Advertisement

ಇಂದು ಕೈ ಬಲ ಪ್ರದರ್ಶನ: ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಲಿರುವ ರಾಹುಲ್‌ ಗಾಂಧಿ

08:36 AM Jun 13, 2022 | Team Udayavani |

ಹೊಸದಿಲ್ಲಿ: ನ್ಯಾಶನಲ್‌ ಹೆರಾಲ್ಡ್‌ ಪತ್ರಿಕೆಗೆ ಸಂಬಂಧಿಸಿದ ಹಣಕಾಸು ಅವ್ಯವಹಾರ ಪ್ರಕರಣದ ವಿಚಾರಣೆಗಾಗಿ ಸೋಮವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ದಿಲ್ಲಿಯ ಜಾರಿ ನಿರ್ದೇಶನಾಲಯ (ಇ.ಡಿ.)ದ ಮುಂದೆ ಹಾಜರಾಗಲಿದ್ದಾರೆ. ಈ ಪ್ರಕರಣಕ್ಕೆ ರಾಜ ಕೀಯ ತಿರುವು ನೀಡಲು ಸಿದ್ಧತೆ ನಡೆಸಿರುವ ಕಾಂಗ್ರೆಸ್‌ ದೇಶಾದ್ಯಂತ ಇರುವ ಇ.ಡಿ. ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಶಕ್ತಿಪ್ರದರ್ಶನಕ್ಕೆ ಸಜ್ಜಾಗಿದೆ.
ಬಿಜೆಪಿ ಸರಕಾರವು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ದೇಶದ 25 ಇ.ಡಿ. ಕಚೇರಿಗಳ ಮುಂದೆ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ “ಸತ್ಯಾಗ್ರಹ’ ನಡೆಸಲಿದ್ದಾರೆ.
ಇನ್ನೊಂದೆಡೆ ರಾಷ್ಟ್ರ ರಾಜಧಾನಿಯಲ್ಲಿ ರಾಹುಲ್‌ ಗಾಂಧಿ ಜತೆಗೆ ಪಕ್ಷದ ಹಿರಿಯ ನಾಯಕರು ಕೂಡ ಕಾಲ್ನಡಿಗೆಯಲ್ಲೇ ಇ.ಡಿ. ಕಚೇರಿಯ ವರೆಗೆ ಹೆಜ್ಜೆ ಹಾಕಲಿದ್ದಾರೆ.

Advertisement

ಸರಣಿ ಪತ್ರಿಕಾಗೋಷ್ಠಿ
ರವಿವಾರ ಕಾಂಗ್ರೆಸ್‌ನ ಪ್ರಮುಖ ನಾಯಕರು ದೇಶದ ವಿವಿಧ ಭಾಗಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಸಚಿನ್‌ ಪೈಲಟ್‌, ವಿವೇಕ್‌ ಟಂಕಾ, ಸಂಜಯ್‌ ನಿರುಪಮ್‌, ರಂಜಿತ್‌ ರಂಜನ್‌, ಪವನ್‌ ಖೇರಾ ಮತ್ತು ಅಲ್ಕಾ ಲಂಬಾ ಪತ್ರಿಕಾಗೋಷ್ಠಿ ನಡೆಸಿದ್ದು, ಕೇಂದ್ರ ಸರಕಾರವು ಸುಳ್ಳು ಪ್ರಕರಣದಲ್ಲಿ ಸೋನಿಯಾ ಮತ್ತು ರಾಹುಲ್‌ ಗಾಂಧಿ ಅವರನ್ನು ಸಿಲುಕಿಸಲು ಸಂಚು ರೂಪಿಸಿದೆ. ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌ ಪ್ರಹಸನ: ಬಿಜೆಪಿ ಟೀಕೆ
ಕಾಂಗ್ರೆಸ್‌ನ “ಸತ್ಯಾಗ್ರಹ’ದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, ಸೋನಿಯಾ ಮತ್ತು ರಾಹುಲ್‌ ಇಬ್ಬರೂ ಜಾಮೀನಿನ ಮೇಲಿರುವವರು. ಸೋಮವಾರ ರಾಹುಲ್‌ ಇ.ಡಿ. ಮುಂದೆ ಹಾಜರಾಗಬೇಕು. ಆದರೆ ಕಾಂಗ್ರೆಸ್‌ ದೊಡ್ಡಮಟ್ಟದ ಪ್ರಹಸನ ನಡೆಸಲು ಮುಂದಾಗಿದೆ. ಇದ್ಯಾವ ಸತ್ಯಾಗ್ರಹ? ಈ ನಕಲಿ ಗಾಂಧಿಗಳ ನಕಲಿ ಸತ್ಯಾಗ್ರಹವನ್ನು ನೋಡಿದರೆ ಗಾಂಧೀಜಿಯವರಿಗೇ ನಾಚಿಕೆಯಾಗಬಹುದು. ಇದು ಕಾನೂನಾತ್ಮಕ ವಿಚಾರ, ರಾಜಕೀಯ ವಿಚಾರವಲ್ಲ ಎಂಬುದನ್ನು ರಾಹುಲ್‌ ಅರಿತರೆ ಒಳ್ಳೆಯದು ಎಂದಿದ್ದಾರೆ.

ಬೆಂಗಳೂರಿನಲ್ಲೂ
ಬೆಂಗಳೂರು: ಕೇಂದ್ರ ಸರಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಸೋನಿಯಾ ಮತ್ತು ರಾಹುಲ್‌ ಗಾಂಧಿಯವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಯೂ ಸೋಮವಾರ ರಾಜ್ಯ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಯ ಲಿದೆ. ಬೆಂಗಳೂರಿನ ಶಾಂತಿನಗರ ದಲ್ಲಿರುವ ಇ.ಡಿ. ಕಚೇರಿ ಎದುರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತಿತರ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಲಾಲ್‌ಬಾಗ್‌ ವೆಸ್ಟ್‌ ಗೇಟ್‌ನಿಂದ ಇ.ಡಿ. ಕಚೇರಿಯ ವರೆಗೆ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ.

ಜೂ. 23ರಂದು ಸೋನಿಯಾ ವಿಚಾರಣೆ
ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಇ.ಡಿ. ಸಮನ್ಸ್‌ ಜಾರಿ ಮಾಡಿದ್ದು, ಜೂ. 23ರಂದು ಅವರು ವಿಚಾರಣೆಗೆ ಹಾಜರಾಗಲಿದ್ದಾರೆ. ಇತ್ತೀಚೆಗಷ್ಟೇ ಇದೇ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್‌ ಖೇರಾ ಅವರ ವಿಚಾರಣೆ ನಡೆಸಿದ್ದರು.

Advertisement

ಇಂದು ಏನೇನು?
-ಇಂದು ಬೆಳಗ್ಗೆ 9.30ಕ್ಕೆ ಎಐಸಿಸಿ ಪ್ರಧಾನ ಕಚೇರಿ ತಲುಪಲಿರುವ ಕಾಂಗ್ರೆಸ್‌ ಸಂಸದರು, ಕಾರ್ಯಕಾರಿ ಸಮಿತಿ ಸದಸ್ಯರು
- 10 ಗಂಟೆ ವೇಳೆಗೆ ರಾಹುಲ್‌ ಗಾಂಧಿ ಜತೆಗೆ ಇ.ಡಿ. ಕಚೇರಿಯತ್ತ ಕಾಲ್ನಡಿಗೆ
– ದೇಶಾದ್ಯಂತ ಇರುವ 25 ಇ.ಡಿ. ಕಚೇರಿಗಳ ಮುಂದೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಧರಣಿ

 

Advertisement

Udayavani is now on Telegram. Click here to join our channel and stay updated with the latest news.

Next