Advertisement

ಸಿದ್ದರಾಮಯ್ಯ ವಿರುದ್ಧದ ಜಾತಿ ನಿಂದನೆ ದೂರು ಹಿಂಪಡೆಯಲು ಆಲಗೂರ ಆಗ್ರಹ

02:12 PM Jun 18, 2022 | Team Udayavani |

ವಿಜಯಪುರ: ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿರುವುದು ಖಂಡನೀಯ. ಮನುವಾದಿಗಳ ಕುತಂತ್ರದಿಂದ ದಾಖಲಿಸಿರುವ ದೂರನ್ನು ಕೂಡಲೇ ಹಿಂಪಡೆಯಬೇಕು ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.

Advertisement

ಶನಿವಾರ ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ರಾಜು ಆಲಗೂರ, ಸಿದ್ದರಾಮಯ್ಯ ಅವರು ಅಸ್ಪೃಶ್ಯತೆ ಬಗ್ಗೆ ಮಾತನಾಡಿದ್ದಾರೆ ಎಂದು ಮನುವಾದಿ ಬಿಜೆಪಿ ಪಕ್ಷ ನಾರಾಯಣಸ್ವಾಮಿ ಅವರನ್ನು ಬಳಸಿಕೊಂಡು ಜಾತಿ ನಿಂದನೆ ಪ್ರಕರಣ ದಾಖಲಿಸುವ ಕೆಲಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ಹೀಗಾಗಿ ಕೂಡಲೇ ಸಿದ್ದರಾಮಯ್ಯ ಅವರ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣವನ್ನು ಮರಳಿ ಪಡೆಯಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಇದೇ ಚಲವಾದಿ ನಾರಾಯಣಸ್ವಾಮಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಕಾಯುತ್ತಿದ್ದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರ ಕೃಪೆಯಿಂದ ಅರಣ್ಯ ನಿಗಮ‌ ಹಾಗೂ ರಾಷ್ಟ್ರೀಯ ರೈಲ್ವೇ ಗ್ರಾಹಕರ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಾರಾಯಣಸ್ವಾಮಿ ನೇಮಕಗೊಂಡಿದ್ದರು. ಕಾಂಗ್ರೆಸ್ ಪಕ್ಷದಿಂದ ಏನೆಲ್ಲ ಅಧಿಕಾರ ಅವಕಾಶ ಪಡೆದ ನಾರಾಯಣಸ್ವಾಮಿ ಅವರು ಜೀವನದುದ್ದಕ್ಕೂ ದಲಿತ ಪರ ದುಡಿಯುತ್ತ ಬಂದಿರುವ ಸಿದ್ದರಾಮಯ್ಯ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿರುವುದು ರಾಜಕೀಯ ಸಣ್ಣತನದ ಪರಮಾವಧಿ ಎಂದು ಹರಿಹಾಯ್ದರು.

ಮನುವಾದಿ ಪಕ್ಷದ ಮನಸ್ಥಿತಿ ಪರುಣಾಮ ಮಲಹೊರುವ ಪದ್ಧತಿಯ ಪರಿಪಾಲನೆಗಾಗಿ ಬಿಜೆಪಿ ಪಕ್ಷ ನಾರಾಯಣಸ್ವಾಮಿ ತಲೆಮೇಲೆ ಹಳೆಯ ಚಡ್ಡಿ ಹೊರಿಸಿ ಶೋಷಿತ ವ್ಯವಸ್ಥೆಯನ್ನು ಪೋಷಿಸುವ ಕೆಲಸ ಮಾಡಿದೆ. ಇದನ್ನೇ ಸಿದ್ದರಾಮಯ್ಯ ಅವರು ಹೇಳಿದ್ದು. ಆದರೆ ಶೋಷಿತ ವ್ಯವಸ್ಥೆಯನ್ನು ಪೋಷಿಸುವ ಬಿಜೆಪಿ ಜಾತಿ ನಿಂದನೆ ಪ್ರಕರಣದ ಪ್ರಹಸನ ಸೃಷ್ಟಿಸಿದೆ ಎಂದು ದೂರಿದರು.

Advertisement

ಬಾಬಾಸಾಹೇಬರು ರಚಿಸಿದ ಸಂವಿಧಾನ ತಿದ್ದುವ ಹುನ್ನಾರ ನಡೆಸಿದ ಬಿಜೆಪಿ ದಲಿತರನ್ನೇ ಬಳಸಿಕೊಂಡು ದಲಿತರ ಧ್ವನಿ ಅಡಗಿಸುವ ಕುಯುಕ್ತಿ ನಡೆಸಿದೆ ಎಂದು ಹರಿಹಾಯ್ದರು.

ಚಂದ್ರಶೇಖರ ಕೊಡಬಾಗಿ, ಸುರೇಶ ಘೋಣಸಗಿ, ಭಾರತಿ ಹೊಸಮನಿ, ಸಮದ್ ಸುತಾರ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next