Advertisement

ಬೇಡ್ತಿ ಹೊಡೆತಕ್ಕೆ ಬೆಂಡಾದ ಬೆಳೆ

09:18 AM Aug 13, 2019 | Suhan S |

ಧಾರವಾಡ: ಒಂದು ಮಳೆ ಹೆಚ್ಚೆಂದರೆ ಪ್ರವಾಹ ತಂದು ಜನರನ್ನು ಪರದಾಡುವಂತೆ ಮಾಡುತ್ತದೆ. ಮನೆ ಬಿಟ್ಟು ಗಂಜಿ ಕೇಂದ್ರಗಳಲ್ಲಿ ವಾಸವಿರುವಂತೆ ಮಾಡುತ್ತದೆ. ಅತೀ ಹೆಚ್ಚೆಂದರೆ ಬೆಳೆಗಳನ್ನು ನಾಶ ಮಾಡುತ್ತದೆ ಎಂದು ನಾವು ತಿಳಿದಿದ್ದೇವೆ. ಆದರೆ ಉಕ್ಕೇರುವ ಹಳ್ಳಗಳು ಇತಿಹಾಸದಲ್ಲಿ ಜನರು ಕಂಡು ಕೇಳರಿಯದಂತಹ ಚಮತ್ಕಾರ ಮಾಡಿ ಹೋಗುತ್ತವೆ. ಹೌದು, ಇದಕ್ಕೆ ಸಾಕ್ಷಿ ಎನ್ನುವಂತೆ ಜಿಲ್ಲೆಯಲ್ಲಿ ಹರಿಯುವ ಹಳ್ಳಗಳು ಪ್ರತಿಬಾರಿ ಉಕ್ಕೇರಿದಾಗಲು ಮುಂದಿನ ಹತ್ತು ವರ್ಷಗಳ ಕಾಲ ತಾವು ಸುಗಮವಾಗಿ ಹರಿಯುವ ಮಾರ್ಗ ರಚಿಸಿಕೊಂಡು ಹೋಗುತ್ತವೆ. ಅತಿಕ್ರಮಣ, ಮರಳು ಗಣಿಗಾರಿಕೆ, ಮಣ್ಣಿನ ಮಾರಾಟ, ಉರುವಲು ಸವಕಳಿ ಸೇರಿದಂತೆ ಹಳ್ಳಗಳ ಮೇಲೆ ಜನರು ಮಾಡುವ ದೌಜ್ಯರ್ನ್ಯಕ್ಕೆ ಮಳೆರಾಯ ತಕ್ಕಶಾಸ್ತಿ ಮಾಡಿ ಹೋಗಿದ್ದಾನೆ ಎನ್ನುವಂತಹ ದೃಶ್ಯಗಳು ಇದೀಗ ಜಿಲ್ಲೆಯ ನೆರೆ ನಿಂತ ಎಲ್ಲ ಹಳ್ಳಗಳಲ್ಲೂ ಕಾಣಸಿಗುತ್ತಿದೆ. ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಹರಿಯುವ ಬೇಡ್ತಿ ಹಳ್ಳ, ಡೌಗಿ ನಾಲಾ, ಕರಿಯಮ್ಮನ ಹಳ್ಳ, ಡೋರಿ-ಬೆಣಚಿ ಹಳ್ಳ, ಜಾತಿಗ್ಯಾನ ಹಳ್ಳ, ಕಾಗಿನಹಳ್ಳಗಳು ನೀರಿನ ಜೀವಸೆಲೆಯ ಕೇಂದ್ರ ಬಿಂದುಗಳು. ಆದರೆ ಕಳೆದ 25 ವರ್ಷಗಳಲ್ಲಿ ಈ ಹಳ್ಳದ ಒಡಲಿನ ಮೇಲೆ ಜನರು ನಡೆಸಿದ ದೌಜ್ಯರ್ನ್ಯಕ್ಕೆ ಇದೀಗ ಪ್ರವಾಹದಿಂದ ಉಕ್ಕಿ ಹರಿದು ಅಕ್ಕಪಕ್ಕದ ರೈತರ ಹೊಲದಲ್ಲಿನ ಬೆಳೆಯಷ್ಟೇಯಲ್ಲ, ಬೆಳೆದು ನಿಂತ ದೈತ್ಯ ಗಿಡಮರಗಳನ್ನು ತಲೆಕೆಳಗೆ ಮಾಡಿದ್ದು ನೆರೆ ನಿಂತು ಹೋದ ಮೇಲಿನ ದೃಶ್ಯವಾಗಿದೆ.

Advertisement

ಅಪಾರ ಬೆಳೆಹಾನಿ: ಬೇಡ್ತಿ, ಡೌಗಿ, ಡೋರಿ, ಕರೆಮ್ಮನಹಳ್ಳ, ತುಪರಿ, ಬೆಣ್ಣಿ ಸೇರಿ ಒಟ್ಟು 23 ಹಳ್ಳಗಳ ಅಕ್ಕಪಕ್ಕದ ಹೊಲಗಳಲ್ಲಿನ ಕಬ್ಬು, ಗೋವಿನಜೋಳ, ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆ ಸಂಪೂರ್ಣ ನಾಶವಾಗಿದೆ. ಬೇಡ್ತಿ ಹಳ್ಳ ಮತ್ತು ದೊಡ್ಡ ಹಳ್ಳದ ಅಕ್ಕಪಕ್ಕದಲ್ಲಿದ್ದ ಕಬ್ಬಿನ ಬೆಳೆ ಬೇರು ಸಮೇತ ಕಿತ್ತು ಹೋಗಿದ್ದರೆ, ನೀರಿನ ಮಧ್ಯೆ ಎರಡು ಮೂರು ದಿನಗಳ ಕಾಲ ನಿಂತಿರುವ ಗೋವಿನಜೋಳ ಕೊಳೆತು ಬಿದ್ದಿದೆ. ಸೋಯಾ ಅವರೆಗೆ ಹಳದಿ ಭಂಗ ರೋಗ ತಗುಲಿದ್ದು, ಗೋವಿನ ಜೋಳಕ್ಕೆ ಡೊಣ್ಣೆಹುಳುವಿನ ಕಾಟ ಶುರುವಾಗಿದೆ. ಸೋವಿನ ಜೋಳ ಸೊಗಸಾಗಿ ಬೆಳೆದು ನಿಂತಿರುವುದು ಕಾಣುತ್ತದೆ. ಆದರೆ ತೇವಾಂಶ ಅಧಿಕವಾಗಿದ್ದರಿಂದಾಗಿ ಹೀಚು ತೆನೆ ಹಾಕುತ್ತಿದ್ದು, ಅನ್ನದಾತರು ಅತಂಕದಲ್ಲಿದ್ದಾರೆ. ಕಲ್ಲಾಪುರ, ರಾಮಾಪುರ, ಅರವಟಗಿ, ಡೋರಿ,ಬೆಣಚಿ, ಕಂಬಾಗಣವಿ, ಕಾಶೆನಟ್ಟಿ, ಅಳ್ನಾವರ, ಕಡಬಗಟ್ಟಿ, ಹುಲಕೊಪ್ಪ ಸೇರಿದಂತೆ ಅನೇಕ ಕಡೆಗಳಲ್ಲಿ ಹಳ್ಳಗಳ ಹಾವಳಿಗೆ ಅಕ್ಕಪಕ್ಕದ ಹೊಲದಲ್ಲಿನ ಬೆಳೆ ಕೊಚ್ಚಿಕೊಂಡು ಹೋಗಿದೆ. ತುಪರಿಹಳ್ಳದ ಅಕ್ಕಪಕ್ಕದ ಹೊಲದಲ್ಲಿ ಇರುವ ಹೆಸರು, ಶೇಂಗಾ ಸೇರಿದಂತೆ ಇತರ ಬೆಳೆಗಳು ಅಲ್ಲಲ್ಲಿ ನಾಶವಾಗಿವೆ

ಲಕ್ಷ ಮೆಟ್ರಿಕ್‌ ಟನ್‌ ಮಣ್ಣು ಸವಕಳಿ: ಹಳ್ಳಗಳು ಉಕ್ಕೇರಿದಾಗ ಅಕ್ಕಪಕ್ಕದ ಭೂಭಾಗ ಕತ್ತರಿಸುವುದು ಸಹಜ. ಆದರೆ ಪ್ರವಾಹ ವಿಪರೀತವಾಗಿದ್ದರಿಂದ ಈ ಬಾರಿ ಲಕ್ಷ ಟನ್‌ಗಟ್ಟಲೇ ಜಿಲ್ಲೆಯ ಮಣ್ಣು ಕೊಚ್ಚಿಕೊಂಡು ಹೋಗಿ ದೊಡ್ಡ ದೊಡ್ಡ ಕೆರೆ, ನಂತರ ನದಿಯ ಮೂಲಕ ಅಣೆಕಟ್ಟೆಗಳನ್ನು ಸೇರಿದೆ. ತುಪರಿ ಹಳ್ಳಕ್ಕೆ ಹೊಸದಾಗಿ ನಿರ್ಮಿಸಿದ್ದ ಚೆಕ್‌ಡ್ಯಾಂಗಳ ಅಕ್ಕಪಕ್ಕದಲ್ಲಿನ ಮಣ್ಣು ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಬೇಡ್ತಿ ಹಳ್ಳದಲ್ಲಿ ಅಲ್ಲಲ್ಲಿ ಕೊರಕಲುಗಳು ಸೃಷ್ಟಿ ಯಾಗಿದ್ದು ಹೊಲಗಳಲ್ಲಿನ ಬದುಗಳು ಒಡೆದು ಹೋಗಿವೆ. ಹಳ್ಳದ ಅಕ್ಕಪಕ್ಕದ ಗಿಡಮರಗಳು ನೆಲಕ್ಕುರುಳಿವೆ.

ಜಿಲ್ಲೆಯಲ್ಲಿ ಅಂದಾಜು 80 ಸಾವಿರ ಹೆಕ್ಟೇರ್‌ ಬೆಳೆಹಾನಿ ಆಗಿರುವ ಅಂದಾಜಿದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳು ಜಂಟಿಯಾಗಿ ಬೆಳೆಹಾನಿ ಸಮೀಕ್ಷೆ ನಡೆಸುವುದಕ್ಕೆ ಸೂಚಿಸಿದ್ದೇನೆ. ಬೆಳೆಹಾನಿ ಪರಿಹಾರ ಕುರಿತು ಸರ್ಕಾರದ ಗಮನ ಸೆಳೆಯುತ್ತೇನೆ.• ದೀಪಾ ಚೋಳನ್‌, ಜಿಲ್ಲಾಧಿಕಾರಿ

ಹಳ್ಳ ಹರಿದಿದ್ದೇ ದಾರಿ: ಕಿಲೋಮೀಟರ್‌ಗಟ್ಟಲೇ ತೇಲಿ ಹೋದ ಟನ್‌ ಭಾರದ ಮರದ ದಿಮ್ಮಿಗಳು, ಎಲ್ಲೆಂದರಲ್ಲಿ ಕೊರೆಯಲ್ಪಟ್ಟ ಹಳ್ಳಗಳ ಭೂ ಭಾಗ, ಎಲ್ಲದರ ಮಧ್ಯೆ ಚಮತ್ಕಾರ ರೂಪದಲ್ಲಿ ಅಲ್ಲಲ್ಲಿ ಹಳ್ಳದ ದಡದಲ್ಲೇ ಉಳಿದ ಸೀಮೆ ದೇವರುಗಳು. ಇಷ್ಟಕ್ಕೂ ಬರೀ ಬೆಳೆನಾಶ ಮಾತ್ರವಲ್ಲ, ಬೇಡ್ತಿ ಹಳ್ಳದ ರಭಸಕ್ಕೆ ರೈತರು ಹಳ್ಳದುದ್ದಕ್ಕೂ 15 ವರ್ಷಗಳ ಹಿಂದೆ ಸುಜಲ ಜಲಾನಯನ ಯೋಜನೆ ಅಡಿಯಲ್ಲಿ ನೆಟ್ಟಿದ್ದ ಸಾಗವಾನಿ ಮರಗಳು ಬೇರು ಸಮೇತ ಬಿದ್ದು ಹೋಗಿವೆ. ಕೆಲವು ಕಡೆಗಳಲ್ಲಿ ಹಳ್ಳದಲ್ಲಿಯೇ ತೇಲಿಕೊಂಡು ಹೋಗಿವೆ. ಹಳ್ಳ ಕೊರೆದ ರಭಸಕ್ಕೆ ಎಷ್ಟೋ ಕಡೆಗಳಲ್ಲಿ ಹೊಲಗಳ ಚಿತ್ರಣವೇ ಬದಲಾಗಿದೆ. 15 ಅಡಿಯಷ್ಟು ಅಗಲದಲ್ಲಿ ಅಂಕುಡೊಂಕಾಗಿ ಹರಿಯುತ್ತಿದ್ದ ಹಳ್ಳಗಳು ಇದೀಗ 50-100 ಅಡಿ ಅಗಲದಲ್ಲಿ ರಭಸವಾಗಿ ನುಗ್ಗಿ ಹರಿದಿದ್ದರಿಂದ ಹಳ್ಳದಲ್ಲಿನ ಗಿಡಗಂಟೆಗಳು ನೆಲಕ್ಕುರುಳಿವೆ. ಇನ್ನು ಕೋಡಿ ಬಿದ್ದ ಕೆರೆಗಳ ಬುಡದಲ್ಲಿ ಸೃಷ್ಟಿಯಾಗುವ ಕಿರು ಹಳ್ಳ ಮತ್ತು ತೊರೆಗಳು ಕೂಡ ತಮ್ಮ ಮೂಲ ಸ್ಥಾನವನ್ನು ಪುನರ್‌ಸೃಷ್ಟಿಸಿಕೊಂಡಿದ್ದು, ಅಲ್ಲಲ್ಲಿ ರೈತರ ಹೊಲಗಳಿಗೆ ನುಗ್ಗಿ ಹಾನಿ ಮಾಡಿವೆ.
•ಬಸವರಾಜ ಹೊಂಗಲ್
Advertisement
Advertisement

Udayavani is now on Telegram. Click here to join our channel and stay updated with the latest news.

Next