ಹೊಸದಿಲ್ಲಿ: “ತಮ್ಮ ಮನೆಯನ್ನು ಮುನ್ನಡೆಸಲು ಬಾರದವರಿಗೆ ದೇಶ ಮುನ್ನಡೆಸಲು ಸಾಧ್ಯವಾಗದು’ ಎಂದಿದ್ದ ನಿತಿನ್ ಗಡ್ಕರಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶಂಸಿಸಿದ್ದಾರೆ. ನಾಗ್ಪುರದಲ್ಲಿ ರವಿವಾರ ನಡೆದ ಎಬಿವಿಪಿ ಮಾಜಿ ಕಾರ್ಯಕರ್ತರ ಸಮ್ಮೇಳನದಲ್ಲಿ ಗಡ್ಕರಿ ಹೀಗೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ “ಗಡ್ಕರಿ ಜೀ, ನಿಮಗೆ ಅಭಿನಂದನೆಗಳು. ಬಿಜೆಪಿಯಲ್ಲಿ ಧೈರ್ಯವಾಗಿ ಮಾತನಾಡುವ ಛಾತಿ ನಿಮಗೊಬ್ಬರಿಗೇ ಇದೆ. ದಯವಿಟ್ಟು ರಫೇಲ್ ಹಗರಣ, ಅನಿಲ್ ಅಂಬಾನಿಗಾದ ಲಾಭ, ರೈತರ ಯಾತನೆ, ಸರಕಾರಿ ಸಂಸ್ಥೆಗಳ ಅವನತಿಗಳ ಬಗ್ಗೆಯೂ ಮಾತನಾಡಿ’ ಎಂದಿದ್ದಾರೆ. ಇದಕ್ಕೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಗಡ್ಕರಿ, “ರಾಹುಲ್ ಅವರೇ, ನನಗೆ ನಿಮ್ಮಿಂದ ದಿಟ್ಟತನದ ಸರ್ಟಿಫಿಕೇಟ್ ಅಗತ್ಯವಿಲ್ಲ. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಮಾಧ್ಯಮಗಳ ತಿರುಚಿದ ವರದಿಯನ್ನು ಪ್ರಸ್ತಾವಿಸಿದ್ದು ನೋಡಿದರೆ ಅಚ್ಚರಿಯಾಗುತ್ತದೆ’ ಎಂದಿದ್ದಾರೆ.