Advertisement

ಆರ್‌ಆರ್‌ಬಿ ಪರೀಕ್ಷೆ ಅಕ್ರಮ ಆರೋಪ: ಬಿಹಾರದಲ್ಲಿ ರೈಲುಗಳಿಗೆ ಬೆಂಕಿ, ದಾಂಧಲೆ

08:33 PM Jan 26, 2022 | Team Udayavani |

ನವದೆಹಲಿ/ಪಾಟ್ನಾ: ರೈಲ್ವೆ ನೇಮಕ ಮಂಡಳಿಯಲ್ಲಿ ಪರೀಕ್ಷೆಯಲ್ಲಿ ಅಕ್ರಮಗಳು ಉಂಟಾಗಿವೆ ಎಂದು ಆರೋಪಿಸಿ ಸೋಮವಾರದಿಂದ ಬಿಹಾರದ ವಿವಿಧ ಸ್ಥಳಗಳಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಬಿರುಸಾಗಿದೆ.

Advertisement

ಬುಧವಾರ ನಡೆದ ಘಟನೆಯಲ್ಲಿ ಬಿಹಾರದ ಗಾಯದಲ್ಲಿ ಶ್ರಮಜೀವಿ ಎಕ್ಸ್‌ಪ್ರೆಸ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲ್ವೆ ಮಂಡಳಿ ಪರೀಕ್ಷೆಯನ್ನು ರದ್ದುಪಡಿಸಲು ತೀರ್ಮಾನಿಸಿದೆ. ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿ “ರೈಲ್ವೇಗೆ ಸೇರಿದ ಆಸ್ತಿಗೆ ಹಾನಿ ಮಾಡಬೇಡಿ. ಏಕೆಂದರೆ ಅವುಗಳು ಎಲ್ಲರಿಗೂ ಸೇರಿದ್ದು. ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಪರಿಹರಿಸಲಾಗುತ್ತದೆ’ ಎಂದು ಮನವಿ ಮಾಡಿದ್ದಾರೆ. ಇದರ ಹೊರತಾಗಿಯೂ ಪರೀಕ್ಷಾರ್ಥಿಗಳು ರೈಲ್ವೆ ಆಸ್ತಿಗೆ ಹಾನಿ ಮಾಡಿದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದೂ ಎಚ್ಚರಿಕೆ ನೀಡಿದ್ದಾರೆ. ಬಿಹಾರದ ಸೀತಾಮರ್ಹಿಯಲ್ಲಿ ದಾಂಧಲೆಯಲ್ಲಿ ತೊಡಗಿದ್ದವರನ್ನು ಚದುರಿಸಲು ಗಾಳಿಯಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಪರೀಕ್ಷಾರ್ಥಿಗಳ ಪ್ರತಿಭಟನೆ ಏಕೆ?
ರೈಲ್ವೆ ನೇಮಕ ಮಂಡಳಿ (ಆರ್‌ಆರ್‌ಬಿ)ಯು ತಾಂತ್ರಿಕೇತರ ಜನಪ್ರಿಯ ವಿಭಾಗಗಳ (ಎನ್‌ಟಿಪಿಸಿ) 35 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಅದಕ್ಕಾಗಿ ಕಂಪ್ಯೂಟರ್‌ ಆಧಾರಿತ ಪರೀಕ್ಷೆ (ಸಿಬಿಟಿ) ನಡೆಸಲು ತೀರ್ಮಾನಿಸಿತ್ತು. ಒಟ್ಟು 1.25 ಕೋಟಿ ಮಂದಿ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಒಂದು ಹಂತದ ಪರೀಕ್ಷೆಯನ್ನು ಕಳೆದ ವರ್ಷವೇ ನಡೆಸಲಾಗಿತ್ತು. ದೀರ್ಘ‌ ಸಮಯದ ಬಳಿಕ ಫ‌ಲಿತಾಂಶ ಪ್ರಕಟಿಸಿದ್ದರಿಂದ ಎರಡನೇ ಹಂತದ ಪರೀಕ್ಷೆಯಲ್ಲಿ ವಂಚನೆ ನಡೆಸಲಾಗಿದೆ ಎನ್ನುವುದು ಪರೀಕ್ಷಾರ್ಥಿಗಳ ಆರೋಪ. ಕಟ್‌ ಆಫ್ ಅಂಕಗಳ ನಿಗದಿ ಪ್ರಮಾಣ ಅತ್ಯಂತ ಹೆಚ್ಚು ಎಂದು ಅವರು ವಾದಿಸುತ್ತಿದ್ದಾರೆ.

ಇದನ್ನೂ ಓದಿ:ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ಫೆ.16ರ ವರೆಗೆ ಅವಕಾಶ
ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳಿಗೆ ಅಹವಾಲು ಸಲ್ಲಿಸಲು ಫೆ.16ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಯಾವುದೇ ರೀತಿಯ ಸಂದೇಹ, ದೂರುಗಳಿದ್ದರೂ rrbcommittee@railnet.gov.in. ಎಂಬ ಇ-ಮೇಲ್‌ಗೆ ಬರೆದು ಸಲ್ಲಿಸಲು ಆರ್‌ಆರ್‌ಬಿ ಅವಕಾಶ ಕಲ್ಪಿಸಿಕೊಟ್ಟಿದೆ.

Advertisement

ತನಿಖೆಗೆ ಸಮಿತಿ
ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ರೈಲ್ವೇ ನೇಮಕ ಮಂಡಳಿ ತನಿಖಾ ಸಮಿತಿ ರಚಿಸಿದೆ. ಅದಕ್ಕೆ ರೈಲ್ವೇ ಮಂಡಳಿಯ ಕೈಗಾರಿಕಾ ವಿಭಾಗದ ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ ದೀಪಕ್‌ ಪೀಟರ್‌ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿ ರಚಿಸಲಾಗಿದೆ. ಅದು ತನಿಖೆ ನಡೆಸಿ, ರೈಲ್ವೇ ಸಚಿವರಿಗೆ ವರದಿ ಸಲ್ಲಿಸಲಿದೆ.

25 ರೈಲುಗಳ ರದ್ದು
ಪೂರ್ವ ಕೇಂದ್ರ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ 25 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಇತರ ರೈಲುಗಳ ಮಾರ್ಗದಲ್ಲಿ ಬದಲು ಮಾಡಲಾಗಿದೆ.

ಉ.ಪ್ರ.ದಲ್ಲೂ ಗಲಾಟೆ: ಇಬ್ಬರ ಬಂಧನ
ಅಕ್ರಮ ಆರೋಪ ಖಂಡಿಸಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ರೈಲು ನಿಲ್ದಾಣದಲ್ಲಿಯೂ ದಾಂಧಲೆ ನಡೆಸಲಾಗಿದೆ. ಉದ್ಯೋಗಾಕಾಂಕ್ಷಿಗಳ ಸೋಗಿನಲ್ಲಿ ನೂರಾರು ಮಂದಿ ಹಳಿಗಳಲ್ಲಿ ಕುಳಿತು ಧರಣಿ ನಡೆಸಿದರು. ಜತೆಗೆ ರೈಲುಗಳಿಗೆ ಕಲ್ಲೆಸೆದಿದ್ದಾರೆ. ಪ್ರಕರಣಕ್ಕೆ ಇಬ್ಬರನ್ನು ಬಂಧಿಸಲಾಗಿದೆ. ಮೂವರು ಪೊಲೀಸರನ್ನು ಸಸ್ಪೆಂಡ್‌ ಮಾಡಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next