Advertisement

ಆರ್‌.ಎನ್‌. ನಾಯಕ್‌ ಕೊಲೆ ಪ್ರಕರಣ: ಮಾ. 30ಕ್ಕೆ ಹೊರಬೀಳಲಿದೆ ಮಹತ್ವದ ತೀರ್ಪು

02:14 AM Mar 29, 2022 | Team Udayavani |

ಮಂಗಳೂರುಒಂಬತ್ತು ವರ್ಷಗಳ ಹಿಂದೆ ನಡೆದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಿಜೆಪಿ ನಾಯಕ ಹಾಗೂ ಉದ್ಯಮಿ ಆರ್‌.ಎನ್‌. ನಾಯಕ್‌ ಕೊಲೆ ಪ್ರಕರಣದಲ್ಲಿ ಕುಖ್ಯಾತ ಭೂಗತ ಪಾತಕಿ ಬನ್ನಂಜೆ ರಾಜಾ ಯಾನೆ ರಾಜೇಂದ್ರ ಕುಮಾರ್‌ (54) ಭಾಗಿಯಾದ ಆರೋಪ ಕುರಿತಂತೆ ಬೆಳಗಾವಿಯ ಕೋಕಾ ನ್ಯಾಯಾಲಯವು ಮಾ. 30ರಂದು ತೀರ್ಪು ಪ್ರಕಟಿಸಲಿದೆ. ಆರೋಪಿ ಬನ್ನಂಜೆ ರಾಜಾ ಪ್ರಸ್ತುತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾನೆ.

Advertisement

ರಾಜಾ ಮೇಲಿವೆ 48 ಪ್ರಕರಣಗಳು
ಬನ್ನಂಜೆ ರಾಜಾನ ಮೇಲೆ ಉಡುಪಿ, ಮಂಗಳೂರು, ಉತ್ತರ ಕನ್ನಡ, ಬೆಂಗಳೂರು, ಮೈಸೂರು, ಶಿವಮೊಗ್ಗದ ವಿವಿಧ‌ ಪೊಲೀಸ್‌ ಠಾಣೆಗಳಲ್ಲಿ ಮಾತ್ರವಲ್ಲದೆ ಕೇರಳದಲ್ಲಿಯೂ ಹಪ್ತಾ¤ ವಸೂಲಿ, ಸುಲಿಗೆ, ಕೊಲೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಒಟ್ಟು 48 ಪ್ರಕರಣಗಳಿವೆ. ಉ.ಕ. ಜಿಲ್ಲೆಯ ಬಿಜೆಪಿ ನಾಯಕ ಹಾಗೂ ಉದ್ಯಮಿ ಆರ್‌.ಎನ್‌. ನಾಯಕ್‌ ಅವರನ್ನು 2013ರಲ್ಲಿ ಸುಪಾರಿ ನೀಡಿ ಕೊಲೆ ಮಾಡಿಸಿದ ಪ್ರಕರಣ ಈ ಪೈಕಿ ಅತ್ಯಂತ ಪ್ರಮುಖವಾಗಿದೆ.
ರಾಜಾನನ್ನು ಮೊರೊಕ್ಕೊದಲ್ಲಿ 2015 ಫೆಬ್ರವರಿ 12ರಂದು ನಕಲಿ ಪಾಸ್‌ಪೋರ್ಟ್‌ ಹೊಂದಿದ ಆರೋಪದಡಿ ಬಂಧಿಸಿದ್ದು, ಬಳಿಕ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು. ಅದೇ ವರ್ಷ ಆಗಸ್ಟ್‌ 14ರಂದು ಭಾರತಕ್ಕೆ ಕರೆತರಲಾಗಿತ್ತು. ಬೆಳಗಾವಿಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ವಿಚಾರಣೆಗಾಗಿ ಬೆಂಗಳೂರು, ಉಡುಪಿ ಹಾಗೂ ಮಂಗಳೂರಿಗೆ ಕರೆತರಲಾಗಿತ್ತು.

3 ಕೋಟಿ ರೂ. ನೀಡದ್ದಕ್ಕೆ ನಾಯಕ್‌ ಹತ್ಯೆ ಉದ್ಯಮಿಗಳನ್ನು ಬೆದರಿಸಿ ಹಪ್ತಾ ವಸೂಲಿ ದಂಧೆ ಯಲ್ಲಿ ತೊಡಗಿದ್ದ ಬನ್ನಂಜೆ ರಾಜಾ ಅಂಕೋಲಾದ ಉದ್ಯಮಿ ಹಾಗೂ ಬಿಜೆಪಿ ನಾಯಕ ಆರ್‌.ಎನ್‌. ನಾಯಕ್‌ ಅವರಿಗೆ 3 ಕೋಟಿ ರೂ. ಹಫ್ತಾ ಹಣ ನೀಡುವಂತೆ ಬೇಡಿಕೆ ಸಲ್ಲಿಸಿದ್ದ. ಆದರೆ ಹಣ ನೀಡಲು ನಿರಾಕರಿಸಿದ್ದರಿಂದ 2013 ಡಿಸೆಂಬರ್‌ 21ರಂದು ನಾಯಕ್‌ ಅವರನ್ನು ಬನ್ನಂಜೆ ರಾಜಾ ಕೊಲೆ ಮಾಡಿಸಿದ್ದನು ಎಂದು ಆರೋಪಿಸಲಾಗಿತ್ತು.

ಬಹಳಷ್ಟು ಕುತೂಹಲ ಕೆರಳಿಸಿದ್ದ
ಈ ಕೊಲೆ ಪ್ರಕರಣದಲ್ಲಿ ಒಟ್ಟು 16 ಮಂದಿ ಆರೋಪಿಗಳನ್ನು ಗುರುತಿಸಲಾಗಿದ್ದು, ಬನ್ನಂಜೆ ರಾಜಾ ಸೇರಿದಂತೆ 13 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಪ್ರಸ್ತುತ ಜೈಲಿನಲ್ಲಿದ್ದಾರೆ. ಈ ಪ್ರಕರಣದಲ್ಲಿ ಬನ್ನಂಜೆ ರಾಜಾ 9ನೇ ಆರೋಪಿಯಾಗಿದ್ದಾನೆ. ಹಣ ನೀಡಿ ಕೊಲೆ ಮಾಡಿಸಿದ ಆರೋಪ ಆತನ ಮೇಲಿದ್ದು, 500 ಪುಟಗಳ
ಚಾರ್ಜ್‌ ಶೀಟನ್ನು ಪೊಲೀಸರು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಬೆಳಗಾವಿ ಕೋರ್ಟ್‌ಗೆ ಹಾಜರುಪಡಿಸಿದ್ದೇಕೆ?
2000 ಇಸವಿಯಲ್ಲಿ ರಚಿಸಿದ್ದ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ)ಯನ್ನು 13 ವರ್ಷಗಳ ಬಳಿಕ ಮೊದಲ ಬಾರಿಗೆ ಈ ಪ್ರಕರಣದಲ್ಲಿ ಕರ್ನಾಟಕದ ಪಶ್ಚಿಮ ವಲಯದ ಪೊಲೀಸರು ಅನ್ವಯಿಸಿ ಪ್ರಕರಣ ದಾಖಲಿಸಿದ್ದರು. ಕೋಕಾ ಪ್ರಕರಣದ ವಿಚಾರಣೆ ನಡೆಸುವ ನ್ಯಾಯಾಲಯಗಳು ಬೆಳಗಾವಿ, ಬೆಂಗಳೂರು ಮತ್ತು ಮೈಸೂರಿನಲ್ಲಿ ಮಾತ್ರ ಇದ್ದು, ಬನ್ನಂಜೆ ರಾಜಾನ ಮೇಲೆ ಪೊಲೀಸರು ಆರ್‌.ಎನ್‌. ನಾಯಕ್‌ ಹತ್ಯೆ ಹಿನ್ನೆಲೆಯಲ್ಲಿ ಕೋಕಾ ಪ್ರಕರಣ ದಾಖಲು ಮಾಡಿರುವ ಜಿಲ್ಲೆ ಬೆಳಗಾವಿ ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ರಾಜಾನನ್ನು ಬೆಳಗಾವಿ ನ್ಯಾಯಾಲಯಕ್ಕೆ 2015 ಆ. 14ರಂದು ಹಾಜರುಪಡಿಸಲಾಗಿತ್ತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next