ್ದ ಈ ಬ್ರಾಂಡೆಡ್‌ ಟೋಪಿಯನ್ನು ಆರೋಪಿಯು ತಮಿಳುನಾಡಿನ ಚೆನ್ನೈಯ ಮಾಲೊಂದರಿಂದ ಖರೀದಿಸಿದ್ದ. ವಿಶೇಷ ಎಂದರೆ, ಈ ಟೋಪಿ ಲಿಮಿಟೆಡ್‌ ಎಡಿಷನ್‌ ಉತ್ಪನ್ನವಾಗಿತ್ತು. ಭಾರತದಲ್ಲಿ ಈವರೆಗೆ 400 ಈ ರೀತಿಯ ಟೋಪಿಗಳನ್ನು ಮಾತ್ರವೇ ಮಾರಾಟ ಮಾಡಲಾಗಿತ್ತು. ಟೋಪಿ ಮಾರಾಟದ ಸ್ಟೋರ್‌ ಸಿಸಿಟಿವಿ ಪರಿಶೀಲಿಸಿದಾಗ, ಜನವರಿ ತಿಂಗಳಲ್ಲಿ ಇಬ್ಬರು ವ್ಯಕ್ತಿಗಳು ಸೇರಿ ಖರೀದಿಸಿರುವುದು ತಿಳಿಯಿತು. ಆ ಸ್ಟೋರ್‌ ಸಿಸಿಟಿವಿ ದೃಶ್ಯಗಳನ್ನು ಮತ್ತು ಬೆಂಗಳೂರು ಬಿಎಂಟಿಸಿ ಬಸ್‌ನಲ್ಲಿ ದಾಖಲಾದ ಸಿಸಿಟಿವಿ ದೃಶ್ಯಗಳನ್ನು ವಿಶ್ಲೇಷಣೆ ಮಾಡಲಾಯಿತು. ಆಗ ಪೊಲೀಸರಿಗೆ ಶಂಕಿತರ ಮಾಹಿತಿ ನಿಖರವಾಗಿ ದೊರೆಯಿತು. ಇದೇ ಮುಂದೆ, ಶಂಕಿತರನ್ನು ಸೆರೆ ಹಿಡಿಯಲು ದಾರಿ ತೋರಿಸಿತು.

ಕ್ರಿಪ್ಟೋ ಕರೆನ್ಸಿ ಬಳಸುತ್ತಿದ್ದ ಮಾಸ್ಟರ್‌ ಮೈಂಡ್‌
ದೇಶದಲ್ಲಿ ಉಗ್ರ ಕೃತ್ಯಕ್ಕೆ ಆರ್ಥಿಕ ನೆರವು ಒದಗಿಸಲು ಮಾಸ್ಟರ್‌ ಮೈಂಡ್‌ ತಾಹಾ ಕ್ರಿಪ್ಟೋ ಕರೆನ್ಸಿ ಬಳಸುತ್ತಿದ್ದ ಎನ್ನಲಾಗಿದೆ. ಕೆಫೆ ನ್ಪೋಟ ಪ್ರಕರಣದಲ್ಲಿ ಬಂಧಿತನಾಗಿರುವ ಮತ್ತೂಬ್ಬ ಆರೋಪಿ ಮುಜಾಮಿಲ್‌ ಶರೀಫ್ಗೆ ಕ್ರಿಪ್ಟೋಕರೆನ್ಸಿ ವರ್ಗಾಯಿಸಿದ್ದ. ಮುಜಾಮಿಲ್‌ ಈ ನೆರವು ಬಳಸಿಕೊಂಡು ಮಾ. 1ರಂದು ಬಾಂಬ್‌ ಸ್ಫೋಟ ನಡೆಸಿದ ವ್ಯಕ್ತಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದ. ಒಟ್ಟಾರೆ 3 ಲಕ್ಷ ರೂ.ಗಳ ವಹಿ ವಾಟು ಕ್ರಿಪ್ಟೋ ಕರೆನ್ಸಿ ಮೂಲಕ ನಡೆ ದಿತ್ತು ಎನ್ನ ಲಾ ಗಿದೆ. ಮಾಸ್ಟರ್‌ವೆುçಂಡ್‌ ತಾಹಾ, ಉಗ್ರ ಕೃತ್ಯಕ್ಕೆ ಹುಡುಗರನ್ನು ನೇಮಕ ಮಾಡಿಕೊಳ್ಳಲು ಬೇರೆಯವರ ಗುರುತುಗಳನ್ನು ಕಳುವು ಮಾಡಿ, ನಕಲಿ ಆಧಾರ್‌ಗಳನ್ನು ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ಸ್ಫೋಟದ ದಿನದಿಂದ ಇಲ್ಲಿಯವರೆಗೆ
ಮಾ. 1: ಬೆಂಗಳೂರು ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ.
ಮಾ.2: ರಾಜ್ಯಾದ್ಯಂತ ಪೊಲೀಸರು ಹೈ ಅಲರ್ಟ್‌, ಬಿಗಿ ಬಂದೋಬಸ್ತ್
ಮಾ.3: ಸಿಸಿ ಕೆಮರಾದಲ್ಲಿ ಶಂಕಿತ ಆರೋಪಿಯ ಚಹರೆ, ಚಲನವಲನ ದೃಶ್ಯ ಸೆರೆ.
ಮಾ.3: ಪ್ರಕರಣದ ತನಿಖೆ ಜವಾಬ್ದಾರಿ ಎನ್‌ಐಎಗೆ.
ಮಾ.4: ಐಸಿಸ್‌ ಭಯೋತ್ಪಾದಕ ಸಂಘಟನೆಯ ಕೈವಾಡವಿರುವ ಶಂಕೆ.
ಮಾ.7: ಶಂಕಿತರ ಸಂಪರ್ಕದಲ್ಲಿದ್ದ ಮೂವರು ಬಳ್ಳಾರಿಯಲ್ಲಿ ಎನ್‌ಐಎ ವಶಕ್ಕೆ.
ಮಾ.9: ರಾಮೇಶ್ವರಂ ಕೆಫೆ ಮತ್ತೆ ಗ್ರಾಹಕರಿಗೆ ಮುಕ್ತ.
ಮಾ.9: ಎನ್‌ಐಎಯಿಂದ ಶಂಕಿತ ಮುಸಾವೀರ್‌ ಓಡಾಡುವ ಸಿಸಿ ಕೆಮರಾ ದೃಶ್ಯ ಬಿಡುಗಡೆ.
ಮಾ.13: ಬಳ್ಳಾರಿಯಲ್ಲಿ ಶಂಕಿತ ಆರೋಪಿಯ ಚಲನವಲನ ಸೆರೆ
ಮಾ.28: ಶಂಕಿತರಿಗೆ ಬಾಂಬ್‌ ತಯಾರಿಕೆಗೆ ಕಚ್ಚಾ ವಸ್ತು ಕೊಟ್ಟಿದ್ದ ಚಿಕ್ಕಮಗಳೂರಿನ ಮುಜಾಮಿಲ್‌ ಎನ್‌ಐಎ ವಶಕ್ಕೆ.
ಮಾ.29: ಶಂಕಿತರಿಬ್ಬರ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ ಎನ್‌ಐಎ.
ಎ.12: ಶಂಕಿತ ಮುಸಾವೀರ್‌ ಹುಸೇನ್‌ ಶಾಜೀಬ್‌ ಹಾಗೂ ಪ್ರಕರಣದ ಸೂತ್ರಧಾರ ಅಬ್ದುಲ್‌ ಮತೀನ್‌ ತಾಹಾ ಬಂಧನ.

ಭಯೋತ್ಪಾದನೆ ಕೈ ಪಾಲಿನ ಚುನಾವಣ ವಿಷಯ: ಶೋಭಾ
ಇದೇ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಪ್ರತಿಕ್ರಿಯಿಸಿದ್ದು, ಭಯೋತ್ಪಾದನೆ ವಿಚಾರ ನಮಗೆ ಚುನಾವಣೆ ವಿಚಾರ ಅಲ್ಲ. ಅದೇನಿದ್ದರೂ ಕಾಂಗ್ರೆಸ್‌ಗೆ ಚುನಾವಣ ವಿಷಯವಾಗಿದೆ. ಇದು ದೇಶ ರಕ್ಷಣೆಯ ವಿಷಯ. ಇದರಲ್ಲಿ ಕಾಂಗ್ರೆಸ್‌, ಬಿಜೆಪಿ ಎಂಬುದೆಲ್ಲ ಇಲ್ಲ. ಭಯೋತ್ಪಾದನೆಗೆ ರಾಜ್ಯ, ಜಾತಿ ಯಾವುದೂ ಇಲ್ಲ. ಇದನ್ನು ಅರ್ಥ ಮಾಡಿಕೊಂಡು ಭಯೋತ್ಪಾದನೆ ವಿರುದ್ಧ ಎಲ್ಲರೂ ಹೋರಾಡಬೇಕು ಎಂದು ಆಗ್ರಹಿಸಿದರು.ಕರ್ನಾಟಕ ಭಯೋತ್ಪಾದನೆಯ ಕೇಂದ್ರ ಸ್ಥಾನವಾಗಿದೆ. ಅದಕ್ಕಾಗಿ ತರಬೇತಿ ಸಹ ಆಗುತ್ತಿದೆ. ಪಿಎಫ್ಐ, ಎಸ್‌ಡಿಪಿಐನಂತಹ ಸಂಘಟನೆಗಳನ್ನು ರಾಜ್ಯ ಕಾಂಗ್ರೆಸ್‌ ಸರಕಾರ ಬೆಂಬಲಿಸಿದ್ದೇ ಇದಕ್ಕೆಲ್ಲ ಕಾರಣ. ದೇಶಕ್ಕೆ ದ್ರೋಹ ಮಾಡುವವರಿಗೆ ಬೆಂಬಲ ಸಿಗುತ್ತಿದೆ. ತಮಿಳುನಾಡಿನಲ್ಲೂ ಅದೇ ಆಗುತ್ತಿರುವುದು. ಅದನ್ನೇ ನಾನು ಹೇಳಿದ್ದು. ನಾನು ತಮಿಳುನಾಡಿನ ಜನರನ್ನು ಅವಮಾನಿಸಿಲ್ಲ. ಇದು ತಮಿಳರು, ಕನ್ನಡಿಗರು, ಮಲಯಾಳ ಎನ್ನುವ ವಿಚಾರ ಅಲ್ಲ. ಇದು ಭಯೋತ್ಪಾದನೆಯ ವಿಚಾರ. ದೇಶದ ರಕ್ಷಣೆ, ಸುರಕ್ಷೆಯ ವಿಚಾರ. ದೇಶ ರಕ್ಷಣೆ ಆದರೆ ನಮ್ಮ ರಕ್ಷಣೆಯೂ ಆಗುತ್ತದೆ ಎಂದು ಶೋಭಾ ಹೇಳಿದ್ದಾರೆ.

ಭಯೋತ್ಪಾದನೆ ಕೃತ್ಯಗಳಿಗೆ ಕರ್ನಾಟಕ ಕೇಂದ್ರ ತಾಣ: ಬಿಜೆಪಿ ಆರೋಪ
ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿಗಳ ಬಂಧನದ ವಿಚಾರದಲ್ಲಿ ರಾಜಕೀಯ ತಾರಕಕ್ಕೇರಿದ್ದು, ಕಾಂಗ್ರೆಸ್‌ ಸಹಿತ ಐಎನ್‌ಡಿಐಎ ಮಿತ್ರಪಕ್ಷಗಳ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
ಕರ್ನಾಟಕವನ್ನು ಭಯೋತ್ಪಾದನೆ ಕೃತ್ಯಗಳಿಗೆ ಕೇಂದ್ರ ತಾಣ ಮಾಡಿಕೊಂಡು ಇಂಡಿಯಾ ಒಕ್ಕೂಟದ ಸರಕಾರಗಳು ಅಧಿ ಕಾರದಲ್ಲಿರುವ ರಾಜ್ಯ ಗಳಲ್ಲಿ ಉಗ್ರರಿಗೆ ಆಶ್ರಯ ಕೊಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಭಯೋತ್ಪಾದನೆ ಕೃತ್ಯ ಎಸಗಿದವರು ಇಂಡಿಯಾ ಒಕ್ಕೂಟದ ಸರಕಾರವಿರುವ ಪಶ್ಚಿಮ ಬಂಗಾಲದಲ್ಲಿ ಸಿಗುತ್ತಾರೆಂದರೆ ಏನು ಅರ್ಥ ಎಂದು ಪ್ರಶ್ನಿಸಿದ್ದಾರೆ.
ಇಡೀ ಪ್ರಕರಣವನ್ನು ರಾಜ್ಯ ಸರಕಾರ ನಿರ್ಲಕ್ಷಿಸಿತ್ತು. ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹಿಸಿದ್ದರಿಂದ ಇಷ್ಟು ಬೇಗ ಪ್ರಕರಣದ ತನಿಖೆ ನಡೆಯುತ್ತಿದೆ. ಇಲ್ಲದಿದ್ದರೆ, ಪ್ರಕರಣ ಮುಚ್ಚಿ ಹೋಗಿರುತ್ತಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಆಪಾದಿಸಿದ್ದಾರೆ.

ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣವೇ ಕಾರಣ: ಅಶ್ವತ್ಥನಾರಾಯಣ
ಶುಕ್ರವಾರ ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ ಗೌಡ, ಕಾಂಗ್ರೆಸ್ಸಿಗರು ತುಷ್ಟೀಕರಣ ರಾಜಕೀಯ ಮಾಡುತ್ತಿ¨ªಾರೆ. ಓಲೈಕೆ ಮಾಡುವುದು ಇವರ ಚಾಳಿ. ಡಿ.ಕೆ.ರವಿ ಸಾವಿನ ಪ್ರಕರಣದಿಂದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದವರೆಗೆ ತನಿಖೆಯ ದಾರಿ ತಪ್ಪಿಸಿಕೊಂಡೇ ಬರುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಮತ್ತು ಸಚಿವರಿಗೆ ದೇಶದ ಸುರಕ್ಷೆ, ಭದ್ರತೆ ಮತ್ತು ನಾಗರಿಕ ಸಮಾಜದ ಬಗ್ಗೆ ಕಾಳಜಿ ಇಲ್ಲ ಎಂದು ದೂಷಿಸಿದರು.

ರಾಮೇಶ್ವರಂ ಕೆಫೆ ಪ್ರಕರಣವನ್ನು ಇದು ಉದ್ಯಮಗಳ ನಡುವಿನ ದ್ವೇಷದ ಘಟನೆ ಎಂದು ಹೇಳಿ ಕೈತೊಳೆದುಕೊಳ್ಳಲು ಸರಕಾರ ಮುಂದಾಗಿತ್ತು. ಇದೇ ಪ್ರಕರಣದಲ್ಲಿ ಬಿಜೆಪಿಯ ಪದಾಧಿಕಾರಿಯನ್ನು ಸಾಕ್ಷಿಯಾಗಿ ಎನ್‌ಐಎ ವಿಚಾರಣೆ ಮಾಡಿದ್ದನ್ನೇ ಸಚಿವರು, ಸರಕಾರ ಹುಯಿಲೆಬ್ಬಿಸಿತ್ತು. ಮಂಗಳೂರಿನಲ್ಲಿ ಕುಕ್ಕರ್‌ ಸ್ಫೋಟವಾದಾಗಲೂ ನಿರ್ಲಕ್ಷಿಸಿತ್ತು. ಬಿಜೆಪಿ ಒತ್ತಾಯದ ಬಳಿಕ ರಾಮೇಶ್ವರಂ ಕೆಫೆಯಲ್ಲಿನ ಸ್ಫೋಟ ಪ್ರಕರಣವನ್ನು ತುಂಬ ದಿನಗಳ ಬಳಿಕ ಎನ್‌ಐಎಗೆ ಹಸ್ತಾಂತರ ಮಾಡಿ¨ªಾರೆ ಎಂದರು.ರಾಜ್ಯ ವಕ್ತಾರ ಪ್ರಕಾಶ್‌ ಶೇಷರಾಘವಾಚಾರ್‌, ಬಿಬಿಎಂಪಿ ಮಾಜಿ ಸದಸ್ಯ ಬಿ.ವಿ.ಗಣೇಶ್‌ ಅವರು ಉಪಸ್ಥಿತರಿದ್ದರು.

ಮಮತಾ ಬ್ಯಾನರ್ಜಿಯೇ ಭಯೋತ್ಪಾದಕರನ್ನೆಲ್ಲ ಸಾಕುತ್ತಿದ್ದಾರೇನೋ? ಪಶ್ಚಿಮ ಬಂಗಾಲ ಭಯೋತ್ಪಾದಕರ ತಂಗುದಾಣವಾಗಿದೆ. ವಿಧಾನಸೌಧದಲ್ಲಿ ಪಾಕಿಸ್ಥಾನ ಪರ ಘೋಷಣೆ ಕೂಗಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್‌ ಸರಕಾರ ಈಗ ಏನು ಹೇಳುತ್ತದೆ?
-ಆರ್‌.ಅಶೋಕ್‌, ವಿಧಾನಸಭೆ ವಿಪಕ್ಷ ನಾಯಕ

 

Advertisement

Udayavani is now on Telegram. Click here to join our channel and stay updated with the latest news.

Next