Advertisement

ಭಕ್ತಿ ಮಾರ್ಗದಲ್ಲಿ ದೇವರ ಕಾಣಲು ಸಾಧ್ಯ: ರಾಷ್ಟ್ರಪತಿ ರಾಮನಾಥ ಕೋವಿಂದ್‌

11:52 PM Jun 14, 2022 | Team Udayavani |

ಬೆಂಗಳೂರು: ಗುರಿಯನ್ನು ಸಾಧಿಸಲು ಹಲವು ಮಾರ್ಗಗಳಿವೆ. ಅಂತೆಯೇ ನಾವು ಜ್ಞಾನ, ಕರ್ಮ, ಭಕ್ತಿ ಮಾರ್ಗದ ಮೂಲಕ ಪರಮಾತ್ಮನನ್ನು ಕಾಣಲು ಸಾಧ್ಯ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ತಿಳಿಸಿದರು.

Advertisement

ಕನಕಪುರ ರಸ್ತೆಯ ವಸಂತಪುರ ಕ್ಷೇತ್ರದಲ್ಲಿ ಶ್ರೀಲ ಪ್ರಭುಪಾದರ 125ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ರಾಜಾಧಿರಾಜ ಗೋವಿಂದ ಮಂದಿರ ಲೋಕಾರ್ಪಣೆ ಗೊಳಿಸಿ ಮಾತನಾಡಿದ ಅವರು, ಶಂಕರಾಚಾರ್ಯ, ರಾಮಾನುಜಾ ಚಾರ್ಯ, ಮಧ್ವಾಚಾರ್ಯರು, ಶ್ರೀ ಚೈತನ್ಯ ಮಹಾಪ್ರಭುಗಳಂತ ಶ್ರೇಷ್ಠ ಆಧ್ಯಾತ್ಮಿಕ ನಾಯಕರು. ವಿವಿಧ ಮಾರ್ಗಗಳ ಮೂಲಕ ಭಗವಂತನನ್ನು ತೋರಿಸಿಕೊಟ್ಟವರು.
ಅಂತೆಯೇ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಸಹ ಇದೇ ಮನೋ ಭಾವವನ್ನು ಹೊಂದಿದ್ದರು. ಇದನ್ನೇ ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಮಾತನಾಡಿ, ರಾಜಾಧಿ ರಾಜ ಗೋವಿಂದ ದೇವಸ್ಥಾನ ಮತ್ತು ಸಾಂಸ್ಕೃತಿಕ ಸಂಕೀರ್ಣವು ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆಗೆ ಅನುಕೂಲವಾಗಲಿ ಎಂದರು.

ಮಂದಿರದಲ್ಲಿ ರಾಜಾಧಿರಾಜ ಗೋವಿಂದ ಮುಖ್ಯ ದೇವರ, ಜತೆಗೆ ಮಹಾಲಕ್ಷ್ಮೀ, ಲಕ್ಷ್ಮೀ ನರಸಿಂಹ, ಸ‌ುದರ್ಶನ ನರಸಿಂಹ ದೇವರು ಹಾಗೂ ಇಸ್ಕಾನ್‌ ಸಂಸ್ಥಾಪಕ ಶ್ರೀಲ ಭಕ್ತಿ ವೇದಾಂತ ಪ್ರಭು ಪಾದರ ಮೂರ್ತಿಗೆ ನಮಿಸಿದರು. ರಾಷ್ಟ್ರಪತಿ ಅವರ ಪತ್ನಿ ಸವಿತಾ ಕೋವಿಂದ್‌, ಪುತ್ರಿ ಸ್ವಾತಿ ಕೋವಿಂದ್‌, ಇಸ್ಕಾನ್‌ ಅಧ್ಯಕ್ಷ ಮಧು ಪಂಡಿತ್‌ ದಾಸ್‌ ಹಾಗೂ ಇತರ‌ರಿದ್ದರು.

ಆ. 1ರಿಂದ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ
ಬೆಂಗಳೂರು: ರಾಜಾಧಿರಾಜ ಗೋವಿಂದ ಮಂದಿರದ ವಿಗ್ರಹಗಳ ಪ್ರತಿಷ್ಠಾಪನೆಗೊಂಡು ಲೋಕಾರ್ಪಣೆಗೊಂಡಿದೆ. ಮಂಡಲ ಪೂಜೆ ಪೂರ್ಣಗೊಂಡ ಅನಂತರ ಆ. 1ರಿಂದ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಇಸ್ಕಾನ್‌ ಉಪಾಧ್ಯಕ್ಷ ಚಲಪತಿ ದಾಸ್‌ ತಿಳಿಸಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಣಪ್ರತಿಷ್ಠಾಪನೆಯಾದ 48 ದಿನಗಳ ವಿಗ್ರಹಕ್ಕೆ ವಿಧಿ-ವಿಧಾನಗಳಂತೆ ಪ್ರತಿದಿನ ಮಂಡಲ ಪೂಜೆಯು ನಡೆಯಲಿದೆ. ಆ ಸಮಯದಲ್ಲಿ ಸಾರ್ವಜನಿಕರಿಗೆ ಪ್ರವೇಶಿವಿಲ್ಲ. ಅನಂತರ ದಿನದಲ್ಲಿ ಉಚಿತ ಪ್ರವೇಶ ಇರಲಿದ್ದು, ಬೆಳಗ್ಗೆ ಮತ್ತು ಸಂಜೆ ಎರಡು ಪಾಳಿಯಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶವಿರಲಿದೆ ಎಂದರು.

Advertisement

ದೇಗುಲದ ವಿಶೇಷತೆಗಳು
ದೇಗುಲವು ಸುಮಾರು 28 ಎಕರೆ ಪ್ರದೇಶದಲ್ಲಿ 105 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಇದು ಟಿಟಿಡಿ ಶ್ರೀ ವೆಂಕಟೇಶ್ವರ ದೇಗುಲದ ಪ್ರತಿರೂಪವಾಗಿದೆ. ಶ್ರೀನಿವಾಸ ಶಿಲಾ ವಿಗ್ರಹವೂ ತಿರುಮಲೆಯ ವೆಂಕಟೇಶ್ವರ ದೇವರ ಎತ್ತರಕ್ಕಿಂತ 1 ಸೆಂ.ಮೀ. ಕಡಿಮೆ ಮಾಡಲಾಗಿದೆ. ಜತೆಗೆ ದೇಗುಲದ ಹೊರಾಂಗಣ ವಿನ್ಯಾಸ ತಿರುಪತಿಯನ್ನು ಸಂಪೂರ್ಣವಾಗಿ ಹೋಲುತ್ತದೆ. 2ನೇ ಹಂತದಲ್ಲಿ ದೇವಸ್ಥಾನದ ಹಿಂಬದಿಯಲ್ಲಿ 700 ಅಡಿ ಎತ್ತರದ 70 ಅಂತಸ್ತಿನ ಬೃಹತ್‌ ಕಟ್ಟಡದಲ್ಲಿ ರಾಧಾಕೃಷ್ಣ ಥೀಮ್‌ ಪಾರ್ಕ್‌ ನಿರ್ಮಾಣವಾಗಲಿದೆ. ಇಲ್ಲಿ ರಾಧಾಕೃಷ್ಣರ ಜೀವನ ಚರಿತ್ರೆ ಒಳಗೊಂಡ ಕಲಾಕೃತಿಗಳು ಇರಲಿವೆ. ಟವರ್‌ ಕೊನೆ ಮಹಡಿಯಲ್ಲಿ ರಾಧಾಕೃಷ್ಣರ ದೇಗುಲವಿರಲಿದೆ. ಈ ಟವರ್‌ ಬೆಂಗಳೂರಿನ ಅತೀ ಎತ್ತರ ಕಟ್ಟಡವಾಗಲಿದೆ.

ಭಕ್ತಿ ಮಾರ್ಗ ವಿಶ್ವಕ್ಕೆ ಭಾರತ ನೀಡಿದ ಅನನ್ಯ ಕೊಡುಗೆ ದೊರಕಿದೆ. ಅದರ ಸಾರವೇ ನಮ್ಮೆಲ್ಲರ ಅಂತರಂಗ ಹಾಗೂ ಸರ್ವ ಸಮಾಜದ ಅಭಿವೃದ್ಧಿ. ಸರಕಾರವು ಇಸ್ಕಾನ್‌ ಬೆಂಗಳೂರಿನ ಎಲ್ಲ ಜನಹಿತ ಯೋಜನೆಗಳಲ್ಲಿ ಯಾವಾಗಲೂ ಬೆಂಬಲವಾಗಿ ನಿಂತಿದೆ. ಇನ್ನು ಮುಂದೆಯೂ ಇದೇ ರೀತಿಯಲ್ಲಿ ಪ್ರೋತ್ಸಾಹವನ್ನು ಮುಂದುವರಿಸುತ್ತೇವೆ.
– ಬಸವರಾಜ ಬೊಮ್ಮಾಯಿ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next