ಪಟ್ನಾ: ಕರ್ನಾಟಕ ವಿಧಾನಸಭೆಗೆ ಶೀಘ್ರವೇ ನಡೆಯಲಿರುವ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದಲೇ ಸೂರತ್ ಕೋರ್ಟ್ ತೀರ್ಪಿನ ವಿರುದ್ಧ ರಾಹುಲ್ ಗಾಂಧಿ ಮೇಲ್ಮನವಿ ಸಲ್ಲಿಸಿಲ್ಲ. ಹೀಗೆಂದು ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
ಪಟ್ನಾದಲ್ಲಿ ಶುಕ್ರವಾರ ಮಾತನಾಡಿದ ಅವರು ರಾಹುಲ್ ಆರೋಪ ಗಳೆಲ್ಲ ಸುಳ್ಳು ಮತ್ತು ಆಧಾರ ರಹಿತವಾದದ್ದು ಎಂದರು. 2019ರ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಅನರ್ಹಗೊಳಿಸಲಾಗಿ ದೆಯೇ ವಿನಾ ಇದಕ್ಕೂ ಅದಾನಿ- ಹಿಂಡನ್ಬರ್ಗ್ ವಿಚಾರಕ್ಕೂ ಸಂಬಂಧವೇ ಇಲ್ಲ. ವಿಷಯಾಂತರ ಮಾಡುವುದು ರಾಹುಲ್ ಅವರಿಗೆ ಅಭ್ಯಾಸವಾಗಿಬಿಟ್ಟಿದೆ ಎಂದರು. ರಾಹುಲ್ ತಳಸಮುದಾಯವನ್ನು ಅವಮಾನಿಸಿದ್ದಾರೆ. ಅದನ್ನು ಮಾಡಲು ಅವರಿಗೆ ಹಕ್ಕಿದೆಯೆಂದಾದರೆ, ಅದನ್ನು ಪ್ರಶ್ನಿಸಿ ಕೋರ್ಟ್ಗೆ ಹೋಗಲು ಆ ಸಮುದಾಯದವರಿಗೂ ಹಕ್ಕಿದೆ. ಕ್ಷಮೆ ಕೇಳುತ್ತೀರಾ ಎಂದು ಕೋರ್ಟ್ ಕೇಳಿದಾಗ ರಾಹುಲ್ ಒಪ್ಪಲಿಲ್ಲ. ಹೀಗಾಗಿ ಶಿಕ್ಷೆಯಾಯಿತು ಎಂದ ರವಿಶಂಕರ್, ಒಬಿಸಿ ಸಮುದಾಯಕ್ಕೆ ಅವಮಾನ ಮಾಡಿದ ರಾಹುಲ್ ವಿರುದ್ಧ ಬಿಜೆಪಿಯು ದೊಡ್ಡಮಟ್ಟದ ಪ್ರತಿಭಟನೆ ನಡೆಸಲಿದೆ ಎಂದೂ ಘೋಷಿಸಿದ್ದಾರೆ. ಜತೆಗೆ ರಾಹುಲ್ ಗಾಂಧಿ ಭಾರತದಲ್ಲಿ ಪ್ರಜಾಪ್ರಭುತ್ವ ಕಾಪಾಡಲು ವಿದೇಶಿ ನೆರವು ಕೋರಿ ಮಾತನಾಡಿದ್ದ ವೀಡಿಯೋವನ್ನು ಕೂಡ ಪ್ರದರ್ಶಿಸಿದರು.
ಮೇಲ್ಮನವಿ ಸಲ್ಲಿಸಿಲ್ಲ ಏಕೆ?: ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪ್ರಕರಣದಲ್ಲಿ ಕೇವಲ ಒಂದೇ ಗಂಟೆಯಲ್ಲಿ ಸುಪ್ರೀಂ ಕೋರ್ಟ್ಗೆ ಹೋಗಿ ತಡೆಯಾಜ್ಞೆ ತಂದ ಕಾಂಗ್ರೆಸ್ನ ವಕೀಲರ ಪಡೆ, ಈಗ ಏಕೆ ಸುಮ್ಮನಿದೆ? ರಾಹುಲ್ ಪ್ರಕರಣದಲ್ಲಿ ಇನ್ನೂ ಏಕೆ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿಲ್ಲ? ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್
ಕೋರ್ಟ್ಗೆ ಹೋಗುತ್ತಿಲ್ಲ. ಏಕೆಂದರೆ ಇದನ್ನೇ ದಾಳವಾಗಿಟ್ಟುಕೊಂಡು “ಬಲಿಪಶು’ವೆಂದು ತೋರಿಸಿಕೊಳ್ಳುತ್ತಾ ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ರಾಜಕೀಯ ಲಾಭ ಗಳಿಸಲು ಪ್ರಯತ್ನಿಸುತ್ತಿದೆ ಎಂದೂ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
ಶೀಘ್ರದಲ್ಲೇ ಚುನಾವಣೆ?: ರಾಹುಲ್ ಅನರ್ಹಗೊಂಡಿರುವ ಕಾರಣ, ಅವರು ಪ್ರತಿನಿಧಿಸುವ ವಯನಾಡ್ ಕ್ಷೇತ್ರಕ್ಕೆ ಸದ್ಯದಲ್ಲೇ ಚುನಾವಣ ಆಯೋಗ ಹೊಸ ಚುನಾವಣ ದಿನಾಂಕ ಘೋಷಿಸುವ ಸಾಧ್ಯತೆಯಿದೆ.
Related Articles
ಕಾಂಗ್ರೆಸ್, ಬಿಜೆಪಿ ಪ್ರತಿಭಟನೆ
ರಾಹುಲ್ ಗಾಂಧಿ ಅನರ್ಹತೆ ಖಂಡಿಸಿ ಮಹಾರಾಷ್ಟ್ರ, ಛತ್ತೀಸ್ಗಢ, ತೆಲಂಗಾಣ ಸಹಿತ ದೇಶದ ಹಲವು ಕಡೆ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿ ದ್ದಾರೆ. ವಯನಾಡ್ನಲ್ಲಿ ಪ್ರಧಾನಿ ಮೋದಿ ಯವರ ಪ್ರತಿಕೃತಿಯನ್ನೂ ದಹನ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಮತ್ತೂಂದೆಡೆ ರಾಹುಲ್ ಒಬಿಸಿ ಸಮುದಾಯಕ್ಕೆ ಅವಮಾನ ಮಾಡಿದೆ ಎಂದು ಆರೋಪಿಸಿ ಮುಂಬಯಿ ಯಲ್ಲಿ ಬಿಜೆಪಿ ಕೂಡ ಪ್ರತಿಭಟನೆ ನಡೆಸಿದೆ.