Advertisement

ಅರಣ್ಯ ರಕ್ಷಣೆಗೆ ಇಲಾಖೆ 24×7 ಅಲರ್ಟ್‌

04:11 PM Jan 16, 2020 | Team Udayavani |

ರಾಮನಗರ: ಮುಂಬರುವ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಿದರೆ, ಅದರ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸಜ್ಜಾಗುತ್ತಿದೆ.

Advertisement

ಜಿಲ್ಲೆಯಲ್ಲಿ ಸುಮಾರು 70 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶವಿದ್ದು, ದೊಡ್ಡ ಮಟ್ಟದ ಬೆಂಕಿ ಅನಾಹುತಗಳು ಜಿಲ್ಲೆಯ ಅರಣ್ಯದಲ್ಲಿ ಘಟಿಸಿಲ್ಲ ಎಂಬುದೇ ಸಮಾಧಾನ. ಆದರೂ ಇಲಾಖೆ ಹಲವಾರು ಮುಂಜಾಗೃತ ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಕಳೆದ ವರ್ಷಗಳಲ್ಲಿ ರಾಮನಗರ ವಿಭಾಗದಲ್ಲಿ ಒಟ್ಟು ಸುಮಾರು 5 ಹೆಕ್ಟೇರ್‌ ನಷ್ಟು ಮಾತ್ರ ಕಾಡು ಬೆಂಕಿಗಾಹುತಿಯಾಗಿದೆ.

ಕ್ವಿಕ್‌ ರೆಸ್ಪಾನ್ಸ್‌ ವಾಹನ ಖರೀದಿಗೆ ಪ್ರಸ್ತಾವನೆ: ಬೆಂಕಿ ರೇಖೆ ನಿರ್ಮಾಣ (ಫೈರ್‌ಲೈನ್‌), ಬೆಂಕಿ ವೀಕ್ಷಕರ ನೇಮಕ (ಫೈರ್‌ ವಾಚರ್ಸ್‌) ಮತ್ತು ಬೆಂಕಿ ನಂದಕ ಯಂತ್ರ(ಫೈರ್‌ ಬ್ಲೋಯರ್) ಮುಂತಾದ ಮುಂಜಾಗೃತ ಕ್ರಮಗಳನ್ನು ಸಿದ್ದಪಡಿಸಿಕೊಳ್ಳುತ್ತಿದೆ. ಅಗ್ನಿ ಶಾಮಕ ದಳಗಳ ಬಳಿ ಜೀಪ್‌ ರೀತಿಯ ಚಿಕ್ಕ ವಾಹನಗಳಿವೆ. ಇಂತಹ ವಾಹನಗಳಲ್ಲಿ ನೀರಿನ ಟ್ಯಾಂಕ್‌ ಮತ್ತು ಅಗ್ನಿ ನಂದಕ ಪರಿಕರಗಳು ಇರುತ್ತವೆ. ಇದಕ್ಕೆ ಕ್ವಿಕ್‌ ರೆಸ್ಪಾನ್ಸ್‌ ವೆಹಿಕಲ್‌ ಎನ್ನಲಾಗುತ್ತದೆ. ಇಂತಹ ವಾಹನವನ್ನು ಖರೀದಿಸಲು ಇಲಾಖೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶೇ 99 ಕಾಡ್ಗಿಚಿಗೆ ಮಾನವನೇ ಕಾರಣ! ಮಾನವ ಕಾಡಂಚಿನಲ್ಲಿ ಓಡಾಡುವಾಗ ಬೀಡಿ, ಸಿಗರೇಟು ಸೇದಿ ಬೀಸಾಡುವುದು, ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಮೋಜು-ಮಸ್ತಿ ಸಂದರ್ಭದಲ್ಲಿ ಅಡುಗೆ ಮಾಡಿ ಕೊಳ್ಳುವುದು, ಉದ್ದೇಶ ಪೂರ್ವಕವಾಗಿಯೇ ಬೆಂಕಿ ಹಚ್ಚುವುದು, ಕಾಡಂಚಿನಲ್ಲಿರುವ ಹೊಲ, ಗದ್ದೆಗಳಲ್ಲಿ ಕಳೆ ಮುಂತಾದ ಬೇಡದ ಗಿಡಗಳ ನಾಶಕ್ಕೆ ಬೆಂಕಿ ಹೊತ್ತಿಸುವುದರಿಂದ ಅರಣ್ಯಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ.

ಬೆಂಕಿ ಅನಾಹುತ ಮೂರು ವಿಧ: ಗ್ರೌಂಡ್‌ ಫೈರ್‌ (ತರಗು, ಹುಲ್ಲಿಗೆ ಬೆಂಕಿ), ಮಿಡ್‌ ಫೈರ್‌ (ಪೊದೆ, ಲಂಟಾನ ಇತ್ಯಾದಿಗೆ ಬೆಂಕಿ), ಕ್ರೌನ್‌ ಫೈರ್‌ (ಮರಗಳ ತುದಿಯಲ್ಲಿ ಕಾಣಸಿಕೊಳ್ಳುವ ಬೆಂಕಿ) ಎಂಬ ಮೂರು ವಿಧದ ಕಾಡ್ಗಿಚನ್ನು ಅರಣ್ಯ ಇಲಾಖೆ ಗುರುತಿಸಿದ್ದು, ಈ ಪೈಕಿ ಅತ್ಯಂತ ಅಪಾಯಕಾರಿ ಕ್ರೌನ್‌ ಫೈರ್‌. ಮರಗಳ ಮೇಲಾºಗದಲ್ಲಿ ಬೆಂಕಿ ಉರಿದು, ಅಕ್ಕ ಪಕ್ಕದ ಮರಗಳಿಗೂ ಅದು ವ್ಯಾಪಿಸುತ್ತವೆ. ಮೇಲ್ಬಾಗ ಉರಿದಂತೆಲ್ಲ ಅವುಗಳ ಕೊಂಬೆ, ಎಲೆಗಳು ಕೆಳಗೆ ಬೀಳುತ್ತವೆ. ಹೀಗಾಗಿ ಇವುಗಳ ನಿಯಂತ್ರಣ ಸುಲಭವಲ್ಲ, ಹೆಲಿ ಕಾಪ್ಟರ್‌ಗಳ ಮೂಲಕ ನೀರು ಸುರಿದು
ನಂದಿಸುವುದೊಂದೆ ಉಪಾಯ!

Advertisement

ರಾಮನಗರ ಜಿಲ್ಲೆಯಲ್ಲಿ ಹುಲ್ಲು, ತರಗುಗಳಿಂದ ಕೂಡಿದ ಕುರುಚುಲು ಕಾಡಿನ ಪ್ರಮಾಣವೇ ಅಧಿಕವಿದ್ದು, ಹುಲ್ಲು, ತರಗಿಗೆ ಬೆಂಕಿ ಹೊತ್ತಿಕೊಂಡಾಗ ಅವು ನೆಲದಲ್ಲೇ (ಗ್ರೌಂಡ್‌ ಫೈರ್‌) ಹರಡುತ್ತಾ ಹೋಗುತ್ತದೆ. ಈ ರೀತಿಯ ಬೆಂಕಿಯನ್ನು ನಂದಿಸಲು ಬೆಂಕಿ ರೇಖೆಗಳು (ಫೈರ್‌ ಲೈನ್‌) ಸಹಕಾರಿ. ಇತ್ತೀಚಿನ ದಿನಗಳಲ್ಲಿ ಇಲಾಖೆ ಫೈರ್‌ ಬ್ಲೋಯೆರ್‌ಗಳನ್ನು ಖರೀದಿಸಿದ್ದು, ಈ ಬ್ಲೋಯೆರ್‌ಗಳು ಗಾಳಿಯನ್ನು ಊದಿ ಬೆಂಕಿ ನಂದಿಸುತ್ತವೆ.

22 ಕಿಮೀ ಫೈರ್‌ ಲೈನ್‌ ನಿರ್ಮಾಣ: ಅರಣ್ಯ ಪ್ರದೇಶದ ಮೂಲಕ ಸಾಗುವ ರಸ್ತೆಗಳ ಅಕ್ಕ ಪಕ್ಕ, ಕಾಡಿನೊಳಗಿನ ಕಾಲು ದಾರಿಗಳು, ಬೆಂಕಿ ಸಂಭಾವ್ಯ ಇರುವ ಸ್ಥಳಗಳನ್ನು ಗುರುತಿಸಲಾಗಿರುತ್ತದೆ. ಅಗತ್ಯ ವಿದ್ದಷ್ಟು ಉದ್ಧ ಮತ್ತು ಮೂರು ಮೀಟರ್‌ ಅಗಲಕ್ಕೆ ಅರಣ್ಯ ಸಿಬ್ಬಂದಿಯೇ ಬೆಂಕಿ ಹಚ್ಚಿ ಹುಲ್ಲು, ತರಗು
ಗಿಡಗಳನ್ನು ನಾಶ ಪಡಿಸುತ್ತಾರೆ, ಇದು ಬೆಂಕಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಹರಡುವುದನ್ನು ತಡೆಯುತ್ತದೆ. ರಾಮನಗರ ಜಿಲ್ಲೆಯಲ್ಲಿ ಎಲ್ಲಾ 5 ರೇಂಜ್‌ ಗಳಲ್ಲೂ ಇಲಾಖೆ ಸುಮಾರು 122 ಕಿಮೀ ಉದ್ದದ ಫೈರ್‌ ಲೈನ್‌ ನಿರ್ಮಾಣ ಮಾಡಲು ಆರಂಭಿಸಿದೆ.

60ಕ್ಕೂ ಫೈರ್‌ ವಾಚರ್ ನಿಯೋಜನೆ: ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿಯನ್ನು ಪತ್ತೆ ಹಚ್ಚಲು ಇಲಾಖೆ 60ಕ್ಕೂ ಹೆಚ್ಚು ಫೈರ್‌ ವಾಚರ್‌ಗಳನ್ನು ನಿಯೋಜಿಸುತ್ತಿದೆ. ತನ್ನದೇ ಸಿಬ್ಬಂದಿ ಜೊತೆಗೆ ತತ್ಕಾಲಿಕವಾಗಿ ಬೇರೆಯವನ್ನು ನೇಮಿಸಿಕೊಂಡು ನಿಯೋಜಿಸಲಾಗುತ್ತದೆ. ತಲಾ ಗುಂಪಿನಲ್ಲಿ ಮೂವರು ವಾಚರ್‌ಗಳಿದ್ದು, ವಾಚ್‌ ಟವರ್‌ಗಳು, ಫಾರೆಸ್ಟ್‌ ಐ ಪಾಯಿಂಟ್‌ಗಳಲ್ಲಿ ಇವರ ನಿಯೋಜನೆಯಾಗುತ್ತದೆ.

ಇವರು ತಮ್ಮ ವ್ಯಾಪ್ತಿಯೊಳಗಿನ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡರೆ, ತಕ್ಷಣ ಆ ವಿಚಾರವನ್ನು ತಮ್ಮ ಹಿರಿಯ ಅಧಿಕಾರಿಗಳ ಗಮನ ಸೆಳೆಯುತ್ತಾರೆ. ಬೆಂಕಿ ನಂದಿಸಲು ಕಾರ್ಯ ಪ್ರವೃತ್ತರಾಗುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next