ಮುದ್ದೇಬಿಹಾಳ: ಅನಿರೀಕ್ಷಿತ ಭಾರಿ ಮಳೆ, ಹವಾಮಾನ ವೈಪರೀತ್ಯದಿಂದಾಗಿ ತಣ್ಣನೆಯ ಮಂಜು ಕವಿದ ವಾತಾವರಣ ಪರಿಣಾಮ ಹಾನಿಗೀಡಾದ ತೊಗರಿ ಮತ್ತು ಹತ್ತಿ ಹೊಲಗಳಿಗೆ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅದ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ಕೃಷಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ವಸ್ತುಸ್ಥಿತಿಯ ಮಾಹಿತಿ ಪಡೆದುಕೊಂಡರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಅಂದಾಜು 80 ಸಾವಿರ ಹೆಕ್ಟೆರ್ ತೊಗರಿ ಬೆಳೆ ಹಾನಿಗೀಡಾಗಿರುವ ಮಾಹಿತಿ ಇದೆ. ಇದರೊಟ್ಟಿಗೆ ಹತ್ತಿ ಸೇರಿದಂತೆ ತೋಟಗಾರಿಕೆ ಬೆಳೆಗಳಾದ ಈರುಳ್ಳಿ ಮುಂತಾದವು ಹಾನಿಗೀಡಾಗಿವೆ.
ಈ ಹಾನಿಯ ಪರಿಶೀಲನೆ ಮತ್ತು ನೈಜ ವರದಿಗಾಗಿ ಕೃಷಿ ವಿಶ್ವವಿದ್ಯಾಲಯದ ತಜ್ಞ ವಿಜ್ಞಾನಿಗಳನ್ನು ಇಲ್ಲಿಗೆ ಕರೆಸುತ್ತಿದ್ದೇನೆ. ಕಂದಾಯ, ಕೃಷಿ, ತೋಟಗಾರಿಕೆ, ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳು, ಪಿಡಿಓಗಳ ಸಭೆ ನಡೆಸಿ ರೈತರ ಹಾನಿಗೆ ಸೂಕ್ತ ಪರಿಹಾರ ಕೊಡಿಸಲು ಶೀಘ್ರ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವಂತೆ ನೋಡಿಕೊಳ್ಳುತ್ತೇನೆ. ರೈತನ ಮಗನಾಗಿರುವ ನನಗೆ ರೈತರ ಕಷ್ಟ ಗೊತ್ತು. ಅವರಿಗೆ ಸೂಕ್ತ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ, ಕೃಷಿ ಅಧಿಕಾರಿ ಪ್ರಭುಗೌಡ ಕಿರದಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಬಿಜೆಪಿ ದುರೀಣರಾದ ಬಸವರಾಜ ಗುಳಬಾಳ, ರಾಜೇಂದ್ರಗೌಡ ರಾಯಗೊಂಡ, ಅಪ್ಪುಗೌಡ ಮೈಲೇಶ್ವರ, ಶಿವು ಕನ್ನೊಳ್ಳಿ ಇದ್ದರು.