Advertisement

ರಾಯಿ: ಸರಕಾರಿ ಜಮೀನಿನಲ್ಲಿ ಆವರಣಗೋಡೆ ನಿರ್ಮಾಣಕ್ಕೆ ಆಕ್ಷೇಪ

08:09 PM May 12, 2019 | Sriram |

ಪುಂಜಾಲಕಟ್ಟೆ: ಸರಕಾರಿ ಮತ್ತು ದೈವಸ್ಥಾನಗಳ ಸ್ಥಳಕ್ಕೆ ಸಂಬಂಧಿಸಿ ವಿವಾದ ಅಸ್ತಿತ್ವದಲ್ಲಿರುವಾಗ ದೈವಸ್ಥಾನ ಸಮಿತಿಯಿಂದ ಮತ್ತೆ ವಿವಾದಿತ ಸ್ಥಳಕ್ಕೆ ಆವರಣ ಗೋಡೆ ನಿರ್ಮಾಣಕ್ಕೆ ಗ್ರಾಮ ಪಂಚಾಯತ್‌ ಆಕ್ಷೇಪ ವ್ಯಕ್ತಪಡಿಸಿದ್ದು, ಪೊಲೀಸರ ಮಧ್ಯ ಪ್ರವೇಶದಿಂದ ಆವರಣ ಗೋಡೆ ನಿರ್ಮಾಣ ಕಾರ್ಯ ಸ್ಥಗಿತಗೊಂಡ ಘಟನೆ ಶನಿವಾರ ಬಂಟ್ವಾಳ ತಾಲೂಕಿನ ರಾಯಿಯಲ್ಲಿ ಸಂಭವಿಸಿದೆ.

Advertisement

ರಾಯಿ ಗ್ರಾ.ಪಂ. ಕಚೇರಿ ಎದುರಿನ 1 ಎಕ್ರೆ ಜಾಗದಲ್ಲಿ ಸ್ಥಳೀಯ ದೈವಸ್ಥಾನಕ್ಕೆ ಸಂಬಂಧಿಸಿ ಕಳೆದ ಎ. 24ರಂದು ಆವರಣ ಗೋಡೆ ನಿರ್ಮಿಸುತ್ತಿರುವಾಗ ಸ್ಥಳೀಯ ಗ್ರಾ.ಪಂ. ಆಕ್ಷೇಪ ವ್ಯಕ್ತಪಡಿಸಿತ್ತು. ಬಂಟ್ವಾಳ ಗ್ರಾಮಾಂತರ ಠಾಣಾ ಎಸ್‌ಐ ಪ್ರಸನ್ನ ಎಂ. ಸೂಚನೆ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ, ತಹಶೀಲ್ದಾರರ ಮೂಲಕ ಕಂದಾಯ ಇಲಾಖೆ ಅಧಿಕಾರಿಗಳು ಇಲ್ಲಿನ ಮೀಸಲಿಟ್ಟ ಜಮೀನು ಸರ್ವೇ ನಡೆಸಿದ ಬಳಿಕವೇ ಕಾಮಗಾರಿ ನಡೆಸುವಂತೆ ಸೂಚಿಸಿದ್ದರು. ಇದೀಗ ಮತ್ತೆ ಆರಂಭಿಸಿದ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಜಮಾಯಿಸಿದ್ದರು.

ದೈವಸ್ಥಾನ ಮತ್ತು ಸಾರ್ವಜನಿಕ ಉದ್ದೇಶ
ಈ ಜಾಗ ಮೈಸಂದಾಯ ಕೊಡಮಣಿತ್ತಾಯಿ, ಧೂಮಾವತಿ ದೈವಸ್ಥಾನ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಸಹಾಯಕ ಆಯುಕ್ತರು ಈಗಾಗಲೇ ಮೀಸಲಿಟ್ಟಿದ್ದಾರೆ ಎಂದು ದೈವಸ್ಥಾನದ ವ್ಯವಸ್ಥಾಪನ ಸಮಿತಿ ತಿಳಿಸಿದೆ. ಗ್ರಾ.ಪಂ. ಸಾರ್ವಜನಿಕ ಆಟದ ಮೈದಾನಕ್ಕೆ ಮೀಸಲಿಟ್ಟ 1 ಎಕ್ರೆ ಜಮೀನಿನಲ್ಲಿ ಮೈಸಂದಾಯ ಕೊಡಮಣಿತ್ತಾಯಿ, ಧೂಮಾವತಿ ದೈವದ ಹೆಸರಿನಲ್ಲಿ ಅತಿಕ್ರಮಣಗೊಳಿಸಿ ಆವರಣ ಗೋಡೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ. ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿದೆ.

ಈ ಒಂದು ಎಕ್ರೆ ಸರಕಾರಿ (ಪ‌ರಂಬೋಕು) ಜಮೀನು ಆಟದ ಮೈದಾನಕ್ಕಾಗಿ ಮೀಸಲಿಟ್ಟು, ಗ್ರಾ.ಪಂ. ಈಗಾಗಲೇ ನಿರ್ಣಯ ಕೈಗೊಂಡಿದೆ ಎಂದು ಗ್ರಾ.ಪಂ. ಅಧ್ಯಕ್ಷರು ಮತ್ತು ಪಿಡಿಒ ಹೆಸರಿನಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

ಇಲ್ಲಿನ ಸರ್ವೇ ನಂ. 86/1ಪಿ1ರಲ್ಲಿ ಒಟ್ಟು 3.84 ಎಕ್ರೆ ಜಮೀನಲ್ಲಿ ಈಗಾಗಲೇ ಗ್ರಾ.ಪಂ., ಹಾಲು ಉತ್ಪಾದಕರ ಸಹಕಾರಿ ಸಂಘ, ಪಶು ವೈದ್ಯಕೀಯ ಕೇಂದ್ರ, ಅಂಚೆ ಕಚೇರಿ ಮತ್ತಿತರ ಕಟ್ಟಡ ನಿರ್ಮಾಣಗೊಂಡಿದೆ. ಉಳಿದಂತೆ ಇಲ್ಲಿನ ಉಳಿಕೆ ಒಂದು ಎಕ್ರೆ ಜಮೀನಿನಲ್ಲಿ ಅಶ್ವತ್ಥ ಮರದಡಿ ಪ್ರತೀವರ್ಷ ದೊಂಪದಬಲಿ ಉತ್ಸವ ನಡೆಸಲಾಗುತ್ತಿದೆ.ಇಲ್ಲಿನ ದೈವದ ನುಡಿಯಂತೆ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಆವರಣಗೋಡೆ ನಿರ್ಮಿಸಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಕೆ. ರಮೇಶ ನಾಯಕ್‌ ರಾಯಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next