Advertisement

ಸಿಆರ್‌ಝಡ್‌ ಮರಳುಗಾರಿಕೆ ಶೀಘ್ರ?

01:37 AM Sep 19, 2020 | mahesh |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸಿಆರ್‌ಝಡ್‌ ವಲಯದಲ್ಲಿ ಗುರುತಿಸಲಾಗಿರುವ 13 ಬ್ಲಾಕ್‌ಗಳಲ್ಲಿ (ದಿಬ್ಬ) ಈ ಬಾರಿ ಮರಳುಗಾರಿಕೆ ಪರವಾನಿಗೆ ವಿತರಣೆ ಕುರಿತು ಮುಂದಿನ ವಾರ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ಜರಗಲಿದೆ. ಆ ಮೂಲಕ ಸಿಆರ್‌ಝಡ್‌ ವಲಯದಲ್ಲಿ ಕಳೆದ 9 ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಮರಳುಗಾರಿಕೆಗೆ ಇನ್ನು ಕೆಲವೇ ದಿನಗಳಲ್ಲಿ ಮರುಚಾಲನೆ ದೊರಕಲಿದೆ.

Advertisement

ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ಕುರಿತ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಕಳುಹಿಸಿದ್ದ ವರದಿಗೆ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ (ಕೆಸಿಝಡ್‌ಎಂ) ನೀಡಿರುವ ಅನುಮೋದನೆ ವಿವರ ಜಿಲ್ಲೆಗೆ ಬಂದಿದೆ. ಮರಳುಗಾರಿಕೆಗೆ ಪರವಾನಿಗೆ ನೀಡುವ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ಮುಂದಿನ ವಾರ ಜರಗಲಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಈ ಬಾರಿ ನಡೆಸಿದ ಬ್ಯಾಥಮೆಟ್ರಿಕ್ಸ್‌ ಸರ್ವೆಯಲ್ಲಿ ನೇತ್ರಾವತಿ, ಫಲ್ಗುಣಿ ಹಾಗೂ ಶಾಂಭವಿ ನದಿಯಲ್ಲಿ ಹೊಸದಾಗಿ ಗುರುತಿಸಿರುವ ಮರಳು ದಿಬ್ಬಗಳ ವರದಿಯ ಬಗ್ಗೆ ಎನ್‌ಐಟಿಕೆ ಸಲ್ಲಿಸಿರುವ ತಾಂತ್ರಿಕ ವರದಿಯನ್ನು ಜಿಲ್ಲಾಧಿಕಾರಿಯವರ ಅಧ್ಯಕ್ಷತೆ ಯಲ್ಲಿರುವ ಸಮಿತಿ ಪರಿಶೀಲನೆ ನಡೆಸಿ ಮೇ ತಿಂಗಳಿನಲ್ಲಿ ಕೆಸಿಝಡ್‌ಎಂಗೆ ಕಳುಹಿಸಿಕೊಟ್ಟಿತ್ತು. ಬೆಂಗಳೂರಿನಲ್ಲಿ ಆ. 21ರಂದು ಜರಗಿದ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ (ಕೆಸಿಝಡ್‌ಎಂ) ಸಭೆಯು ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ಜಿಲ್ಲೆಯಿಂದ ಸಲ್ಲಿಸಲಾಗಿದ್ದ ವರದಿಗೆ ಅನುಮೋದನೆ ನೀಡಿತ್ತು.

ಸಿಆರ್‌ಝಡ್‌ ವ್ಯಾಪ್ತಿಯೊಳಗೆ ಬರುವ ನೇತ್ರಾವತಿ ನದಿಯಲ್ಲಿ 8, ಗುರುಪುರ ನದಿಯಲ್ಲಿ 4 ಹಾಗೂ ಶಾಂಭವಿ ನದಿಯಲ್ಲಿ ಒಂದು ಸೇರಿದಂತೆ ಒಟ್ಟು 13 ಬ್ಲಾಕ್‌ಗಳು ಕೆಸಿಝಡ್‌ಎಂನಿಂದ ಅನುಮೋದನೆಗೊಂಡಿದ್ದು ಸುಮಾರು 10 ಲಕ್ಷ ಮೆಟ್ರಿಕ್‌ ಟನ್‌ ಮರಳು ಲಭ್ಯವಾಗಲಿದೆ ಎಂದು
ಅಂದಾಜಿಸಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ 7 ಸದಸ್ಯರ ಸಮಿತಿ ಮರಳುಗಾರಿಕೆಗೆ ಪರವಾನಿಗೆ
ನೀಡುವ ಪ್ರಕ್ರಿಯೆ ನಡೆಸಲಿದೆ. ಕಳೆದ ಬಾರಿ 2 ಹಂತಗಳಲ್ಲಿ ಪರವಾನಿಗೆ ನೀಡ ಲಾಗಿದ್ದು ನೇತ್ರಾವತಿ ಹಾಗೂ ಫಲ್ಗುಣಿ ನದಿಯ ಸಿಆರ್‌ಝಡ್‌ ವಲಯದಲ್ಲಿ 22 ಬ್ಲಾಕ್‌ಗಳಲ್ಲಿ ಒಟ್ಟು 105 ಮಂದಿಗೆ ಮರಳುಗಾರಿಕೆಗೆ ಅವಕಾಶ ನೀಡಲಾಗಿತ್ತು. ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ಮರು ಆರಂಭಗೊಳ್ಳದಿರುವುದು ನಿರ್ಮಾಣ ಚಟುವಟಿಕೆಗಳಿಗೆ ಮರಳಿನ ತೀವ್ರ ಸಮಸ್ಯೆ ಸೃಷ್ಟಿಸಿದೆ.

ಈ ಬಾರಿಯೂ ತುಂಬೆಯಲ್ಲಿ ಡ್ರಜ್ಜಿಂಗ್‌
ಕಳೆದ ಬಾರಿಯಂತೆ ಈ ಬಾರಿಯೂ ತುಂಬೆ ವೆಂಟೆಡ್‌ಡ್ಯಾಂನಲ್ಲಿ ಡ್ರೆಜ್ಜಿಂಗ್‌ (ಮರಳು ಎತ್ತುವಿಕೆ) ನಡೆಯಲಿದೆ. ಡ್ರೆಜ್ಜಿಂಗ್‌ಗೆ ಕರ್ನಾಟಕ ಮಿನರಲ್‌ ಕಾರ್ಪೊರೇಶನ್‌ಗೆ ಕೋರಿಕೆ ಸಲ್ಲಿಸಲಾಗುವುದು. ಅವರು ನಡೆಸದಿದ್ದರೆ ಕಳೆದ ಬಾರಿಯ ವ್ಯವಸ್ಥೆಯನ್ನೇ ಮುಂದುವರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಮರಳನ್ನು ಕಳೆದ ಬಾರಿಯಂತೆ ಆ್ಯಪ್‌ ಮೂಲಕ ನೀಡಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ. ಕಳೆದ ಬಾರಿ ತುಂಬೆಯಲ್ಲಿ ನಡೆಸಿದ ಡ್ರೆಜ್ಜಿಂಗ್‌ನಲ್ಲಿ 86,000 ಮೆಟ್ರಿಕ್‌ ಟನ್‌ ಮರಳು ಲಭ್ಯವಾಗಿದ್ದು ಇದೆಲ್ಲವೂ ವಿಲೇವಾರಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next