Advertisement

ಕಸ ಸುರಿಯದಂತೆ ದೇವರ ಫೋಟೋ ಬಳಕೆ: ನಗರಸಭೆ ಅಧಿಕಾರಿಗಳ ಮತ್ತೂಂದು ಎಡವಟ್ಟು

02:40 PM Sep 19, 2022 | Team Udayavani |

ರಾಮನಗರ: ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಸಂಬಂಧ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಕುರಿತಂತೆ ಉದಯವಾಣಿ ಪತ್ರಿಕೆ ನಿರಂತರ ಸುದ್ದಿ ಪ್ರಕಟಿಸಿತ್ತು. ಹೆದ್ದಾರಿ ಸೇರಿದಂತೆ ಪ್ರಮುಖ ಮುಖ್ಯರಸ್ತೆಗಳಲ್ಲೇ ಕೊಳೆತು ನಾರುತ್ತಿರುವ ಬಗ್ಗೆ ವರದಿ ಬಿತ್ತರಿಸಿ ಹಿರಿಯ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು.

Advertisement

ಇದರ ಫಲವಾಗಿ ನಗರಸಭೆಯ ಸಾಮಾನ್ಯ ಸಭೆ ಬಳಿಕ ಪತ್ರಿಕೆಯಲ್ಲಿ ವರದಿ ಬರುತ್ತಿದೆ. ಕೂಡಲೇ ಕಸ ತೆರವು ಮಾಡಿ ಎಂದು ನಗರಸಭಾ ಸದಸ್ಯರು ಅರೋಗ್ಯ ಶಾಖೆಯ ಅಧಿಕಾರಿ ಸುಬ್ರಮಣ್ಯ ಅವರಿಗೆ ಒತ್ತಾಯಿಸಿದ್ದರು. ಬಳಿಕ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಕೊಳೆಯುತ್ತಿದ್ದ ಕಸ ತೆರವು ಮಾಡಿ ಕಸ ಹಾಕದಂತೆ ದೇವರ  ಫೋಟೋ ಇರುವ ಬ್ಯಾನರ್‌ ಕಟ್ಟುವ ಮೂಲಕ ಕಸ ಹಾಕದಂತೆ ಮನವಿ ಮಾಡಿದ್ದಾರೆ.

ಹೌದು. ನಗರದೆಲ್ಲೆಡೆ ಕಸದ ರಾಶಿ ಬಗ್ಗೆ ಸವಿಸ್ತಾರವಾಗಿ ಹಲವು ಬಾರಿ ಉದಯವಾಣಿ ಪತ್ರಿಕೆ ಸುದ್ದಿ ಬಿತ್ತರಿಸಿತ್ತು. ಆದರೆ, ತಲೆ ಕೆಡಿಸಿಕೊಳ್ಳದ ಅಧಿಕಾರಿಗಳ ವರ್ತನೆ ಬಗ್ಗೆ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಕಸದ ರಾಶಿಯಿಂದ ವಾಕಿಂಗ್‌ ಬರುವವರಿಗೆ ಕ್ರೀಡಾಪಟುಗಳಿಗೆ ಆಗುತ್ತಿದ್ದ ತೊಂದರೆ ಕಂಡು ನಗರಸಭೆಯೋ ನರಕಸಭೆಯೋ ಎನ್ನುವಷ್ಟರ ಮಟ್ಟಿಗೆ ಸಾರ್ವಜನಿಕರ ಆಕ್ರೋಶವನ್ನು ಪತ್ರಿಕೆ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ನಗರಸಭೆ ನಗರದಲ್ಲಿ ಕೊಳೆತು ನಾರುತ್ತಿದ್ದ ಕಸವನ್ನು ಎಲ್ಲಾ ಕಡೆ ತೆರವು ಮಾಡುವಲ್ಲಿ ಯಶಸ್ವಿಯಾಗಿದೆ.

ಬ್ಯಾನರ್‌ನಲ್ಲಿ ದೇವರ ಫೋಟೋ: ಇನ್ನು ಕಸ ಹಾಕದಂತೆ ದೇವರ ಮೊರೆ ಹೋದ ನಗರಸಭೆ ಅಧಿಕಾರಿಗಳು ಕಂಡೂ ಕಾಣದಂತೆ ಮತ್ತೂಂದು ಎಡವಟ್ಟು ಮಾಡಿಟ್ಟಿದ್ದಾರೆ. ಕಸ ತೆರವು ಮಾಡಿ ರುವ ಜಾಗಕ್ಕೆ ಹಿಂದೂ-ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ದೇವರ ಫೋಟೋ ಬಳಸಿ ಬ್ಯಾನರ್‌ ಮಾಡಿಸಿದ್ದು, ಕಸದ ಗುಂಡಿಗೆ ಅದನ್ನು ಕಟ್ಟುವ ಮೂಲಕ ದೇವರನ್ನ ಅಪಮಾನಿಸಿ ಧಾರ್ಮಿಕ ಭಾವನೆಗಳ ಜೊತೆ ಆಟವಾಡಲಾರಂಭಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ.

ಜನರ ಸಂಕಷ್ಟ ಕೇಳ್ಳೋರು ಯಾರು?: ದಿನಂಪ್ರತಿ ಕಸ ತೆರವುಗೊಳಿಸಿ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸಾರ್ವಜನಿಕರ ಸಹಕಾರ ಪಡೆಯಬೇಕಿದ್ದ ನಗರಸಭೆ ಇಲ್ಲಸಲ್ಲದ ಸಬೂಬು ಹೇಳಿಕೊಂಡು ಬೀದಿಯಲ್ಲಿ ವಾರಗಟ್ಟಲೇ ಕಸ ತೆರವು ಮಾಡದೆ, ಕೊಳೆತು ನಾರುವಂತೆ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ್ದರು. ಇದರ ಜೊತೆಗೆ ಕಸ ಡಂಪ್‌ ಮಾಡಲು ಜಾಗವಿಲ್ಲ ಎಂಬ ಕುಂಟು ನೆಪವೊಡ್ಡಿ ಅಧಿಕಾರಿಗಳ ಮುಸುಗಿನ ಗುದ್ದಾಟದ ಪರಿಣಾಮ ನಗರದ ಜನತೆ ಹೈರಾಣಾಗಿದ್ದರು. ಇದೀಗ ಬ್ಯಾನರ್‌ನ ಮತ್ತೂಂದು ಎಡವಟ್ಟಾಗಿದೆ.

Advertisement

ಇನ್ನು ಈ ಬಗ್ಗೆ ಪ್ರಶ್ನಿಸೋಣವೆಂದರೆ ಅಧ್ಯಕ್ಷರಾಗಿದ್ದ ಪಾರ್ವತಮ್ಮ ಅವರ ರಾಜೀನಾಮೆಯಿಂದ ಅಧ್ಯಕ್ಷ ಹುದ್ದೆ ಖಾಲಿಯಾಗಿದ್ರೆ, ಆಯುಕ್ತರ ಮುಂಬಡ್ತಿಯಾಗಿರುವ ಕಾರಣಕ್ಕೆ ಅವರಿಗೆ ವರ್ಗಾವಣೆಯಾಗಿದೆ. ನಗರದ ಜನರ ಸಂಕಷ್ಟ ಕೇಳ್ಳೋರು ಯಾರು ಎನ್ನುವಂತಾಗಿದೆ.

ಕಸದ ಬುಟ್ಟಿ ನೀಡಿ: ಬೆಳಗ್ಗಿನ ಜಾವ ಕಸ ಹಾಕುವ ಗಾಡಿಗಳಲ್ಲಿ 5 ರಿಂದ 6 ಗಂಟೆಗೆ ಹೆಚ್ಚು ಸೌಂಡ್‌ ಕೊಟ್ಟಿಕೊಂಡು ಬರುತ್ತಾರೆ. ಇದು ಮಕ್ಕಳು ಮತ್ತು ವೃದ್ಧರ ಆರೋಗ್ಯ ದೃಷ್ಟಿಯಿಂದ ತೊಂದರೆ ಆಗುತ್ತಿದೆ. ಅದನ್ನ ತಪ್ಪಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಸಚ್ಛ ಭಾರತ್‌ ಹಣ ಏನಾಯ್ತು. ಕಸ ಸುರಿಯುವ ಜಾಗವನ್ನೂ ಹುಡುಕಲಾಗಲಿಲ್ಲ. ಇಂತಹ ಬೇಜವಾಬ್ದಾರಿ ಏತಕ್ಕೆ. ಪ್ರತಿಯೊಂದು ಮನೆಗೂ ಕಸ ವಿಂಗಡಣೆಗೆಂದು ಬುಟ್ಟಿ ನೀಡಬೇಕು ಎಂದು ಮಾಜಿ ನಗರಸಭಾ ಸದಸ್ಯ ಪರ್ವೀಜ್‌ ಪಾಷಾ ಒತ್ತಾಯಿಸಿದರು.

ನಗರಸಭೆಯವರು ಕಸ ಹಾಕದೇ ಇರುವಂತೆ ದೇವರ ಫೋಟೋ ಬ್ಯಾನರ್‌ಗಳಲ್ಲಿ ಮುದ್ರಿಸಿ ಕಸದ ತೊಟ್ಟಿಯಲ್ಲಿ ಕಟ್ಟುವ ಮೂಲಕ ದೇವರಿಗೆ ಅಪಮಾನ ಮಾಡುತ್ತಿದ್ದಾರೆ. ಇದು ಖಂಡನೀಯ. ಕಸ ಹಾಕದಂತೆ ಹಲವು ಮಾರ್ಗ ಅನುಸರಿಸಬಹುದು. ದಂಡ ವಿಧಿಸುವ ಮೂಲಕ ಎಚ್ಚರಿಕೆ ಕೊಡಬಹುದಿತ್ತು. ಧಾರ್ಮಿಕ ಭಾವನೆ ಜೊತೆಗೆ ಆಟ ಆಡಬಾರದು. ಬಗ್ಗೆ ನಗರಸಭಾ ಸದಸ್ಯಗೆ ತಿಳಿಸಿದ್ದೇವೆ. ಕೂಡಲೇ ದೇವರ ಫೋಟೋ ತೆರವು ಮಾಡಬೇಕು. ಚಂದನ್‌ ಮೋರೆ, ಹಿಂದೂ ಕಾರ್ಯಕರ್ತ

ಇದು ಧಾರ್ಮಿಕ ಭಾವನೆ ಕೆಣ ಕುವ ಕಾರ್ಯ. ನಗರಸಭೆಯ ವರನ್ನ ಕೇಳಿದ್ರೆ ನಾವು ಹಾಕಿಲ್ಲ ಅಂ ತಾರೆ, ನಗರಸಭೆ ಹೆಸರಲ್ಲಿ ಯಾರೋ ಹಾಕಿದ್ದಾರೆ ಅನ್ನೋದಾದ್ರೆ ಬೇಜವಾ ಬ್ದಾರಿತನ ಬಿಟ್ಟು ದೂರು ದಾಖಲಿಸಲಿ. ಇಲ್ಲವಾದ್ರೆ ಕ್ಷಮಾಪಣೆ ಕೋರಿ ಫೋಟೋ ತೆರವುಗೊಳಿಸಲಿ. –ಅನಿಲ್‌ ಬಾಬು, ವಿಭಾಗ ಸಂಯೋಜಕ ಹಿಂದೂ ಜಾಗರಣ ವೇದಿಕೆ

ಕಸ ಸುರಿವ ಜಾಗದಲ್ಲಿ ದೇವರ ಫೋಟೋ ಹಾಕುವ ಮೂಲಕ ಹಿಂದೂ-ಮುಸ್ಲಿಂ, ಕ್ರೈಸ್ತರ ಭಾವನೆ ಕೆರಳಿಸುವ ಕೆಲಸಕ್ಕೆ ಹೋಗಬಾರದು. ಕೂಡಲೇ ಅದನ್ನ ತೆಗೆಯಬೇಕು. ಜನತೆಗೆ ಕಸದ ಬುಟ್ಟಿ ನೀಡುವ ಯೋ ಗ್ಯತೆ ಇಲ್ಲದೆ ಈ ರೀತಿ ಯಾಮಾರಿಸ್ತಾರೆ. ಇವರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲ. ಪರ್ವೀಜ್‌ ಪಾಷಾ, ಮಾಜಿ ನಗರಸಭಾ ಸದಸ್ಯ

 

ಎಂ.ಎಚ್‌. ಪ್ರಕಾಶ ರಾಮನಗರ

Advertisement

Udayavani is now on Telegram. Click here to join our channel and stay updated with the latest news.

Next