Advertisement

ಖಾಸಗಿ ಶಾಲೆಯಲ್ಲಿ ರಾಖಿ ರಾದ್ಧಾಂತ: ಪ್ರತಿಭಟನೆ

04:00 PM Aug 19, 2022 | Team Udayavani |

ಮುಂಡಗೋಡ: ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಕಟ್ಟಿಕೊಂಡಿದ್ದ ರಾಖಿಯನ್ನು ಬಿಚ್ಚಿಸಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಪಾಲಕರು ಹಾಗೂ ಹಿಂದೂ ಪರ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿವೆ.

Advertisement

ಬುಧವಾರ ಬೆಳಗ್ಗೆ ಶಾಲಾ ಆವರಣದಲ್ಲಿ ಪ್ರಾರ್ಥನೆ ವೇಳೆಯಲ್ಲಿ ವಿದ್ಯಾರ್ಥಿಗಳು ಕೈಗೆ ಕಟ್ಟಿಕೊಂಡ ರಾಖಿಯನ್ನು ತೆಗೆಯುವಂತೆ ಸೂಚಿಸಲಾಗಿದೆ. ಅದರಂತೆ ಮಕ್ಕಳು ತಮ್ಮ ಕೈಗೆ ಕಟ್ಟಿಕೊಂಡ ರಾಖೀಯನ್ನು ಕತ್ತರಿಯಿಂದ ಕಟ್‌ ಮಾಡಿಕೊಂಡಿದ್ದಾರೆ. ಬಳಿಕ ಮನೆಗೆ ಹೋದ ನಂತರ ಪಾಲಕರಿಗೆ ಈ ವಿಷಯ ತಿಳಿಸಿದ್ದಾರೆ. ನಂತರ ಇದು ಹಿಂದೂಪರ ಸಂಘಟನೆಗಳ ಗಮನಕ್ಕೆ ಬಂದು ಶಾಲೆಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ. ವಿಷಯ ಅರಿತ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಶಾಲಾ ಆಡಳಿತ ಸಮಿತಿಯವರನ್ನು ಹಾಗೂ ಪ್ರಿನ್ಸಿಪಾಲ್‌ ಅವರನ್ನು ಕರೆಯಿಸಿ ಠಾಣೆಯಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದಾರೆ ಆದರೆ ಇದು ಯಶಸ್ವಿಯಾಗಿರಲಿಲ್ಲ.

ಗುರುವಾರ ಹಿಂದೂಪರ ಸಂಘಟನೆಗಳು ಹಾಗೂ ಪಾಲಕರು ಶಾಲೆ ಎದುರು ಪ್ರತಿಭಟನೆ ಆರಂಭಿಸಿದರು. ಆಡಳಿತ ಮಂಡಳಿ ಹಾಗೂ ರಾಖೀ ತೆಗೆಯುವಂತೆ ಸೂಚಿಸಿದ ಶಿಕ್ಷಕಿಯನ್ನು ಸ್ಥಳಕ್ಕೆ ಕರೆಸುವಂತೆ ಪ್ರತಿಭಟನಾಕಾರರು ಘೋಷಣೆ ಕೂಗುತ್ತಾ ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಆಡಳಿತ ಮಂಡಳಿ ಸದಸ್ಯ ಹಾಗೂ ಪ್ರಿನ್ಸಿಪಾಲ್‌ “ನಾವು ರಾಖೀ ತೆಗೆಯಲು ಹೇಳಿಲ್ಲ. ಮಕ್ಕಲೇ ಅದನ್ನು ಬಿಚ್ಚಿ ಆಟ ಆಡುತ್ತಿದ್ದರು ಎಂದು ಹೇಲಿದರು. ಆದರೆ ಪ್ರತಿಭಟನಾಕಾರರು ಮಕ್ಕಳ ಕೈಯಲ್ಲಿ ಕತ್ತರಿ ಹೇಗೆ ಬಂತು? ಮನೆಯಿಂದ ತರುತ್ತಾರಾ ಎಂದು ಮರು ಪ್ರಶ್ನಿಸಿದರು. ಇದಕ್ಕೆ ಆಡಳಿತ ಮಂಡಳಿಯವರು ಮೌನವಾದರು.

ಹಿಂದೂಪರ ಸಂಘಟನೆಗಳ ಆಕ್ರೋಶ: ಈ ಸಂಸ್ಥೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸ ಆಗುತ್ತಿದೆ. ಹಿಂದೂಗಳ ಪವಿತ್ರ ಹಬ್ಬವಾದ ರಕ್ಷಾಬಂಧನದಲ್ಲಿ ಕಟ್ಟಿರುವ ರಾಖೀಯನ್ನು ತೆಗೆಯುವಂತೆ ಹೇಳಿದ್ದು ಉದ್ಧಟತನ. ಶಾಲೆಯಲ್ಲಿ ಎಲ್ಲ ಧರ್ಮದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಹಿಂದೂಗಳ ಬಗ್ಗೆ ಇಂತಹ ತಾರತಮ್ಯ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಯ ಅವ್ಯವಸ್ಥೆಗೆ ಪಾಲಕರ ಕಿಡಿ: ರಕ್ಷಾಬಂಧನವನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗಿದೆ. ಆದರೆ ಪ್ರಾರ್ಥನೆ ವೇಳೆ ಮಕ್ಕಳ ಕೈಯಲ್ಲಿ ಇದ್ದ ರಾಖೀ ಹಾಗೂ ಇತರ ಪವಿತ್ರ ದಾರವನ್ನು ತೆಗೆಯುವಂತೆ ಹೇಳುತ್ತಾರೆ. ಈ ಶಾಲೆಯಲ್ಲಿ ಕುಂಕುಮ, ಕೈಯಲ್ಲಿರುವ ಬಳೆ, ಕೇಸರಿ ದಾರ, ಕೊರಳಿನಲ್ಲಿ ಹಾಕಿದ ಸರಗಳನ್ನು ತೆಗೆಸಲಾಗುತ್ತದೆ. ಅಲ್ಲದೆ ಬಿಸಿ ಊಟದಲ್ಲಿ ಹುಳಗಳು ಇದ್ದರೂ ಅದನ್ನೇ ಮಕ್ಕಳಿಗೆ ನೀಡಲಾಗುತ್ತದೆ. ಇದನ್ನು ಪ್ರಶ್ನಿಸಿದ ಮಕ್ಕಳನ್ನು ಗದರಿಸಲಾಗುತ್ತದೆ. ಅಲ್ಲದೇ ನೂರಾರು ಮಕ್ಕಳು ಊಟ ಮಾಡಿದ ಪ್ಲೇಟ್‌ಗಳನ್ನೆಲ್ಲ ನೀರು ತುಂಬಿದ ಎರಡು ಬಕೆಟ್‌ನಲ್ಲಿ ತೊಳೆಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಇದರಿಂದ ಮಕ್ಕಳ ಆರೋಗ್ಯ ಹಾಳಾದರೆ ಯಾರು ಹೊಣೆ ಎಂದು ಆಡಳಿತ ಮಂಡಳಿಯವರನ್ನು ಹಾಗೂ ಬಿಇಒ ಅವರನ್ನು ಪ್ರಶ್ನಿಸಿದರು.

Advertisement

ಕ್ಷಮೆ ಯಾಚನೆ: ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು ಆ ಶಿಕ್ಷಕರಿಗೆ ಏನು ನಿರ್ದೇಶನ ನೀಡಬೇಕೋ ಅದನ್ನು ನೀಡಲಾಗುವುದು. ಆದ ಪ್ರಮಾದಕ್ಕೆ ಕ್ಷಮೆ ಕೋರುವೆ ಎಂದು ಆಡಳಿತ ಮಂಡಳಿಯ ಸದಸ್ಯರು ಹೇಳಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಮುಂಖಡರಾದ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಪ್ರಕಾಶ ಬಡಗೇರ, ಶ್ರೀರಾಮ ಸೇನೆಯ ಅಧ್ಯಕ್ಷ ಮಂಜುನಾಥ ಹರಿಜನ, ಭಜರಂಗದಳದ ಅಧ್ಯಕ್ಷ ಮಂಜುನಾಥ ಪವಾರ್‌, ಶಂಕರ ಲಮಾಣಿ, ಗೋ ಪರಿವಾರದ ರಕ್ಷಕ ವಿಶ್ವನಾಥ ಭಜಂತ್ರಿ, ರಾಮಸೇನೆ ಅದ್ಯಕ್ಷ ಷಣ್ಮುಖ ಕೊಳುರ, ಸಾಲಗಾಂವ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಸುನಿಲ್‌ ಲಮಾಣಿ, ಮುಖಂಡರಾದ ಸಂತೋಷ ತಳವಾರ, ಗಣೇಶ ಶಿರಾಲಿ, ಶ್ರೀಧರ ಉಪ್ಪಾರ, ಮಂಗೇಶ ಲಮಾಣಿ ಸೇರಿದಂತೆ ಪಾಲಕರು ಉಪಸ್ಥಿತರಿದ್ದರು.

ಬೇರೆ ಕಡೆಯಿಂದ ಈ ಶಾಲೆಗೆ ಬಂದ ಮುಖ್ಯೋಪಾಧ್ಯಾಯರಿಂದ ಸಮಸ್ಯೆ ಸಂಭವಿಸಿದೆ. ಇಲ್ಲಿಯ ಶಿಷ್ಟಾಚಾರ ಮರೆತು ಅವರು ಮೂಲ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಪದ್ಧತಿ ಇಲ್ಲಿ ಅನುಸರಿಸಿದ್ದರಿಂದ ಸಮಸ್ಯೆ ಉಂಟಾಗಿದೆ. ಮುಂದೆ ಈ ರೀತಿ ಆಗದಂತೆ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಸೇರಿ ಮುತುವರ್ಜಿ ವಹಿಸಲಿದೆ. ಪೋಷಕರ ಸಹಕಾರ ಅಗತ್ಯ. –ವಿ.ಎಸ್‌.ಪಟಗಾರ, ಕ್ಷೇತ್ರ ಶಿಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next