Advertisement

ಶಾಸಕರ ಸರಕಾರಿ ಮಾದರಿ ಶಾಲೆಗೆ ಶೀಘ್ರ ಮೂಲ ಸೌಲಭ್ಯ

06:19 PM Jul 16, 2022 | Team Udayavani |

ಹಾನಗಲ್ಲ: ಪಟ್ಟಣದ ಶಾಸಕರ ಸರಕಾರಿ ಮಾದರಿ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸದ ಹೊರತು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂಬ ಪಾಲಕರ ತೀರ್ಮಾನದ ಹಿನ್ನೆಲೆಯಲ್ಲಿ, ಶುಕ್ರವಾರ ಪಾಲಕರೊಂದಿಗೆ ಸಭೆ ನಡೆಸಿದ ಶಾಸಕರು, ತಹಶೀಲ್ದಾರ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದರು.

Advertisement

ಶುಕ್ರವಾರ ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಹಾಗೂ ತಹಶೀಲ್ದಾರ್‌ ಪಿ.ಎಸ್‌.ಎರ್ರಿಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಎನ್‌.ಹುರಳಿ ಅವರು ವಿದ್ಯಾರ್ಥಿಗಳ ಪಾಲಕರೊಂದಿಗೆ ಶಾಲೆಯ ಸಮಸ್ಯೆಗಳ ಕುರಿತು ಸಭೆ ನಡೆಸಿ ಚರ್ಚಿಸಿದರು. ಆದರೆ, ಚರ್ಚೆಯ ಫಲವಾಗಿ ಪಾಲಕರು ಅಪೇಕ್ಷಿಸಿದ ಮೂಲಭೂತ ಸೌಕರ್ಯಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆ ನೀಡಿದರು. ಆದರೆ, ಎಲ್ಲ ಸೌಲಭ್ಯಗಳನ್ನು ಕಲ್ಪಿಸುವವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಾಲಕರು ಪಟ್ಟು ಹಿಡಿದರು.

ಮೈದಾನದ ಅಭಿವೃದ್ಧಿ ಕಾರ್ಯ ತಕ್ಷಣದಿಂದ ಸಾಧ್ಯವಾಗುವ ಮಾತಲ್ಲ. ಸದ್ಯಕ್ಕೆ ಮೈದಾನದಲ್ಲಿ ಓಡಾಟದ ಟ್ರಾಕ್‌ ನಿರ್ಮಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಲಾಗುವುದು. ಶೀಘ್ರ 5 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುವುದು. ತಹಶೀಲ್ದಾರ್‌ರ ವಿವೇಚನಾ ನಿಧಿ ಹಾಗೂ ಜಿಲ್ಲಾ ಧಿಕಾರಿಗಳ ವಿವೇಚನಾ ನಿಧಿಯಲ್ಲಿ ಶೀಘ್ರ ಅಭಿವೃದ್ಧಿಗೆ ಅನುದಾನ ಒದಗಿಸುವ ಭರವಸೆ ನೀಡಿದರು.

ಶೌಚಾಲಯಗಳನ್ನು ಸಮರ್ಪಕವಾಗಿ ಸ್ವತ್ಛವಾಗಿಡಲು ಕ್ರಮ ಜರುಗಿಸುವುದು ಹಾಗೂ ಕಿತ್ತು ಹೋದ ಮೇಲ್ಛಾವಣಿ ದುರಸ್ತಿ ಸೇರಿದಂತೆ ಕೂಡಲೇ ಅಗತ್ಯವಿರುವ ಸೌಲಭ್ಯಗಳನ್ನು ಪೂರೈಸಲು ಅಧಿ ಕಾರಿಗಳು ಮುಂದಾದರು. ಆದರೆ, ಪಾಲಕರು ಮಾತ್ರ ಪೂರ್ಣ ಪ್ರಮಾಣದ ಮೂಲಭೂತ ಸೌಕರ್ಯ ಒದಗಿಸದ ಹೊರತು ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದರು. ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಶೀಘ್ರ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ 18 ಲಕ್ಷ ರೂ. ಬಿಡುಗಡೆಯಾಗಲಿದೆ.

ಇದರಲ್ಲಿ ತೀರಾ ಅಗತ್ಯವಾದ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡೋಣ. ಹಂತ ಹಂತವಾಗಿ ಶಾಲೆಯ ಅಭಿವೃದ್ಧಿಗೆ ಅನುದಾನ ಒದಗಿಸಲು ಕಾಳಜಿ ವಹಿಸುತ್ತೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಒಟ್ಟಾಗಿ ಶ್ರಮಿಸೋಣ ಎಂದು ಸಲಹೆ ನೀಡಿದರು. ಆದರೆ, ಶಾಲೆ ಆರಂಭಿಸುವ ಅಥವಾ ರಜೆ ಘೋಷಿಸುವ ಅ ಧಿಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಇಲ್ಲಿನ ಪರಿಸ್ಥಿತಿ ಗಮನಿಸಿ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ,
ಈ ವಿಚಾರದಲ್ಲಿ ಒಮ್ಮತ ಮೂಡಲೇ ಇಲ್ಲ.

Advertisement

ಶಾಲೆಗೆ ಒಬ್ಬ ದಕ್ಷ ಪದವೀಧರ ಮುಖ್ಯ ಶಿಕ್ಷಕರನ್ನು ನೇಮಿಸಬೇಕು. ಇಲ್ಲಿನ ಮಕ್ಕಳ ತರಗತಿಗಳಿಗೆ ಅನುಗುಣವಾಗಿ ಶಿಕ್ಷಕರನ್ನು ಒದಗಿಸಬೇಕು. ಆಂಗ್ಲ ಮಾಧ್ಯಮ ಶಾಲೆ ಇದೆ. ಆದರೆ, ಅದಕ್ಕನುಗುಣವಾಗಿ ಒಟ್ಟು ಶಿಕ್ಷಕರ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗದಂತೆ ಕ್ರಮ ಜರುಗಿಸುವ ಜವಾಬ್ದಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಯಿತು. ಆದರೆ, ಪಾಲಕರು ಈ ಬಗ್ಗೆ ನಾಳೆಯಿಂದ ಯಾವ ನಿರ್ಣಯ ತೆಗೆದುಕೊಳ್ಳುವರು ಎಂಬುದರ ಮೇಲೆ ಶಾಲೆ ಆರಂಭದ ನಿರ್ಣಯವಾಗಲಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಖುದ್ದಾಗಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಿ, ಸೌಲಭ್ಯ ಒದಗಿಸಲು ಆಸಕ್ತಿ ತೋರಲೇಬೇಕು. ಇಲ್ಲಿಯೇ ಬಿಆರ್‌ಸಿ ಕೇಂದ್ರವಿದ್ದು, ಈ ಕೇಂದ್ರದ ಆವರಣದಲ್ಲೇ ಇರುವ ಸರಕಾರಿ ಶಾಲೆಗೆ ಬೇಕಾಗುವ ಸೌಲಭ್ಯ ಒದಗಿಸದ ಸ್ಥಿತಿ ನಿಜಕ್ಕೂ ಬೇಸರ ತರಿಸುವಂತದ್ದು ಎಂದು ಪಾಲಕರು ದೂರಿದರು.

ಈ ಸಂದರ್ಭದಲ್ಲಿ ಪಾಲಕ ಪ್ರತಿನಿಧಿಗಳಾದ ಪ್ರಶಾಂತ ಮುಚ್ಚಂಡಿ, ರವಿಚಂದ್ರ ಪುರೋಹಿತ, ಪ್ರವೀಣ ಸುಲಾಖೆ, ಪ್ರವೀಣ ಲಿಂಗೇರಿ, ತುಳಜೇಶ ಮೂಲಿಮನಿ, ಮನೋಜ ಕಲಾಲ, ನೇತಾಜಿ ಕಲಾಲ, ಗುರು ಏಸಕ್ಕನವರ, ಗುರುಮೂರ್ತಿ ಹೆಗಡೆ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ ಮಾಳಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next