ಮುಂಬಯಿ: ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ರಾಖಿ ಸಾವಂತ್ ಹಾಗೂ ಪತಿ ಆದಿಲ್ ದುರಾನಿ ನಡುವಿನ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದ್ದು, ಹಲ್ಲೆಗೆ ಯತ್ನಿಸಿದ ಆರೋಪದಡಿ ಆದಿಲ್ ದುರಾನಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ .
ಮನೆಗೆ ಬಂದು ಆತ ಹಲ್ಲೆಗೆ ಮುಂದಾಗಿದ್ದ, ಈ ವೇಳೆ ನಾನು ಪೊಲೀಸರಿಗೆ ಕರೆ ಮಾಡಿ ವಿಷಯವನ್ನು ಹೇಳಿದೆ ಎಂದು ನಟಿ ರಾಖಿ ದೂರು ಕೊಟ್ಟ ಬಗ್ಗೆ ಮಾಧ್ಯಮದವರಿಗೆ ತಿಳಿಸಿದ್ದಾರೆ. ರಾಖಿ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಓಶಿವಾರಾ ಪೊಲೀಸರು ಆದಿಲ್ ರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ರಾತ್ರಿ ( ಫೆ. 6 ರಂದು) ಆದಿಲ್ ಮನೆಗೆ ಬಂದು ನನ್ನಿಂದ ತಪ್ಪಾಯಿತು ಎಂದು ಹೇಳಿ ನನ್ನನ್ನು ಊಟಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆತ ನನಗೆ ಊಟ ಕೊಡಿಸಿದ್ದಾನೆ. ಆದರೆ ನಾನು ಅವನೊಂದಿಗೆ ಎಲ್ಲೂ ಮಾತನಾಡಿಲ್ಲ. ಆತ ನನ್ನ ಚಿನ್ನವನ್ನು ತೆಗೆದುಕೊಂಡಿದ್ದಾನೆ. ಆತ ತುಂಬಾ ಜನರೊಂದಿಗೆ ಮೈ ಹಂಚಿಕೊಂಡಿದ್ದಾನೆ. ನಾನು ಅವನೊಂದಿಗೆ ಯಾವುದೇ ರೀತಿಯ ಹೊಂದಾಣಿಕೆಯನ್ನು ಮಾಡಿಕೊಳ್ಳುವುದಿಲ್ಲ. ಇನ್ನು ನಾನು ಅವನಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ್ದೇನೆ ಎಂದು ರಾಖಿ ಹೇಳಿದ್ದಾರೆ.
ರಾಖಿ – ಆದಿಲ್ ಇತ್ತೀಚೆಗಷ್ಟೇ ಕೋರ್ಟ್ ಮ್ಯಾರೇಜ್ ಆಗಿದ್ದರು. ಮೊದಲು ಮದುವೆಯ ವಿಚಾರವನ್ನು ನಿರಾಕರಿಸಿದ್ದ ಆದಿಲ್ ಆ ಬಳಿಕ ಮಾಧ್ಯಮದ ಮುಂದೆ ಒಪ್ಪಿಕೊಂಡಿದ್ದರು. ರಾಖಿ ತನ್ನ ತಾಯಿಯ ನಿಧನದ ಬಳಿಕ ಆದಿಲ್ ಅವರು ಅಕ್ರಮ ಸಂಬಂಧವನ್ನು ಹೊಂದಿದ್ದಾರೆ ಎನ್ನುವ ಆರೋಪವನ್ನು ಮಾಡಿದ್ದಾರೆ.