Advertisement

ಹಳೆಯದನ್ನು ಬಿಟ್ಟು ಬಿಡೋಣ… ಮುಗಿದ ಅಧ್ಯಾಯ ಕೆದಕಬೇಡಿ: ರಕ್ಷಿತ್‌ ಮನವಿ

11:51 AM Jun 09, 2021 | Team Udayavani |

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ ನಿಂದಾಗಿ ನಟ ರಕ್ಷಿತ್‌ ಶೆಟ್ಟಿ ಈ ಬಾರಿ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇನ್ನು ಬರ್ತ್‌ಡೇಯನ್ನು ಅಭಿಮಾನಿಗಳ ಜೊತೆ ಸಂಭ್ರಮಿಸಲು ಸಾಧ್ಯವಾಗದಿದ್ದರಿಂದ, ಮತ್ತು “777 ಚಾರ್ಲಿ’ ಸಿನಿಮಾದ ಬಗ್ಗೆ ಮಾತನಾಡುವುದಕ್ಕಾಗಿ ರಕ್ಷಿತ್‌ ಶೆಟ್ಟಿ ಇನ್ಸ್ಟಾಗ್ರಾಮ್‌ ಲೈವ್‌ ಮೂಲಕ ತಮ್ಮ ಅಭಿಮಾನಿಗಳ ಮುಂದೆ ಬರುವುದಾಗಿ ತಿಳಿಸಿದ್ದರು.

Advertisement

ಅದರಂತೆ ಬರ್ತ್‌ಡೇ ಮರುದಿನ ರಕ್ಷಿತ್‌ ಶೆಟ್ಟಿ ಇನ್ಸ್ಟಾಗ್ರಾಮ್‌ ಲೈವ್‌ ಮೂಲಕ ಫ್ಯಾನ್ಸ್‌ಗೆ ದರ್ಶನ ಕೊಟ್ಟಿದ್ದರು. ಇನ್ನು ತಮ್ಮ ನೆಚ್ಚಿನ ನಟ ಸೋಶಿಯಲ್‌ ಮಿಡಿಯಾದಲ್ಲಿ ಲೈವ್‌ ಬರುವುದನ್ನೆ ಕಾಯುತ್ತಿದ್ದ ಅಭಿಮಾನಿಗಳು ಕೂಡ, ಲೈವ್‌ನಲ್ಲಿ ತಮ್ಮ ಪ್ರಶ್ನೆಗಳನ್ನು ರಕ್ಷಿತ್‌ ಶೆಟ್ಟಿಗೆ ಕೇಳಿದ್ದಾರೆ. ಅಷ್ಟೇ ಆಗಿದ್ದರೆ ಪರವಾಗಿಲ್ಲ. ಈ ಲೈವ್‌ನಲ್ಲಿ ಕೆಲವರು ರಕ್ಷಿತ್‌ ಶೆಟ್ಟಿ ಅವರ ಸಿನಿಮಾ ವಿಚಾರಗಳ ಹೊರತಾಗಿ ಮದುವೆ, ರಶ್ಮಿಕಾ ಮೊದಲಾದ ತೀರಾ ವೈಯಕ್ತಿಕ ವಿಷಯಗಳ ಕುರಿತಾದ ಪ್ರಶ್ನೆಯನ್ನು ಪದೇ ಪದೇ ಕೇಳಲು ಮುಂದಾಗಿದ್ದಾರೆ. ಅದರಲ್ಲೂ ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆ ಮತ್ತಿತರ ಖಾಸಗಿ ವಿಚಾರಗಳ ಪ್ರಶ್ನೆಗಳನ್ನು ಕೇಳಿದ್ದರು.

ಇಂಥ ಪ್ರಶ್ನೆಗಳು ಲೈವ್‌ನಲ್ಲಿ ಬರುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ರಕ್ಷಿತ್‌ ಶೆಟ್ಟಿ, “ಇಲ್ಲಿ ಕೆಲವು ಕಾಮೆಂಟ್ಸ್‌ ಓದೋಕೆ ಬಹಳ ಬೇಜಾರಾಗುತ್ತೆ. ಆ ಕಾಮೆಂಟ್ಸ್‌ ನನ್ನ ಬಗ್ಗೆ ಅಲ್ಲ ಬೇರೊಬ್ಬರ ಬಗ್ಗೆ. ಆದರೆ ನನ್ನ ಮನವಿ ಏನೆಂದರೆ, ಹಳೆಯದನ್ನು ಬಿಟ್ಟು ಬಿಡೋಣ. ಹಿಂದೆ ಮುಗಿದಿದೆಲ್ಲ ಮುಗಿದು ಹೋಯಿತು. ಈಗ ಅದರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಯಾವುದೇ ವ್ಯಕ್ತಿಗೆ ಅಗೌರವ ಮಾಡುವುದು ಬೇಡ. ನಾವು ನಮ್ಮ ಬಗ್ಗೆಯೇ ಅಸಹ್ಯ ಪಟ್ಟುಕೊಳ್ಳುವಂಥಹಾ ಕಾಮೆಂಟ್ಸ್‌ ಅನ್ನು ಬೇರೆಯವರ ಬಗ್ಗೆ ಸಹ ಮಾಡಬಾರದು. ಎಲ್ಲರ ಬಳಿ ಮನವಿ ಮಾಡಿಕೊಳ್ಳುವುದೇನೆಂದರೆ ಮೊದಲು ಮಾನವರಾಗೋಣ’ ಎಂದರು.

ಆದರೆ ರಕ್ಷಿತ್‌ ಶೆಟ್ಟಿ ಬೇಡವೆಂದರೂ ಕೆಲವು ಕಾಮೆಂಟ್ಸ್‌ ಮತ್ತೆ ಮತ್ತೆ ಪುನರಾರ್ವತೆ ಆಗಿದ್ದರಿಂದ, ಬೇಸರಗೊಂಡ ರಕ್ಷಿತ್‌ ಶೆಟ್ಟಿ “ಎಲ್ಲರಿಗೂ ಗೌರವ ಕೊಡೋಣ. ಎಲ್ಲರಿಗೂ ಅವರದ್ದೇ ಆದ ಜೀವನ ಇದೆ. ಇಲ್ಲಿ ಕಾಮೆಂಟ್ಸ್‌ ಸೆಕ್ಷನ್‌ನಲ್ಲಿ ನಾನು ಒಳ್ಳೆಯ ಕಾಮೆಂಟ್ಸ್‌ ನೋಡಲು ಇಷ್ಟಪಡುತ್ತೀನಿ. ನಮ್ಮ ಸಿನಿಮಾ ಬಗ್ಗೆ ಕಾಮೆಂಟ್ಸ್‌ ನೋಡಲು ಇಷ್ಟಪಡ್ತೀನಿ’ ಎಂದರು ರಕ್ಷಿತ್‌ ಶೆಟ್ಟಿ. ಅಷ್ಟೇ ಅಲ್ಲದೆ ರಶ್ಮಿಕಾ ಬಗ್ಗೆ ಮಾಡಿದ್ದ ಕೆಲವು ಕಾಮೆಂಟ್ಸ್‌ ಅನ್ನು ಡಿಲೀಟ್‌ ಸಹ ಮಾಡಿದ್ದಾರೆ ರಕ್ಷಿತ್‌ ಶೆಟ್ಟಿ.

Advertisement

Udayavani is now on Telegram. Click here to join our channel and stay updated with the latest news.

Next