Advertisement

ಕಾಂಗ್ರೆಸ್‌ನಿಂದ “ಕಪ್ಪು’ಸಮರ; ಗದ್ದಲದ ನಡುವೆಯೇ ಹಣಕಾಸು ಮಸೂದೆ ಅಂಗೀಕಾರ

11:26 PM Mar 27, 2023 | Team Udayavani |

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅನರ್ಹತೆ ವಿಚಾರವು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವಂತೆಯೇ, ಸಂಸತ್‌ನ ಉಭಯ ಸದನಗಳಲ್ಲಿ “ಅದಾನಿ ಪ್ರಕರಣ’ವನ್ನೆತ್ತಿಕೊಂಡು ಪ್ರತಿಪಕ್ಷಗಳು ನಡೆಸುತ್ತಿರುವ ಹೋರಾಟವೂ ಮುಂದುವರಿದಿದೆ. ರಾಜ್ಯಸಭೆಯಲ್ಲಿ ಸೋಮವಾರ “ಮೋದಿ-ಅದಾನಿ ಭಾಯಿ ಭಾಯಿ’ ಎಂಬ ಪ್ರತಿಪಕ್ಷಗಳ ಘೋಷಣೆಯ ನಡುವೆಯೇ ಹಣಕಾಸು ಮಸೂದೆ ಯಾವುದೇ ಚರ್ಚೆಯಿಲ್ಲದೇ ಅಂಗೀಕಾರಗೊಂಡಿದೆ.

Advertisement

ರಾಹುಲ್‌ ಅನರ್ಹತೆ, ಅದಾನಿ ಸೇರಿದಂತೆ ವಿವಿಧ ವಿಚಾರಗಳನ್ನು ಖಂಡಿಸಿ ಕಾಂಗ್ರೆಸ್‌ನ ಸದಸ್ಯರೆಲ್ಲರೂ ಸೋಮವಾರ ಕಪ್ಪುಪಟ್ಟಿ ಧರಿಸಿಕೊಂಡೇ ಸಂಸತ್‌ಗೆ ಆಗಮಿಸಿದ್ದರು. ರಾಜ್ಯಸಭೆಯಲ್ಲಿ ಗದ್ದಲವುಂಟಾಗಿ ದಿನದ ಮಟ್ಟಿಗೆ ಕಲಾಪ ಮುಂದೂಡಿಕೆಯಾಗುತ್ತಿದ್ದಂತೆ, ಸಂಸತ್‌ ಭವನದಿಂದ ಹೊರಬಂದ ಪ್ರತಿಪಕ್ಷಗಳು ಸಂಸತ್‌ನಿಂದ ವಿಜಯ್‌ಚೌಕ್‌ವರೆಗೆ ಪಾದಯಾತ್ರೆ ನಡೆಸಿದರು. ಅದಾನಿ ಪ್ರಕರಣವನ್ನು ಜೆಪಿಸಿ ತನಿಖೆಗೆ ಒಪ್ಪಿಸಬೇಕು, ಜೆಪಿಸಿ ತನಿಖೆಗೆ ಒಪ್ಪಲು ಪ್ರಧಾನಿ ಮೋದಿಯವರು ಏಕೆ ಹೆದರುತ್ತಿದ್ದಾರೆ ಎಂದು ಘೋಷಣೆ ಕೂಗಿದರು.

ರಾಹುಲ್‌ಗೆ ಟಿಎಂಸಿ ಬೆಂಬಲ: ವಿಶೇಷವೆಂದರೆ, ಇತ್ತೀಚೆಗೆ ಕಾಂಗ್ರೆಸ್‌ ಧರಣಿಗಳಿಂದ ದೂರವುಳಿದಿದ್ದ ತೃಣಮೂಲ ಕಾಂಗ್ರೆಸ್‌ ಸದಸ್ಯರು, ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ನೇತೃತ್ವದಲ್ಲಿ ನಡೆದ ಕಾರ್ಯತಂತ್ರ ಸಭೆಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಖರ್ಗೆ, “ಪ್ರಜಾಪ್ರಭುತ್ವವನ್ನು ರಕ್ಷಿಸಲು ಮುಂದೆ ಬರುವ ಎಲ್ಲರನ್ನೂ ಕಾಂಗ್ರೆಸ್‌ ಸ್ವಾಗತಿಸುತ್ತದೆ’ ಎಂದರು.

ಬಿಜೆಪಿಯಿಂದಲೂ ಪ್ರತಿಭಟನೆ: “ಮೋದಿ ಸರ್‌ನೆàಮ್‌’ ಹೇಳಿಕೆಗೆ ಸಂಬಂಧಿಸಿ ರಾಹುಲ್‌ ಗಾಂಧಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಬಿಜೆಪಿಯ ಒಬಿಸಿ ಸಂಸದರೂ ಸಂಸತ್‌ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದು ಕಂಡುಬಂತು.

ಗುಜರಾತ್‌ನಲ್ಲಿ 16 ಶಾಸಕರ ಅಮಾನತು
ರಾಹುಲ್‌ ಅನರ್ಹತೆ ಖಂಡಿಸಿ ಗುಜರಾತ್‌ ವಿಧಾನಸಭೆ ಅಧಿವೇಶನದಲ್ಲಿ ಗದ್ದಲವೆಬ್ಬಿಸಿದ 16 ಮಂದಿ ಕಾಂಗ್ರೆಸ್‌ ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಲಾಗಿದೆ. ಈ 16 ಮಂದಿ ಕಲಾಪ ಆರಂಭವಾಗುತ್ತಲೇ ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು. ಕೊನೆಗೆ, ಇವರನ್ನು ಬಜೆಟ್‌ ಅಧಿವೇಶನ ಮುಗಿಯುವವರೆಗೆ ಅಂದರೆ ಮಾ.29ರವರೆಗೆ ಅಮಾನತು ಮಾಡಲಾಯಿತು.

Advertisement

ಬಿಹಾರ ವಿಧಾನಸಭೆಗೂ ಮಹಾಘಟಬಂಧನದ ಸದಸ್ಯರು ಕೈಗೆ ಮತ್ತು ತಲೆಗೆ ಕಪ್ಪು ಪಟ್ಟಿ ಧರಿಸಿಕೊಂಡು ಬರುವ ಮೂಲಕ ರಾಹುಲ್‌ಗೆ ಬೆಂಬಲ ಸೂಚಿಸಿದರು. ಒಡಿಶಾದಲ್ಲಿ ಕಾಂಗ್ರೆಸ್‌ ಸದಸ್ಯರು ಕಪ್ಪು ಉಡುಪು ಧರಿಸಿ ಬಂದು “ಕರಾಳ ದಿನ’ ಆಚರಿಸಿದರು. ರಾಹುಲ್‌ ಅನರ್ಹತೆ ಖಂಡಿಸಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಯುವ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ದೆಹಲಿಯ ಜಂತರ್‌ಮಂತರ್‌ನಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದು, ಸಂಸತ್‌ಭವನಕ್ಕೆ ಜಾಥಾ ಹೋಗಲು ಮುಂದಾದಾಗ ಪೊಲೀಸರನ್ನು ಅವರನ್ನು ವಶಕ್ಕೆ ಪಡೆದರು.

ಕಾಂಗ್ರೆಸ್‌ ಔತಣಕೂಟ ಬಹಿಷ್ಕರಿಸಿದ ಉದ್ಧವ್‌ ಬಣ
“ಕ್ಷಮೆ ಕೇಳಲು ನಾನು ಸಾವರ್ಕರ್‌ ಅಲ್ಲ, ಗಾಂಧಿ’ ಎಂದು ರಾಹುಲ್‌ ಅವರು ಇತ್ತೀಚೆಗೆ ನೀಡಿದ ಹೇಳಿಕೆ ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ ಅವರನ್ನು ರೊಚ್ಚಿಗೆಬ್ಬಿಸಿದೆ. “ನಾವೆಲ್ಲವೂ ಈ ಪ್ರಜಾಸತ್ತೆಯನ್ನು ಮತ್ತು ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಕೈಜೋಡಿಸಿದ್ದೇವೆ. ಆದರೆ, ಕಾಂಗ್ರೆಸ್‌ ನಾಯಕ ನಮ್ಮ ಆರಾಧ್ಯದೈವ (ಸಾವರ್ಕರ್‌)ವನ್ನು ಅವಮಾನಿಸುವುದನ್ನು ನಿಲ್ಲಿಸದೇ ಇದ್ದರೆ, ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿರುಕು ಮೂಡುವುದು ಖಚಿತ’ ಎಂದು ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ, ದೆಹಲಿಯಲ್ಲಿ ಸೋಮವಾರ ಎಐಸಿಸಿ ಅಧ್ಯಕ್ಷ ಖರ್ಗೆ ನಿವಾಸದಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ಔತಣಕೂಟವನ್ನು ಉದ್ಧವ್‌ ಪಕ್ಷ ಬಹಿಷ್ಕರಿಸಿದೆ. ಜತೆಗೆ, ಅನರ್ಹತೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲೂ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದೆ.

ಕಪ್ಪುಬಟ್ಟೆ ಧರಿಸಿರುವುದೇಕೆ‌?: ಖರ್ಗೆ ಉತ್ತರ
ರಾಹುಲ್‌ ಅವರಿಗೆ ಬೆಂಬಲ ನೀಡಿರುವ ಎಲ್ಲ ಪ್ರತಿಪಕ್ಷಗಳಿಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಧನ್ಯವಾದ ಸಲ್ಲಿಸಿದ್ದಾರೆ. ಜತೆಗೆ, ತಾವೆಲ್ಲರೂ ಕಪ್ಪುಬಟ್ಟೆಗಳನ್ನು ಧರಿಸಿ ಬಂದ ಕುರಿತು ಪ್ರತಿಕ್ರಿಯಿಸಿದ ಅವರು, “ಪ್ರಧಾನಿ ಮೋದಿಯವರು ದೇಶದ ಪ್ರಜಾಪ್ರಭುತ್ವಕ್ಕೆ ಕೊನೆಯ ಮೊಳೆ ಹೊಡೆಯುತ್ತಿದ್ದಾರೆ ಎಂಬುದನ್ನು ತೋರಿಸಲೆಂದೇ ನಾವು ಕಪ್ಪುಬಟ್ಟೆ ಧರಿಸಿಕೊಂಡು ಬಂದಿದ್ದೇವೆ. ಮೊದಲಿಗೆ ಅವರು ಸ್ವಾಯತ್ತ ಸಂಸ್ಥೆಗಳನ್ನು ಮುಗಿಸಿದರು, ನಂತರ ವಿವಿಧ ರಾಜ್ಯಗಳಲ್ಲಿ ಚುನಾಯಿತರಾದವರಿಗೆ ಬೆದರಿಕೆಯೊಡ್ಡಿ ತಮ್ಮದೇ ಸರ್ಕಾರಗಳನ್ನು ರಚಿಸಿದರು. ಯಾರೆಲ್ಲ ಬಗ್ಗಲಿಲ್ಲವೋ, ಅವರ ವಿರುದ್ಧ ಇ.ಡಿ., ಸಿಬಿಐ ಅಸ್ತ್ರಗಳನ್ನು ಬಳಸಿ ಬಗ್ಗಿಸಿದರು’ ಎಂದು ಆರೋಪಿಸಿದ್ದಾರೆ.

ರಾಹುಲ್‌ ನಿರಂತರವಾಗಿ ಒಬಿಸಿ ಸಮುದಾಯವನ್ನು ಅವಮಾನಿಸಿದ್ದರೂ, ಯಾವತ್ತೂ ಅವರ ಕ್ಷಮೆ ಕೇಳಿಲ್ಲ. ರಾಹುಲ್‌ ಯಾವತ್ತೂ ಸಾವರ್ಕರ್‌ ಆಗಲು ಸಾಧ್ಯವಿಲ್ಲ. ಏಕೆಂದರೆ, ಸಾವರ್ಕರ್‌ 6 ತಿಂಗಳು ವಿದೇಶ ಪ್ರವಾಸ ಎಂದೂ ಮಾಡಿಲ್ಲ.
– ಅನುರಾಗ್‌ ಠಾಕೂರ್‌, ಕೇಂದ್ರ ಸಚಿವ

ರಾಜಕೀಯ ಲಾಭಕ್ಕಾಗಿ ಸಾವರ್ಕರ್‌ ಹೆಸರನ್ನು ಬಳಸಿಕೊಳ್ಳಬೇಡಿ. ಮೊದಲಿಗೆ ವೀರ ಸಾವರ್ಕರ್‌ ಅವರು ಕ್ಷಮೆ ಕೇಳಿದ್ದರು ಎನ್ನುವುದಕ್ಕೆ ದಾಖಲೆ ತೋರಿಸಲಿ. ಇಲ್ಲವೆಂದಾದಲ್ಲಿ ರಾಹುಲ್‌ ಕ್ಷಮೆ ಯಾಚಿಸಬೇಕು.
– ರಣಜೀತ್‌ ಸಾವರ್ಕರ್‌, ಸಾವರ್ಕರ್‌ ಸಂಬಂಧಿ

ಬಂಗಲೆ ತೆರವಿಗೆ ಸೂಚನೆ
ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಕೂಡಲೇ ದೆಹಲಿಯಲ್ಲಿರುವ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸುವಂತೆ ರಾಹುಲ್‌ಗಾಂಧಿಯವರಿಗೆ ಲೋಕಸಭೆ ಕಾರ್ಯಾಲಯ ಸೋಮವಾರ ನೋಟಿಸ್‌ ನೀಡಿದೆ. ಪ್ರಸ್ತುತ ಅವರು ಲ್ಯುಟೆನ್ಸ್‌ನ 12 ತುಘಲಕ್‌ ಲೇನ್‌ನಲ್ಲಿರುವ 5 ಬೆಡ್‌ರೂಂ ಬಂಗಲೆಯಲ್ಲಿ ವಾಸವಿದ್ದಾರೆ. ಆದರೆ, ಸಂಸತ್‌ ಸದಸ್ಯಸ್ಥಾನದಿಂದ ಅನರ್ಹಗೊಂಡಿರುವ ಕಾರಣ ಅವರು ಈಗ ಬಂಗಲೆ ತೆರವುಗೊಳಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. 30 ದಿನಗಳೊಳಗೆ ತೆರವು ಮಾಡಬೇಕೆಂದು ಸೂಚಿಸಲಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next