ಬೆಂಗಳೂರು : ಜನರ ಸಮಸ್ಯೆಗಳ ಸಂಪೂರ್ಣ ಅರಿವು ಸರ್ಕಾರಕ್ಕೆ ಆಗಬೇಕಾದರೆ ಅವರು ವಾಸ ಮಾಡುವ ಸ್ಥಳಕ್ಕೆ ಹೋಗಿ ಖುದ್ದು ಅವಲೋಕನ ಮಾಡುವುದರಿಂದ ಮಾತ್ರ ಸಾಧ್ಯ. ಜನಸಾಮಾನ್ಯರಿಗೂ ಉನ್ನತ ಅಧಿಕಾರಿಗಳು ಸುಲಭವಾಗಿ ಸಿಗಬೇಕು, ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಸಿಗಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಜನಸಾಮಾನ್ಯರ ಪರಿಸ್ಥಿತಿಯ ಖುದ್ದು ಪರಿಚಯ ಆಗಬೇಕು ಎನ್ನುವ ದೃಷ್ಟಿಯಿಂದ ಈ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಈವರೆಗೆ ಕಂದಾಯ ಸಚಿವ ಆರ್ ಅಶೋಕ 14 ಗ್ರಾಮಗಳಲ್ಲಿ ವಾಸ್ತವ್ಯ ಮಾಡಿದ್ದಾರೆ. ಸುಮಾರು 3 ಲಕ್ಷ 80 ಸಾವಿರಕ್ಕೂ ಅಧಿಕ ಜನರಿಗೆ ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ವಿತರಿಸಲಾಗಿದೆ.
ಶನಿವಾರ ಬೆಳಿಗ್ಗೆ 11 ಗಂಟೆಗೆ ಜಡಿಗೇನಹಳ್ಳಿಯ ಆಂಜನೇಯ ಸ್ವಾಮಿಗೆ ಸಚಿವರು ಪೂಜೆ ಸಲ್ಲಿಸಲಿದ್ದಾರೆ. ನಂತರ ಮೆರವಣಿಗೆಯೊಂದಿಗೆ ಜಡಿಗೇನಹಳ್ಳಿ ಗ್ರಾಮಸ್ಥರು ಸಚಿವರನ್ನು ಬರಮಾಡಿಕೊಳ್ಳಲಿದ್ದಾರೆ. ವಿವಿಧ ಇಲಾಖೆಗಳ ಸ್ಟಾಲ್ ಗಳನ್ನು ಕಂದಾಯ ಸಚಿವರು ಉದ್ಘಾಟಿಸಿ, ಕೃಷಿ ಸಲಕರಣೆಗಳನ್ನು ವಿತರಿಸಲಿದ್ದಾರೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಂಬಿಗರ ಚೌಡಯ್ಯ ಜಯಂತ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ವೇದಿಕೆ ಕಾರ್ಯಕ್ರಮಕ್ಕೆ ಆರ್ ಅಶೋಕ ಚಾಲನೆ ನೀಡಲಿದ್ದಾರೆ. ವಿಕಲಚೇತನರಿಗೆ ಕೃತಕ ಕಾಲು ಜೋಡನೆ, ವಿವಿಧ ಇಲಾಖೆಯ ಸವಲತ್ತುಗಳ ವಿತರಣೆ, ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ/ಉದ್ಘಾಟನೆ ಮಾಡಲಿದ್ದಾರೆ.
ಸಂಜೆ 5 ಗಂಟೆಗೆ ಮುಖ್ಯ ವೇದಿಕೆಯ ಬಳಿ ಸಾರ್ವಜನಿಕರಿಂದ ಸಚಿವರು ಅಹವಾಲು ಸ್ವೀಕರಿಸಲಿದ್ದಾರೆ.
ಸಂಜೆ 6:30 ಕ್ಕೆ ಗ್ರಾಮಸಭೆ ನಡೆಸಿ ಕುಂದು ಕೊರತೆಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಸಂಜೆ 7:30 ರಿಂದ ಸ್ಥಳೀಯ ಜಾನಪದ ಕಲಾವಿದರು ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನಂತರ ಜಡಿಗೇನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿ, ಅವರ ಜೊತೆ ಭೋಜನ ಸೇವಿಸಿ, ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
Related Articles
ರವಿವಾರ ಬೆಳಿಗ್ಗೆ ಮೊರಾರ್ಜಿ ದೇಸಾಯಿ ಶಾಲೆಯ ಮಕ್ಕಳೊಂದಿಗೆ ಯೋಗಾಭ್ಯಾಸ ನಡೆಸಿ, ಬೆಳಿಗ್ಗೆ 7:30ರಿಂದ ಜಡಿಗೇನಹಳ್ಳಿಯ ಗ್ರಾಮಸ್ಥರೊಂದಿಗೆ ಅರಳಿಕಟ್ಟೆಯಲ್ಲಿ ಮಾತುಕತೆ ನಡೆಸಲಿದ್ದಾರೆ. ಬೆಳಿಗ್ಗೆ 10:30 ರಿಂದ ಜಡಿಗೇನಹಳ್ಳಿಯ ನಾಡ ಕಚೇರಿಯಲ್ಲಿ ಪೌತಿ ಖಾತೆ ಆಂದೋಲನ ನಡೆಸಿ, ಹಲವಾರು ಜನರಿಗೆ ಪಹಣಿ ವಿತರಣೆ ಕಾರ್ಯಕ್ರಮ ಇದೆ.
ಇದನ್ನೂ ಓದಿ: ವಿಜಯಪುರ ವಿಮಾನ ನಿಲ್ದಾಣಕ್ಕೆ ”ಸಿದ್ಧೇಶ್ವರ ಶ್ರೀ” ಹೆಸರು ಸೂಕ್ತ : ಹೆಚ್ ಡಿಕೆ