ಬನಹಟ್ಟಿ : ಕೋವಿಡ್ನಂತ ಸಂದಿಗ್ಧ ಪರಸ್ಥಿತಿಯಲ್ಲಿ ಕೋವಿಡ್ ಪಾಜಿಟಿವ್ ಆಗಿ ತೀರಿ ಕೊಂಡಿದ್ದ ವ್ಯಕ್ತಿಯ ಅಂತ್ಯಕ್ರಿಯೆಯನ್ನು ನಗರಸಭೆ ಸಿಬ್ಬಂದಿ ಮಾಡಲು ಒಪ್ಪದೇ ಇದ್ದ ಕಾರಣ ಕೋವಿಡ್ ನಿಯಮಾನುಸಾರ ರಬಕವಿ-ಬನಹಟ್ಟಿ ತಾಲ್ಲೂಕಿನ ಕರವೇ ಕಾರ್ಯಕರ್ತರು ಪಿಪಿಎ ಕಿಟ್ ಧರಿಸಿ ನೆರವೆರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಅಣ್ಣಪ್ಪ ಅಂಬಿ (68) ಒಂದು ವಾರಗಳ ಕಾಲ ಕೋವಿಡ್ನಿಂದಾಗಿ ಜಮಖಂಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ.11 ರಂದು ಸಂಜೆ 6 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರ ಮಾಡಲು ಜಮಖಂಡಿ ನಗರಸಭೆ ಸಿಬ್ಬಂದಿ ರಾತ್ರಿ ವೇಳೆ ಬರಲು ನಿರಾಕರಿಸಿದರು.
ಆ ಹಿನ್ನಲೆಯಲ್ಲಿ ರಾತ್ರಿ ವೇಳೆಯಾದರೂ ವಿಷಯ ತಿಳಿದ ರಬಕವಿ-ಬನಹಟ್ಟಿ ತಾಲೂಕು ಕರವೇ ಅಧ್ಯಕ್ಷರು ಮತ್ತು 15 ಸದಸ್ಯರು ಹೋಗಿ ಸಂಭಂದಪಟ್ಟ ಅಧಿಕಾರಿಗಳ ಜೊತೆ ಮಾತಾಡಿ ಶವ ಸಾಗಿಸುವ ಗಾಡಿ ಕರೆಯಿಸಿದರು. ಪೌರ ಕಾರ್ಮಿಕರು ಪಿಪಿಎ ಕಿಟ್ ಧರಿಸಿ ಶವ ಸಂಸ್ಕಾರ ಮಾಡಲು ನಿರಾಕರಿಸಿದರು. ನಂತರ ಅವರ ಕುಟುಂಬದ ದುಃಖವನ್ನು ನೋಡಲಾಗದೆ ಕರವೇ ಅಧ್ಯಕ್ಷರಾದ ಮಾಳು ದುರ್ಗನ್ನವರ ಮತ್ತು ಪದಾಧಿಕಾರಿಗಳಾದ ಮೈಬೂಬ ನದಾಫ, ಲಿಂಗರಾಜ ಮಠಪತಿ, ಮಂಜುನಾಥ ರಾವಳ ಮತ್ತು ಪ್ರೇಮ್ ಚಿತ್ತರಗಿ ಪಿಪಿಎ ಕಿಟ್ ಧರಿಸಿ ರಾತ್ರಿ ವೇಳೆ ಕಟ್ಟಿಗೆ ವ್ಯವಸ್ಥೆ ಮಾಡಿ ನಗರಸಭೆಯ ಒರ್ವ ಮೇಲ್ವಿಚಾರಕರ ಸಹಾಯದೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.
ಇದನ್ನೂ ಓದಿ :ಪಡಿತರ ವಿತರಣೆಯಲ್ಲಿ ಅಕ್ರಮ: ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಭರತ್ ಶೆಟ್ಟಿ
ಕರವೇ ಕಾರ್ಯಕರ್ತರ ಈ ಮಾನವಿಯತೆಯ ಕಾರ್ಯವನ್ನು ರಬಕವಿ ಬನಹಟ್ಟಿ ತಾಲ್ಲೂಕಿನ ಜನರು ಶ್ಯ್ಲಾಘಿಸಿದ್ದಾರೆ.