Advertisement

ನಿಲ್ಲದ ಅಮಾನತು ಗಲಾಟೆ; ರಾಜ್ಯಸಭೆಯಲ್ಲಿ ನಡೆಯದ ಕಲಾಪ

09:10 PM Dec 01, 2021 | Team Udayavani |

ನವದೆಹಲಿ: ಸಂಸತ್‌ನ ಚಳಿಗಾಲದ ಅಧಿವೇಶನದ ಮೂರನೇ ದಿನವಾದ ಬುಧವಾರ ಕೂಡ ರಾಜ್ಯಸಭೆಯಲ್ಲಿ ಸುಗಮ ಕಲಾಪ ನಡೆಯಲಿಲ್ಲ.

Advertisement

12 ಮಂದಿ ಸಂಸದರನ್ನು ಅಮಾನತುಗೊಳಿಸಿದ್ದನ್ನು ಖಂಡಿಸಿ ಪ್ರತಿಪಕ್ಷಗಳು ಸಂಸತ್‌ ಭವನದ ಮುಂದೆ ಇರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಇದರ ಜತೆಗೆ ಲೋಕಸಭೆಯಲ್ಲಿಯೂ ಅಲ್ಪಕಾಲದ ಪ್ರತಿಭಟನೆ ನಡೆದ ಕಾರಣ, ಸತತ ಮೂರನೇ ದಿನವೂ ಪ್ರಶ್ನೋತ್ತರ ವೇಳೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ.

ಕಾಂಗ್ರೆಸ್‌, ಟಿಎಂಸಿ, ಎಸ್‌ಪಿ, ಡಿಎಂಕೆ, ಶಿವಸೇನೆ, ಟಿಆರ್‌ಎಸ್‌, ಎನ್‌ಸಿಪಿ, ಸಿಪಿಐ, ಸಿಪಿಎಂ, ಆರ್‌ಜೆಡಿ ಸೇರಿದಂತೆ ಪ್ರಮುಖ ಪಕ್ಷಗಳ ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು. ರಾಜ್ಯಸಭೆಯಲ್ಲಿನ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಸಂಸದರ ಅಮಾನತು ಶಿಕ್ಷೆ ರದ್ದುಪಡಿಸಬೇಕು. ಸಭಾಪತಿಗಳ ನಿರ್ಣಯ ಸರಿಯಾದುದಲ್ಲ ಎಂದರು. ಇದರ ಜತೆಗೆ ಅಧಿವೇಶನ ಮುಕ್ತಾಯದ ವರೆಗೆ 12 ಮಂದಿ ಸಂಸದರು ಪ್ರತಿ ದಿನ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.ರಾಜ್ಯಸಭೆಯಲ್ಲಿ ಕಲಾಪ ಶುರುವಾದ ಸಂದರ್ಭದಲ್ಲಿಯೂ ಕೂಡ ಪ್ರತಿಪಕ್ಷಗಳು ಅಮಾನತು ರದ್ದುಪಡಿಸಬೇಕು ಎಂದು ಮನವಿ ಮಾಡಿದವು. ಆದರೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಬೇಡಿಕೆಗೆ ಸ್ಪಂದಿಸಲಿಲ್ಲ.

ಇದೇ ವೇಳೆ, ಲೋಕಸಭೆಯಲ್ಲಿಯೂ ಕೂಡ ಟಿಆರ್‌ಎಸ್‌ ಸಂಸದರು ರೈತರ ವಿಚಾರ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದರಿಂದ ಮಧ್ಯಾಹ್ನದ ವರೆಗೆ ಕಲಾಪ ಮುಂದೂಡಲ್ಪಟ್ಟಿತ್ತು.

ಇದನ್ನೂ ಓದಿ:ಶಬರಿಮಲೆಯಲ್ಲಿ ಇ-ಹುಂಡಿ : ಭಕ್ತಾದಿಗಳು ಗೂಗಲ್‌ ಪೇ ಮೂಲಕವೂ ಕಾಣಿಕೆ ಸಲ್ಲಿಸಬಹುದು

Advertisement

ಭಾಷಾ ಸಮಸ್ಯೆ:
ರೈಲ್ವೆ ಸಚಿವಾಲಯಕ್ಕೆ ಸಂಬಂಧಿಸಿದಂತೆ ಡಿಎಂಕೆ ಸಂಸದ ಟಿ.ಸುಮತಿ ಕೇಳಿದ ಪ್ರಶ್ನೆಗೆ ಸಚಿವ ಅಶ್ವಿ‌ನಿ ವೈಷ್ಣವ್‌ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಉತ್ತರಿಸಿದರು. ಸಚಿವರ ಕ್ರಮಕ್ಕೆ ಹಲವು ಸಂಸದರು ಅಚ್ಚರಿ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್‌ ಸದನದಲ್ಲಿ ಭಾಷಾಂತರಕ್ಕೆ ಅವಕಾಶ ಇದೆ ಎಂದಿದ್ದಾರೆ. ಡಿಎಂಕೆಯ ಮತ್ತೂಬ್ಬ ಸಂಸದ ಟಿ.ಆರ್‌.ಬಾಲು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸುವ ಮುನ್ನ ಸಚಿವ ಅಶ್ವಿ‌ನಿ ವೈಷ್ಣವ್‌ ತಮಿಳಿನಲ್ಲಿ ವಣಕ್ಕಂ ಎಂದರು.

ಪ್ರತಿಭಟನೆಯಿಂದಾಗಿ ರೈತರು ಅಸುನೀಗಿಲ್ಲ
ಮೂರು ರೈತ ಕಾಯ್ದೆಗಳನ್ನು ವಿರೋಧಿಸಿ ನವದೆಹಲಿಯ ಹೊರವಲಯದಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ವೇಳೆ ರೈತರು ಅಸುನೀಗಿರುವ ಬಗ್ಗೆ ಕೇಂದ್ರದ ಬಳಿ ದಾಖಲೆಗಳು ಇಲ್ಲ. ಹೀಗಾಗಿ, ಆ ನಿಟ್ಟಿನಲ್ಲಿ ಪರಿಹಾರ ನೀಡಲು ಸಾಧ್ಯವಾಗದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿದ್ದಾರೆ. ಈ ಬಗ್ಗೆ ಸಂಸತ್‌ಗೆ ಲಿಖೀತ ಉತ್ತರ ನೀಡಿರುವ ಅವರು, ಪ್ರತಿಭಟನೆಯ ಸಂದರ್ಭದಲ್ಲಿ ರೈತರು ಅಸುನೀಗಿರುವ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿಯೇ ಇಲ್ಲ. ಹೀಗಾಗಿ, ಪರಿಹಾರ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು. ರೈತ ಸಂಘಟನೆಗಳ ಮುಖಂಡರು ಹೇಳುವ ಪ್ರಕಾರ 2020ರ ನವೆಂಬರ್‌ನಿಂದ ಈಚೆಗೆ 700 ಮಂದಿ ರೈತರು ಅಸುನೀಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇದರ ಜತೆಗೆ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಕೆ.ಸಿ.ವೇಣುಗೋಪಾಲ್‌ ಸರ್ಕಾರಗಳ ವತಿಯಿಂದ ಪ್ರತಿಭಟನೆ ವೇಳೆ ರೈತರ ಮೇಲೆ ಹಲ್ಲೆಯಂಥ ಘಟನೆಗಳು ನಡೆದಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌, ಅಂಥ ಘಟನೆಗಳ ಬಗ್ಗೆ ವರದಿಗಳು ಇಲ್ಲವೆಂದರು.

ಗೋ ಆಧಾರಿತ ವಿಜ್ಞಾನ
ಯೋಜನೆಗೆ 34 ಅರ್ಜಿ ಆಯ್ಕೆ
ದೇಶದ ಸಾಂಪ್ರದಾಯಿಕ ಗೋ ತಳಿಗಳ ಉತ್ಪನ್ನಗಳಿಂದ ವಿವಿಧ ರೀತಿಯ ಉತ್ಪನ್ನಗಳನ್ನು ಸಿದ್ಧಪಡಿಸುವ ಬಗ್ಗೆ ವಿತ್ತೀಯ ನೆರವು ಕೋರಿ 34 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಬಗ್ಗೆ ಲೋಕಸಭೆಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವ ಡಾ.ಜಿತೇಂದ್ರ ಸಿಂಗ್‌ ಲಿಖೀತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ. “ಸಾಂಪ್ರದಾಯಿಕ ಗೋವುಗಳ ತಳಿ ಆಧಾರಿತ ಉತ್ಪನ್ನಗಳನ್ನು ವೈಜ್ಞಾನಿಕ ಆಧಾರದಲ್ಲಿ ಸಂಶೋಧನೆ ಮಾಡಿ ಬಳಕೆ ಮಾಡುವ ಯೋಜನೆ(ಖಖೀಖRಅ ಕಐಇ) ಆಧಾರದಲ್ಲಿ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿತ್ತು. 337 ಪ್ರಸ್ತಾವನೆಗಳು ಬಂದಿದ್ದ ಪೈಕಿ 34ಕ್ಕೆ ವಿತ್ತೀಯ ನೆರವು ನೀಡುವ ಬಗ್ಗೆ ಆಯ್ಕೆ ಮಾಡಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದಿದ್ದಾರೆ.

ಸಂಸದರ ನಿಧಿ ಪುನಃಸ್ಥಾಪನೆ
ಸೋಂಕಿನ ಹಿನ್ನೆಲೆಯಲ್ಲಿ ರದ್ದಾಗಿದ್ದ ಸಂಸತ್‌ ಸದಸ್ಯರ ಸ್ಥಳೀಯಾಭಿವೃದ್ಧಿ ನಿಧಿ (ಎಂಪಿಎಲ್‌ಎಡಿಎಸ್‌)ಯನ್ನು ಪುನಃಸ್ಥಾಪಿಸಲಾಗಿದೆ. 2021-22ನೇ ಸಾಲಿಗೆ ಸಂಬಂಧಿಸಿದಂತೆ 2 ಕೋಟಿ ರೂ. ಮೊತ್ತವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2022-23ನೇ ಸಾಲಿನಿಂದ ಪೂರ್ಣ ಪ್ರಮಾಣದ 5 ಕೋಟಿ ರೂ. ಸಿಗಲಿದೆ.

ಯಥಾ ಸ್ಥಿತಿಯತ್ತ ಸೇವೆ:
ಸೋಂಕಿನ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದ್ದ ರೈಲು ಸೇವೆಗಳ ಪೈಕಿ ಹೆಚ್ಚಿನದ್ದನ್ನು ಯಥಾ ಸ್ಥಿತಿಗೆ ತರಲಾಗಿದೆ ಎಂದು ಸರ್ಕಾರ ತಿಳಿಸಿದೆ. ಪ್ರಯಾಣಿಕರಿಗೆ ನೀಡಲಾಗುತ್ತಿರುವ ರಿಯಾಯಿತಿಯಿಂದ ರೈಲ್ವೆ ಉಂಟಾಗುತ್ತಿರುವ ನಷ್ಟದ ಪ್ರಮಾಣ 2020-21ನೇ ಸಾಲಿನಲ್ಲಿ 38 ಕೋಟಿ ರೂ.ಗಳಿಗೆ ಇಳಿದಿದೆ. 2019-20ನೇ ಸಾಲಿನಲ್ಲಿ ಅದು 2,059 ಕೋಟಿ ರೂ. ಆಗಿತ್ತು ಎಂದು ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌ ತಿಳಿಸಿದ್ದಾರೆ. ಇದರ ಜತೆಗೆ ಪ್ರತಿಭಟನೆಗಳಿಂದಾಗಿ 36.87 ಕೋಟಿ ರೂ. ನಷ್ಟವಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next