Advertisement

ರಾಜ್ಯೋತ್ಸವ-2022: ಕನ್ನಡ ಕಾಯಕಕ್ಕೆ ಸಂದ ಪುರಸ್ಕಾರದ ಮನ್ನಣೆ

09:48 AM Nov 01, 2022 | Team Udayavani |

2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಪಟ್ಟಿಯನ್ನು ಸರಕಾರ ರವಿವಾರ ಪ್ರಕಟಿಸಿದ್ದು, ವಿವಿಧ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ನಾಡಿನ 67 ಮಂದಿ ಸಾಧಕರನ್ನು ಈ ಬಾರಿ ಆಯ್ಕೆ ಮಾಡಲಾಗಿದೆ. ನ.1ರಂದು ಬೆಂಗಳೂರಿನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕರಾವಳಿಯ ವಿವಿಧ ಸಾಧಕರ ಕಿರು ಪರಿಚಯ ಇಲ್ಲಿದೆ.

Advertisement

ಸುಬ್ರಹ್ಮಣ್ಯ ಧಾರೇಶ್ವರ
ಕುಂದಾಪುರ: “ಧಾರೇಶ್ವರ ಭಾಗವತರು’ ಎಂದೇ ಖ್ಯಾತರಾದ ಸುಬ್ರಹ್ಮಣ್ಯ ಧಾರೇಶ್ವರ ಅವರು 50 ವರ್ಷಗಳಿಂದ ಸಾಂಪ್ರದಾಯಿಕ ಯಕ್ಷಗಾಯನದ ಗಟ್ಟಿ ಹಿಡಿತದೊಂದಿಗೆ ಭಾಗವತಿಕೆಯಲ್ಲಿ ಪ್ರಯೋಗಶೀಲತೆಯನ್ನು ತಂದವರು. ಉತ್ತರ ಕನ್ನಡದ ಗೋಕರ್ಣ ಹುಟ್ಟೂರು. ನೆಲೆಸಿರುವುದು ಬೈಂದೂರಿನ ಕಿರಿಮಂಜೇಶ್ವರದಲ್ಲಿ. ತಂದೆ ಹವ್ಯಾಸಿ ಕಲಾವಿದ ಲಕ್ಷ್ಮಿನಾರಾಯಣ ಭಟ್‌ ಹಾಗೂ ತಾಯಿ ಲಕ್ಷ್ಮಿ. ಹಂಗಾರಕಟ್ಟೆ ಯಕ್ಷಗಾನ ಭಾಗವತಿಗೆ ಕೇಂದ್ರದಲ್ಲಿ ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿ, ಕಾಳಿಂಗ ನಾವುಡರ ಸಹವರ್ತಿಯಾಗಿ, ಬಡಗುತಿಟ್ಟಿನ ಈ ಕಾಲದ ಬಹುತೇಕ ಎಲ್ಲ ಮಹಾನ್‌ ಕಲಾವಿದರನ್ನು ಕುಣಿಸಿದ ಹೆಗ್ಗಳಿಕೆ ಇವರದು. ಸುಗಮ ಸಂಗೀತ ಶೈಲಿ, ಶಾಸ್ತಿÅàಯ ಶೈಲಿಯನ್ನು ಯಕ್ಷಗಾನ ಭಾಗವತಿಕೆಯಲ್ಲಿ ನಿರೂಪಿಸುವ ಧಾರೇಶ್ವರರು ನವರಸಗಳನ್ನು ಸುಶ್ರಾವ್ಯವಾಗಿ, ಭಾವಪೂರ್ಣವಾಗಿ ಹಾಡಬಲ್ಲರು. ಕೋಟ ಅಮೃತೇಶ್ವರಿ ಮೇಳ, ಹಿರೇ ಮಹಾಲಿಂಗೇಶ್ವರ, ಶಿರಸಿ ಪಂಚಲಿಂಗೇಶ್ವರ, ಪೆರ್ಡೂರು ಮೇಳದಲ್ಲಿ ಕಲಾಸೇವೆ ಮಾಡಿದ್ದಾರೆ.

ಪ್ರಶಸ್ತಿ ಬಂದಿರುವುದು ತುಂಬಾ ಖುಷಿಯಾಗಿದೆ. ಯಾವುದೇ ನಿರೀಕ್ಷೆಯಿಲ್ಲದೆ ಶ್ರದ್ಧೆ, ನಿಷ್ಠೆಯಿಂದ ಸೇವೆ ಮಾಡಿದರೆ ಅನಿರೀಕ್ಷಿತವಾಗಿ ಅನುಗ್ರಹಿಸುತ್ತಾನೆ ಅನ್ನುವುದಕ್ಕೆ ಇದೇ ಸಾಕ್ಷಿ. – ಸುಬ್ರಹ್ಮಣ್ಯ ಧಾರೇಶ್ವರ

ಡಾ| ಎಲ್‌.ಎಚ್‌. ಮಂಜುನಾಥ್‌
ಬೆಳ್ತಂಗಡಿ: ಮೂಲತಃ ವೃತ್ತಿಯಲ್ಲಿ ಪಶುವೈದ್ಯರಾದ ಡಾ| ಎಲ್‌.ಎಚ್‌.ಮಂಜುನಾಥ್‌ ಪಶುವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಪ್ರಸ್ತುತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಮಂಜುನಾಥ್‌ 1980ರಲ್ಲಿ ಕೆನರಾ ಮಿಲ್ಕ್ ಯೂನಿಯನ್‌ ಮಣಿಪಾಲದಲ್ಲಿ ಪಶುವೈದ್ಯರಾಗಿ ವೃತ್ತಿ ಆರಂಭಿಸಿದ್ದರು. ಬಳಿಕ ಟಿ.ಎ.ಪೈ ಗ್ರಾಮೀಣಾ ಭಿವೃದ್ಧಿ ಸಂಸ್ಥೆಯ ಪ್ರಥಮ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 2001ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಆರಂಭಿಸಿದರು. ಇದು ರಾಷ್ಟ್ರದಲ್ಲಿಯೇ ದೊಡ್ಡ ಸ್ವಯಂಸೇವಾ ಸಂಸ್ಥೆಯಾಗಿ ಹೊರಹೊಮ್ಮುವಲ್ಲಿ ಇವರ ಪಾತ್ರ ಮಹತ್ವ ದ್ದಾಗಿದೆ. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ 17 ವಷ‌ìಗಳ ಕಾಲ ಆಡಳಿತ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

Advertisement

ಡಾ| ವೀರೇಂದ್ರ ಹೆಗ್ಗಡೆಯವರ ಕನಸನ್ನು ನಮ್ಮ ಕಾರ್ಯಕರ್ತರು ನನಸು ಮಾಡಿದ್ದಾರೆ. ಆಡಳಿತ ವ್ಯವಸ್ಥೆ ಸುಸ್ಥಿರವಾದಲ್ಲಿ ದೇಶ ಸದೃಢವಾಗಬಹುದು ಎಂಬುದಕ್ಕೆ ನಮ್ಮ ಯೋಜನೆ ಪ್ರೇರಣೆ.
 - ಡಾ| ಎಲ್‌.ಎಚ್‌. ಮಂಜುನಾಥ್‌

ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ
ಬಂಟ್ವಾಳ: ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರು 1961ರಲ್ಲಿ ಜನಿಸಿದ್ದು, ಪ್ರೌಢ ಶಿಕ್ಷಣದ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸ ಕಲಿತು ಕಟೀಲು, ಮಂಗಳಾದೇವಿ, ಕರ್ನಾಟಕ, ಬಪ್ಪನಾಡು, ಕದ್ರಿ, ಕಾಂತಾವರ, ಸಸಿಹಿತ್ಲು ಮೊದಲಾದ ಹತ್ತಾರು ಮೇಳಗಳಲ್ಲಿ ಸುಮಾರು 4 ದಶಕಗಳ ಕಾಲ ಕಲಾ ಸೇವೆ ನೀಡಿದ್ದಾರೆ. ಸಾಕಷ್ಟು ಮೇಳಗಳ ಸಂಚಾಲಕರಾಗಿ ಮುನ್ನಡೆಸಿದ ಅನುಭವವನ್ನೂ ಹೊಂದಿದ್ದಾರೆ. ಅರ್ಜುನ, ರಕ್ತಬೀಜ, ದೇವೇಂದ್ರ ಶತ್ರುಘ್ನ, ಇಂದ್ರಜಿತು ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದು, ಕನ್ನಡ, ತುಳು ಹತ್ತಾರು ಪ್ರಸಂಗಗಳಲ್ಲಿ ಮಿಂಚಿದ ಹೆಗ್ಗಳಿಕೆ ಹೊಂದಿದ್ದಾರೆ. ಯಕ್ಷಗಾನ ಜತೆಗೆ ಹತ್ತು ಹಲವು ಸಂಘಟನೆಗಳಲ್ಲಿ ವಿವಿಧ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ರಾಜ್ಯ, ದೇಶದ ಹಲವಾರು ಸಂಘ ಸಂಸ್ಥೆಗಳು ಅವರನ್ನು ಗೌರವಿಸಿವೆ. ಪ್ರಗತಿಪರ ಕೃಷಿಕರಾಗಿರುವ ಅಶೋಕ ಶೆಟ್ಟಿ ಅವರು ಸಾಕಷ್ಟು ಕೃಷಿ ಸಮಸ್ಯೆಗಳ ಕುರಿತು ಹೋರಾಟಗಳನ್ನು ಸಂಘಟಿಸಿ ಅವರಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ.

ಯಕ್ಷಗಾನ ಕ್ಷೇತ್ರದಲ್ಲಿ ಸಿಹಿಗಿಂತ ಕಹಿ ಉಂಡು ಪಟ್ಟ ಪರಿಶ್ರಮಕ್ಕೆ ಕಲಾ ಸರಸ್ವತಿ ಸರಕಾರದ ರೂಪದಲ್ಲಿ ನೀಡಿದ ಪ್ರಸಾದ ರೂಪದ ಪಾರಿತೋಷಕ ಎಂದು ವಿನಮ್ರ ಪೂರ್ವಕ ಭಾವಿಸುತ್ತೇನೆ.
– ಸರಪಾಡಿ ಅಶೋಕ ಶೆಟ್ಟಿ

ರವಿ ಶೆಟ್ಟಿ ಮೂಡಂಬೈಲ್‌
ಸಮಾಜಸೇವಕ, ಉದ್ಯಮಿ ರವಿ ಶೆಟ್ಟಿ ಮೂಡಂಬೈಲ್‌ ಅವರು ಸಮಾಜಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೂಡಂಬೈಲ್‌ ತಿಮ್ಮಪ್ಪ ಶೆಟ್ಟಿ-ದೋಣಿಂಜೆಗುತ್ತು ಸರೋಜಿನಿ ಶೆಟ್ಟಿ ದಂಪತಿಯ ಪುತ್ರನಾಗಿ ಬಂಟ್ವಾಳ ತಾಲೂಕಿನ ಮೂಡಂಬೈಲುನಲ್ಲಿ 1963 ಜು.20ರಂದು ಜನಿಸಿದ ರವಿ ಶೆಟ್ಟಿ ಅವರು ಎಂಜಿನಿಯರಿಂಗ್‌ ಹಾಗೂ ಎಂಬಿಎ ಪದವೀಧರರಾಗಿದ್ದಾರೆ. ಭಾರತದಲ್ಲಿ ಹಲವಾರು ಪ್ರಮುಖ ಕಂಪೆನಿಗಳಲ್ಲಿ ಪ್ರತಿಷ್ಠಿತ ಹುದ್ದೆಗಳನ್ನು ನಿಭಾಯಿಸಿರುವ ರವಿಶೆಟ್ಟಿಯವರು ಕೆಲವು ವರ್ಷಗಳಿಂದ ಕತಾರ್‌ನಲ್ಲಿ ಎಟಿಎಸ್‌ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾªರೆ.ಕರ್ನಾಟಕ ಸಂಘ ಕತಾರ್‌, ತುಳುಕೂಟ ಕತಾರ್‌, ಬಂಟ್ಸ್‌ ಕತಾರ್‌ ಹಾಗೂ ಜಿಲ್ಲೆಯ ಹಲವು ಸಂಘಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಮಹಾಪೋಷಕರಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ರವಿಶೆಟ್ಟಿಯವರ ಜೀವನದ ಬಗ್ಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ರವಿತೇಜ ಎಂಬ ಪುಸ್ತಕವನ್ನು ಇತ್ತೀಚೆಗೆ ಪ್ರಕಟಿಸಿತ್ತು.

ನನ್ನ ಸಮಾಜ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ತುಂಬಾ ಸಂತೋಷ ತಂದಿದೆ. ಇದು ಇನ್ನೂ ಹೆಚ್ಚಿನ ಸಮಾಜಸೇವೆಗೆ ಪ್ರೇರಣೆಯಾಗಿದೆ.
– ರವಿ ಶೆಟ್ಟಿ ಮೂಡಂಬೈಲ್‌

ಯುವವಾಹಿನಿ
ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯೋತ್ಸವ ಪ್ರಶಸ್ತಿಗೆ ದ.ಕ. ಜಿಲ್ಲೆಯ ಯುವವಾಹಿನಿ ಸಂಸ್ಥೆ ಆಯ್ಕೆಯಾಗಿದೆ. ಸಾಮಾ ಜಿಕ, ಶೈಕ್ಷಣಿಕ, ಕ್ರೀಡೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಯುವವಾಹಿನಿ ಸಂಸ್ಥೆ ಮಾಡಿದ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಮಾಜ ಪರಿವರ್ತನೆಯತ್ತ ಯುವ ಸಮುದಾಯವನ್ನು ಸಜ್ಜುಗೊಳಿಸಬೇಕು ಎಂಬ ಆಶಯದಿಂದ 1987ರಲ್ಲಿ ಕೆಲವೇ ಕೆಲವು ಮಂದಿ ಯುವಕರಿಂದ ಸಂಘಟಿಸಲ್ಪಟ್ಟ ಯುವವಾಹಿನಿ ಇಂದು 35 ವರ್ಷಗಳನ್ನು ಪೂರೈಸಿದ್ದು 3,000ಕ್ಕೂ ಅಧಿಕ ಸದಸ್ಯರಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶದಂತೆ ಯುವವಾಹಿನಿಯ 33 ವಿವಿಧ ಘಟಕಗಳು ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಮೂರು ಮುಖ್ಯ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದೆ. ಸುಮಾರು 25ಕ್ಕೂ ಅಧಿಕ ಬಡಕುಟುಂಬಗಳಿಗೆ ಮನೆ ನಿರ್ಮಾಣ, 100ಕ್ಕೂ ಅಧಿಕ ಕುಟುಂಬಗಳ ಮನೆನಿರ್ಮಾಣಕ್ಕೆ ಸಹಾಯಧನ, 500 ಮಕ್ಕಳ ದತ್ತು ಸ್ವೀಕಾರ, 500ಕ್ಕೂ ಅಧಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸರಳ ಹಾಗೂ ಉಚಿತ ವಿವಾಹ, ಹಲವು ಆರೋಗ್ಯ ಶಿಬಿರ ಸಹಿತ ವಿವಿಧ ನೆಲೆಯಲ್ಲಿ ಯುವವಾಹಿನಿ ಕಾರ್ಯನಡೆಸಿದೆ.

ನೃತ್ಯಗುರು ಪಿ.ಕಮಲಾಕ್ಷ ಆಚಾರ್‌
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಪಡಿ³ರೆ ಎಂಬಲ್ಲಿ ದಾರುಶಿಲ್ಪಿ ಗಿರಿಯಪ್ಪ ಆಚಾರ್‌ ಮತ್ತು ಕಮಲಾ ದಂಪತಿ ಪುತ್ರರಾಗಿ ಜನಿಸಿದ ಅವರು ಎಸೆಸೆಲ್ಸಿ ಪೂರ್ಣಗೊಳಿಸಿ 1967ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸರಕಾರಿ ಶಾಲೆಗೆ ಸೇರ್ಪಡೆಗೊಂಡರು. 1967 ಮೇ 23ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾಗಿ ಪುರಸ್ಕೃತಗೊಂಡಿದ್ದ ಅವರು, 2005ರಲ್ಲಿ ಸೇವಾ ನಿವೃತ್ತಿ ಪಡೆದರು. 1976ರಿಂದ ಬೆಳ್ತಂಗಡಿಯಲ್ಲಿ ನೃತ್ಯನಿಕೇತನ ಸಂಸ್ಥೆಯನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದಾರೆ. ಏಕವ್ಯಕ್ತಿ ಹಾಗೂ ಸಮೂಹ ಭರತನಾಟ್ಯ ಕಾರ್ಯಕ್ರಮಗಳನ್ನು ಮೈಸೂರು ದಸರಾದ ಸಾಂಸ್ಕೃತಿಕ ವೇದಿಕೆಯಲ್ಲಿ ನೃತ್ಯ ಪ್ರದರ್ಶಿಸಿರುತ್ತಾರೆ. ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತು ಸ್ಥಾಪಕಾಧ್ಯಕ್ಷರಾಗಿ, 1986ರಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀûಾ ಮಂಡಳಿ ಯಲ್ಲಿ ನೃತ್ಯ ಪರೀಕ್ಷಕರಾಗಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಮಕ್ಕಳಿಂದ ಅವರ ಸಾಧನೆಯಿಂದ ನಾನು ಗುರುತಿಸಲ್ಪಟ್ಟಿದ್ದೇನೆ. ಹಾಗಾಗಿ ವಿದ್ಯಾರ್ಥಿಗಳು, ಪೋಷಕರಿಗೆ ಕೃತಜ್ಞತೆ ಸಲ್ಲಿಸಲು ಇಷ್ಟಪಡುತ್ತೇನೆ.
– ಪಿ. ಕಮಲಾಕ್ಷ ಆಚಾರ್‌

ದೈವ ನರ್ತಕ ಗುಡ್ಡ ಪಾಣಾರ
ಕಾಪು: ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದಾದ ಕಾಪುವಿನ ದ್ವೈ ವಾರ್ಷಿಕ ಪಿಲಿಕೋಲ ದೈವದ ನರ್ತಕರಾಗಿ ಸೇವೆ ಸಲ್ಲಿಸುತ್ತಿರುವ ಮೂಳೂರಿನ ಗುಡ್ಡ ಪಾಣಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಗುಡ್ಡ ಪಾಣಾರ ಅವರು ಅವಿದ್ಯಾವಂತರಾಗಿದ್ದರೂ ಹಿರಿಯರಿಂದ ಬಳುವಳಿಯಾಗಿ ಬಂದಿರುವ ದೈವಾರಾಧನೆ ಮತ್ತು ಜಾನಪದ ಕಲೆಗಳನ್ನು ಪೋಷಿಸಿ, ಮುಂದಿನ ತಲೆಮಾರಿನವರೆಗೂ ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಿಸಿ ಕೊಂಡು ಬಂದಿದ್ದಾರೆ. 48 ವರ್ಷಗಳಿಂದ ದೈವಾರಾಧನೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು 38 ವರ್ಷಗಳಿಂದ ಪಿಲಿಕೋಲ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಪು ಸಾವಿರ ಸೀಮೆಯ ವಿವಿಧೆಡೆ ಪಂಜುರ್ಲಿ, ವರ್ತೆ, ಗುಳಿಗ, ಬಬ್ಬರ್ಯ, ತನ್ನಿಮಾನಿಗ ಸಹಿತ ಇತರ ದೆ„ವಗಳ ನರ್ತನ ಸೇವೆ ನಡೆಸುತ್ತಿದ್ದು ಅವರು ಪಿಲಿ ಕೋಲ ನರ್ತನ ಸೇವೆ ಆರಂಭಿಸಿದ ಬಳಿಕ ಇತರ ದೆ„ವಗಳ ನರ್ತನ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ.

20ನೇ ವರ್ಷದಿಂದಲೇ ದೆ„ವಗಳ ನರ್ತಕನಾಗಿ ತಂದೆಯಿಂದ ಬಳುವಳಿ ಯಾಗಿ ಬಂದ ಸೇವೆಯನ್ನು ನಡೆಸಿಕೊಂಡು ಬಂದಿದ್ದೇನೆ. ಪ್ರಾಮಾಣಿಕ ಸೇವೆಗೆ ದೈವ ಕೃಪೆ ರೂಪದಲ್ಲಿ ಪ್ರಶಸ್ತಿ ಲಭಿಸಿದೆ.
-ಗುಡ್ಡ ಪಾಣಾರ

ವಿದ್ವಾನ್‌ ಎಂ. ನಾರಾಯಣ
ಮಂಗಳೂರು: ಸಂಗೀತ ಕ್ಷೇತ್ರ ಕಂಡ ಪ್ರತಿಭಾವಂತ ಕೃತಿ ರಚನೆಕಾರರಾಗಿರುವ ಎಂ. ನಾರಾಯಣ ತುಳು ಭಾಷೆಯಲ್ಲಿ ವರ್ಣ ಮತ್ತು ಕೃತಿಗಳನ್ನು ರಚಿಸಿದ ಮೊದಲಿಗರು. ಸಂಗೀತ ಗುರು, ಗಾಯಕರಾಗಿರುವ ನಾರಾಯಣ ಅವರು 1943ರಲ್ಲಿ ಮೂಡುಬಿದಿರೆಯಲ್ಲಿ ಎಂ.ಬಾಬು ಮತ್ತು ರಮಾ ದಂಪತಿಯ ಹಿರಿಯ ಮಗನಾಗಿ ಜನಿಸಿದರು. ತಂದೆ ಖ್ಯಾತ ವೇಣುವಾದನ ವಿದ್ವಾಂಸರಾಗಿದ್ದು, ಅವರಿಂದ ಆರಂಭಿಕ ಶಿಕ್ಷಣ ಪಡೆದಿದ್ದಾರೆ. ಜಿಲ್ಲೆಯ ಹಿರಿಯ ಸಂಗೀತ ವಿದ್ವಾಂಸರಾದ ಎನ್‌.ಗೋಪಾಲ ಕೃಷ್ಣ ಅವರಿಂದ ಪ್ರೌಢಶಿಕ್ಷಣ ಪಡೆದು 1970ರಲ್ಲಿ ವಿದ್ವತ್‌ ಪದವೀಧರರಾದರು. 30 ವರ್ಷಗಳಿಂದ ಸುರತ್ಕಲ್‌ ಹಾಗೂ ಮೂಲ್ಕಿಯಲ್ಲಿ ಮಕ್ಕಳಿಗೆ ಸಂಗೀತ ಧಾರೆಯೆರೆಯುತ್ತಿರುವ ಇವರ ಅನೇಕ ಶಿಷ್ಯರು ವಿದ್ವತ್‌ ಪದವೀಧರಾಗಿದ್ದು, ಸಂಗೀತ ಗುರುಗಳಾಗಿದ್ದಾರೆ. ಕನ್ನಡ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ “ನಾರಾಯಣದಾಸ’ ಅಂಕಿತದಲ್ಲಿ 500ಕ್ಕೂ ಹೆಚ್ಚು ಕೃತಿ ರಚನೆ ಮಾಡಿದ್ದಾರೆ. 72 ಮೇಳ ಕರ್ತರಾಗಗಳಲ್ಲಿ ಕೃತಿ ರಚಿಸಿದ್ದಾರೆ. ಜಿಲ್ಲೆಯಲ್ಲಿ ಪರಂಪರಾಗತ ಉಂಛವೃತ್ತಿ ಪ್ರಾರಂಭಿಸಿದ ಮೊದಲಿಗರು.

ಪ್ರಶಸ್ತಿ ದೊರೆಯುತ್ತದೆ ಎನ್ನುವ ನಿರೀಕ್ಷೆ ಇರಲಿಲ್ಲ. ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ಅರ್ಜಿಯನ್ನೂ ಹಾಕಿರಲಿಲ್ಲ. ಇದರ ಶ್ರೇಯಸ್ಸು ಎಲ್ಲ ಅಭಿಮಾನಿಗಳು, ಶಿಷ್ಯರಿಗೆ ಸಲ್ಲಬೇಕು.
– ವಿದ್ವಾನ್‌ ಎಂ. ನಾರಾಯಣ

ರಾಜ್‌ ಕುಮಾರ್‌ ಬಹ್ರೈನ್‌
ಉಡುಪಿ ಅಂಬಲಪಾಡಿ ಮೂಲದ ರಾಜ್‌ಕುಮಾರ್‌ ಅವರು ಕಳೆದ 40 ವರ್ಷಗಳಿಂದ ಬಹ್ರೈನ್‌ನಲ್ಲಿ ಉದ್ಯೋಗದ ಜತೆಗೆ ಕನ್ನಡದ ಕಂಪನ್ನು ಪರಸರಿಸುವ ಸೇವೆಯಲ್ಲಿ ನಿರತರಾಗಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಬಹ್ರೈನ್‌ ಕನ್ನಡ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಂಘದ ಮೂಲಕ 2 ಬಾರಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ಬಹ್ರೈನ್‌ನಲ್ಲಿ ಆಳ್ವಾಸ್‌ ನುಡಿಸಿರಿ ಕಾರ್ಯಕ್ರಮವನ್ನು ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 25 ಅಂದ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು. ಪುನೀತ್‌ ಗಾನನಮನ ಎಂಬ ವಿನೂತನ ಕಾರ್ಯಕ್ರಮವನ್ನು ಬಹ್ರೈನ್‌ನಲ್ಲಿ ನಡೆಸಿದ್ದರು. ಬಹ್ರೈನ್‌ನಲ್ಲಿ ಕನ್ನಡಿಗರಿಗಾಗಿ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸುತ್ತಿರುತ್ತಾರೆ. ಬಹ್ರೈನ್‌ ಬಿಲ್ಲವಾಸ್‌ ಸಂಸ್ಥಾಪಕರಾಗಿ, 5 ಬಾರಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ತಂದೆ ಭಾಸ್ಕರ್‌ ಪಾಲನ್‌, ತಾಯಿ ಸುಂದರಿ ಅಮಿನ್‌.

ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಅತ್ಯಂತ ಖುಷಿ ತಂದಿದೆ. ಕನ್ನಡ ನಾಡು, ನುಡಿಯ ಸೇವೆ ನಿರಂತರವಾಗಿ ನಡೆಯಲಿದೆ.- ರಾಜ್‌ ಕುಮಾರ್‌

ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ
ಕುಂದಾಪುರ/ಕೊಲ್ಲೂರು: ಸಮಾಜ ಸೇವಕ, ದಾನಿ, ಹೈದರಾಬಾದ್‌ನಲ್ಲಿ ಹೊಟೇಲ್‌ ಉದ್ಯಮಿಯಾಗಿರುವ ಮಾರಣಕಟ್ಟೆಯ ಕೃಷ್ಣಮೂರ್ತಿ ಮಂಜ ಅವರಿಗೆ ಹೊರನಾಡು ವಿಭಾಗದಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಅರಸಿಕೊಂಡು ಬಂದಿದೆ. ಮಾರಣಕಟ್ಟೆಯ ಸುಬ್ರಹ್ಮಣ್ಯ ಮಂಜ ಹಾಗೂ ವಿಶಾಲ ದಂಪತಿಯ ಪುತ್ರನಾಗಿರುವ ಕೃಷ್ಣಮೂರ್ತಿ ಮಂಜರು ಅನೇಕ ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಸೇವಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ನೆರವನ್ನು ನೀಡುತ್ತಿದ್ದಾರೆ. ಕುಂದಾಪುರ, ಬೈಂದೂರು ಭಾಗದ 7 ಸರಕಾರಿ ಶಾಲೆಗಳನ್ನು ಎಂ.ಎಸ್‌. ಮಂಜ ಚಾರಿಟೆಬಲ್‌ ಟ್ರಸ್ಟ್‌ ಮೂಲಕ ದತ್ತು ಪಡೆದುಕೊಂಡು, ಅಲ್ಲಿನ ಮಕ್ಕಳಿಗೆ ನೆರವು ನೀಡುತ್ತಿದ್ದಾರೆ. 42 ವರ್ಷಗಳಿಂದ ಹೈದರಾಬಾದ್‌ನಲ್ಲಿ ಹೊಟೇಲ್‌ ಉದ್ಯಮಿಯಾಗಿದ್ದು, ಕಲಾ ಪೋಷಕರಾಗಿಯೂ ಪ್ರಸಿದ್ಧರಾಗಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಹುಡುಕಿಕೊಂಡು ಬಂದಿರುವುದು ಖುಷಿಯಾಗಿದೆ. ಇನ್ನಷ್ಟು ಸೇವೆ ಮಾಡಲು ಇದು ನನಗೆ ಸ್ಫೂರ್ತಿ ಹಾಗೂ ಶಕ್ತಿ ಕೊಟ್ಟಂತಾಗಿದೆ.
– ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ

ಡಾ| ಪ್ರಭಾಕರ ಜೋಶಿ (ಯಕ್ಷಗಾನ)
ಮಂಗಳೂರು: ಯಕ್ಷಗಾನ ಕ್ಷೇñÅ‌ದಲ್ಲಿ ಬಹುಮುಖೀ ಸಾಧನೆಗೈದಿರುವ ಡಾ| ಜೋಶಿ ಅವರು ಕರ್ನಾಟಕದ ಬಹುಶ್ರುತ ವಿದ್ವಾಂಸರು. ಕಲಾವಿದ, ಸಂಶೋಧಕ, ಯಕ್ಷಗಾನ ಕೋಶದ ನಿರ್ಮಾಪಕ, ವಿಮರ್ಶಕ, ಸಂಪನ್ಮೂಲ ವ್ಯಕ್ತಿಯಾಗಿ ಅವರದ್ದು ಅಚ್ಚಳಿಯದ ಛಾಪು. 1946ರಲ್ಲಿ ಕಾರ್ಕಳ ತಾಲೂಕಿನ ಮಾಳದಲ್ಲಿ ಜನಿಸಿದ ಅವರದ್ದು ಸಾಹಿತ್ಯಿಕ-ಕಲಾಕುಟುಂಬ. ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯ-ಸಂಸ್ಕೃತಿ ಪ್ರೀತಿ. ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ, ಹಿಂದಿ ಸಾಹಿತ್ಯರತ್ನ ಮತ್ತು ಯಕ್ಷಗಾನದಲ್ಲಿ ಪಿಎಚ್‌ಡಿ. ಮೂರು ದಶಕಗಳ ಕಾಲ ಬೆಸೆಂಟ್‌ ಸಂಸ್ಥೆಯಲ್ಲಿ ವಾಣಿಜ್ಯ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿಯೂ ಅನುಭವ ಹೊಂದಿದ್ದಾರೆ. ಕನ್ನಡ, ಸಂಸ್ಕೃತ, ಮರಾಠಿ, ತುಳು, ಕೊಂಕಣಿ ಸೇರಿದಂತೆ ಬಹುಭಾಷಾ ಜ್ಞಾನಿ. ತಾಳಮದ್ದಳೆ ರಂಗದ ಸಮರ್ಥ ಅರ್ಥದಾರಿ. ಭಾವ ವಿಚಾರಯುಕ¤‌ ಅರ್ಥಗಾರಿಕೆಗೆ ಹೆಸರುವಾಸಿ. ಕಲಾವಿದನಾಗಿ ಹೆಗ್ಗುರುತು. ಹತ್ತಕ್ಕೂ ಹೆಚ್ಚು ಕೃತಿಗಳ ಲೇಖಕ, ಯಕ್ಷಗಾನ ಪ್ರಸಂಗ ವಿಮರ್ಶೆಯಲ್ಲಿ ಹಿಡಿತ ಹೊಂದಿದ್ದಾರೆ.

ಯಕ್ಷಗಾನ ತಾಳಮದ್ದಲೆಯ ಮತ್ತು ವಿಮಶಾì ಕ್ಷೇತ್ರದ ಸಮುದಾಯದ ಪರವಾಗಿ ಈ ಪ್ರಶಸ್ತಿಯನ್ನು ನಮ್ರತೆಯಿಂದ ಸ್ವೀಕರಿಸಿದ್ದೇನೆ.
-ಡಾ| ಪ್ರಭಾಕರ ಜೋಶಿ

ಪ್ರಸಿದ್ಧ ಸ್ತ್ರೀ ವೇಷಧಾರಿ ಎಂ.ಎ. ನಾಯ್ಕ
ಬ್ರಹ್ಮಾವರ: ಮಂದಾರ್ತಿ ಅಣ್ಣಪ್ಪ ನಾಯ್ಕ (ಎಂ.ಎ. ನಾಯ್ಕ) (70) ಅವರು 6ನೇ ತರಗತಿ ವಿದ್ಯಾಭ್ಯಾಸದ ಬಳಿಕ ಯಕ್ಷಗಾನಕ್ಕೆ ಸೇರಿದ್ದರು. ಕೋಟ ಅಮೃತೇಶ್ವರೀ ಮೇಳದಲ್ಲಿ 18 ವರ್ಷ, ಮೂಲ್ಕಿ, ಶಿರಸಿಯಲ್ಲಿ ಎರಡು, ಇಡಗುಂಜಿಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದ ಅವರು ಮಂದಾರ್ತಿ ಮೇಳದಲ್ಲಿ 19 ವರ್ಷ ಕಲಾಸೇವೆಗೈದು ನಿವೃತ್ತರಾಗಿದ್ದರು. ಪೌರಾಣಿಕದಲ್ಲಿ ಕೀಚಕ ವಧೆಯ ಸೈರಂದ್ರಿ, ಅಶೋಕ ವನದ ಸೀತೆ, ಹರಿಶ್ಚಂದ್ರದ ಚಂದ್ರಮತಿ, ರಾಮಾಂಜನೇಯದ ಸೀತಾ, ನಳದಮಯಂತಿ ಪುನರ್‌ಸ್ವಯಂವರದಲ್ಲಿ ದಮಯಂತಿ, ರತಿ ಕಲ್ಯಾಣದಲ್ಲಿ ದ್ರೌಪದಿ, ದ್ರೌಪದಿ ಪ್ರತಾಪದಲ್ಲಿ ದ್ರೌಪದಿ, ಕೃಷ್ಣಾರ್ಜುನ ಕಾಳಗದಲ್ಲಿ ಸುಭದ್ರೆ, ಇತ್ತೀಚಿನ ಭಾಗ್ಯಭಾರತಿಯಲ್ಲಿ ಭಾರತಿ, ರಾಜಾಬೃಹದ್‌ರಥದಲ್ಲಿ ಕಲಾವತಿ, ಕಾಳಿದಾಸದಲ್ಲಿ ವಿದ್ಯಾಧರೆ, ಶಶಿಪ್ರಭೆ ಪ್ರಸಿದ್ಧ ಪಾತ್ರಗಳು. ನಿವೃತ್ತ ಜೀವನದ 14 ವರ್ಷಗಳಿಂದ ಕೃಷಿಯಲ್ಲಿ ತೊಡಗಿದ್ದಾರೆ. ಪತ್ನಿ, ಪುತ್ರ, ಮೂವರು ಪುತ್ರಿಯರಿದ್ದಾರೆ.

ಗುರುಗಳಾದ ನಾರಾಯಣಪ್ಪ ಉಪ್ಪೂರು, ಯಕ್ಷಗಾನದಲ್ಲಿ ನನ್ನನ್ನು ಬೆಳೆಸಿದವರಿಗೆ, ಅವಕಾಶ ನೀಡಿದ ಮೇಳಗಳಿಗೆ, ಒಡನಾಡಿಗಳಿಗೆ, ಅಭಿಮಾನಿಗಳಿಗೆ ಸಮರ್ಪಿಸುತ್ತಿದ್ದೇನೆ.
-ಎಂ.ಎ. ನಾಯ್ಕ

ಸಾಂಬಾರ್‌ ಸುಲ್ತಾನ್‌ ಜಯರಾಂ ಬನಾನ್‌
ಕಾರ್ಕಳ: ದಿಲ್ಲಿ ಸೇರಿದಂತೆ ದೇಶದ ಉದ್ದಕ್ಕೂ ಹೊಟೇಲ್‌ ಉದ್ಯಮ ನಡೆಸುತ್ತಿರುವ ಕಾರ್ಕಳದ ಮಠದಬೆಟ್ಟುವಿನ ಹೊಟೇಲ್‌ ಉದ್ಯಮಿ, ಸಮಾಜ ಸೇವಕ ಜಯರಾಂ ಬನಾನ್‌ ಅವರಿಗೆ ವಾಣಿಜ್ಯ ಕ್ಷೇತ್ರದ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. 13ನೇ ವಯಸ್ಸಿನಲ್ಲಿ ಮನೆಬಿಟ್ಟು, ಮುಂಬಯಿಗೆ ತೆರಳಿ ಕಷ್ಟಕಾರ್ಪಣ್ಯಗಳ ನಡುವೆ ಹಂತಹಂತವಾಗಿ ಯಶಸ್ಸಿನ ಮೆಟ್ಟಿಲೇರಿದ್ದರು. 5 ಸಾವಿರ ರೂ.ಗಳ ಬಂಡವಾಳದೊಂದಿಗೆ ದಿಲ್ಲಿಯ ಡಿಫೆ®Õ… ಕಾಲನಿಯಲ್ಲಿ ಸಾಗರ್‌ ರತ್ನ ರೆಸ್ಟೋರೆಂಟ್‌ ಆರಂಭಿಸಿದ್ದರು. ಅನಂತರ ದಿಲ್ಲಿಯಾದ್ಯಂತ ಸರಣಿ ರೆಸ್ಟೋರೆಂಟ್‌ಗಳನ್ನು ತೆರೆದರು. ಓಷಿಯನ್‌ ಪರ್ಲ್ ಹೊಟೇಲ್‌ ಕೂಡ ಇವರದಾಗಿದೆ. ದೇಶದಲ್ಲಿ ಸಾಗರ್‌ರತ್ನ ಮತ್ತು ಶ್ರೀರತ್ನಂ ಹೆಸರಿನ ಸುಮಾರು 15ಕ್ಕೂ ಹೆಚ್ಚು ಶಾಖೆಗಳು ಮತ್ತು ಅದರ ಅಂಗಸಂಸ್ಥೆ ಸ್ವಾಗತ್‌ ಹೆಸರಿನಲ್ಲಿ ಇನ್ನಷ್ಟು ಶಾಖೆಗಳು ಸ್ಥಾಪಿತವಾಗಿವೆ. ನಿಯತಕಾಲಿಕೆಗಳು ಬನಾನ್‌ ಅವರನ್ನು “ಸಾಂಬಾರಿನ ಸುಲ್ತಾನ್‌’ ಎಂದು ಉಲ್ಲೇಖೀಸಿದೆ. ಸಂಘ ಸಂಸ್ಥೆಗಳು, ದೇವಸ್ಥಾನ, ಬಡವರು, ದೀನ ವರ್ಗದವರಿಗೆ, ವಿದ್ಯಾರ್ಥಿಗಳಿಗೆ ಬನಾನ್‌ ಆರ್ಥಿಕ ಸಹಾಯ ಮಾಡುತ್ತಿದ್ದಾರೆ.

ಹೊಟೇಲು ಉದ್ಯಮದ ತನ್ನ ಯಶಸ್ವಿನ ಹಿಂದೆ ಸಿಬಂದಿಯ ಸೇವೆ ಬಹುಮುಖ್ಯ ಎನ್ನುವುದನ್ನು ಸ್ಮರಿಸಿಕೊಳ್ಳಲೇಬೇಕು. ಉದ್ಯಮದ ಜತೆಗೆ ಸಮಾಜ ಸೇವೆಯನ್ನು ಗುರುತಿಸಲಾಗಿದೆ.
-ಜಯರಾಂ ಬನಾನ್‌

ಪ್ರಗತಿ ಪರ ಕೃಷಿಕ ಗಣೇಶ್‌ ತಿಮ್ಮಯ್ಯ
ಮಡಿಕೇರಿ: ಪ್ರಗತಿ ಪರ ಕೃಷಿಕ ವೀರಾಜಪೇಟೆ ತಾಲೂಕಿನ ಸೋಮೇಂಗಢ ಗಣೇಶ್‌ ತಿಮ್ಮಯ್ಯ 20 ವಷ‌ìಗಳಿಂದ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಭತ್ತದ ಕೃಷಿಯಲ್ಲಿ 60ಕ್ಕೂ ಹೆಚ್ಚು ತಳಿಯ ಪ್ರಯೋಗ ನಡೆಸಿರುವುದು ಇವರ ಹೆಗ್ಗಳಿಕೆ. ಅಡಿಕೆ, ಕಾಫಿ, ಭತ್ತ, ಉಪ ಬೆಳೆಯಾಗಿ, ತರಕಾರಿ ಬೆಳೆದಿದ್ದಾರೆ. ವಿವಿಧ ಹಣ್ಣುಗಳನ್ನು ಬೆಳೆದು ಮಾರುಕಟ್ಟೆ ಕಲ್ಪಿಸಿದ್ದಾರೆ. ಬಟರ್‌ಫ‌ೂÅಟ್‌, ಸಪೋಟ, ಮಾವು, ಹಲಸು, ಕಿತ್ತಳೆ, ಎಗ್‌ಫ‌ೂÅಟ್‌, ರಾಂಬುಟನ್‌ ಬೆಳೆದು ಯಶಸ್ವಿಯಾಗಿದ್ದಾರೆ. ವಾರ್ಷಿಕವಾಗಿ 350ರಿಂದ 400 ಕ್ವಿಂಟಲ್‌ ಭತ್ತ, 200 ಚೀಲ ಕಾಫಿ ಬೆಳೆಯುತ್ತಾರೆ. ಅವರು ಯುವಕರಲ್ಲಿ ಹಾಗೂ ಕೃಷಿ ಜಮೀನು ಪಾಳು ಬಿಟ್ಟವರಲ್ಲಿ ಕೃಷಿ ಸ್ಫೂರ್ತಿ ತುಂಬುತ್ತಿದ್ದಾರೆ. ಕೃಷಿ ಕಾಯಕದೊಂದಿಗೆ ಕೃಷಿ ಜಾಗೃತಿ ಮೂಡಿಸುತ್ತಿದ್ದು, ನೂರಾರು ರೈತರು ಮತ್ತೆ ಭತ್ತ ಬೆಳೆಯುವಂತೆ ಮಾಡಿದ್ದಾರೆ. ಕೃಷಿಯೊಂದಿಗೆ ಉಪ ಕಸುಬಾಗಿ, ಜೇನು ಸಾಕಣೆ, ಕೋಳಿ ಸಾಕಣೆ ಹಾಗೂ ಮೀನು ಕೃಷಿಯನ್ನೂ ಮಾಡುತ್ತಿದ್ದಾರೆ.

ಕೊಡಗಿನ ಕೃಷಿಕನನ್ನು ಸರಕಾರ ಗುರುತಿಸಿರುವುದು ಹರ್ಷ ತಂದಿದೆ. ಕೃಷಿಯನ್ನು ಎಲ್ಲರಿಗೂ ತಲುಪಿಸುವ ಕೆಲಸವನ್ನು ಮಾಡುತ್ತಿರುವೆ. ಜಿಲ್ಲೆಯಲ್ಲಿ ಕೃಷಿಯ ಜಾಗೃತಿ ಮೂಡಿಸುತ್ತಿದ್ದೇನೆ.
– ಗಣೇಶ್‌ ತಿಮ್ಮಯ್ಯ

ಕುಂಚಕಲೆಯ ಮಾಂತ್ರಿಕ ದೇವಿದಾಸ ಶೆಟ್ಟಿ
ಮುಂಬಯಿ: ತಮ್ಮದೇ ಆದ ರೂಪರೇಷೆಯಿಂದ ಕಲೆಯ ಬಲೆಯನ್ನು ನೇಯ್ದು ಹೊಸ ಸೆಲೆಯನ್ನು ನೀಡಿದವರಲ್ಲಿ ದೇವಿದಾಸ ಶೆಟ್ಟಿಯವರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಜೀವನದ ಗಾಢವಾದ ಅನುಭವಗಳು ದೇವಿದಾಸ ಶೆಟ್ಟಿ ಅವರ ಕುಂಚಕ್ಕೆ ಪ್ರೇರಣೆಯನ್ನು ನೀಡಿತು ಎನ್ನಬಹುದು. ಮುಂಬಯಿ ಮಹಾನಗರದಲ್ಲಿಯ ಒಂದು ಪುಟ್ಟ ಕೋಣೆ ಶೆಟ್ಟಿಯವರ ಕಲೆಯ ಗುಡಿ. ಅಲ್ಲಿರುವುದು ಕಲೆ ಅರಳಲು ಬೇಕಾದ ಕುಂಚ, ಕ್ಯಾನ್ವಾಸು, ಸ್ಟಾಂಡು, ಅಲ್ಲಲ್ಲಿ ಹರಡಿದ ಬಣ್ಣ, ಚಿತ್ರಿಸಿದ ಚಿತ್ರಗಳು, ಕಲಾಕೃತಿಗಳು ಅದರ ಜತೆಯಲ್ಲಿ ಮಾರಿಹೋಗದ ಕಲಾಕೃತಿಗಳನ್ನು ಕಂಡಾಗ ದೇವಿದಾಸ ಶೆಟ್ಟಿ ಅವರ ನೂರು ಮಾತುಗಳನ್ನು ಹೇಳಬಲ್ಲ, ನೋವುಗಳನ್ನು ಸ್ಪುರಿಸಬಲ್ಲ ನಿಟ್ಟುಸಿರಾದರೂ ಅದು ಅವರ ಜೀವನೋಲ್ಲಾಸವನ್ನು ಹೆಚ್ಚಿಸುವ ಜಾಗ ಎನ್ನುವುದೂ ಅಷ್ಟೇ ಸತ್ಯ. ದೇಶ-ವಿದೇಶಗಳಲ್ಲಿ 72 ಏಕವ್ಯಕ್ತಿ ಪ್ರದರ್ಶನ, ಸುಮಾರು 240 ಕಲಾವಿದರ ಶಿಬಿರಗಳನ್ನು ಆಯೋಜಿಸಿದ್ದಾರೆ.

ನನ್ನ ಕಲೆಯ ಹುಚ್ಚನ್ನು ಕಂಡು ಒಂದು ಕಾಲದಲ್ಲಿ ಗೇಲಿ ಮಾಡಿದವರು ಇಂದು ನನ್ನನ್ನು ಗೌರವದಿಂದ ಕಾಣುತ್ತಿದ್ದಾರೆ. ಇಂದು ಅದೇ ಕಲೆಯನ್ನು ಪ್ರಶಸ್ತಿ ಹುಡುಕಿಕೊಂಡು ಬಂದಿದೆ.
-ದೇವಿದಾಸ ಶೆಟ್ಟಿ

2022ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ

ಸಂಕೀರ್ಣ ಕ್ಷೇತ್ರ
ಸುಬ್ಬರಾಮ ಶೆಟ್ಟಿ ಆರ್‌.ವಿ. ಸಂಸ್ಥೆಗಳು- ಬೆಂಗಳೂರು
ವಿದ್ವಾನ್‌ ಗೋಪಾಲಕೃಷ್ಣ ಶರ್ಮ- ಬೆಂಗಳೂರು
ಸೋಲಿಗರ ಮಾದಮ್ಮ – ಚಾ.ನಗರ

ಸೈನಿಕ ಕ್ಷೇತ್ರ
ಸುಬೇದಾರ್‌ ಬಿ.ಕೆ.ಕುಮಾರಸ್ವಾಮಿ – ಬೆಂಗಳೂರು
ಪತ್ರಿಕೋದ್ಯಮ
ಎಚ್‌.ಆರ್‌.ಶ್ರೀಶಾ- ಬೆಂಗಳೂರು
ಜಿ.ಎಂ.ಶಿರಹಟ್ಟಿ-ಗದಗ

ವಿಜ್ಞಾನ ತಂತ್ರಜ್ಞಾನ ಕ್ಷೇತ್ರ
ಕೆ.ಶಿವನ್‌- ಬೆಂಗಳೂರು
ಡಾ.ಡಿ.ಆರ್‌.ಬಳೂರಗಿ-ರಾಯಚೂರು

ಕೃಷಿ ಕ್ಷೇತ್ರ
ಗಣೇಶ್‌ ತಿಮ್ಮಯ್ಯ-ಕೊಡಗು
ಚಂದ್ರಶೇಖರ್‌ ನಾರಾಯಣಪುರ-ಚಿಕ್ಕಮಗಳೂರು

ಪರಿಸರ ಕ್ಷೇತ್ರ
ಸಾಲುಮರದ ನಿಂಗಣ್ಣ- ರಾಮನಗರ

ಪೌರಕಾರ್ಮಿಕ ಕ್ಷೇತ್ರ
ಮಲ್ಲಮ್ಮ ಹೂವಿನಹಡಗಲಿ- ವಿಜಯನಗರ

ಆಡಳಿತ ಕ್ಷೇತ್ರ
ಡಾ.ಎಲ್‌.ಎಚ್‌.ಮಂಜುನಾಥ್‌- ಧರ್ಮಸ್ಥಳ ಗ್ರಾಮೀಣಭಿವೃದ್ದಿ ಯೋಜನೆ- ಶಿವಮೊಗ್ಗ
ಮದನ್‌ ಗೋಪಾಲ್‌- ಬೆಂಗಳೂರು

ಹೊರನಾಡು ಕ್ಷೇತ್ರ
ದೇವಿದಾಸ ಶೆಟ್ಟಿ -ಮುಂಬಯಿ
ಅರವಿಂದ ಪಾಟೀಲ್‌-ಹೊರನಾಡು
ಕೃಷ್ಣಮೂರ್ತಿ ಮಾಂಜಾ-ತೆಲಂಗಾಣ

ಹೊರದೇಶ ಕ್ಷೇತ್ರ
ರಾಜ್‌ಕುಮಾರ್‌-ಗಲ್ಫ್ರಾಷ್ಟ್ರ
ವೈದ್ಯಕೀಯ ಕ್ಷೇತ್ರ
ಡಾ.ಎಚ್‌.ಎಸ್‌.ಮೋಹನ್‌- ಶಿವಮೊಗ್ಗ
ಡಾ.ಬಸವಂತಪ್ಪ-ದಾವಣಗೆರೆ

ಸಮಾಜ ಸೇವೆ ಕ್ಷೇತ್ರ
ರವಿಶೆಟ್ಟಿ -ದಕ್ಷಿಣ ಕನ್ನಡ
ಸಿ.ಕರಿಯಪ್ಪ- ಬೆಂಗಳೂರು ಗ್ರಾಮಾಂತರ
ಎಂ.ಎಸ್‌.ಕೋರಿ ಶೆಟ್ಟರ್‌-ಹಾವೇರಿ
ಡಿ.ಮಾದೇಗೌಡ- ಮೈಸೂರು
ಬಲವೀರ್‌ ಸಿಂಗ್‌-ಬೀದರ್‌
ವಾಣಿಜ್ಯೋದ್ಯಮ ಕ್ಷೇತ್ರ
ಬಿ.ವಿ.ನಾಯ್ಡು- ಬೆಂಗಳೂರು
ಜಯರಾಮ ಬನಾನ್‌-ಉಡುಪಿ
ಜೆ.ಶ್ರೀನಿವಾಸ್‌-ಕೋಲಾರ

ರಂಗಭೂಮಿ ಕ್ಷೇತ್ರ
ತಿಪ್ಪಣ್ಣ ಹೆಳವರ್‌- ಯಾದಗಿರಿ
ಲಲಿತಾಬಾಯಿ ಚನ್ನದಾಸರ್‌- ವಿಜಯಪುರ
ಗುರುನಾಥ್‌ ಹೂಗಾರ್‌-ಕಲಬುರಗಿ
ಪ್ರಭಾಕರ್‌ ಜೋಶಿ- ತಾಳಮದ್ದಳೆ- ಯಕ್ಷಗಾನ- ಉಡುಪಿ
ಶ್ರೀಶೈಲ ಹುದ್ದಾರ್‌- ಹಾವೇರಿ

ಸಂಗೀತ ಕ್ಷೇತ್ರ
ನಾರಾಯಣ ಎಂ- ದಕ್ಷಿಣ ಕನ್ನಡ
ಅನಂತಾಚಾರ್ಯ ಬಾಳಾಚಾರ್ಯ- ಧಾರವಾಡ
ಅಂಜಿನಪ್ಪ ಸತ್ಪಾಡಿ ಮುಖವೀಣೆ ಕಲಾವಿದ- ಚಿಕ್ಕಬಳ್ಳಾಪುರ
ಅನಂತ ಕುಲಕರ್ಣಿ-ಬಾಗಲಕೋಟೆ

ಜಾನಪದ ಕ್ಷೇತ್ರ
ಸಹದೇವಪ್ಪ ಈರಪ್ಪ ನಡಿಗೇರ್‌- ಉ.ಕನ್ನಡ
ಗುಡ್ಡ ಪಾಣಾರ-ದೈವಕ ನರ್ತಕ- ಉಡುಪಿ
ಕಮಲಮ್ಮ,ಸೂಲಗಿತ್ತಿ- ರಾಯಚೂರು
ಸಾವಿತ್ರಿ ಪೂಜಾರ್‌-ಧಾರವಾಡ
ರಾಚಯ್ಯ ಸಾಲಿಮs…-ಬಾಗಲಕೋಟೆ
ಮಹೇಶ್ವರಗೌಡ ಲಿಂಗದಹಳ್ಳಿ-
ವೀರಗಾಸೆ- ಹಾವೇರಿ

ಶಿಲ್ಪ ಕಲೆ ಕ್ಷೇತ್ರ
ಪರುಶುರಾಮ್‌ ಪಾವರ್‌ ರಥಶಿಲ್ಪಿ- ಬಾಗಲಕೋಟೆ
ಹನುಮಂತಪ್ಪ ಬಾಳಪ್ಪ ಹುಕ್ಕೇರಿ-ಬೆಳಗಾವಿ
ಚಿತ್ರಕಲೆ ಕ್ಷೇತ್ರ
ಸಣ್ಣರಂಗಪ್ಪ ಚಿತ್ರಕಾರ್‌-ಕನ್ನಾಳ ಕಲೆ-ಕೊಪ್ಪಳ

ಚಲನಚಿತ್ರಕ್ಷೇತ್ರ
ದತ್ತಣ್ಣ- ಚಿತ್ರದುರ್ಗ
ಅವಿನಾಶ್‌-ಬೆಂಗಳೂರು
ಕಿರುತೆರೆ ಕ್ಷೇತ್ರ
ಸಿಹಿಕಹಿ ಚಂದ್ರು-ಬೆಂಗಳೂರು

ಯಕ್ಷಗಾನ ಕ್ಷೇತ್ರ
ಎಂ.ಎ.ನಾಯಕ್‌-ಉಡುಪಿ
ಸುಬ್ರಹ್ಮಣ್ಯ ಧಾರೇಶ್ವರ-ಉತ್ತರ ಕನ್ನಡ
ಸರಪಾಡಿ ಅಶೋಕ್‌ ಶೆಟ್ಟಿ- ದಕ್ಷಿಣ ಕನ್ನಡ

ಬಯಲಾಟ ಕ್ಷೇತ್ರ
ಅಡವಯ್ಯ ಚ ಹಿರೇಮs… (ದೊಡ್ಡಾಟ)-ಧಾರವಾಡ
ಶಂಕರಪ್ಪ ಮಲ್ಲಪ್ಪ ಹೊರಪೇಟೆ-ಕೊಪ್ಪಳ
ಎಚ್‌.ಪಾಡುರಂಗಪ್ಪ ತಂದೆ ಎಚ್‌.ಮೀನಾಕ್ಷಪ್ಪ -ಬಳ್ಳಾರಿ

ಸಾಹಿತ್ಯ ಕ್ಷೇತ್ರ
ಶಂಕರ ಚಚಡಿ- ಬೆಳಗಾವಿ
ಪ್ರೊ.ಕೃಷ್ಣೇಗೌಡ-ಮೈಸೂರು
ಅಶೋಕ್‌ಬಾಬು ನೀಲಗಾರ್‌-ಬೆಳಗಾವಿ
ಪ್ರೊ.ಅ.ರಾ.ಮಿತ್ರ- ಹಾಸನ
ರಾಮಕೃಷ್ಣ ಮರಾಠೆ-ಕಲಬುರಗಿ

ಶಿಕ್ಷಣ ಕ್ಷೇತ್ರ
ಕೋಟಿ ರಂಗಪ್ಪ -ತುಮಕೂರು
ಡಾ.ಎಂ.ಜಿ.ನಾಗರಾಜ್‌-ಸಂಶೋಧಕರು- ಬೆಂಗಳೂರು

ಕ್ರೀಡಾ ಕ್ಷೇತ್ರ
ದತ್ತಾತ್ರೇಯ ಗೋವಿಂದ ಕುಲಕರ್ಣಿ-ಧಾರವಾಡ
ರಾಘವೇಂದ್ರ ಅಣ್ಣೇಕರ್‌-ಬೆಳಗಾವಿ

ನ್ಯಾಯಾಂಗ ಕ್ಷೇತ್ರ
ವೆಂಕಟಾಚಲಪತಿ-ಬೆಂಗಳೂರು
ನಂಜುಡರೆಡ್ಡಿ- ಬೆಂಗಳೂರು
ನೃತ್ಯ ಕ್ಷೇತ್ರ
ಕಮಲಾûಾಚಾರ್ಯ- ದಕ್ಷಿಣ ಕನ್ನಡ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 10 ಸಂಘ ಸಂಸ್ಥೆಗಳಿಗೆ ವಿಶೇಷ ರಾಜೋತ್ಸವ ಪ್ರಶಸ್ತಿ
ಶ್ರೀರಾಮಕೃಷ್ಣ ಆಶ್ರಮ- ಮೈಸೂರು
ಲಿಂಗಾಯುತ ಪ್ರಗತಿಶೀಲ ಸಂಸ್ಥೆ- ಗದಗ
ಅಗಡಿ ತೋಟ-ಹಾವೇರಿ
ತಲಸೇವಿಯಾ ಮತ್ತು ಹೀಮೋಫೀಲಿಯ ಸೊಸೈಟಿ-ಬಾಗಲಕೋಟೆ
ಅಮೃತಶಿಶು ನಿವಾಸ- ಬೆಂಗಳೂರು
ಸುಮನಾ ಫೌಂಡೇಷನ್‌-ಬೆಂಗಳೂರು
ಯುವ ವಾಹಿನಿ ಸಂಸ್ಥೆ-ದಕ್ಷಿಣ ಕನ್ನಡ
ನೆಲೆ ಫೌಂಡೇಶನ್‌-ಅನಾಥಮಕ್ಕಳ ಪುನರ್ವಸತಿ ಕೇಂದ್ರ- ಬೆಂಗಳೂರು
ನಮ್ಮನೆ ಸುಮ್ಮನೆ-ನಿರಾಶ್ರಿತ ಆಶ್ರಮ (ಮಂಗಳಮುಖಿ ಸಂಸ್ಥೆ)- ಬೆಂಗಳೂರು
ಶ್ರೀ ಉಮಾಮಹೇಶ್ವರಿ ಹಿಂದುಳಿದವರ್ಗ ಅಭಿವೃದ್ಧಿ ಟ್ರಸ್ಟ್‌- ಮಂಡ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next